Pages

Sunday, April 22, 2012

ಕಾಶಿ ಯಾತ್ರೆ



ಕಾಶಿ ಯಾತ್ರೆ






ಕಾಶಿಯು ಭಾರತದ ಅತಿ ಪ್ರಾಚೀನವಾದ ಸಾಂಸ್ಕೃತಿಕ ನಗರಿ. ನಮ್ಮ ತೀರ್ಥಕ್ಷೇತ್ರಗಳ ಪೈಕಿ ಕಾಶಿಗಿರುವ ಪಾವಿತ್ರ್ಯ ಬೇರಾವುದಕ್ಕೂ ಇಲ್ಲ. ಗಂಗಾ ನದಿಯ ತಟದಲ್ಲಿರುವ ಈ ಊರು ಭಕ್ತಿ ಭಾವಗಳ ತೊಟ್ಟಿಲು. ಗಂಗೆಯು ಅನಾದಿ ಕಾಲದಿಂದಲೂ ಭಕ್ತರ ಪಾಪಗಳನ್ನು ತೊಳೆಯುತ್ತಾ ಬಂದಿದ್ದಾಳೆ. ಭಕ್ತರು, ಪಾಂಡಾಗಳು, ಪೂಜಾರಿಗಳು, ಸಾಧುಗಳು, ದೇಶ-ವಿದೇಶಗಳ ಪ್ರವಾಸಿಗಳು ಕಾಶಿಯ ಓಣಿಗಳ ಅವಿಭಾಜ್ಯ ಅಂಗವಾಗಿ ಹೋಗಿದ್ದಾರೆ.

ಸಾಮಾನ್ಯವಾಗಿ ಹಿಂದೂಗಳೆಲ್ಲ ಜೀವನದಲ್ಲಿ ಒಂದು ಸಲವಾದರೂ ಕಾಶಿಯನ್ನು ನೋಡಿದರೇನೇ ಜನ್ಮ ಸಾರ್ಥಕ. ಪಿತೃಗಳಿಗೆ ಮೋಕ್ಷ ಕರುಣಿಸುವುದಕ್ಕಂತೂ ಇದು ಹೇಳಿಮಾಡಿಸಿದಂಥ ಸ್ಥಳ. ಸಾವಿರಾರು ವರ್ಷಗಳ ಹಿಂದೆ ಶ್ರವಣಕುಮಾರನು ತನ್ನ ತಾಯ್ತಂದೆಗಳನ್ನು ಅಡ್ಡೆಯಲ್ಲಿ ಹೊತ್ತುಕೊಂಡು ಹೋಗಿ ಕಾಶಿ ಯಾತ್ರೆ ಮಾಡಿಸಿದ್ದು ಪುರಾಣ ಪ್ರಸಿದ್ಧ. ಮದುವೆಯ ಸಂದರ್ಭದಲ್ಲಿ ವರನು ಕಾಶಿಯಾತ್ರೆಗೆ ಹೋಗುತ್ತೇನೆ ಎನ್ನುವುದು, ಅವನ ಮಾವನು ಆತನನ್ನು ತಡೆದು, 'ಅಯ್ಯಯ್ಯೋ, ಸದ್ಯಕ್ಕೆ ಕಾಶಿಗೆ ಹೋಗಬೇಡ. ಮದುವೆ ಮಾಡಿಸ್ತೀನಿ' ಎನ್ನುವುದು ಹಿಂದೂಗಳಲ್ಲಿ ಒಂದು ವಿನೋದಮಯ ಸಂಪ್ರದಾಯ.

ಎಸ್.ಎಲ್. ಭೈರಪ್ಪನವರ ಐತಿಹಾಸಿಕ ಕಾದಂಬರಿಗಳಲ್ಲಿ ಒಂದಾದ 'ಸಾರ್ಥ'ವನ್ನು ಓದಿದ್ದೀರ? ಅದರಲ್ಲಿ ಎಂಟನೇ ಶತಮಾನದಲ್ಲಿ ಕಾಶಿಗೆ ಅಧ್ಯಯನ ಮಾಡುತ್ತೇನೆಂದು ಹೇಳಿ, ಸಾರ್ಥದ ಜತೆ ನಾಗಭಟ್ಟನೆಂಬ ಪಂಡಿತನು ಮಾಡುವ ಪಯಣದ ಚಿತ್ರಣಅತ್ಯದ್ಭುತವಾಗಿದೆ. ಅವರ ಇನ್ನೊಂದು ಐತಿಹಾಸಿಕ ಕಾದಂಬರಿ 'ಆವರಣ'ದಲ್ಲೂ ಕಾಶಿಯ ಇತಿಹಾಸ ಎಳೆಎಳೆಯಾಗಿದೆ.

***

ನಾನು ಕಾಶಿಗೆ ಹೋಗಿದ್ದು ಬೆಂಗಳೂರು-ವಾರಣಾಸಿ  ವಿಮಾನ
ಲ್ಲಿ. ಬೆಂಗಳೂರಿನಿಂದ ದೆಹಲಿಗೆ ಹೋಗಿ, ಅಲ್ಲಿಂದ ವಾರಣಾಸಿಗೆ ಇನ್ನೊಂದು ವಿಮಾನ ಹಿಡಿಯಬೇಕು.

ನಾವು ಮೊದಲ ದಿನ ಹೊರಟಿದ್ದು ಕಾಶಿ ವಿಶ್ವನಾಥನ ದರ್ಶನಕ್ಕೆ. ದೇಗುಲದ ಹೊರಗಿನ ಪುಟ್ಟ ಗಲ್ಲಿಯುದ್ದಕ್ಕೂ ಹೂವು, ಹಾಲಿನ ಪುಟ್ಟ ಕುಡಿಕೆಗಳ ಅಂಗಡಿಗಳ ಸಾಲು. ಮಂದಿರದ ಒಳಗೆ ಮೊಬೈಲ್, ಕ್ಯಾಮರಾ ನಿಷಿದ್ಧ. ಪ್ರತಿಯೊಬ್ಬರನ್ನೂ ತಪಾಸಣೆಗೊಳಪಡಿಸಿದ ಮೇಲೆಯೇ ದೇಗುಲದ ಒಳಗೆ ಹೋಗುವ ಅವಕಾಶ. ನಾವು ಬೆಳಗಿನ ಜಾವ ನಾಲ್ಕೂವರೆಗೆ ಹೋದ ಕಾರಣ ದರ್ಶನವು ಅತಿ ಸುಲಭವಾಗಿ ಆಯಿತು.

ಕಾಶಿ ವಿಶ್ವನಾಥನ ಯಾರಿಗೆ ಗೊತ್ತಿಲ್ಲ? ಆದರೆ ಅದೊಂದು ಬೃಹದ್ಭವ್ಯ ದೇವಾಲಯವೆಂದುಕೊಂಡು ಹೋಗಬೇಡಿ. ಅದೊಂದು ಪುಟ್ಟ ಮಂದಿರ. ಇದಕ್ಕೆ ನಾಲ್ಕು ಕಡೆಗೂ ಬಾಗಿಲುಗಳಿವೆ.ಇಲ್ಲಿ ನಾವು ಈಶ್ವರನ ಲಿಂಗವನ್ನು ಕೈಯಿಂದ ಸ್ಪರ್ಶಿಸಿ ಪೂಜಿಸಬಹುದು. ಹಾಲಿನ ಅಭಿಷೇಕ ಮಾಡಬಹುದು. ಪಕ್ಕದಲ್ಲೇ ಜ್ಞಾನವ್ಯಾಪಿ ಮಸೀದಿ ಇದೆ. ಹೆಚ್ಚಿನ ಕಡೆಗಳಲ್ಲೆಲ್ಲಾ ಪೋಲೀಸರ ಸರ್ಪಗಾವಲು ಇದ್ದೇಇದೆ.

ಬಳಿಕ ನಾವು ಹೊರಟದ್ದು ಸಂಕಟಮೋಚನ ಹನುಮಾನ್ ಮಂದಿರಕ್ಕೆ.ಅಲ್ಲಿ ಹನುಮಾನ್ ಚಾಲೀಸಾದ ಪುಸ್ತಕಗಳನ್ನು ಇಟ್ಟಿರುತ್ತಾರೆ. ನಾವು ಅದನ್ನು ಪಠಿಸಿ ವಾಪಸು ಅಲ್ಲಿಯೇ ಇಡಬಹುದು.ಉತ್ತರ ಭಾರತದಲ್ಲಿ ಹನುಮಂತನ ಆರಾಧನೆ ವಿಶೇಷ. ನಮ್ಮನ್ನು ಅಲ್ಲಿಗೆ ಕರೆದೊಯ್ದ ಟ್ಯಾಕ್ಸಿಯ ಚಾಲಕ ಕೆಲವು ವರ್ಷಗಳ ಹಿಂದೆ ಅಲ್ಲಿ ನಡೆದ ಬಾಂಬ್ ಸ್ಫೋಟದ ಪ್ರತ್ಯಕ್ಷದರ್ಶಿಯಾಗಿದ್ದ. ಅದರ ಕತೆಯನ್ನು ಕೇಳಿದಾಗ ಮನಸ್ಸು ವ್ಯಾಕುಲಗೊಂಡಿತು.

ಕಾಶಿಯಲ್ಲಿರುವ ಮಂದಿರಗಳು ಅಸಂಖ್ಯ. ನಾವು ಅಲ್ಲಿಗೆ ಹೋಗಿದ್ದು ನವರಾತ್ರಿಯ ಹೊತ್ತಿನಲ್ಲಿ. ಆಗ ಅಲ್ಲಿ ಸಂಜೆ 'ಗಂಗಾ ಆರತಿ'ಯ ಕಾರ್ಯಕ್ರಮವಿತ್ತು. ಐದು ಜನರು ವಿಶಿಷ್ಟವಾದ ಸಾಂಪ್ರದಾಯಿಕ ಉಡುಪು ಧರಿಸಿ, ಗಂಗಾ ಮಾತೆಗೆ ಆರತಿ, ನೃತ್ಯ, ಭಜನೆ ಮಾಡುತ್ತಾರೆ. ಸಂಜೆಯ ಮಬ್ಬು ಬೆಳಕಿನಲ್ಲಿ ಸುಮಾರು ಎರಡು ಅಡಿ ಎತ್ತರದ ದೀಪದ ಆರತಿ, ಧೂಪದ ಹೊಗೆ, ಬೆಳಕಿನ ನೃತ್ಯದ ಹಿನ್ನೆಲೆಯಲ್ಲಿ ಗಂಗಾ ಮಾತೆಯ ಭಜನೆ ಸುಶ್ರಾವ್ಯವಾಗಿರುತ್ತದೆ. ಇವೆಲ್ಲಕ್ಕೂ ಹಿನ್ನೆಲೆಯಾಗಿ ಗಂಭೀರವಾಗಿ ಹರಿಯುತ್ತಿರುತ್ತಾಳೆ ಗಂಗೆ. ಇವೆಲ್ಲವನ್ನೂ ನೋಡುತ್ತಿದ್ದರೆ ಅದೊಂದು ಅಲೌಕಿಕ ಅನುಭವ.

ಕಾಶಿಯಲ್ಲಿ ಗಂಗಾ ನದಿಯ ಉದ್ದಕ್ಕೂ 70ಕ್ಕೂ ಹೆಚ್ಚು ಘಾಟ್‌ಗಳಿವೆ. ದಶಾಶ್ವಮೇಧ ಘಾಟ್, ಪ್ರಯಾಗ್ ಘಾಟ್, ಮಣಿಕರ್ಣಿಕಾ ಘಾಟ್ ಹೀಗೆ ಅವುಗಳ ಹೆಸರೇ ಒಂದೊಂದು ಪೌರಾಣಿಕತೆಯನ್ನು ಹೊತ್ತುಕೊಂಡಿವೆ. ಜನರ ಸ್ನಾನ, ಜಪ-ತಪ, ಧಾರ್ಮಿಕ ವಿಧಿವಿಧಾನಗಳೆಲ್ಲ ಜರುಗುವುದು ಇಲ್ಲೇ. ಇಲ್ಲಿರುವ ಹರಿಶ್ಚಂದ್ರ ಘಾಟ್‌ನಲ್ಲಿ ದಿನದ ಇಪ್ಪತ್ನಾಲ್ಕು ಗಂಟೆಯೂ ಬಿಡುವಿಲ್ಲದೆ ಶವ ಸಂಸ್ಕಾರ ನಡೆಯುತ್ತಿರುತ್ತದೆ. ಪ್ರಯಾಗ್ ಘಾಟ್‌ನಲ್ಲಿ ಮಿಂದರೆ ಗಂಗಾ-ಯುಮನಾ-ಸರಸ್ವತಿ ನದಿಗಳ ಸಂಗಮ ಸ್ಥಳವಾದ ಪ್ರಯಾಗದಲ್ಲೇ ಮಿಂದಷ್ಟು ಪುಣ್ಯವಂತೆ. ನಾರದ ಘಾಟ್ ನಲ್ಲಿ ಪತಿ-ಪತ್ನಿ ಒಟ್ಟಿಗೆ ಗಂಗಾ ಸ್ನಾನ ಮಾಡಿದರೆ ಅವರಿಬ್ಬರ ನಡುವೆ ಡಿಶುಂ ಡಿಶುಂ ಗ್ಯಾರಂಟಿಯಂತೆ! ಅಲ್ಲಿ ಒಂದೆರಡು ದೋಣಿಗಳನ್ನು ಬಿಟ್ಟರೆ ಒಂದು ನರಪಿಳ್ಳೆಯೂ ಕಾಣಿಸಲಿಲ್ಲ. ದೋಣಿಯಲ್ಲಿ ಎಲ್ಲಾ ಘಾಟ್‌ಗಳಿಗೂ ಒಂದು ಸುತ್ತು ಹಾಕಿ ಬರಬಹುದು. ನಮ್ಮನ್ನು ಕರೆದೊಯ್ದ ಅಂಬಿಗ ನಮ್ಮ ಪಯಣದ ಉದ್ದಕ್ಕೂ ಗಂಗೆಯ ಬಗ್ಗೆ ಮಾತಾಡುತ್ತಿದ್ದ. ಇವರ ಜೀವನ ಗಂಗಾ ನದಿಯ ಜತೆ ಎಷ್ಟು ಮಿಳಿತವಾಗಿದೆಯೆಂದರೆ ಗಂಗೆಯೇ ಇವರ ಜೀವನವಾಗಿದೆ.

ಕಾಶಿಯು ಹಿಂದೂಗಳಿಗಷ್ಟೇ ಅಲ್ಲ ಬೌದ್ಧರಿಗೂ ಪವಿತ್ರ ಸ್ಥಳ. ಕಾಶಿಯಿಂದ 13 ಕಿ.ಮೀ. ದೂರದಲ್ಲಿರುವ ಸಾರನಾಥದಲ್ಲಿ ಧಮೇಕ ಸ್ತೂಪವಿದೆ. ಇದರ ಎತ್ತರ 128 ಅಡಿ , ವ್ಯಾಸ 93 ಅಡಿ. ಬೌದ್ಧ ವಿಹಾರಗಳ ಅವಶೇಷಗಳೂ ಇಲ್ಲಿ ಉತ್ಖನನದ ನಂತರ ಸಿಕ್ಕಿವೆ. ಗೌತಮ ಬುದ್ಧನು ಮೊದಲ ಬಾರಿಗೆ ಧರ್ಮೋಪದೇಶ ಮಾಡಿದ ಊರು ಇದೇ. ಇದು ಇಡಿಯಾಗಿ ಪುರಾತತ್ವ ಇಲಾಖೆಗೆ ಸೇರಿದ ಸ್ಥಳವಾಗಿದೆ. ಮೂಲಗಂಧ ಕುಟಿ ಎಂಬ ಬೌದ್ಧ ದೇವಾಲಯವೂ ಸಾರನಾಥದಲ್ಲಿದೆ. ಇಲ್ಲಿ ಸಾರನಾಥ ಪ್ರಾಚ್ಯ ವಸ್ತು ಸಂಗ್ರಹಾಲಯವಿದೆ. ನಮ್ಮ ರಾಷ್ಟ್ರಚಿಹ್ನೆಯಾದ ಅಶೋಕ ಸ್ತಂಭದ ಮೂಲ ರೂಪ ಇಲ್ಲಿದೆ. ಪಕ್ಕದಲ್ಲೇ ಜೈನ ಮಂದಿರವಿದೆ. ಇದು ಅವರ 13ನೇ ತೀರ್ಥಂಕರನ ಊರು.









ಕಾಶಿಯಲ್ಲಿ ಹಾಲು, ಹಾಲಿನ ಉತ್ಪನ್ನಗಳು ಹೇರಳ. ಇಲ್ಲಿಯ ಮೊಸರಂತೂ ನಮ್ಮ ಕಡೆ ಸಿಗುವ ಬೆಣ್ಣೆಯಷ್ಟು ಗಟ್ಟಿ! 
Add caption


ಇಷ್ಟೆಲ್ಲ ದೊಡ್ಡ ಹೆಸರಿರುವ ಕಾಶಿಯ ರಸ್ತೆಗಳು ಮಾತ್ರ ಆ ವಿಶ್ವವಾಥನಿಗೇ ಪ್ರೀತಿ! ಕಾಶಿಯಲ್ಲಿ ಎಲ್ಲೇ ದೇವಸ್ಥಾನಕ್ಕೆ ಹೋದರೂ ಪಾಂಡಾಗಳು ನಮ್ಮ ಬೆನ್ನ ಹಿಂದೆಯೇ ಬರುತ್ತಿರುತ್ತಾರೆ.ಹಾಗಾಗಿ ನಾವು ಕೆಲವೊಮ್ಮೆ ನಮ್ಮ ಬೆನ್ನ ಹಿಂದೆ ಬರಬೇಡಿ ಎಂದು ಗದರಿಸಿಯೇ ಹೇಳಬೇಕಾಗುತ್ತದೆ! ಕಾಶಿ ಯಾತ್ರೆ ಮುಗಿಸಿಕೊಂಡು ಮರಳಿ ಬೆಂಗಳೂರಿಗೆ ಬಂದಾಗ ಮನಸ್ಸಲ್ಲೇನೋ ಒಂದು ರೀತಿಯ ಸಮ್ಮಿಶ್ರ ಭಾವನೆ. ಆಗ ಹಳೆಯ ಕಾಶಿ ಹೇಗಿದ್ದಿರಬಹುದು ಎಂದು ತಿಳಿಯಲು ಮತ್ತೊಮ್ಮೆ 'ಆವರಣ'ವನ್ನು ತಿರುವಿ ಹಾಕಿದೆ.

(ಇವತ್ತಿನ ವಿಜಯಕರ್ನಾಟಕ ದಲ್ಲಿ ಪ್ರಕಟಿತ )

Tuesday, February 21, 2012

ವರ್ಲಿ

ನನಗೆ ವರ್ಲಿ ಚಿತ್ರದ ಹುಚ್ಚು ಮತ್ತಷ್ಟು ಹೆಚ್ಚಾಗಿದೆ !! ಇಲ್ಲಿ ನೋಡಿ ನನ್ನ ಕೆಲವು ಪ್ರಯೋಗಗಳು!!


ನಮ್ಮ ಮನೆಯ ಗೋಡೆಯ ಮೇಲೆ ಗೀಚಿದ್ದು ಹೀಗೆ




Wednesday, February 8, 2012

ಪಂಜಾಬಿ ಅಡುಗೆ

ಪಂಜಾಬಿ ಅಡುಗೆ
------------------------------

’ಕನ್ನಡ ಪ್ರಭ-ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’



೧.ಪಂಜಾಬಿ ಆಲೂ ಅಮ್ರಿತ ಸರಿ

ಬೇಕಾಗುವ ಸಾಮಗ್ರಿಗಳು

ಆಲೂ ಗೆಡ್ಡೆ : ೨೫೦ ಗ್ರಾಂ
ನೀರುಳ್ಳಿ : ೨
ಶು೦ಠಿ ಬೆಳ್ಳುಳ್ಳಿ ಪೇಸ್ಟ್ : 2 ಚಮಚ
ಓಮ ಕಾಳು : ಅರ್ಧ ಚಮಚ
ಉಪ್ಪು :ರುಚಿಗೆ ತಕ್ಕಷ್ಟು
ಕಡ್ಲೆ ಹಿಟ್ಟು : ಅರ್ಧ ಲೋಟ
ಕೊತ್ತಂಬರಿ ಪುಡಿ : ೧ ಚಮಚ
ಕೆಂಪು ಮೆಣಸಿನ ಪುಡಿ  ೧ ಚಮಚ
ಗರಂ ಮಸಾಲ ಪುಡಿ  : ಅರ್ಧ ಚಮಚ
ಅರಸಿನ :ಚಿಟಿಕೆ
ಎಣ್ಣೆ : ಸ್ವಲ್ಪ
ಕೊತ್ತಂಬರಿ ಸೊಪ್ಪು : ಒಂದು ಹಿಡಿ

ವಿಧಾನ
೧.ಅಲೂಗೆದ್ದೆಯನ್ನು ಉದ್ದನೆಯ ತುಂಡುಗಳಾಗಿ ಹೆಚ್ಚಿಕೊಳ್ಳಿ
೨.ಕಡ್ಲೆಹಿಟ್ಟಿಗೆ   ಉಪ್ಪು  ,ಶು೦ಠಿ ಬೆಳ್ಳುಳ್ಳಿ ಪೇಸ್ಟ್,ಓಮ ಕಾಳು ಮತ್ತು ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಸಿ ಇಟ್ಟುಕೊಳ್ಳಿ
೩. ಅಲೂ ತುಂಡುಗಳನ್ನು ಈ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ, ಎಣ್ಣೆಯಲ್ಲಿ ಕರಿಯಿರಿ.
೪. ಒಂದು ಬಾಣಲೆಯಲ್ಲಿ  ಚಮಚ ಎಣ್ಣೆ ಹಾಕಿ ,ಬಿಸಿ ಮಾಡಿ. ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಇದರಲ್ಲಿ ಚೆನ್ನಾಗಿ ಹುರಿಯಿರಿ. ಇದಕ್ಕೆ ಉಪ್ಪು, ಅರಸಿನ, ಕೆಂಪು ಮೆಣಸಿನ ಪುಡಿ,ಗರಂ ಮಸಾಲ ಪುಡಿ ಹಾಕಿ ಕಲಕಿ.
೫.ಇದರಲ್ಲಿ ಕರಿದು ಇಟ್ಟಿರುವ ಅಲೂಗೆದ್ದೆಯ ಚೂರುಗಳನ್ನು ಹಾಕಿ ಕಲಕಿ, ೩-೪ ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ.
೬.ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಒಲೆ ಆರಿಸಿ.
ಇದು ಚಪಾತಿ ,ಪರಾಠ  ಗಳ ಜತೆ ಬಹಳ ರುಚಿ.

೨.ಖೋಯ ಮಟರ್

ಬೇಕಾಗುವ ಸಾಮಗ್ರಿಗಳು
ಬಟಾಣಿ : ಒಂದು ಲೋಟ
ಖೋವ : ೫೦೦ ಗ್ರಾಂ
ಪುಡಿ ಮಾಡಿದೆ ಗೇರುಬೀಜ (ಗೋಡಂಬಿ )  : ೩ ಚಮಚ
ಕೆಂಪು ಮೆಣಸು : ೧
ಕೆಂಪು ಮೆಣಸಿನ ಪುಡಿ  ೧ ಚಮಚ
ದ್ರಾಕ್ಷಿ : ೨ ಚಮಚ
ಅರಸಿನ :ಚಿಟಿಕೆ
ಎಣ್ಣೆ : ಸ್ವಲ್ಪ
ಶು೦ಠಿ ಬೆಳ್ಳುಳ್ಳಿ ಪೇಸ್ಟ್ : ಅರ್ಧ  ಚಮಚ
ಹುರಿದ ಎಳ್ಳು : ಒಂದು ಚಮಚ
ಕೊತ್ತಂಬರಿ ಪುಡಿ : ೧ ಚಮಚ
ಉಪ್ಪು :ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು : ಒಂದು ಹಿಡಿ
ನೀರುಳ್ಳಿ ಪೇಸ್ಟ್ : ಅರ್ಧ ಲೋಟ
ಟೊಮೇಟೊ ರಸ : ಅರ್ಧ ಲೋಟ
(೨-೩  ಟೊಮೇಟೊಗಳನ್ನೂ ನೀರು ಹಾಕದೆ ರುಬ್ಬಿದರೆ ಸಾಕು )

ವಿಧಾನ :
  1. ಕ್ಹೊವ ವನ್ನು ಸ್ವಲ್ಪ ಹುರಿದು ಇಟ್ಟುಕೊಳ್ಳಿ
  2. ಬಟಾಣಿಯನ್ನು ಬೇಯಿಸಿ ಇಟ್ಟುಕೊಳ್ಳಿ
  3. ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ನೀರುಳ್ಳಿ ಪೇಸ್ಟನ್ನು ಹುರಿಯಿರಿ  .
  4. ಇದಕ್ಕೆ ಶು೦ಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಕಲಸಿ.
  5. ಬಳಿಕ ಇದಕ್ಕೆ ಟೊಮೇಟೊ ರಸ, ಅರಸಿನ, ಕೆಂಪು ಮೆಣಸಿನ ಪುಡಿ ಹಾಕಿ ಚೆನ್ನಾಗಿ ಕಲಕಿ.
  6. ಮಿಶ್ರಣ ಎಣ್ಣೆ ಬಿಡುತ್ತಿದ್ದಂತೆ ಇದಕ್ಕೆ ಬೇಯಿಸಿದ ಬಟಾಣಿ ಸೇರಿಸಿ.
  7. ಬಳಿಕ ಹುರಿದ ಖೋವ,ಉಪ್ಪು ಸೇರಿಸಿ. ಚೆನ್ನಾಗಿ ಕಲಕುತ್ತ ಇರಿ.
  8. ಮಿಶ್ರಣವು ಚೆನ್ನಾಗಿ ಬೇಯುತ್ತಿದ್ದಂತೆ ಇದಕ್ಕೆ ದ್ರಾಕ್ಷೆ ಮತ್ತು  ಗೋಡಂಬಿ ಚೂರುಗಳನ್ನು ಹಾಕಿ.
  9. ಕೊತ್ತಂಬರಿ ಪುಡಿ ಸೇರಿಸಿ  ಮತ್ತಷ್ಟು ಕಲಸ್ಕಿ, ಒಲೆ ಆರಿಸಿ.
  10. ಇದಕ್ಕೆ ಕೊತ್ತಂಬರಿ ಸೊಪ್ಪು, ಹುರಿದ ಎಳ್ಳು, ಕೆಂಪು ಮೆಣಸಿನ ಚೂರು, ಹಸಿ ಮೆಣಸಿನ ಚೂರುಗಳನ್ನು ಹಾಕಿ ಅಲಂಕರಿಸಿ.  

3.ದಾಲ್  ಮಖನಿ   

ಬೇಕಾಗುವ ಸಾಮಗ್ರಿಗಳು

ರಾಜ್ಮ :ಅರ್ಧ ಲೋಟ
ಕಪ್ಪು ಉದ್ದಿನ ಬೇಳೆ:ಅರ್ಧ ಲೋಟ
ಕಡ್ಲೆ ಬೇಳೆ :ಕಾಲು ಲೋಟ
ಎಣ್ಣೆ :ಸ್ವಲ್ಪ
ಜೀರಿಗೆ :ಒಂದು ಚಮಚ
ಇಂಗು
ಮೆಂತೆ ಕಾಳು:10
ಶು೦ಠಿ ಬೆಳ್ಳುಳ್ಳಿ ಪೇಸ್ಟ್: ಒಂದು ಚಮಚ
ಟೊಮೇಟೊ ರಸ ; ಎರಡು ಲೋಟ
ಕೆಂಪು ಮೆಣಸಿನ ಪುಡಿ  ೧ ಚಮಚ
ಹಾಲಿನ ಕೆನೆ : ಅರ್ಧ ಲೋಟ
ಬೆಣ್ಣೆ : ಸ್ವಲ್ಪ
ಉಪ್ಪು :ರುಚಿಗೆ ತಕ್ಕಷ್ಟು
೧.ರಾಜ್ಮ ವನ್ನು ೧೬ ಗ೦ಟೆಗ ಕಾಲ  ನೆನೆ ಹಾಕಬೇಕು.ಕಪ್ಪು ಉದ್ದಿನ ಬೇಳೆ ಮತ್ತು ಕಡ್ಲೆ ಬೇಳೆಯನ್ನು ೮ ಗಂಟೆಗಳ ಕಾಲ ನೆನೆ ಹಾಕಬೇಕು.
೨.ನೆನೆದ ಕಾಳು/ಬೇಳೆಗಳನ್ನು ಒಟ್ಟಿಗೆ ಕುಕ್ಕರಿನಲ್ಲಿ ಬೇಯಿಸಿ ಇಟ್ಟುಕೊಳ್ಳಿ.
೩.ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಬಿಸಿ ಮಾಡಿ, ಅದಕ್ಕೆ ಜೀರಿಗೆ ,ಮೆಂತೆ ಹಾಕಿ. ಬಳಿಕ ಇದಕ್ಕೆ ಶು೦ಠಿ ಬೆಳ್ಳುಳ್ಳಿ ಪೇಸ್ಟ್,ಟೊಮೇಟೊ ರಸ ಹಾಕಿ ಕಲಕಿ. ಇದು ಸರಿಯಾಗಿ ಬೇಯುತ್ತಿದ್ದಂತೆ
ಮೊದಲೇ ಬೇಯಿಸಿದ ಕಾಳು/ಬೆಳೆಗಳನ್ನು ಇದಕ್ಕೆ ಸೇರಿಸಿ, ಉಪ್ಪು ಹಾಕಿ, ಮತ್ತಷ್ಟು ಬೇಯಲು ಬಿಡಿ .
೪.ಕೆಂಪು ಮೆಣಸಿನ ಪುಡಿ ,ಹಾಲಿನ ಕೆನೆ,ಬೆಣ್ಣೆ ಹಾಕಿ ಮತ್ತಷ್ಟು ಕಲಕಿ.
೫.ಇದಕ್ಕೆ ಗರಂ ಮಸಾಲ ಪುಡಿ ಹಾಕಿ, ಸಣ್ಣ ಉರಿಯಲ್ಲಿ ೫-೧೦ ನಿಮಿಷ ಹಾಗೇ ಬಿಡಿ.
೬.ಕೊನೆಗೆ ಇದಕ್ಕೆ ಬೆಣ್ಣೆ ಹಾಕಿ, ಒಲೆ ಆರಿಸಿ.

೪.ಮೂಲಿ
ಪರಾಠ

ಬೇಕಾಗುವ ಪದಾರ್ಥಗಳು

ಗೋಧಿ ಹಿಟ್ಟು : ಒಂದು ಕಾಲು  ಲೋಟ
ನೀರು :ಅರ್ಧ ಲೋಟ
ಉಪ್ಪು :ರುಚಿಗೆ ತಕ್ಕಷ್ಟು

ಹೆಚ್ಚಿದ ಮೂಲಂಗಿ :೨ ಲೋಟ
ಜೀರಿಗೆ :ಅರ್ಧ ಚಮಚ
ಹಸಿ ಮೆಣಸು : ಒಂದು
ಕೊತ್ತಂಬರಿ ಸೊಪ್ಪು :ಸ್ವಲ್ಪ
ಓಮ (ಅಜವಾನ ):ಅರ್ಧ ಚಮಚ

ಎಣ್ಣೆ :ಸ್ವಲ್ಪ

ವಿಧಾನ :

೧.ಒಂದು ಲೋಟ ಗೋಧಿ ಹಿಟ್ಟು, ನೀರು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹತ್ತು ನಿಮಿಷ ಹಾಗೇ ಇಟ್ಟುಕೊಳ್ಳಿ.
೨.ಹೆಚ್ಚಿದ ಮೂಲಂಗಿ,ಜೀರಿಗೆ,ಹಸಿ ಮೆಣಸು,ಕೊತ್ತಂಬರಿ ಸೊಪ್ಪು,ಓಮ ,ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕಲಸಿ.
3.ಕಲಸಿಟ್ಟ ಗೋಧಿ ಹಿಟ್ಟಿನ ಸಣ್ಣ ಉ೦ಡೆಗ ಳನ್ನಾಗಿ ಮಾಡಿ.೩ ಇಂಚು ವ್ಯಾಸದ ಸಣ್ಣ ಚಪಾತಿಯ ಥರ ಲಟ್ಟಿಸಿ. ಬೇಕಿದ್ದರೆ ಗೋಧಿ ಹಿಟ್ಟನ್ನು ಚಿಮುಕಿಸಿಕೊಳ್ಳಬಹುದು ಇದರಲ್ಲಿ ಮೂಲಂಗಿ ಮಿಶ್ರಣವನ್ನು ಹಾಕಿ ಮುಚ್ಚಿ, ಲಟ್ಟಿಸಿ.
4.ನಂತರ ಇದನ್ನು ಚಪಾತಿಯ ಹಾಗೇ ಎಣ್ಣೆ ಹಾಕಿ  ಚಪಾತಿ ಹೆಂಚಿನ ಮೇಲೆ ಎರಡೂ ಬದಿ ಬೇಯಿಸಬೇಕು.
ಮೂಲಿ ಪರಾಠ ತಯಾರಾಯಿತು .ಇದನ್ನು ಮೊಸರು ಮತ್ತು ಉಪ್ಪಿನ ಕಾಯಿಯ ಜತೆ ಸವಿಯಿರಿ.


5.ಜೀರಾ ರೈಸ್




ಬೇಕಾಗುವ ಸಾಮಗ್ರಿಗಳು

ಅಕ್ಕಿ: ೧ ಲೋಟ
ಜೀರಿಗೆ: ೪ ಚಮಚ
ನೀರುಳ್ಳಿ: ೧
ಪಲಾವು ಎಲೆ: ೧
ಲವಂಗ: ೪
ಲಿಂಬೆ ರಸ/ಆಮ್ ಚೂರ್ ಪೌಡರ್/ಹುಳಿ ಪುಡಿ: ಯಾವುದಾದರೂ ಒಂದು ( ಹುಳಿಗೆ ಬೇಕಾಗಿ )
ಉಪ್ಪು: ರುಚಿಗೆ ತಕ್ಕಷ್ಟು


ವಿಧಾನ

೧.ಉದುರುದುರಾಗಿ ಅನ್ನ ಮಾಡಿಟ್ಟುಕೊಳ್ಳಿ.
೨.ಬಾಣಲೆಯಲ್ಲಿ ಎಣ್ಣೆ ಹಾಕಿ, ಬಿಸಿಯಾಗುತ್ತಿದ್ದಂತೆ ಜೀರಿಗೆ ಹಾಕಿ, ಕಲಕಿ.
೩.ಇದಕ್ಕೆ ಸಣ್ಣಗೆ ಹೆಚ್ಚಿದ ನೀರುಳ್ಳಿ ಹಾಕಿ, ಕಂದು ಬಣ್ಣ ಬರುವ ತನಕ ಹುರಿಯಿರಿ.
೪.ಲವಂಗ ಮತ್ತು ಪಲಾವಿನ ಎಲೆಯನ್ನು ಇದಕ್ಕೆ ಸೇರಿಸಿ, ಇನ್ನೂ ಎರಡು ನಿಮಿಷ ಕಲಕಿ.
೫.ಬಾಣಲೆಗೆ ಅನ್ನ ಸೇರಿಸಿ, ಉಪ್ಪು, ಹುಳಿ ಪುಡಿ ಹಾಕಿ ಕಲಕಿ.
೬.ಜೀರಾ ರೈಸ್ ತಯಾರು.ಇದಕ್ಕೆ  ದಾಲ್   ಮಖನಿ   ಅತ್ಯುತ್ತಮ  ಜತೆ .

Sunday, September 25, 2011

ಪರಾಠ

’ಕನ್ನಡ ಪ್ರಭ-ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’


೧. ಆಲೂ ಪರಾಠ
ಬೇಕಾಗುವ ಪದಾರ್ಥಗಳು

ಗೋಧಿ ಹಿಟ್ಟು : ಒಂದು ಕಾಲು ಲೋಟ
ನೀರು :ಅರ್ಧ ಲೋಟ
ಉಪ್ಪು :ರುಚಿಗೆ ತಕ್ಕಷ್ಟು

ಆಲೂಗಡ್ಡೆ :೨
ಜೀರಿಗೆ :ಅರ್ಧ ಚಮಚ
ಹಸಿ ಮೆಣಸು : ಒಂದು
ಕೊತ್ತಂಬರಿ ಸೊಪ್ಪು :ಸ್ವಲ್ಪ
ಗರಂ ಮಸಾಲ : ಅರ್ಧ ಚಮಚ
ಆಮ್ಚೂರ್ ಹುಡಿ :ಅರ್ಧ ಚಮಚ

ಎಣ್ಣೆ :ಸ್ವಲ್ಪ




ವಿಧಾನ :

೧.ಒಂದು ಲೋಟ ಗೋಧಿ ಹಿಟ್ಟು, ನೀರು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹತ್ತು ನಿಮಿಷ ಹಾಗೇ ಇಟ್ಟುಕೊಳ್ಳಿ.
೨.ಆಲೂಗಡ್ಡೆ ಯನ್ನು ಕುಕ್ಕರ್ ನಲ್ಲಿ ಬೇಯಿಸಿ, ಸಿಪ್ಪೆ ತೆಗೆಯಿರಿ.
೩.ಬಳಿಕ ಅಲೂಗದ್ದೆಯನ್ನು ನುಣ್ಣಗೆ ಪುಡಿ ಮಾಡಿ, ಅದಕ್ಕೆ ಸಣ್ಣಗೆ ಹೆಚ್ಚಿದ ಹಸಿ ಮೆಣಸು,ಜೀರಿಗೆ,ಗರಂ ಮಸಾಲ,ಅಮ್ಚೂರ್ ಹುಡಿ, ಕೊತ್ತಂಬರಿ ಸೊಪ್ಪು ,ಉಪ್ಪು ಇವುಗಳನ್ನು ಹಾಕಿ ಒಟ್ಟಿಗೆ ಕಲಸಿರಿ.
೪.ಕಲಸಿಟ್ಟ ಗೋಧಿ ಹಿಟ್ಟಿನ ಸಣ್ಣ ಉ೦ಡೆಗ ಳನ್ನಾಗಿ ಮಾಡಿ. ಆಲೂಗಡ್ಡೆ ಮಿಶ್ರಣದಿಂದಲೂ ಉಮ್ದೆಗಳನ್ನು ಮಾಡಿ. ಇವು ಗೋಧಿ ಹಿಟ್ಟಿನ ಉ೦ಡೆಗಳಿಗಿಂತ ಸ್ವಲ್ಪ ದೊಡ್ಡ ಗಾತ್ರದಲ್ಲಿರಬೇಕು.
೫.ಗೋಧಿ ಹಿಟ್ಟಿನ ಉಂಡೆಗಳನ್ನು ೩ ಇಂಚು ವ್ಯಾಸದ ಸಣ್ಣ ಚಪಾತಿಯ ಥರ ಲಟ್ಟಿಸಿ. ಬೇಕಿದ್ದರೆ ಗೋಧಿ ಹಿಟ್ಟನ್ನು ಚಿಮುಕಿಸಿಕೊಳ್ಳಬಹುದು. ಇದರಲ್ಲಿ ಅಲೂಗಡ್ಡೆಯ ಉಂಡೆಯನ್ನು ಇಟ್ಟು ನಿಧಾನವಾಗಿ ಚಪಾತಿಯನ್ನು ಮದಚಬೇಕು.
ಅಲೂಗಡ್ಡೆಯ ಉಂಡೆ ಸರಿಯಾಗಿ ಮುಚ್ಚುವಂತೆ ಚಪಾತಿಯನ್ನು ಮದಚಬೇಕು.ಬಳಿಕ ಇದನ್ನು ನಿಧಾನವಾಗಿ ಲಟ್ಟಿಸಬೇಕು.
೬.ನಂತರ ಇದನ್ನು ಚಪಾತಿಯ ಹಾಗೇ ಎಣ್ಣೆ ಹಾಕಿ ಚಪಾತಿ ಹೆಂಚಿನ ಮೇಲೆ ಎರಡೂ ಬದಿ ಬೇಯಿಸಬೇಕು.
೭ಆಲೂ ಪರಾಠ ತಯಾರಾಯಿತು . ಇದನ್ನು ಮೊಸರು ಮತ್ತು ಉಪ್ಪಿನ ಕಾಯಿಯ ಜತೆ ಸವಿಯಿರಿ.


೨.ಗೋಬಿ ಪರಾಠ

ಬೇಕಾಗುವ ಪದಾರ್ಥಗಳು

ಗೋಧಿ ಹಿಟ್ಟು : ಒಂದು ಕಾಲು ಲೋಟ
ನೀರು :ಅರ್ಧ ಲೋಟ
ಉಪ್ಪು :ರುಚಿಗೆ ತಕ್ಕಷ್ಟು

ಹೆಚ್ಚಿದ ಕೋಲಿ ಫ್ಲವರ್ :೨ ಲೋಟ
ಜೀರಿಗೆ :ಅರ್ಧ ಚಮಚ
ಹಸಿ ಮೆಣಸು : ಒಂದು
ಕೊತ್ತಂಬರಿ ಸೊಪ್ಪು :ಸ್ವಲ್ಪ
ಓಮ (ಅಜವಾನ ):ಅರ್ಧ ಚಮಚ

ಎಣ್ಣೆ :ಸ್ವಲ್ಪ

ವಿಧಾನ :

೧.ಒಂದು ಲೋಟ ಗೋಧಿ ಹಿಟ್ಟು, ನೀರು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹತ್ತು ನಿಮಿಷ ಹಾಗೇ ಇಟ್ಟುಕೊಳ್ಳಿ.
೨.ಹೆಚ್ಚಿದ ಕೋಲಿ ಫ್ಲವರ್,ಜೀರಿಗೆ,ಹಸಿ ಮೆಣಸು,ಕೊತ್ತಂಬರಿ ಸೊಪ್ಪು,ಓಮ ,ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕಲಸಿ.
3.ಕಲಸಿಟ್ಟ ಗೋಧಿ ಹಿಟ್ಟಿನ ಸಣ್ಣ ಉ೦ಡೆಗ ಳನ್ನಾಗಿ ಮಾಡಿ.೩ ಇಂಚು ವ್ಯಾಸದ ಸಣ್ಣ ಚಪಾತಿಯ ಥರ ಲಟ್ಟಿಸಿ. ಬೇಕಿದ್ದರೆ ಗೋಧಿ ಹಿಟ್ಟನ್ನು ಚಿಮುಕಿಸಿಕೊಳ್ಳಬಹುದು ಇದರಲ್ಲಿ ಕೋಲಿ ಫ್ಲವರ್ ಮಿಶ್ರಣವನ್ನು ಹಾಕಿ ಮುಚ್ಚಿ, ಲಟ್ಟಿಸಿ.
4.ನಂತರ ಇದನ್ನು ಚಪಾತಿಯ ಹಾಗೇ ಎಣ್ಣೆ ಹಾಕಿ ಚಪಾತಿ ಹೆಂಚಿನ ಮೇಲೆ ಎರಡೂ ಬದಿ ಬೇಯಿಸಬೇಕು.
ಗೋಬಿ ಪರಾಠ ತಯಾರಾಯಿತು .ಇದನ್ನು ಮೊಸರು ಮತ್ತು ಉಪ್ಪಿನ ಕಾಯಿಯ ಜತೆ ಸವಿಯಿರಿ.

ವಿ.ಸೂ. ಕೋಲಿ ಫ್ಲವರ್ ಬದಲು ಹೆಚ್ಚಿದ ಮೂಲಂಗಿಯನ್ನು ಬಳಸಿದರೆ, ಮೂಲಿ ಪರಾಠ ವಾಗುತ್ತದೆ .


೩.ಪಾಲಕ್ ಪರಾಠ
ಬೇಕಾಗುವ ಪದಾರ್ಥಗಳು

ಗೋಧಿ ಹಿಟ್ಟು : ಒಂದು ಕಾಲು ಲೋಟ
ನೀರು :ಅರ್ಧ ಲೋಟ
ಉಪ್ಪು :ರುಚಿಗೆ ತಕ್ಕಷ್ಟು


ಹೆಚ್ಚಿದ ಪಾಲಕ್ :೨ ಲೋಟ
ಜೀರಿಗೆ :ಅರ್ಧ ಚಮಚ
ಕೆಂಪು ಮೆಣಸಿನ ಚೂರು: ಸ್ವಲ್ಪ
ಕೊತ್ತಂಬರಿ ಸೊಪ್ಪು :ಸ್ವಲ್ಪ
ಇಂಗು :ಸ್ವಲ್ಪ

ಎಣ್ಣೆ :ಸ್ವಲ್ಪ

ವಿಧಾನ :

೧.ಒಂದು ಲೋಟ ಗೋಧಿ ಹಿಟ್ಟು, ನೀರು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹತ್ತು ನಿಮಿಷ ಹಾಗೇ ಇಟ್ಟುಕೊಳ್ಳಿ.
೨.ಹೆಚ್ಚಿದ ಪಾಲಕ್ ,ಜೀರಿಗೆ,ಕೆಂಪು ಮೆಣಸಿನ ಚೂರು,ಕೊತ್ತಂಬರಿ ಸೊಪ್ಪು,ಇಂಗು ,ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕಲಸಿ.
3.ಕಲಸಿಟ್ಟ ಗೋಧಿ ಹಿಟ್ಟಿನ ಸಣ್ಣ ಉ೦ಡೆಗ ಳನ್ನಾಗಿ ಮಾಡಿ.೩ ಇಂಚು ವ್ಯಾಸದ ಸಣ್ಣ ಚಪಾತಿಯ ಥರ ಲಟ್ಟಿಸಿ. ಬೇಕಿದ್ದರೆ ಗೋಧಿ ಹಿಟ್ಟನ್ನು ಚಿಮುಕಿಸಿಕೊಳ್ಳಬಹುದು ಇದರಲ್ಲಿ ಪಾಲಕ್ ಮಿಶ್ರಣವನ್ನು ಹಾಕಿ ಮುಚ್ಚಿ, ಲಟ್ಟಿಸಿ.
4.ನಂತರ ಇದನ್ನು ಚಪಾತಿಯ ಹಾಗೇ ಎಣ್ಣೆ ಹಾಕಿ ಚಪಾತಿ ಹೆಂಚಿನ ಮೇಲೆ ಎರಡೂ ಬದಿ ಬೇಯಿಸಬೇಕು.
ಪಾಲಕ್ ಪರಾಠ ತಯಾರಾಯಿತು .


೪.ಮೇಥಿ ಪರಾಠ
ಗೋಧಿ ಹಿಟ್ಟು : ಒಂದು ಕಾಲು ಲೋಟ
ನೀರು :ಅರ್ಧ ಲೋಟ
ಉಪ್ಪು :ರುಚಿಗೆ ತಕ್ಕಷ್ಟು


ಮೆಂತೆ ಸೊಪ್ಪು :1 ಲೋಟ
ನೀರುಳ್ಳಿ : ಒಂದು
ಬಟಾಟೆ :ಒಂದು
ಕ್ಯಾರೆಟ್ :ಅರ್ಧ
ಜೀರಿಗೆ ಹುಡಿ :ಅರ್ಧ ಚಮಚ
ಕೆಂಪು ಮೆಣಸಿನ ಚೂರು: ಸ್ವಲ್ಪ
ಕೊತ್ತಂಬರಿ ಪುಡಿ :ಸ್ವಲ್ಪ

ಬೆಣ್ಣೆ :ಸ್ವಲ್ಪ
ಎಣ್ಣೆ :ಸ್ವಲ್ಪ




ವಿಧಾನ :
೧.ಒಂದು ಲೋಟ ಗೋಧಿ ಹಿಟ್ಟು, ನೀರು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹತ್ತು ನಿಮಿಷ ಹಾಗೇ ಇಟ್ಟುಕೊಳ್ಳಿ.
೨.ಬೆಣ್ಣೆ ಬಿಸಿ ಮಾಡಿ ಅದರಲ್ಲಿ ಮೆಂತೆ ಸೊಪ್ಪು ಮತ್ತು ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಚೆನ್ನಾಗಿ ಹುರಿಯಿರಿ.
೩.ಬಟಾಟೆಯನ್ನು ಬೇಯಿಸಿ,ಸಿಪ್ಪೆ ತೆಗೆದು ಪುಡಿ ಮಾಡಿ.
೪.ಈಗ ಹುರಿದ ಮೆಂತೆ ಸೊಪ್ಪು,ಈರುಳ್ಳಿ ,ಪುಡಿ ಮಾಡಿದ ಆಲೂಗಡ್ಡೆ ,ಕ್ಯಾರೆಟ್ ತುರಿ,ಜೀರಿಗೆ ಹುಡಿ,ಕೆಂಪು ಮೆಣಸಿನ ಚೂರು,ಕೊತ್ತಂಬರಿ ಪುಡಿ ,ಉಪ್ಪು ಹಾಕಿ ಕಲಸಿ,ಉಂಡೆಗಳನ್ನಾಗಿ ಮಾಡಿ.
೫.ಕಲಸಿಟ್ಟ ಗೋಧಿ ಹಿಟ್ಟಿನ ಸಣ್ಣ ಉ೦ಡೆಗ ಳನ್ನಾಗಿ ಮಾಡಿ.೩ ಇಂಚು ವ್ಯಾಸದ ಸಣ್ಣ ಚಪಾತಿಯ ಥರ ಲಟ್ಟಿಸಿ. ಬೇಕಿದ್ದರೆ ಗೋಧಿ ಹಿಟ್ಟನ್ನು ಚಿಮುಕಿಸಿಕೊಳ್ಳಬಹುದು ಇದರಲ್ಲಿ ಮೆಂತೆ ಸೊಪ್ಪಿನ ಮಿಶ್ರಣದ ಉಂಡೆ ಹಾಕಿ ಮುಚ್ಚಿ, ಲಟ್ಟಿಸಿ.
4.ನಂತರ ಇದನ್ನು ಚಪಾತಿಯ ಹಾಗೇ ಎಣ್ಣೆ ಹಾಕಿ ಚಪಾತಿ ಹೆಂಚಿನ ಮೇಲೆ ಎರಡೂ ಬದಿ ಬೇಯಿಸಬೇಕು.

೫. ಈರುಳ್ಳಿ ಪರಾಠ

ಗೋಧಿ ಹಿಟ್ಟು : ಒಂದು ಕಾಲು ಲೋಟ
ನೀರು :ಅರ್ಧ ಲೋಟ
ಉಪ್ಪು :ರುಚಿಗೆ ತಕ್ಕಷ್ಟು

ನೀರುಳ್ಳಿ : ೨
ಓಮ (ಅಜವಾನ ):2 ಚಮಚ
ಕೊತ್ತಂಬರಿ ಸೊಪ್ಪು :ಸ್ವಲ್ಪ
ಎಣ್ಣೆ :ಸ್ವಲ್ಪ


ವಿಧಾನ :
೧.ಒಂದು ಲೋಟ ಗೋಧಿ ಹಿಟ್ಟು, ನೀರು ಮತ್ತು ಉಪ್ಪು,ಸಣ್ಣಗೆ ಹೆಚ್ಚಿದ ಈರುಳ್ಳಿ, ಅಜವಾನ ಸೇರಿಸಿ ಚೆನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹತ್ತು ನಿಮಿಷ ಹಾಗೇ ಇಟ್ಟುಕೊಳ್ಳಿ.
೨.ಕಲಸಿಟ್ಟ ಗೋಧಿ ಹಿಟ್ಟಿನ ಸಣ್ಣ ಉ೦ಡೆಗ ಳನ್ನಾಗಿ ಮಾಡಿ.೩ ಇಂಚು ವ್ಯಾಸದ ಸಣ್ಣ ಚಪಾತಿಯ ಥರ ಲಟ್ಟಿಸಿ. ಬೇಕಿದ್ದರೆ ಗೋಧಿ ಹಿಟ್ಟನ್ನು ಚಿಮುಕಿಸಿಕೊಳ್ಳಬಹುದು.
೩.ಇದಕ್ಕೆ ಎಣ್ಣೆ ಹಾಕಿ ಮಡಚಿ ಮತ್ತೆ ಲಟ್ಟಿಸಿ. ಈ ರೀತಿ ಎರಡು ಸಲ ಮಾಡಬೇಕು.
೪.ಬಳಿಕ ಕಾದ ಚಪಾತಿ ಹೆಂಚಿನ ಮೇಲೆ ಎರಡೂ ಬದಿ ಬೇಯಿಸಿ.