Pages

Showing posts with label ಪ್ರವಾಸ ಕಥನ. Show all posts
Showing posts with label ಪ್ರವಾಸ ಕಥನ. Show all posts

Saturday, August 5, 2017

ಹಿಮಾಲಯ ಚಾರಣ- ಖಾಲಿಯಾ ಟಾಪ್



 ಚಿಕ್ಕಂದಿನಿಂದಲೂ ನನಗೆ ಹಿಮಾಲಯವೆಂದರೆ ಕೌತುಕ ಭರಿತ ಬೆರಗು. ಶಾಲಾ ಪಠ್ಯಪುಸ್ತಕಗಳಲ್ಲಿ, ಪುರಾಣ ಕಥೆಗಳಲ್ಲಿ ,ಕಾವ್ಯಗಳಲ್ಲಿ ಹಿಮಾಲಯದ ಬಗ್ಗೆ ಓದುವಾಗ ಹಿಮಾಲಯ ಹೇಗಿರಬಹುದು ಎಂದು ಕಲ್ಪಿಸುತ್ತಿದ್ದೆ.  ಹಿಮಾಲಯ ಚಾರಣವೆಂದರೆ ಎವರೆಸ್ಟ್ ಏರುವುದು ಎಂದೇ ನನ್ನ ಗಟ್ಟಿ ನಂಬಿಕೆಯಾಗಿತ್ತು.   ನನ್ನ ಮಿತ್ರ ವರ್ಗದ ಹಲವಾರು ಹಿಮಾಲಯದ ಕೆಲವು ಪ್ರದೇಶಗಳಿಗೆ ಚಾರಣ ಮಾಡಿದುದನ್ನು ಕಥೆಯಂತೆ ಕೇಳುತ್ತಿದ್ದೆ. ಹಿಮಾಲಯ ಅಷ್ಟೊಂದು ವಿಶಾಲವಾಗಿದೆ, ಅಲ್ಲಿ ಹಲವಾರು ಪರ್ವತ ಶ್ರೇಣಿಗಳು ಇವೆ .ಜನರು ಅಲ್ಲಿ ವಾಸ ಮಾಡುತ್ತಿದ್ದಾರೆ ಅಂತೆಲ್ಲ ವಿಚಾರಗಳು ನನ್ನಲ್ಲಿ  ಕನಸಿನ ಲೋಕವನ್ನು ಸೃಷ್ಟಿಸುತ್ತಿದ್ದವು.  ಹೀಗಿರುವಾಗ ಇತ್ತೀಚೆಗೆ ನನಗೂ ಹಿಮಾಲಯದಲ್ಲಿ ಚಾರಣ ಮಾಡುವ ಅವಕಾಶ ಒದಗಿ ಬಂದಿತು .ಯೂತ್ ಹಾಸ್ಟೆಲ್ ಆರ್ಗನೈಜೇಷನ್ ಆಫ್ ಇಂಡಿಯಾದವರು ಹಲವಾರು ಹಿಮಾಲಯ ಚಾರಣ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ.  ಅಂತಹ ಒಂದು ಚಾರಣವಾದ ಖಾಲಿಯಾ ಟಾಪ್ ಗೆ ನಾನು ಹೆಸರು ನೋಂದಾಯಿಸಿದೆ.

ಪೂರ್ವ ತಯಾರಿ

ಪರ್ವತ ಪ್ರದೇಶದಲ್ಲಿ ಚಾರಣ ಮಾಡಲು ಬೇಕಾದ ಮೊದಲ ತಯಾರಿ ಫಿಸಿಕಲ್ ಫಿಟ್ನೆಸ್ .ಸಮುದ್ರ ಮಟ್ಟದಿಂದ ೧೦,೦೦ ೦ ಅಡಿಗಳಿಗಿಂತ ಹೆಚ್ಚಿನ ಎತ್ತರದಲ್ಲಿರುವ ಪ್ರದೇಶದಲ್ಲಿ ವಾಯುವಿನ ಒತ್ತಡ ಕಡಿಮೆ ಇರುತ್ತದೆ. ಅಲ್ಲಿ ಚಾರಣ ಮಾಡಲು ನಮ್ಮ ಶರೀರ ಶಕ್ತಿಯುತವಾಗಿರಬೇಕು. ಚಾರಣಕ್ಕೆ ಎರಡು ತಿಂಗಳು ಇರುವಾಗಿನಿಂದ ದಿನಕ್ಕೆ ಐದು ಕಿಲೋಮೀಟರ್ ನಂತೆ ವಾಕಿಂಗ್ ಮಾಡುವ ಗುರಿ ಇರಿಸಿಕೊಂಡೆ.   ಜತೆಗೆ ಪ್ರಾಣಾಯಾಮವನ್ನು ಅಭ್ಯಾಸ ಮಾಡಿದೆ . ಕಚೇರಿಯಲ್ಲಿ ಲಿಫ್ಟಿನ ಬದಲಾಗಿ ಮೆಟ್ಟಿಲುಗಳನ್ನು ಬಳಸಿದೆ .  ಆಹಾರದ ಬಗ್ಗೆಯೂ ಸರಿಯಾದ ಗಮನ ಹರಿಸಿದೆ. ಚಾರಣಕ್ಕೆ ಬೇಕಾದ ಮೆಡಿಕಲ್ ಸರ್ಟಿಫಿಕೇಟನ್ನು ಪಡೆದದ್ದು ಆಯಿತು .ಅಂತೂ ಚಾರಣದ ದಿನ ಬಂದೇ ಬಿಟ್ಟಿತು!

ತಲುಪುವುದು ಹೇಗೆ ?

ಉತ್ತರಾಖಂಡ ರಾಜ್ಯ ದೇವಭೂಮಿ ಎಂದೇ ಖ್ಯಾತವಾಗಿದೆ.  ಹಿಮಾಲಯದ ಅಂಚಿನಲ್ಲಿರುವ ಈ ರಾಜ್ಯ ಪ್ರಕೃತಿ ಸಂಪತ್ತಿನ ಗಣಿ .ಪೈನ್ ಮರಗಳ ಕಾಡು, ಹಿಮಾಲಯದ ಗಿರಿ ಶಿಖರಗಳು, ಅಲ್ಲಲ್ಲಿ ಕಾಣಸಿಗುವ ಝರಿಗಳು ಜಲಪಾತಗಳು ವೇಗವಾಗಿ ಹರಿಯುವ ನದಿಗಳು ಒಂದೇ ಎರಡೇ ಪ್ರಕೃತಿ ಮಾತೆಯ ಸುಂದರ ರೂಪವೇ ಇಲ್ಲಿ ಮೂರ್ತಿವೆತ್ತಂತೆ ಇದೆ .ನನ್ನ ಚಾರಣ ಪ್ರದೇಶ ಇರುವುದು  ಪಿತ್ತೊರಗರ  ಜಿಲ್ಲೆಯ ಮುನ್ಶಿಯಾರಿ ಎಂಬ ಊರಿನ ಬಳಿ .  ದೆಹಲಿಯಿಂದ ಕಾಠ್ ಗೋದಾಮಿನ ತನಕ ರೈಲಿನಲ್ಲಿ ಪ್ರಯಾಣಿಸಿ, ಅಲ್ಲಿಂದ ಮುನ್ಶಿಯಾರಿ ತಲುಪಲು ಟ್ಯಾಕ್ಸಿ ವ್ಯಾನ್ ಅಥವಾ ಬಸ್ಸಿನಲ್ಲಿ ಹೋಗಬೇಕು.  ನಮ್ಮ ಚಾರಣ ತಂಡ  ಅಲ್ಲಿಂದ ವ್ಯಾನಿನಲ್ಲಿ ಪ್ರಯಾಣಿಸಿದೆವು. ಕಾಠ್  ಗೋದಾಮ  ನಿಂದ   ಮುನ್ಶಿಯಾರಿಗೆ ಇರುವ ದೂರ ಸುಮಾರು ಇನ್ನೂರ ಎಪ್ಪತ್ತೈದು  ಕಿಲೋ ಮೀಟರ್ ಗಳು.  ಅದು  ಪರ್ವತ ಪ್ರದೇಶದ ಅಪಾಯಕಾರಿ ಕಿರು ಹಾದಿ ಆದುದರಿಂದ ಪ್ರಯಾಣದ ಅವಧಿ ಸುಮಾರು ಹನ್ನೆರಡು ಗಂಟೆಗಳಷ್ಟು ಆಗಿರುತ್ತದೆ . ಈ ಪ್ರಯಾಣ ರುದ್ರ ರಮಣೀಯವೇ ಸರಿ. .ಹಿಮಾಲಯದ ಅದ್ಭುತ ಸೌಂದರ್ಯವನ್ನು ಹಾದಿಯುದ್ದಕ್ಕೂ ಕಾಣಬಹುದು .ಈ ಪರ್ವತ ಶ್ರೇಣಿಗಳು ಎಷ್ಟು ವಿಶಾಲವಾಗಿದೆ ಎಂದರೆ  ಅವುಗಳನ್ನು  ಒಂದು ಕ್ಯಾಮೆರಾದ  ಫ್ರೆಮಿ ನೊಳಗೆ  ಕಟ್ಟಿ ಹಾಕಲಾಗದು . ಪರ್ವತದ ಅಂಚಿನ ಕಿರು ಹಾದಿಯಲ್ಲಿ ಕೊಂಚ ಮೈಮರೆತರೂ ದೇವ ಭೂಮಿಯಿಂದ ನೇರವಾಗಿ ಸ್ವರ್ಗಕ್ಕೆ ಪ್ರವೇಶ ಸಿಗುವುದು ಗ್ಯಾರಂಟಿ .ಅಷ್ಟೇ ಅಲ್ಲ ಅಲ್ಲಲ್ಲಿ ಕಾಣಸಿಗುವ ಭೂಕುಸಿತ, ರಭಸವಾಗಿ ಹರಿಯುವ ನದಿಗಳು ಇವುಗಳೆಲ್ಲ ಒಂದು ರೀತಿಯ ಭೀತಿಯನ್ನು ಉಂಟು ಮಾಡುತ್ತವೆ .ಅಂತೂ ಈ ಸುದೀರ್ಘ ಪ್ರಯಾಣದ ಬಳಿಕ ಮುನ್ಶಿಯಾರಿ ಬೇಸ್ ಕ್ಯಾಂಪ್ ತಲುಪಿದ್ದಾಯಿತು .  


ಚಾರಣಕ್ಕೆ ಮುನ್ನ :
ಮುನ್ಶಿಯಾರಿ ಕ್ಯಾಂಪ್ ನಲ್ಲಿ ಆರಂಭಿಕ ಪ್ರವೇಶ  ದಾಖಲಾತಿಯ ಕಾರ್ಯಕ್ರಮ ಮುಗಿಸಿದೆವು.   ಭಾರತದ ಹಲವಾರು ಪ್ರಾಂತ್ಯಗಳಿಂದ ಬಂದ ಸಹ ಚಾರಣಿಗರ ಪರಿಚಯ ಮಾಡಿಕೊಂಡೆವು .ಅವರಲ್ಲಿ ಅನೇಕರು ಹಲವಾರು ಚಾರಣಗಳನ್ನು ಮಾಡಿದಂತಹ ಅನುಭವಿಗಳು.ಕೆಲವರು ವರ್ಷ ಐವತ್ತು ಮೀರಿದರೂ ಇಪ್ಪತ್ತರ ಉತ್ಸಾಹಿಗಳು . ಅವರಲ್ಲೆಲ್ಲ ಮಾತಾಡುತ್ತಿದ್ದಂತೆ ನನಗೂ ಹೊಸ ಹುರುಪು ಬಂತು.  ಮರುದಿನ ನಮ್ಮನ್ನು ಕಿರುವಿಹಾರಕ್ಕೆ  ಕರೆದೊಯ್ದರು.  ಎತ್ತರದ ಪ್ರದೇಶದಲ್ಲಿ ವಾಯುವಿನ ಒತ್ತಡ ಕಡಿಮೆ ಇರುವ ಕಾರಣ ನಮ್ಮ ದೇಹ ಅಲ್ಲಿಯ ಪರಿಸರಕ್ಕೆ ಹೊಂದಿಕೊಳ್ಳಲು ಇದು ಅತ್ಯಗತ್ಯ. ಮುನ್ಶಿಯಾರಿಯಿಂದ  ಪಂಚ ಚೂಲಿ  ಶಿಖರಗಳ ಸಮೂಹ ಅದ್ಭುತವಾಗಿ ಕಾಣಿಸುತ್ತದೆ. ಸ್ವಲ್ಪ ನಡೆಯುತ್ತಿದ್ದಂತೆಯೇ ಏದುಸಿರು ಬರಲಾರಂಭಿಸಿತು . ನಡಿಗೆಯನ್ನು ನಿಧಾನ ಮಾಡಿ ಹತ್ತಲು ಆರಂಭಿಸಿದೆವು .ಅಲ್ಲಿಯೇ ಇರುವ ದೇವಿಯ ಮಂದಿರ ವೊಂದಕ್ಕೆ ಭೇಟಿ ನೀಡಿದ ಬಳಿಕ ಬೇಸ್ ಕ್ಯಾಂಪಿಗೆ ಮರಳಿ ಬಂದು ,ಮರುದಿನದ ಚಾರಣಕ್ಕೆ ಸಿದ್ಧತೆ ನಡೆಸಿದೆವು . ಚಾರಣಕ್ಕೆ ಅಗತ್ಯವಾದಷ್ಟು ಸಾಮಗ್ರಿಗಳನ್ನು ಬ್ಯಾಕ್ ಪ್ಯಾಕ್ನಲ್ಲಿ ತುಂಬಿಸಿ ಉಳಿದೆಲ್ಲ ಸಾಮಗ್ರಿಗಳನ್ನು ಬೇಸ್ ಕ್ಯಾಂಪಿನಲ್ಲಿ ಇಟ್ಟು ನಿದ್ದೆ ಹೋದೆ .

ಚಾರಣ 
ಮರುದಿನ ಮುಂಜಾನೆ ೬ ಗಂಟೆ ಗೆ ನಿಗದಿತ ಸಮಯಕ್ಕೆ ಚಾರಣ ಪ್ರಾರಂಭವಾಯಿತು .ದಾರಿಯುದ್ದಕ್ಕೂ ಕಾಣಸಿಗುವ ಪ್ರಕೃತಿಯ ಬಣ್ಣಗಳನ್ನು ಕಾಣುವಾಗ ಹಿಂದಿ ಚಲನಚಿತ್ರದ ಹಾಡು " ಯೇ  ಕೌನ್  ಚಿತ್ರ ಕಾರ್ ಹೇ " ನೆನಪಾಯಿತು .ಮೇ ತಿಂಗಳಿನ ಅವಧಿ ಯಾದ ಕಾರಣ ಹಿಮ ಇರಲಿಲ್ಲ . ಬರೀ ಗುಡ್ಡಗಳು .ಒಂದಾದ ಮೇಲೆ ಇನ್ನೊಂದು . ನಾವು ಎತ್ತರಕ್ಕೆ ಏರುತ್ತಿದ್ದಂತೆ ಪ್ರಕೃತಿ ಮತ್ತಷ್ಟು ಸುಂದರವಾಗಿ ಕಾಣತೊಡಗಿತ್ತು.  ಮೊದಲ ದಿನದ ಕ್ಯಾಂಪ್  ಮಾರ್ಟೋಲಿ ಎಂಬ  ಪ್ರದೇಶದಲ್ಲಿ .  ಜನವಸತಿ ಯಾವುದೂ ಇಲ್ಲದ ಕಡೆ ಹಿಮಾಲಯದ ಪರ್ವತ ವೊಂದರಲ್ಲಿ ರಾತ್ರಿ ಕಳೆಯುವುದು ಒಂದು ಅಪೂರ್ವ ಅನುಭವ. ಟಿವಿ ,ಕಂಪ್ಯೂಟರ್ ,ಕರೆಂಟು ಇವ್ಯಾವುದೂ ಇಲ್ಲ .ಮೊಬೈಲಿನ ಗಂಟೆ   ಮೊಳಗುವುದೇ ಇಲ್ಲ . ಅಷ್ಟೊಂದು ವಿಶಾಲವಾದ  ಪರ್ವತ ಶ್ರೇಣಿಯಲ್ಲಿ ಅಲ್ಲಲ್ಲಿ ಮೇಯುವ ಕುರಿಗಳ ಗಂಟೆಗಳ ನಾದ, ಝರಿಗಳು ಹರಿಯುವ ಸದ್ದು  .ಅಚಾನಕ್ಕಾಗಿ ಸುರಿಯುವ ಮಳೆ .ದಿನವಿಡಿ ಟ್ರೆಕ್ಕಿಂಗ್ ಮಾಡಿ ದಣಿದ ದೇಹಕ್ಕೆ ಸ್ಲೀಪಿಂಗ್ ಬ್ಯಾಗ್ನೊಳಗೆ ನುಸುಳುತ್ತಿದ್ದ ಗಾಢ ನಿದ್ದೆ .ರಾತ್ರಿಯಲ್ಲಿ   ಟೆಂಟ್  ನಿಂದ  ಹೊರಬಂದು ಆಗಸದ ಕಡೆ ಕತ್ತು ಮಾಡಿದರೆ ಮೇಲುಗಡೆ ನಕ್ಷತ್ರಗಳ ಛಾವಣಿ .  ಒಮ್ಮೆ ಹಿಮಾಲಯ ಚಾರಣಕ್ಕೆ ಹೋದವರು ಮತ್ತೆ ಮತ್ತೆ ಹೊಸ ಚಾರಣಗಳಿಗೆ ಹೋಗುವುದು ಇಂತಹ ದಿವ್ಯ  ಅನುಭವಕ್ಕೇ  ಇರಬೇಕು! 

ಚಾರಣದ ಮುಂದಿನ ಎರಡು  ದಿನ ನಾವು ಎತ್ತರಕ್ಕೆ, ಮತ್ತಷ್ಟು ಎತ್ತರಕ್ಕೆ ಚಾರಣ ಮಾಡುತ್ತಾ ಸಾಗಿದೆವು. ಕಲ್ಲು ಬಂಡೆಗಳ ಹಾದಿ. ಅಲ್ಲಲ್ಲಿ ತೊರೆಗಳು. ಸಣ್ಣ ಪುಟ್ಟ ಸಸ್ಯಗಳು, ಬಣ್ಣ ಬಣ್ಣದ ಪುಟಾಣಿ  ಹೂವುಗಳು ಇಂತಹ ಮಾರ್ಗದಲ್ಲಿ ನಡೆಯುವುದು ಮನಸ್ಸಿಗೆ ಮುದವನ್ನು ನೀಡುತ್ತದೆ.   ರೂಡ್ ಖನ್ ಮತ್ತು ತಂತಿ ಎಂಬ ಪ್ರದೇಶದಲ್ಲಿ ಉಳಿದುಕೊಂಡೆವು. ಎತ್ತರಕ್ಕೆ ಏರುತ್ತಿದ್ದಂತೆ ಗಾಳಿಯ ಒತ್ತಡ ಕಡಿಮೆಯಾಗುವ ಕಾರಣ ಒಂದು ರೀತಿ ವಿಚಿತ್ರ ಅನುಭವವಾಗುತ್ತದೆ. ನಿಧಾನವಾಗಿ ಸಾಗುವುದು, ಹೆಚ್ಚು ನೀರು ಕುಡಿಯುವುದು ತುಂಬಾ ಅಗತ್ಯ. ಕಡೆಯ ದಿನ ನಾವು ತಲುಪಿದ್ದು ಖಾಲಿಯಾ ಟಾಪ್ ಎಂಬ ಹಚ್ಚ ಹಸುರಿನ ಹುಲ್ಲುಗಾವಲಿನ ಪದೇಶಕ್ಕೆ. ಅದರ ಸುತ್ತಲೂ ಪರ್ವತ ಶ್ರೇಣಿಗಳು. ಸಮುದ್ರ ಮಟ್ಟದಿಂದ ೧೨೦೦೦ ಅಡಿಗಳಷ್ಟು ಮೇಲಿರುವ ಇದು ಬಹಳ ಸುಂದರವಾಗಿದೆ. ಚಾರಣಿಗರೆಲ್ಲರಿಗೂ ಗಮ್ಯ ಸ್ಥಾನ ತಲುಪಿದುದಕ್ಕೆ ಆದ ಸಂತಸಕ್ಕೆ ಎಣೆಯೇ ಇಲ್ಲ! 


ಹಿಮಾಲಯದಲ್ಲಿ ಮಂಜು ಮುಸುಕುವಿಕೆ, ಮಳೆ ಯಾವ ಹೊತ್ತಿನಲ್ಲಾದರೂ ಆಗಬಹುದು. ಖಾಲಿಯಾ ಟಾಪ್ ನಲ್ಲಿ ಒಮ್ಮೆಗೆ ಮಂಜು ಮುಸುಕಿ , ೩-೪ ಅಡಿಗಳಷ್ಟು ದೂರದಲ್ಲಿರುವ ವಸ್ತುವೂ ಕಾಣಿಸದಂತಾಯಿತು.  ಅಲ್ಲಿಂದ ಇಳಿದು ವಾಪಸು ಬರುವಾಗ ಒಮ್ಮೆಗೆ ಆಲಿಕಲ್ಲುಗಳ ಸುರಿ ಮಳೆ. ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಹವಾಮಾನ ಬದಲಾವಣೆಯೇ ಹಿಮಾಲಯದ ವೈಶಿಷ್ಟ್ಯ. ಚಾರಣಿಗ ಎಲ್ಲದಕ್ಕೂ ಸಿಧ್ಧವಾಗಿಯೇ ಇರಬೇಕು. 

ಒಟ್ಟಿನಲ್ಲಿ ಹೇಳುವುದಾದರೆ ಈ ಚಾರಣವು  ನನ್ನಲ್ಲಿ ಹೊಸ ಹುರುಪನ್ನು ಹುಟ್ಟಿಸಿತು. ನನ್ನ ಕನಸಿನ ಹಿಮಾಲಯವನ್ನು , ಅಲ್ಲಿಯ ಜನಜೀವನವನ್ನೂ ಹತ್ತಿರದಿಂದ ನೋಡುವಂತಾಯಿತು. ಅಂತ ಪ್ರತಿಕೂಲ ವಾತಾವರಣದಲ್ಲೂಕಷ್ಟಪಟ್ಟು  ಜೀವನ ಮಾಡುವ ಜನರ ಮನೋಸ್ಥೈರ್ಯಕ್ಕೆ ತಲೆಬಾಗಿದೆ. ಹಿಮಾಲಯ ಒಂದು ಅದ್ಭುತ ವಿಸ್ಮಯ. ಸೃಷ್ಟಿಯ ಸಮಸ್ತವನ್ನೂ ತನ್ನಲ್ಲಿ ಇರಿಸಿ ಗಂಭೀರವಾಗಿ ತಲೆ ಎತ್ತಿ ನಿಂತಿರುವ ಹಿಮಾಲಯಕ್ಕೆ ನನ್ನ ಶರಣು. 


(ಉದಯವಾಣಿಯಲ್ಲಿ ಪ್ರಕಟಿತ)

Thursday, July 20, 2017

ಜುನಾಗಡದಲ್ಲೊಂದು ಸುತ್ತು







ಇತ್ತೀಚೆಗಷ್ಟೇ ನಾನು ಗುಜರಾತಿನ ಜುನಾಗಡ ಪ್ರಾಂತ್ಯದಲ್ಲೊಮ್ಮೆ ತಿರುಗಾಡಿ ಬಂದೆ. ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಗಳನ್ನೂ, ಜನಜೀವನವನ್ನೂ ಕಂಡುಬಂದೆ.ಜುನಾಗಡವು ಗುಜರಾತಿನ ನೈಋತ್ಯ ದಿಕ್ಕಿನಲ್ಲಿದೆ. ಇದು ಜಿಲ್ಲಾ ಕೆಂದ್ರವಾಗಿದ್ದು , ಅಹಮದಾಬಾದಿನಿಂದ ೩೫೫ ಕಿ.ಮಿ. ದೂರದಲ್ಲಿದೆ.  ಜುನಾಗಡ ಎಂದರೆ ಹಳೆಯ ಕೋಟೆ ಎಂದು ಅರ್ಥ. ಈ ಊರಿಡೀ ಹಳೆಯ ಕೋಟೆ ಕೊತ್ತಳಗಳಿಂದ ಆವರಿಸಲ್ಪಟ್ಟಿದೆ. ಹಳೆಯ ಬೇರು ಹೊಸ ಚಿಗುರು ಎಂಬಂತೆ ಭವ್ಯವಾದ ಪುರಾತನ ಮಹಲುಗಳ ನಡುವೆಯೇ ಆಧುನಿಕತೆ ಮೈವೆತ್ತುಕೊಂಡಂತೆ ಇರುವ ಈ ಊರು ನಾವು  ಹಳೆಯ ಕಾಲವನ್ನು ಮೆಲುಕು ಹಾಕುವಂತೆ ಮಾಡುತ್ತದೆ. ಮೌರ್ಯರು , ಕಳಿಂಗರು ,ಶಕರು, ಗುಪ್ತರು , ಮೊಘಲರು ಮತ್ತು ನವಾಬರುಗಳು ಈ ಪ್ರಾಂತ್ಯವನ್ನು ಆಳಿದ್ದಾರೆ. ಅದಕ್ಕೆ ಸಾಕ್ಷಿಯೋ ಎಂಬಂತೆ ಇಲ್ಲಿ ಹಳೆಯ ದೇಗುಲಗಳು, ಬುದ್ಧ ಗುಹೆಗಳು, ಅಶೋಕನ ಶಿಲಾಶಾಸನ, ಜೈನ ಮಂದಿರಗಳು,ಇಸ್ಲಾಂ ವಾಸ್ತು ಶೈಲಿಯ ಕಟ್ಟಡಗಳು ಕಂಡುಬರುತ್ತವೆ. 


ಜುನಾಗಡವು ಖ್ಯಾತಿ ಹೊಂದಿರುವುದು ಇಲ್ಲಿಯ ಗಿರ್ನಾರ್ ಪರ್ವತ ಶ್ರೇಣಿಗಳಿಂದ. ಇವು ಹಿಮಾಲಯಕ್ಕಿಂತಲೂ ಹಳೆಯದಾದ ಪರ್ವತಗಳು.ಆಧ್ಯಾತ್ಮಿಕ ಮತ್ತು ಭೌಗೋಳಿಕ ಹಿನ್ನೆಯಲ್ಲಿಯೂ ಇವು ಬಹಳಷ್ಟು ಮಹತ್ವವನ್ನು ಹೊಂದಿವೆ. ಶಿವರಾತ್ರಿಯ ಸಮಯದಲ್ಲಿ  ಇಲ್ಲಿ ಗಿರ್ನಾರ್ ಪರಿಕ್ರಮ ನಡೆಯುತ್ತದೆ. ಪರ್ವತದ ಸುತ್ತಲೂ ೩೬ ಕಿ,ಮೀ . ದೂರವನ್ನು ಕಾಲ್ನಡಿಗೆಯಲ್ಲಿ ದಟ್ಟ ಕಾಡಿನ ಮೂಲಕ ಕ್ರಮಿಸುತ್ತಾರೆ. ಈ ಸಂದರ್ಭದಲ್ಲಿ ಸುಮಾರು ೭-೮ ಲಕ್ಷ ಜನರು ಪಾಲ್ಗೊಳ್ಳುತ್ತಾರೆ. ಪರಿಕ್ರಮದ  ದ್ವಾರದಲ್ಲಿ ಪರ್ವತವನ್ನು ಅವಲೋಕಿಸಿದಾಗ ಅದು ಶಿವನ ಮುಖವನ್ನು ಹೋಲುತ್ತದೆ.ಸಹಸ್ರಾರು ಸಾಧುಗಳು ಗಿರ್ನಾರ್ ಅರಣ್ಯ ಪ್ರದೇಶದಲ್ಲಿ ಆಧ್ಯಾತ್ಮಿಕ ಉನ್ನತಿಗಾಗಿ ತಪಸ್ಸು ಮಾಡುತ್ತಿರುವ ಬಗ್ಗೆ ನಮ್ಮ ಚಾರಣದ ಮಾರ್ಗದರ್ಶಕರು ತಿಳಿಸಿದರು. ಅವರು ಜನಸಾಮಾನ್ಯರ ಕಣ್ಣಿಗೆ ಸಾಮಾನ್ಯವಾಗಿ ಗೋಚರವಾಗುವುದಿಲ್ಲ.  ಈ ಪರ್ವತವನ್ನು ಏರಲು ಕಡಿದಾದ ಮೆಟ್ಟಲುಗಳಿವೆ. ಇವುಗಳ ಸಂಖ್ಯೆ ಎಷ್ಟು ಗೊತ್ತೇ ?  -ಒಂದಲ್ಲ ಎರಡಲ್ಲ. ..ಹತ್ತು ಸಾವಿರ!!  ಮೆಟ್ಟಲುಗಳನ್ನು ಏರಲು ಸ್ವಲ್ಪ ಮಟ್ಟಿಗಾದರೂ ವ್ಯಾಯಾಮ ಮತ್ತು ಧೃಢ  ಸಂಕಲ್ಪ ಅತ್ಯಗತ್ಯವಾಗಿ ಬೇಕು . ಪರ್ವತವನ್ನು ಏರಲು ಕಷ್ಟ ವಾಗುವವರಿಗೆ ಡೋಲಿಯ ವ್ಯವಸ್ಥೆಯೂ  ಇದೆ.  

ನಾವು ನಮ್ಮ ಚಾರಣ ತಂಡದ ಮಿತ್ರರೊಡನೆ ಗಿರ್ನಾರ್ ಪರ್ವತವನ್ನು ಹತ್ತಲಾರಂಭಿಸಿದ್ದು ಸಂಜೆಯ ೪ ಗಂಟೆ ಹೊತ್ತಿಗೆ. ನಿಧಾನವಾಗಿ ಮೇಲಕ್ಕೆರುತ್ತಿದ್ದಂತೆ ಕಾಣಸಿಗುವ ಸೂರ್ಯಾಸ್ತದ ದೃಶ್ಯ ನಯನ ಮನೋಹರ. ಸುತ್ತಲಿನ ಗಿರ್ ಅರಣ್ಯದ ಸೊಬಗು, ಪರ್ವತದ ಭವ್ಯತೆ, ಸೂರ್ಯನ ಬೆಳಕಿಗೆ ಕೆಂಪಾದ ಆಕಾಶ, ಪ್ರಾಣಿ ಪಕ್ಷಿಗಳ ಸ್ವರ  ಮಾಧುರ್ಯ,ಪರ್ವತ ಪ್ರದೇಶದಲ್ಲಿರುವ ಅಲೌಕಿಕ ಶಕ್ತಿ ಇವೆಲ್ಲವನ್ನೂ ಅನುಭವಿಸಿಯೇ ಅರಿಯಬೇಕು . ಇವೆಲ್ಲದರ ನಡುವೆ ನಾವು  ತೃಣ  ಮಾತ್ರರು !! ಸುಮಾರು ನಾಲ್ಕೂವರೆ ಸಾವಿರ ಮೆಟ್ಟಲುಗಳನ್ನು ಏರಿದ ಬಳಿಕ ಅಲ್ಲಿರುವ ಲಕ್ಷ್ಮಿ ನಾರಾಯಣ ಮಂದಿರದ ಆಶ್ರಮದಲ್ಲಿ ರಾತ್ರಿ ಕಳೆದೆವು. ದೇವ ಸನ್ನಿಧಿ, ಆಗಸದಲ್ಲಿ ನಕ್ಷತ್ರಗಳ ಚಿತ್ತಾರ -ಇವೆಲ್ಲವೂ ನಮಗೆ ಅವಿಸ್ಮರಣೀಯ ಅನುಭವ. ಇಡೀ ಗಿರ್ನಾರ್ ಒಮ್ಮೆ ಆಧ್ಯಾತ್ಮಿಕ ಶಿಖರದಂತೆ ಗೋಚರವಾದರೆ ಇನ್ನೊಮ್ಮೆ ಸಕಲ ಪ್ರಾಣಿ ಪಕ್ಷಿಗಳನ್ನೂ ತನ್ನಲ್ಲಿ ಬಚ್ಚಿಟ್ಟು ನಮ್ಮೆದುರು ಸವಾಲೆಸೆಯುವ ತುಂಟನಂತೆ ಕಾಣುತ್ತದೆ. ಅವರವರ ಭಾವಕ್ಕೆ  ಅವರವರ ಭಕುತಿಗೆ !! ಹಿಂದಿಯ ಖ್ಯಾತ ಚಲನಚಿತ್ರ 'ಸರಸ್ವತಿ ಚಂದ್ರ ' ದ   ಹಾಡು 'ಛೋ ಡ್ ದೇ ಸಾರಿ ದುನಿಯಾ ಕಿಸಿ ಕೇ ಲಿಯೇ '  ಚಿತ್ರೀಕ ರಣವಾದದ್ದು ಇಲ್ಲಿಯೆ. ಆ ಚಿತ್ರೀಕರಣದ ನೆನಪುಗಳನ್ನು ಅಲ್ಲಿಯ ಪೂಜಾರಿಯೋಬ್ಬರು ನಮ್ಮಲ್ಲಿ ಹಂ ಚಿ ಕೊಂಡರು 


ಮರುದಿನ ಬೆಳಗ್ಗೆ ೫ ಗಂಟೆಗೆ ನಾವು ಮತ್ತುಳಿದ ಐದುವರೆ ಸಾವಿರ ಮೆಟ್ಟಲುಗಳನ್ನು ಏರಿದೆವು. ಸೂರ್ಯೋದಯ ಮತ್ತೂ ಸುಂದರ. ಪ್ರಕೃತಿ ಮಾತೆಯ ಉಡುಗೆಗೆ ಅದೆಷ್ಟು ವರ್ಣಗಳು!!  ಪರ್ವತದ ಹಾದಿಯುದ್ದಕ್ಕೂ ಹಲವಾರು ಗುಡಿಗಳಿವೆ. ಜೈನ ಮಂದಿರಗಳಿವೆ. ಇವುಗಳಲ್ಲಿ ಪ್ರಮುಖವಾದದ್ದು ಅಂಬಾಜಿ ಮಂದಿರ. ಇದು ಮಹಾಭಾರತ ಕಾಲದಿಂದಲೂ ಮಹತ್ವವನ್ನು ಪಡೆದಿದೆ. ಹೊಸದಾಗಿ ಮದುವೆಯಾದ ದಂಪತಿಗಳು ಇಲ್ಲಿ ದೇವಿಯ ದರ್ಶನವನ್ನು ಪಡೆಯಲು ಬರುವುದು ವಾಡಿಕೆ. ಗಿರ್ನಾರ್ ನ ತುತ್ತ ತುದಿಯಲ್ಲಿ ದತ್ತ ಪೀಠವಿದೆ. ಬೆಳಗ್ಗೆ ಸುಮಾರು ೮:೩೦ ಕ್ಕೆ ಪರ್ವತದ ತುದಿಯನ್ನು ತಲುಪಿದೆವು. ಅಲ್ಲಿ ದತ್ತಾತ್ರೆಯನ ದರ್ಶನ ಪಡೆದೆವು.  ಗುರು ದತ್ತಾತ್ರೇಯರು ಇಲ್ಲಿ ಸಾವಿರಾರು ವರ್ಷಗಳ ಕಾಲ ತಪಸ್ಸು ಮಾಡಿ ಸಿದ್ಧಿ ಪಡೆದ ಸ್ಥಳ ಇದು. ಇದರ ಸ್ವಲ್ಪ ಕೆಳಗೆ ದತ್ತ ಜ್ವಾಲೆಯಿರುವ ಮಂದಿರವಿದೆ. ಇಲ್ಲಿಯ ಜ್ವಾಲೆಯನ್ನು  ವಾರಕ್ಕೊಮ್ಮೆ ಮಾತ್ರ ತೆರೆಯಲಾಗುತ್ತದೆ. ಅದು ಎಂದಿಗೂ ಆರುವುದೇ ಇಲ್ಲ. ದತ್ತನ   ಮಹಿಮೆ ಎಂದು ಜನ ನಂಬುತ್ತಾರೆ. ಹಲವಾರು ವಿಜ್ಞಾನಿಗಳು ಬಂದು ಈ ವಿಸ್ಮಯವನ್ನು ಅರಿಯಲಾರದೆ ಹೋಗಿದ್ದಾರೆ ಎಂದು ಮಂದಿರದ ಪೂಜಾರಿ ನಮಗೆ ತಿಳಿಸಿದರು. ಅಲ್ಲಿಯ ಆಹ್ಲಾದಕರ ಪರಿಸರ ನಮಗೆ   ಮುದವನ್ನು ನೀಡಿತು. ಅಲ್ಲಿ ಭಕ್ತರಿಗೆ ರೋಟಿ, ದಾಲ್, ಪಲ್ಯ ಮತ್ತು ಖಿಚಡಿಗಳ ಪ್ರಸಾದವನ್ನು ನೀಡುತ್ತಾರೆ.ಅಲ್ಲಿ ಪ್ರಸಾದ ಸೇವಿಸಿ ನಾವು ನಿಧಾನವಾಗಿ ಇಳಿಯಲಾರಂಭಿಸಿದೆವು. 

ಇಳಿಯುವುದು ಹತ್ತುವುದಕ್ಕಿಂತಲೂ ಬಹಳ ತ್ರಾಸದಾಯಕವಾಗಿತ್ತು. ಹಿಂದಿನ ದಿನದ ಸುಸ್ತೂ ಸೇರಿ ಕಾಲುಗಳು ನಿಧಾವಾಗುತ್ತಿದ್ದವು. ಪ್ರತಿ ಹೆಜ್ಜೆಯೂ ಭಾರವೆನಿಸತೊಡಗಿತು. ನಿಧಾನವಾಗಿ ಬಿಸಿಲೇರುತ್ತಿತ್ತು. ದಾರಿ ಮಧ್ಯ ಸಿಗುವ ಪುಟ್ಟ ಅಂಗಡಿಗಳಲ್ಲಿ ನಿಂಬೆ ರಸ, ಮಜ್ಜಿಗೆ ಇತ್ಯಾದಿಗಳನ್ನು ಸೇವಿಸುತ್ತಾ, ವಿಶ್ರಾಂತಿ ಪಡೆಯುತ್ತಾ ಇಳಿಯುತ್ತಿದ್ದೆವು. ಬೇಸ್  ಕ್ಯಾಂಪ್ ಗೆ ತಲುಪುವುದು ಹೇಗೆ ಎಂದು ಚಿಂತೆ ಕಾಡ ತೊಡಗಿತು. ಕಡೆಗೆ ಹೇಗಾದರೂ ಮಾಡಿ ಇಳಿದೇ ಬಿಡುತ್ತೇವೆ ಎಂಬ ಸಂಕಲ್ಪದೊಂದಿಗೆ ನಮ್ಮ ಚಾರಣದ ಮಿತ್ರವರ್ಗ ಒಬರನ್ನೊಬ್ಬರು ಹುರಿದುಂಬಿಸುತ್ತಾ ಸುಮಾರು ೨:೩೦ ಮಧ್ಯಾಹ್ನದ ಹೊತ್ತಿಗೆ ನಮ್ಮ ಬೇಸ್  ಕ್ಯಾಂಪ್ ತಲುಪಿದ್ದಾಯ್ತು . ಆಹ.. ನಾವು ಗಿರ್ನಾರ್ ಹತ್ತಿ ಬಂದೆವು !! ನಮ್ಮ ಸಂತಸಕ್ಕೆ ಪಾರವೇ ಇಲ್ಲ. ಮತ್ತೆರಡು ದಿನ ಸ್ವಲ್ಪ ಕುಂಟುತ್ತ ನಡೆದದ್ದು ಬೇರೆ ವಿಷಯ !! 

 ಗಿರ್  ಬಗ್ಗೆ ಶಾಲೆಯಲ್ಲಿ ಸಮಾಜ ಪುಸ್ತಕದಲ್ಲಿ ಓದಿದ ನೆನಪು. ಗಿರ್  ಅರಣ್ಯಗಳು ಸಿಂಹಗಳಿಂದಾಗಿ ವಿಶ್ವ ವಿಖ್ಯಾತವಾಗಿವೆ.ಇಲ್ಲಿ ಅದನ್ನು ಪ್ರತ್ಯಕ್ಷವಾಗಿ ನೋಡುವ ಅವಕಾಶ ಒದಗಿ ಬಂದಿತು. ಸಿಂಹಗಳ  ರಕ್ಷಣೆಗಾಗಿ ಇರುವ ಈ ಅರಣ್ಯವನ್ನು ರಕ್ಷಿತಾರಣ್ಯವೆಂದು ಘೋಶಿಸಲಾಗಿದೆ. ಸಿಂಹಗಳ  ಬಗ್ಗೆ ಅಧ್ಯಯನ ಮತ್ತು ಸಂರಕ್ಷಣೆಗೆ ಒತ್ತು   ನೀ ಡಲಾಗುತ್ತದೆ. ಅರಣ್ಯದ ಸ್ವಲ್ಪ ಭಾಗದಲ್ಲಷ್ಟೇ ಪ್ರವಾಸಿಗರಿಗೆ ಪ್ರವೇಶ. ಅದೂ ಕೂಡ ಅವರ ಜೀಪ್ ನಲ್ಲಿ ಗೈಡ್  ಜತೆ.  ಕಾಡಿನ ಹಾದಿ ಉದ್ದಕ್ಕೂ  ಜಿಂಕೆ,ನೀಲ್ಗಾಯ್  ಮುಂತಾದ ಪ್ರಾಣಿಗಳನ್ನು ಕಾಣಬಹುದು. ಸಿಂಹ ಕಾಣ ಸಿಗುವುದರ ಬಗ್ಗೆ ನಮ್ಮ ಗೈಡ್ ಖಾತ್ರಿ ನೀಡಿರಲಿಲ್ಲ. ನಮ್ಮ ಅದೃಷ್ಟವೋ ಏನೋ ನಮ್ಮ ಜೀಪ್ ಮುಂದೆಯೆ ಸಿಂಹ ಮತ್ತು ಸಿಂಹಿಣಿ  ಹಾದು ಹೋಗಬೇಕೆ !! ಆ ಕ್ಷಣ ಅತ್ಯಂತ ರೋಮಾಂಚಕಾರಿ . ಕಾಡಿನ ರಾಜ ನಮ್ಮ ಎದುರಲ್ಲಿ.. ಅದರ ನಡಿಗೆಯ ಗಾಂಭೀರ್ಯವಂತೂ ಅಹಾ.. ರಾಜನಲ್ಲವೇ !! ನಾವೆಲ್ಲಾ ಉಸಿರು ಬಿಗಿ ಹಿಡಿದು ಅದನ್ನು ನೋಡುತ್ತ ಫೊಟೊ ತೆಗೆಯುತ್ತ ಇರುವಾಗಲೂ ಅದು  ನಮ್ಮನ್ನು ಕ್ಯಾರೆ ಮಾಡಲಿಲ್ಲ.  ಕಾಡಿನ ನಡುವೆ ಮಾಲ್ಧಾರಿ ಎಂಬ ಬುಡಕಟ್ಟು ಜನರು ವಾಸಿಸುತ್ತಾರೆ. ಸಿಂಹ ಮತ್ತು ಮನುಷ್ಯ ಜತೆ ಜತೆಯಾಗಿ ಜೀವನ ಸಾಗಿಸುವ ಪರಿ ನಮಗೆ ಅಚ್ಚರಿಯನ್ನು ಉಂಟು ಮಾಡುತ್ತದೆ. 

ಗಿರ್ನಾರ್ ನಿಂದ ಸುಮಾರು ೭೫ ಕಿ.ಮಿ. ದೂರದಲ್ಲಿ ಸೋಮನಾಥ ದೇವಾಲಯವಿದೆ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಇದು ಮೊದಲನೆಯದು. ಸಮುದ್ರ ಘೋಷದ ಪಕ್ಕದಲ್ಲೇ ಇರುವ ಈ ದೇಗುಲ ಶತಶತಮಾನಗಳ ಕಾಲ ಪರಕೀಯರ ದಾಳಿಗೊಳಗಾಗಿ, ಸಂಪತ್ತೆಲ್ಲ ಸೂರೆ ಹೋದರೂ ಮತ್ತೆ ತಲೆ ಎತ್ತಿ ನಿಂತಿದೆ. ಭಕ್ತಿ ಭಾವಗಳ ಪರಾಕಾಷ್ಟೆ ,ಸಾಗರನ  ಸಾಮೀಪ್ಯ,ಸಮರ್ಪಕ ನಿರ್ವಹಣೆ ಮತ್ತು ಶುಚಿತ್ವ ಇವೆಲ್ಲವೂ ನನ್ನ ಮನ ಮುಟ್ಟಿದವು. ಇಲ್ಲಿ ಒಳಗೆ ಹೋಗಬೇಕಾದರೆ ಕ್ಯಾಮರ, ಫೋನ್ ಇವುಗಳನ್ನು ಯವುದನ್ನೂ ತೆಗೆದುಕೊಂಡು  ಹೋಗುವಂತಿಲ್ಲ. 

ಒಂದು ದಿನವಿಡೀ ನಾವು ಜುನಾಗಡ  ನಗರವನ್ನು ಸುತ್ತಾಡಿದೆವು. ಅಲ್ಲಿಯ ಉಪ್ಪರ್ ಕೋಟ್, ನವಾಬರ ವಸ್ತು  ಸಂಗ್ರಹಾಲಯ,ಸಕ್ಕರ್ ಬಾಗ್ ಪ್ರಾಣಿ ಸಂಗ್ರಹಾಲಯ ,ಮಹಬತ್ ಖಾನ್ ಗೋರಿ ಇವೆಲ್ಲವನ್ನೂ ವೀಕ್ಷಿಸಿದೆವು. ಪ್ರಾಚೀನ ಕಾಲದಲ್ಲಿ ಧಾನ್ಯಗಳನ್ನು ಸಂಗ್ರಹಿಸಿ ಇಡಲು ಕೋಟೆಯೊಳಗೆ ಮಾಡಿರುವ ನೆಲ  ಮಾಳಿಗೆಗಳು,ನೀರಿನ ಸಂರಕ್ಷಣೆಗಾಗಿ ಆಳವಾದ ಮೆಟ್ಟಿಲು ಮೆಟ್ಟಿಲಾಗಿ ಇರುವ ಬಾವಿಗಳು ಇತ್ಯಾದಿ ಆಗಿನ ಕಾಲದ ವಾಸ್ತು ಕೌಶಲ್ಯಕ್ಕೆ ದ್ಯೋತಕವಾಗಿವೆ. ಇತಿಹಾಸದ ಗುಹೆಯನ್ನು ಹೊಕ್ಕು ಬಂದoತಾಯಿತು. 

ಒಟ್ಟಿನಲ್ಲಿ ಹೇಳುವುದಾದರೆ  ಈ ಪ್ರವಾಸ ವಿಭಿನ್ನವಾಗಿತ್ತು.ಚಾರಣ, ವನ ವಿಹಾರ ,ಇತಿಹಾಸ ಮತ್ತು ಭಕ್ತಿಭಾವದಲ್ಲಿ ಮುಳುಗೆದ್ದು ಬಂದದ್ದು ಒಂದು ಸುಂದರ ಅನುಭವ. ಇದು  ಬಹಳಷ್ಟು ಹುರುಪು ಉತ್ಸಾಹ ನೀಡಿತು. ಅಲ್ಲಿಂದ ವಾಪಸು ಬಂದ ಮೇಲೂ  ನನ್ನ ಮನಸ್ಸು ಅಲ್ಲಿಯೇ ಇದೆ. 
(ಉದಯವಾಣಿಯಲ್ಲಿ ಪ್ರಕಟಿತ)

ಯುತ್ ಹಾಸ್ಟೆಲ್ ನವರು ಆಯೋಜಿಸಿದ್ದ ಪ್ರವಾಸ ಇದು. ಈ ವರುಷದ ಪ್ರವಾಸಕ್ಕೆ ನೀವು ಹೋಗಬೇಕೆಂದಿದ್ದರೆ ಈ ಲಿಂಕ್ 

ಒತ್ತಿ. 

Friday, April 24, 2015

ನಾನೂ ಅಮೆರಿಕಾಕ್ಕೆ ಹೋಗಿ ಬಂದೆ !!


ಆಂಗ್ಲ ಭಾಷೆಯಲ್ಲಿ 'flying visit ' ಎಂಬ ಪದವಿದೆ. ಅತ್ಯಲ್ಪ ಅವಧಿಯ ಭೇಟಿಯನ್ನು  ಹಾಗೆ ಕರೆಯುತ್ತೇವೆ. ನನ್ನ ಅಮೇರಿಕ ಪ್ರವಾಸವೂ  ಈ ತರಹದ್ದು.ಕಳೆದ ಜನವರಿಯಲ್ಲಿ ನಾನು  ಕೆಲಸ ಮಾಡುತ್ತಿರುವ ಕಂಪನಿಯ ಬೇರೊಂದು ವಿಭಾಗಕ್ಕೆ ವರ್ಗಾವಣೆ ಕೋರಿದ್ದೆ. ಅದರ interview ನಡೆದು ನನಗೆ ಹೊಸ ಹುದ್ದೆ ದೊರಕಿದ್ದೂ ಆಯಿತು. ಅದಾದ ತಕ್ಷಣ  ನನ್ನ ಹೊಸ ಟೀಮ್ ಅನ್ನು ಭೇಟಿಯಾಗಲು ಒಂದು ವಾರದ ಅವಧಿಯ ಅಮೇರಿಕ ಪ್ರವಾಸ ನಿಗದಿಯಾಯಿತು. ಅಷ್ಟರ ತನಕ ನಾನು ಕ್ಯಾಲಿಫೊರ್ನಿಯಾ ವನ್ನು ನಕಾಶೆಯಲ್ಲಿ ಮಾತ್ರ ನೋಡಿದ್ದೆ!

ಅಮೇರಿಕಕ್ಕೆ ಹೋಗಲು ಮೊದಲ ಹಂತ ವೀಸಾ ಪ್ರಕ್ರಿಯೆ. ಇದಕ್ಕೆ ಬೇಕಾಗುವ ಕಾಗದ ಪತ್ರಗಳ ಪಟ್ಟಿಯ೦ತೂ ಸುದೀರ್ಘವಾಗಿತ್ತು. ಅವನ್ನೆಲ್ಲ ಹೊಂದಿಸಿಕೊಂಡು ಚೆನ್ನೈ ಗೆ ತೆರಳಿ ,ವೀಸಾ ಪಡೆದದ್ದೂ ಆಯಿತು. ವೀಸಾ ದೊರೆತ ಎರಡು ದಿನಗಳಲ್ಲಿಯೇ  ನನ್ನ ಪ್ರಯಾಣ ನಿಗದಿಯಾಗಿತ್ತು. ಹಾಗಾಗಿ ಕೊಂಚ ತರಾತುರಿಯಲ್ಲಿಯೇ ಪ್ಯಾಕಿಂಗ್ ಇತ್ಯಾದಿಗಳನ್ನು ಮುಗಿಸಿದೆ. ಬೆಂಗಳೂರು- ದುಬೈ , ದುಬೈ- ಸಾನ್ ಫ್ರಾನ್ಸಿ ಸ್ಕೋ  ಹೀಗೆ ಎರಡು ಹಂತಗಳಲ್ಲಿ  ಸುಮಾರು  ೨೨ ಗಂಟೆಗಳ ಸುದೀರ್ಘ ಪ್ರಯಾಣದ ಬಳಿಕ ಅಮೇರಿಕಾ ತಲುಪಿದೆ.

ನನ್ನ ಚಿಕ್ಕಪ್ಪನ ಮಗಳು ಮತ್ತು ಆಕೆಯ ಕುಟುಂಬ ಸಾನ್ ಫ್ರಾನ್ಸಿ ಸ್ಕೋದಲ್ಲಿ ಇದ್ದಾರೆ. ನಾನು ಅಮೇರಿಕಾ ದಲ್ಲಿ ಇಳಿದ ಮೊದಲ ದಿನ ಆಕೆ ನನ್ನನ್ನು ಅವರ ಮನೆಗೆ ಕರೆದೊಯ್ದಳು. ಅಲ್ಲಿ ಭರ್ಜರಿ ಮನೆ ಊಟವನ್ನು ಮಾಡಿದ್ದಾಯಿತು. ವಿಮಾನದ ಪ್ರಯಾಣದ ಅವಧಿಯಲ್ಲಿಡೀ ಕೊಡುತ್ತಿದ್ದ  ಸಪ್ಪೆ ಸಪ್ಪೆ ಆಹಾರ ತಿಂದ ಬಳಿಕ ಮನೆ ಊಟ ಸಿಗುವಾಗಿನ  ಆನಂದ ಅಪರಿಮಿತ. ಆಕೆಯನ್ನೂ ಆಕೆಯ ಸಂಸಾರವನ್ನೂ ಕಂಡು ನನಗೆ ಸಂತೋಷವಾಯಿತು. ಹೊಸಮಠವೆಂಬ ಪುಟ್ಟ ಹಳ್ಳಿಯ ಇಬ್ಬರು ಹುಡುಗಿಯರು ಈ ರೀತಿ ಅಮೇರಿಕಾದಲ್ಲಿ ಭೇಟಿಯಾಗುತ್ತೇವೆಂದು ನಾನು ಅಂದುಕೊಂಡಿರಲಿಲ್ಲ. ನಮ್ಮ ಊರಿನ ಪ್ರಥಮ ಮಹಿಳಾ ಇಂಜಿನಿಯರ್ ಆಕೆ !!

ಬಳಿಕ ನಾನು ನಮ್ಮ ಟೀಮ್ ಉಳಿದುಕೊಂಡಿದ್ದ ಹೋಟೆಲ್ ಗೆ ಬಂದೆ. ಹೋಟೆಲ್ ನ ಹಿಂಭಾಗದಲ್ಲಿಯ  ಬ್ಯಾಕ್  ವಾಟರ್ ಒಂದು ದೊಡ್ಡ ಸರೋವರದ ಥರ ಕಾಣಿಸುತ್ತದೆ. ಅಲ್ಲಿ ಸೂರ್ಯೋದಯ ಬಹಳ ಸೊಗಸು.
                           ಸೂರ್ಯೋದಯ 

ಪ್ರಶಾಂತವಾದ ಬ್ಯಾಕ್ ವಾಟರ್
                                      
ಮೊದಲೆರಡು ದಿನ ಪ್ರಯಾಣದ ಸುಸ್ತಿನಿಂದ ಬೆಳಗ್ಗೆ ಬೇಗ ಏಳಲಾಗಲಿಲ್ಲ. ಬಳಿಕ ಮೂರು-ನಾಲ್ಕು ದಿನ ನಾನು ದಿನಾ ಅಲ್ಲಿ ವಾಕಿಂಗ್ ಮಾಡಿ, ಸೂರ್ಯೋದಯವನ್ನು ಕಣ್ತುಂಬಿಕೊಂಡೆ.ಬೆಂಗಳೂರಿನ  ಸದ್ದುಗದ್ದಲದ ವಾತಾವರಣದಿಂದ ನನ್ನನ್ನು ನಿಶ್ಯಬ್ದ ವಾತಾವರಣಕ್ಕೆ ವರ್ಗಾಯಿಸಿದಂತೆ ಇತ್ತು.

ಇಷ್ಟರ ತನಕ ಹಲವಾರು ದೇಶಗಳಿಗೆ ಭೇಟಿ ನೀಡಿದ್ದೆನಾದರೂ ಇಷ್ಟೊಂದು ದೀರ್ಘ ಪ್ರಯಾಣ , ೧೩.೫ ಗಂಟೆ ಗಳ ಕಾಲ ವ್ಯತ್ಯಾಸ ಇವೆಲ್ಲವೂ ನನಗೆ ಹೊಸದೇ. ಇವು ನನ್ನಲ್ಲಿ ತೀರ ಬಳಲಿಕೆ ಉಂಟು ಮಾಡಿದವು. ರಾತ್ರಿ ಇಡೀ ಸರಿಯಾಗಿ  ನಿದ್ದೆಯಿಲ್ಲ. ಹಗಲಿಡೀ ತೂಕಡಿಕೆ . ಹಸಿವೆಯಂತೋ ಯಾವ್ಯಾವ ಹೊತ್ತಿಗೋ. ಒಂದು ಥರದ ವಿಚಿತ್ರವಾದ ಮನಸ್ಸು ಮತ್ತು ದೇಹಸ್ಥಿತಿ ಯಲ್ಲಿ ನಾನಿದ್ದೆ. ಅದರ ಮೇಲೆ ವಾರವಿಡೀ ಆಫೀಸ್ ಕೆಲಸಗಳು. ಅಂತೂ ಇಂತೂ ಬಹಳ  ಸಲ ಕಾಫಿ ಕುಡಿದು, ನೀರು ಕುಡಿಯುತ್ತಾ ಹೇಗೋ ನಿಭಾಯಿಸಿದೆ.


ನನ್ನ ಜ್ಯೋತಿಷ್ಯ ತರಗತಿಯ ಸಹಪಾಠಿಯೋರ್ವರ ಮಗ  ಅಮೇರಿಕಾದಲ್ಲಿ ನೆಲೆಸಿದ್ದಾರೆ. ಒಂದು ಸಂಜೆ ಅವರ ಕುಟುಂಬದ ಜತೆ ಗೋಲ್ಡನ್ ಗೇಟ್ , Fisherman's Wharf  ಇವುಗಳನ್ನು ಸುತ್ತಾಡಿ ಬಂದೆ.   ಮತ್ತೊಂದು ಸಂಜೆ ನಮ್ಮ ಆಫೀಸ್ ಟೀಮ್ ಜತೆ ಕಂಪ್ಯೂಟರ್ ಹಿಸ್ಟರಿ ಮ್ಯೂಸಿಯಂಗೆ ಹೋಗಿದ್ದೆವು. ಕಂಪ್ಯೂಟರ್ ಆರಂಭವಾದಾಗಿನಿಂದ ಈಗಿನ ಅತ್ಯಾಧುನಿಕ ತಂತ್ರಜ್ಞಾನದವರೆಗೆ ಎಲ್ಲಾ ಯಂತ್ರಗಳನ್ನೂ ಅವುಗಳ ವಿವರಗಳನ್ನೂ ಅಚ್ಚುಕಟ್ಟಾಗಿ ಜೋಡಿಸಿದ್ದಾರೆ. ಲಾಪ್ ಟಾಪ್ ಸ್ವಲ್ಪ ಭಾರವಾಯಿತೆಂದು ಗೊಣಗುವ ನಾವು ಈ ಹಿಂದೆ ಕೊಠದಿಯಷ್ಟು ವಿಸ್ತಾರವಾಗಿದ್ದ ಕಂಪ್ಯೂಟರ್ ಗಳನ್ನು ಒಮ್ಮೆ ನೋಡಬೇಕು! ಈ ವಿಜ್ಞಾನ ಬೆಳೆದು ಬಂದ ಹಾದಿ ಅದ್ಭುತವಾಗಿದೆ. ಇಂತಹುದನ್ನೆಲ್ಲ ಆವಿಷ್ಕಾರ ಮಾಡಿದ ಮಾನವ ಮಿದುಳು ಎಂತಹ ಸೂಪರ್ ಕಂಪ್ಯೂಟರ್ ಎಂದು ಯೋಚನೆ ಮಾಡಿದೆ.


ಅಬಾಕಸ್  ಬಳಸಿ ಲೆಕ್ಕ ಮಾಡುವುದು
ಪಂಚಿಂಗ್ ಕಾರ್ಡ್ ಬಳಸಿ Data Entry ಮಾಡುವುದು


ಬೃಹದಾಕಾರದ ಕಂಪ್ಯೂಟರ್
ಇಷ್ಟೆಲ್ಲಾ ಆದಾಗ ಒಂದು ವಾರ ಕಳೆದದ್ದೇ ತಿಳಿಯಲಿಲ್ಲ. ಆಫೀಸ್ ಕೆಲಸಗಳು ಮುಗಿದ ಬಳಿಕ ನಾನು ಚಿಕ್ಕಪ್ಪನ ಮಗನ ಮನೆಗೆ ಹೋಗಿದ್ದೆ. ಆ ದಿನ ನನಗೆ ಮತ್ತೊಮ್ಮೆ ಮನೆ ಊಟ  ಸವಿಯುವ ಸದವಕಾಶ ದೊರೆಯಿತು. ಒಂದು ವಾರ ಇಡೀ ಬ್ರೆಡ್ , ಪಿಜ್ಜಾ ಗಳಲ್ಲಿ ದಿನ ಕಳೆದ ಮೇಲೆ  ಮನೆ ಊಟ  ನೀಡುವ ತೃಪ್ತಿ  ಅವರ್ಣನೀಯ. ಬಹಳ ಕಾಲದ ನಂತರ ಅವರೆಲ್ಲರನ್ನೂ ಭೇಟಿ ಮಾಡಿದ್ದು , ಅವರ ಕುಟುಂಬದ  ಜತೆಗಿನ ಒಡನಾಟವು ನನಗೆ ಖುಷಿ ನೀಡಿತು .ಅಲ್ಲಿಂದ ಮರಳಿ  ಸ್ವಲ್ಪ ಶಾಪಿಂಗ್ ಮುಗಿಸಿ, ಮತ್ತೆ ವಿಮಾನ ಹತ್ತುವ ಸಮಯ.  "ನನ್ನ ಊರಿಗೆ ಮರಳಿ ಬರುತ್ತಿದ್ದೇನೆ' ಎಂಬ ಸೌಖ್ಯ ಭಾವವಿದೆಯಲ್ಲ ಅದು ಎಷ್ಟೊಂದು ಸೊಗಸು !!  


Sunday, October 31, 2010

ಭೂತಾನ್ ಪ್ರವಾಸ ಕಥನ

ಭೂತಾನ್ ಪ್ರವಾಸ ಕಥನ
---------------------------
-ಅರ್ಚನಾ ಹೆಬ್ಬಾರ್,ಬೆಂಗಳೂರು


"ಅಲ್ಲ ಮಹಾರಾಯ್ತೀ, ಹೋಗಿ ಹೋಗಿ ಭೂತಾನಕ್ಕೆ ಹೊರಟು ನಿಂತಿದ್ದೀಯಲ್ಲಾ. ನಿಂಗೆ ಬೇರೆ ಯಾವ ದೇಶವೂ ಸುತ್ತಲಿಕ್ಕೆ ಸಿಗಲಿಲ್ಲ್ವಾ?" ಅಂತ ಗೆಳತಿ ಛೇಡಿಸಿದಳು. ಹೌದು, ವಿಶ್ವದ ನಕಾಶೆಯಲ್ಲಿ ಅಷ್ಟೇನೂ ಗಮನಾರ್ಹವಾಗಿ ಗೋಚರಿಸದಿರುವ, ಬಾಲಿವುಡ್, ಸ್ಯಾಂಡಲ್ ವುಡ್ ಗಳ ಕಣ್ಣಿಗೆ ಅಷ್ಟಾಗಿ ಬೀಳದಿರುವ ಭೂತಾನದ ಬಗ್ಗೆ, ಅಲ್ಲಿಗೆ ಪ್ರವಾಸ ಹೊರಟಿದ್ದೇನೆ ಎಂದಾಗ ಜನರ ಪ್ರತಿಕ್ರಿಯೆ ಈ ಪರಿಯಾಗಿ ಇರುವುದು ಅಚ್ಚರಿಯೇನಲ್ಲ. ನಾನು ಹಾಗೇ ಸುಮ್ಮನೆ ಅಂತರ್ಜಾಲವನ್ನು ಜಾಲಾಡುತ್ತಿರುವಾಗ ಭೂತಾನದ ಬಗ್ಗೆ ಓದಿದೆ. ನಮ್ಮ ನೆರೆಯ ದೇಶವೇ. ಹೆಚ್ಚೇನು ದೂರವಿಲ್ಲ. ಹಿಮಾಲಯ ಪರ್ವತ ಶ್ರೇಣಿಯಿಂದ ಆವೃತವಾದ, ರಮಣೀಯ ಪುಟ್ಟ ದೇಶದ ಬಗ್ಗೆ ಏಕೋ ಅವ್ಯಕ್ತ ಕುತೂಹಲ ಮೂಡಿತು. ಅಲ್ಲಿಯ ಸುಂದರ ಚಿತ್ರದಂತಿರುವ ಛಾಯಾಚಿತ್ರಗಳು, ಬೌದ್ಢ ಮಂದಿರಗಳು, ಅಲ್ಲಿನ ವಿಶಿಷ್ಟ ಉಡುಪು, ರಾಜನ ಆಳ್ವಿಕೆ, ನ್ಯಾಶನಲ್ ಹೆಪ್ಪಿನೆಸ್ಸ್ ಇಂಡೆಕ್ಸ್ ಇವುಗಳ ಬಗ್ಗೆ ತಿಳಿದಾಗ ಇದೊಂದು ಕನಸಿನ ಊರೇ ಸೈ, ಇಲ್ಲಿಗೆ ಭೇಟಿ ನೀಡಲೇಬೇಕೆಂಬ ಉತ್ಕಟ ಹಂಬಲವುಂಟಾಯಿತು. ಸರಿ ಇನ್ನೇಕೆ ತಡ ಎಂದು ಅಲ್ಲಿಯ ಮತ್ತಷ್ಟು ವಿವರಗಳನ್ನು ಸಂಗ್ರಹಿಸಲಾರಂಭಿಸಿದೆ.

ಭೂತಾನ ಭಾರತದ ಈಶಾನ್ಯ ದಿಕ್ಕಿನಲ್ಲಿರುವ ದೇಶ. ಜನಸಂಖ್ಯೆ ಸುಮಾರು ೬ ಲಕ್ಷ. ಸುತ್ತಲೂ ಹಿಮಾಲಯ ಪರ್ವತ ಶ್ರೇಣಿ, ಹೆಜ್ಜೆ ಹೆಜ್ಜೆಗೂ ಕಾಣಸಿಗುವ ತೊರೆಗಳು, ಸ್ಫಟಿಕ ಶುಭ್ರ ನೀರಿನ ನದಿಗಳು, ಧುಮ್ಮಿಕ್ಕುವ ಜಲಧಾರೆಗಳು, ಎತ್ತ ನೋಡಿದರೂ ಪ್ರಕೃತಿ ಮಾತೆಯ ಅನನ್ಯ ಸೌಂದರ್ಯದ ಮಡಿಲು, ಝರಿಗಳ ನಿನಾದ ಒಟ್ಟಿನಲ್ಲಿ ಹೇಳುವುದಾದರೆ ನಮ್ಮ ಕಲ್ಪನೆಯಲ್ಲಿರುವ ಸ್ವರ್ಗ ಸದೃಶ ವಾತಾವರಣ.

ಹೋಗುವುದು ಹೇಗೆ?

ವಾಯುಮಾರ್ಗವಾಗಿ ಹೋಗುವುದಾದರೆ ಕೊಲ್ಕೊತ್ತ ದಿಂದ ಭೂತಾನದ ಪಾರೊ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಥವಾ ದೆಹಲಿ ಮೂಲಕ ಪಾರೊ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಬಹುದು. ಪಶ್ಚಿಮ ಬಂಗಾಳದ ಶಿಲಿಗುರಿಯಿಂದ ಬಸ್ ಪ್ರಯಾಣದ ಮೂಲಕವೂ ಭೂತಾನದ ಗಡಿಯಲ್ಲಿರುವ ಫ್ಹುಎನ್ತ್ಶೊಲಿನ್ಗ್ ತಲುಪಬಹುದು.

ಪ್ರವಾಸಕ್ಕೆ ತಯಾರಿ
ಭೂತಾನ ಪ್ರವಾಸ, ವಸತಿ, ಊಟ ಇತ್ಯಾದಿಗಳ ಬಗ್ಗೆ ಮತ್ತಷ್ಟು ವಿವರಗಳನ್ನು ಸಂಗ್ರಹಿಸಿದೆ. ಅಲ್ಲಿಯ ಪ್ರವಾಸೋದ್ಯಮವು ರಾಜನ ಹತೋಟಿಯಲ್ಲಿದೆ. ರಾಜನಿಂದ ಅನುಮತಿ ಪಡೆದ ಟೂರ್ ಆಪರೇಟರಿಗೆ ಮುಂಗಡ ಹಣ ನೀಡಿ ಪ್ರವಾಸವನ್ನು ಆಯೋಜಿಸಬಹುದು. ಅಲ್ಲಿಯ ಹಲವಾರು ಬೌದ್ಧ ಧರ್ಮ ಕೇಂದ್ರಗಳು ಮತ್ತು ಆಡಳಿತಕ್ಕೆ ಸಂಬಂಧಿಸಿದ ಕಚೇರಿಗಳಿಗೆ ಭೇಟಿನೀಡಲು ವಿಶೇಷ ಅನುಮತಿಯ ಅಗತ್ಯವಿರುತ್ತದೆ. ಸ್ವ ಆಯೋಜಿತ ಪ್ರವಾಸದಲ್ಲಿ ಈ ವ್ಯವಸ್ಥೆಗಳನ್ನು ಮಾಡಿಕೊಳ್ಳುವುದು ಸ್ವಲ್ಪ ಕಷ್ಟವೇ. ಟೂರ್ ಆಪರೇಟರ್ ಮೂಲಕ ಪ್ರವಾಸ ಹೋದರೆ ಅವರೇ ಆ ಎಲ್ಲ ಪ್ರವಾಸ, ಊಟ, ವಸತಿ ವ್ಯವಸ್ಥೆಗಳನ್ನು ಅತ್ಯುತ್ತಮ ರೀತಿಯಲ್ಲಿ ಮಾಡಿರುತ್ತಾರೆ.

ಭಾರತಕ್ಕೂ ಅಲ್ಲಿಗೂ ಅರ್ಧ ಗಂಟೆಯ ಕಾಲಮಾನ ವ್ಯತ್ಯಾಸ. ಇಲ್ಲಿನ ಬೆಳಗ್ಗಿನ ಒಂಭತ್ತು ಗಂಟೆ ಅಲ್ಲಿಯ ಬೆಳಗ್ಗಿನ ಒಂಭತ್ತುವರೆ ಗಂಟೆ. ಭೂತಾನದ ರಾಜಧಾನಿ: ತಿಂಪು. ಅಲ್ಲಿನ ಕರೆನ್ಸಿ: ನು (ನುಲ್ಡ್ರಮ್ ). ೧ ನು ಎಂದರೆ ೧ ರೂಪಾಯಿಗೆ ಸಮ. ಭಾರತೀಯ ಕರೆನ್ಸಿ ೧೦೦ ರೂ ಮತ್ತು ಅದಕ್ಕಿಂತ ಕಡಿಮೆ ಮುಖಬೆಲೆಯ ನೋಟುಗಳನ್ನು ಆಲ್ಲಿ ಚಲಾಯಿಸಬಹುದು. ನೂರಕ್ಕಿಂತ ಹೆಚ್ಚಿನ ಮುಖಬೆಲೆಯ ನೋಟುಗಳನ್ನು ನಾವು ಇಲ್ಲಿಂದ ಕೊಂಡೊಯ್ಯುವಂತಿಲ್ಲ. ಭಾರತೀಯರಿಗೆ ಅಲ್ಲಿಗೆ ಹೋಗಲು ಪಾಸ್ ಪೋರ್ಟ್ ಮಾತ್ರ ಇದ್ದರೆ ಸಾಕು. ವೀಸಾದ ಅಗತ್ಯವಿಲ್ಲ.

ಆಗಸ್ಟ್ ನಿಂದ ನವಂಬರ್, ಮಾರ್ಚ್ ನಿಂದ ಮೇ ಭೂತಾನನ್ನು ಸಂದರ್ಶಿಸಲು ಅತ್ಯುತ್ತಮ ಸಮಯ. ಕೊರೆಯುವ ಚಳಿ ಇರುವುದಿಲ್ಲವಾದರೂ ತಕ್ಕಷ್ಟು ಬೆಚ್ಚನೆಯ ವಸ್ತ್ರಗಳನ್ನು ತೆಗೆದುಕೊಂಡು ಹೋಗುವುದು ಒಳಿತು. ಪ್ರವಾಸದ ಬಗ್ಗೆ ಸಾಕಷ್ಟು ವಿವರಗಳನ್ನು ಕಲೆ ಹಾಕಿದ ಬಳಿಕ ನಾನು ಮತ್ತು ನನ್ನ ಪತಿ ಭೂತಾನ್ ಮೌಂಟೆನ್ ಹೊಲಿಡೇಸ್ ನಲ್ಲಿ ಪ್ರವಾಸವನ್ನು ಕಾದಿರಿಸಿದೆವು. http://www.bhutanmountainholiday.com/

ಬೆಂಗಳೂರು-ಕೊಲ್ಕೊತ-ಪಾರೋ ಮಾರ್ಗವಾಗಿ ಭೂತಾನ್ ತಲುಪಿದೆವು. ಭೂತಾನದಲ್ಲಿರುವುದು ಒಂದೇ ಒಂದು ವಿಮಾನದ ಕಂಪನಿ. ಡ್ರಕ್ ಏರ್ ವೇಸ್. ಭೂತಾನ್ ಹತ್ತಿರವಾಗುತ್ತಿದ್ದಂತೆ ವಿಮಾನದಿಂದ ಬಗ್ಗಿ ನೋಡಿದೆ. ಅಹಾ! ಏನಿದು ಅದ್ಭುತ ಪ್ರಪಂಚ! ಹಚ್ಚ ಹಸಿರಿನ ಹೊದಿಕೆ ಹೊದ್ದ ಭೂಮಿ ತಾಯಿ. ಮೇಲೆ ತೇಲಾಡುವ ಮೋಡಗಳು ಹಸಿರಿನ ಮೇಲೆ ಮತ್ತೊಂದು ಹೊದಿಕೆ ಹೊದಿಸಿದಂತೆ. ನಮ್ಮನ್ನು ಕರೆದೊಯ್ದ ವಿಮಾನ ಪಾರೋ ವಿಮಾನ ನಿಲ್ದಾಣದಲ್ಲಿ ಇಳಿದಾಗ ಬೇರೆಯೇ ಲೋಕಕ್ಕೆ ಬಂದ ಅನುಭವ. ನಮ್ಮ ಟೂರ್ ಗೈಡ್ ಚಿಮ್ಮಿ ರಿನ್ ಜ಼ಿನ್ ನಮಗೋಸ್ಕರ ಅಲ್ಲಿ ಕಾಯುತ್ತಿದ್ದ. ನಾವು ಪಾರೋ ನ ಹೋಟಲ್ ಒಂದನ್ನು ತಲುಪಿದೆವು.

ಪಾರೊ ಒಂದು ಸಣ್ಣ ಪಟ್ಟಣ. ಇದು ಪಾರೋ ಛು (ಪಾರೋ ನದಿ) ದಡದಲ್ಲಿದೆ. ಕಲಾವಿದನೋರ್ವ ಸೌಂದರ್ಯದ ಕಲ್ಪನೆಯನ್ನು ಅಚ್ಚಿನಲ್ಲಿ ಎರಕ ಹೊಯ್ದು ಮಾಡಿದಂತಿದೆ ಈ ಪುಟ್ಟ ನಗರ. ಪಾರೋ ನದಿಯ ದಡದ ಉದ್ದಕ್ಕೂ ಪ್ರಯಾಣ ಮಾಡುವುದೇ ಒಂದು ಸುಂದರ ಅನುಭವ. ಹೋಟೆಲ್ ತಲುಪಿ ಅಲ್ಲಿ ಸಾಂಪ್ರದಾಯಿಕ ಭೂತಾನಿ ಭೋಜನವನ್ನು ಮಾಡಿದೆವು. ಇಲ್ಲಿ ಅನ್ನ, ಚೀಸ್ ಮತ್ತು ಹಸಿ ಮೆಣಸು ದೈನಂದಿನ ಆಹಾರದಲ್ಲಿ ಪ್ರಮುಖ ಪಾತ್ರ ಪಡೆದಿದೆ. ಎಮ್ಮ ದಾಸಿ (ಹಸಿ ಮೆಣಸು, ಚೀಸ್ ನ ಪಲ್ಯ), ಕಿವೊ ದಾಸಿ (ಬಟಾಟೆ-ಚೀಸ್) ಮುಂತಾದವು ಇಲ್ಲಿಯ ಪ್ರಮುಖ ಖಾದ್ಯಗಳು. ಬಳಿಕ ನಾವು ಪಾರೋ ನ್ಯಾಶನಲ್ ಮ್ಯೂಸಿಯಮ್ಮಿಗೆ ಭೇಟಿ ನೀಡಿದೆವು.

ಭೂತಾನಿನ ಸಂಸ್ಕೃತಿ ಮತ್ತು ಕಲೆಯನ್ನು ಬಿಂಬಿಸುವ ವಸ್ತುಗಳನ್ನು ಈ ಮ್ಯೂಸಿಯಂ ನಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ವಸ್ತ್ರಗಳು, ಪಾತ್ರೆ, ಒಡವೆ, ರಾಜರಿಗೆ ಮತ್ತು ಬೌದ್ಧ ಧರ್ಮಕ್ಕೆ ಸಂಬಂಧ ಪಟ್ಟ ವಸ್ತುಗಳನ್ನು ಇಲ್ಲಿ ನೋಡಬಹುದು. ಮ್ಯೂಸಿಯಂ ಆರು ಮಹಡಿಗಳ ಕಟ್ಟಡ. ಭೂತಾನಿನ ವಿಶೇಷವೆಂದರೆ ಅಲ್ಲಿ ಆರು ಮಹಡಿಗಳಿಗಿಂತ ಹೆಚ್ಚು ಮಹಡಿಗಳ ಕಟ್ಟಡವನ್ನು ಕಟ್ಟುವಂತಿಲ್ಲ. ಭೂಕಂಪದ ಕೇಂದ್ರವಾಗಿರುವುದರಿಂದ ಈ ಪರಿಯ ನಿಯಮವೆಂದು ಗೈಡ್ ವಿವರಿಸಿದ. ಮ್ಯೂಸಿಯಂ ನೋಡಿದ ಬಳಿಕ ನಾವು ಪಾರೋ ತ್ಸಾಂಗ್ ಗೆ (Dzong) ಹೋದೆವು. ಇದು ಹದಿನಾರನೇ ಶತಮಾನದಲ್ಲಿ ಕಟ್ಟಲಾದ ಕೋಟೆ. ಇಲ್ಲಿ ಪಾರೋ ಜಿಲ್ಲೆಯ ಮುಖ್ಯ ಕಾರ್ಯನಿರ್ವಹಣಾ ಕಛೇರಿ ಇದೆ. ಭೂತಾನದ ಕಟ್ಟಡಗಳೆಲ್ಲ ಭೂತಾನಿ ಶೈಲಿಯನ್ನು ಹೊಂದಿವೆ. ಏರ್ ಪೋರ್ಟ್, ಅಂಗಡಿಗಳು, ಹೋಟೆಲ್ ಎಲ್ಲವೂ ಭೂತಾನಿ ಶೈಲಿಯಲ್ಲಿಯೇ ಕಟ್ಟಲ್ಪಟ್ಟಿವೆ. ಭೂತಾನದ ೭೦% ಕ್ಕೂ ಹೆಚ್ಚಿನ ಭಾಗ ಅರಣ್ಯದಿಂದ ಆವೃತವಾಗಿರುವುದರಿಂದಲೋ ಎನೋ ಇಲ್ಲಿಯ ಕಟ್ಟಡಗಳಲ್ಲಿ ಮರದ ಬಳಕೆ ಅತೀ ಹೇರಳ. ಆದರೆ ಮರಗಳು ಬೇಕಾದಷ್ಟಿವೆ ಎಂದು ಯದ್ವಾ ತದ್ವಾ ಮರ ಕಡಿಯುವಂತಿಲ್ಲ. ಮನೆಯ ನಕ್ಷೆ ಗೆ ಅನುಗುಣವಾಗಿ ಸರಕಾರದಿಂದ ಸೂಚಿಸಲ್ಪಟ್ಟ ಸಂಖ್ಯೆಯ ಮರಗಳನ್ನು ಕಡಿಯಲು ಮಾತ್ರ ಇಲ್ಲಿ ಅವಕಾಶ ಇರುವುದು!

ಪಾರೋವನ್ನು ಸುತ್ತಿ ಮರುದಿನ ನಾವು ಹೊರಟದ್ದು "ತಕ್ತ್ ಶಂಗ್" ಮೊನಾಸ್ಟರಿಗೆ. ಇದನ್ನು ಟೈಗರ್ ನೆಸ್ಟ್ ಎಂತಲೂ ಕರೆಯುತ್ತಾರೆ. ಇದು ರುದ್ರ ರಮಣೀಯ ತಾಣ. ಇದಕ್ಕೆ ಹಿನ್ನೆಲೆಯಾಗಿ ಬೌದ್ಧ ಮುನಿ ಗುರು ರೆಂಪೊಚೆಯ (ಪದ್ಮ ಸಂಭವ) ಕಥೆ ಇದೆ. ಈತನು ಹುಲಿಯ ಮೇಲೆ ಹತ್ತಿ ಬಂದು ಈ ಬೌದ್ಧ ಮಂದಿರವನ್ನು ಕಟ್ಟಿದ್ದಾನೆ ಎಂಬ ಪ್ರತೀತಿ. ಇನ್ನೊಂದು ಕಥೆಯ ಪ್ರಕಾರ ಯೆಶೆ ತ್ಯೊಗ್ಯಾಲ್ ಎಂಬ ರಾಣಿಯು ಗುರು ರೆಂಪೊಚೆಯ ಶಿಷ್ಯೆಯಾದಳು. ಬಳಿಕ ಹುಲಿಯ ರೂಪವನ್ನು ತಾಳಿ, ತನ್ನ ಗುರುವನ್ನು ಟಿಬೆಟ್ ನಿಂದ ಇಲ್ಲಿಗೆ ಕರೆದೊಯ್ದಳು ಎಂಬ ನಂಬಿಕೆಯಿದೆ. ಗುರು ರೆಂಪೊಚೆಯು ಇಲ್ಲಿಯ ಗುಹೆಯಲ್ಲಿ ತಪಸ್ಸು ಮಾಡಿ, ಎಂಟು ಅವತಾರಗಳನ್ನು ತಾಳಿದರೆಂದು ಬೌದ್ಧ ಧರ್ಮೀಯರು ನಂಬುತ್ತಾರೆ. ಅಂತೆಯೇ ಇದು ಒಂದು ಪವಿತ್ರ ಯಾತ್ರಾ ಸ್ಥಳವಾಗಿದೆ. ೧೬೯೨ ರಲ್ಲಿ ಇಲ್ಲಿ ತೆನ್ಜ಼ಿನ್ ರಬ್ಗ್ಯೆ (ಗುರು ರೆಂಪೊಚೆಯ ಅವತಾರ) ಇಲ್ಲಿ ಬೌದ್ಧ ದೇವಾಲಯವನ್ನು ನಿರ್ಮಿಸಿದ. ೧೯೯೮ ರಲ್ಲಿ ಒಮ್ಮೆ ಇದು ಬೆಂಕಿಗೆ ಭಾಗಶಹ ಆಹುತಿಯಾಗಿತ್ತು. ಇದನ್ನು ಪುನರ್ನಿರ್ಮಿಸಲಾಯಿತು.

ಇದು ಸಮುದ್ರ ಮಟ್ಟದಿಂದ ಹತ್ತು ಸಾವಿರ ಅಡಿಗಳಷ್ಟು ಎತ್ತರದಲ್ಲಿದೆ. ಇದು ಪರ್ವತದ ಮಧ್ಯದಲ್ಲಿ ಅಂಚಿನಲ್ಲಿದೆ. ಇದನ್ನು ತಲುಪಬೇಕಾದರೆ ಕಾಲ್ನಡಿಗೆ ಅಥವಾ ಕುದುರೆಯ ಮೂಲಕ ಸಾಗಬೇಕು. ಕುದುರೆ ಅರ್ಧ ದಾರಿ ಮಾತ್ರ ನಮ್ಮನ್ನು ಕರೆದೊಯ್ಯುತ್ತದೆ. ನಾವು ಕುದುರೆಯ ಮೇಲೆ ಕುಳಿತೆವು. ಇದು ಪರ್ವತದ ಅಂಚಿನಲ್ಲಿ ಸಾಗುತ್ತದೆ. ಕೆಳಗಡೆ ಯಂತೂ ಅತಿ ದೊಡ್ಡ ಪ್ರಪಾತ. ಹೇಗಾದರೂ ಸರಿ ಟೈಗರ್ ನೆಸ್ಟ್ ಸಸೂತ್ರವಾಗಿ ತಲುಪಿದರೆ ಸಾಕಪ್ಪಾ ಅಂದುಕೊಂಡೆ. ಕುದುರೆ ಸವಾರಿಯ ಬಳಿಕ ಕಾಲ್ನಡಿಗೆಯ ಪಯಣ.ಮೇಲಕ್ಕೆ ಹತ್ತುತ್ತಿದ್ದಂತೆ ಟೀ ಹೌಸ್ ಎಂಬ ವಿಶ್ರಾಂತಿ ಧಾಮವಿದೆ. ಅಲ್ಲಿ ಟೀ ಕುಡಿದು, ಕೆಲವು ಛಾಯಾಚಿತ್ರಗಳನ್ನು ತೆಗೆದೆವು. ಮೇಲಿನಿಂದ ಹರಿದು ಬರುವ ಝರಿಯ ಬಳಿ ಒಂದು ಗಂಟೆಯನ್ನು ಇಟ್ಟಿದ್ದಾರೆ. ಝರಿ ಅದರ ಮೂಲಕ ಹರಿದು ಬರುವಾಗ ಆ ಗಂಟೆ ಮೊಳಗಿ, ಅದ್ಭುತವಾಗಿ ಕೇಳಿಸುತ್ತದೆ. ಹಿಮಾಲಯ ಶ್ರೇಣಿಯನ್ನು ಕಂಡಾಗ ನಮ್ಮ ದೇವಾನುದೇವತೆಗಳು ಹಿಮಾಲಯವನ್ನು ವಾಸಸ್ಥಾನವಾಗಿ ಮಾಡಿಕೊಂಡದ್ದರಲ್ಲಿ ಅಚ್ಚರಿಯೇನಿಲ್ಲ ಎನಿಸಿತು.


ಟೈಗರ್ಸ್ ನೆಸ್ಟ್ ಹತ್ತಿರವಾಗುತ್ತಿದ್ದಂತೆ ಕಾಣಸಿಗುವ ಜಲಪಾತದ ದೃಶ್ಯವಂತೂ ನಯನ ಮನೋಹರ. ಟೈಗರ್ ಮೊನಾಸ್ಟರಿ ತಲುಪಿದಾಗ ರೋಮಾಂಚಕ ಅನುಭವ. ದೇವಸನ್ನಿಧಿ, ಜಲಪಾತದ ಭೋರ್ಗರೆತ, ಹಿಮಾಲಯ ಪರ್ವತ ಶ್ರೇಣಿಯ ಪೈನ್ ಮರಗಳ ಸಾಲು ಸಾಲು, ಕೆಳಗಡೆ ಆಳವಾದ ಕಣಿವೆ! ಅಲ್ಲಿಯ ಸುಂದರ ಅನುಭವಗಳನ್ನು ಪದಗಳಲ್ಲಿ ಕಟ್ಟಿಕೊಡಲು ನನ್ನ ಲೇಖನಿ ಸೋಲುತ್ತಿದೆ!!

ಇಲ್ಲಿ ಈಗ ಬೌದ್ಧ ಸನ್ಯಾಸಿಗಳು ವಾಸವಾಗಿದ್ದಾರೆ. ಅವರಿಗೆ ಸರಕಾರವೇ ಆಹಾರ ಪದಾರ್ಥಗಳ ಸರಬರಾಜು ಮಾಡುತ್ತದೆ. ವಿಶೇಷವೇನೆಂದರೆ ಭೂತಾನದ ಎಲ್ಲ ಬೌದ್ಧ ಭಿಕ್ಷುಗಳಿಗೆ ಸರಕಾರವು ಪೂರ್ಣ ಸಹಕಾರ ನೀಡುತ್ತದೆ. ಅಲ್ಲಿಂದ ವಾಪಾಸು ಬರುವಾಗ ಕಾಲ್ನಡಿಗೆಯಲ್ಲಿಯೇ ಬರಬೇಕು. ಏಕೆಂದರೆ ಕುದುರೆಗಳು ನಾಗಾಲೋಟದಲ್ಲಿ ಕೆಳಗಿಳಿಯುವ ಕಾರಣ ಅದರ ಮೇಲೆ ಯಾರಾದರೂ ಕುಳಿತಿದ್ದರೆ ಹತೋಟಿ ತಪ್ಪುವ ಸಾಧ್ಯತೆಗಳು ಹೆಚ್ಚಿವೆ.

ಟೈಗರ್ಸ್ ನೆಸ್ಟ್ ನ ಎತ್ತರದ ಕಾರಣ ಕೆಲವರಿಗೆ ಅಲ್ಟಿಟ್ಯೂಡ್ ಸಿಕ್ ನೆಸ್ ಕಾಡುವುದಿದೆ. ಇದು ಮಿತಿ ಮೀರಿದರೆ ಪ್ರಾಣಾಪಾಯವಾಗುವ ಸಂಭವವೂ ಇದೆ. ಬಾಟಲುಗಟ್ಟಲೆ ನೀರು ಕುಡಿಯುವುದು ಅಲ್ಟಿಟ್ಯೂಡ್ ಸಿಕ್ ನೆಸ್ ಹತ್ತಿಕ್ಕಲು ಇರುವ ಅತ್ಯುತ್ತಮ ಉಪಾಯ. ಟೈಗರ್ ನೆಸ್ಟ್ ನಿಂದ ಇಳಿದು ಬರುತ್ತಿದ್ದಂತೆ ನನಗೆ ವಿಪರೀತ ಸುಸ್ತಾಗಿತ್ತು. ಕಾಲುಗಳು ನೋಯಲಾರಂಭಿಸಿದ್ದವು. ಆದರೆ ಟೈಗರ್ ನೆಸ್ಟ್ ನ ಅದ್ಭುತ ಸೌಂದರ್ಯವನ್ನು ನೋಡಿ ಬಂದದ್ದಕ್ಕೆ ಆ ಶ್ರಮವೆಲ್ಲ ಸಾರ್ಥಕವೆನಿಸಿತು.


ಬಳಿಕ ನಾವು ಡ್ರಕ್ಯೊಲಾ ತ್ಸೊಂಗ್ ಗೆ ಹೋದೆವು. ಈ ಕೋಟೆ ಹದಿನಾರನೆ ಶತಮಾನದಲ್ಲಿ ಕಟ್ಟಿದ್ದು. ಟಿಬೆಟಿನ ಮೇಲೆ ಭೂತಾನ್ ಜಯ ಗಳಿಸಿದ ನೆನಪಿನಲ್ಲಿ ಕಟ್ಟಿದ ಕೋಟೆ ಇದಾಗಿದೆ. ಇದು ೧೯೫೧ ರಲ್ಲಿ ಅಗ್ನಿ ದುರಂತಕ್ಕೀಡಾದ ಕಾರಣ ನಾವು ಅದರ ಅವಶೇಷಗಳನ್ನು ಮಾತ್ರ ಕಾಣಬಹುದು. ತದನಂತರ ನಾವು ೭ ನೇ ಶತಮಾನದಲ್ಲಿ ಕಟ್ಟಿದ ಕ್ಸಿಂಚು ಬೌದ್ಧ ದೇವಾಲಯಕ್ಕೆ ಭೇಟಿ ನೀಡಿದೆವು. ಭೂತಾನದಲ್ಲಿ ಬೌದ್ಧ ಧರ್ಮವೇ ಪ್ರಧಾನ. ಮಗು ಹುಟ್ಟಿದಾಕ್ಷಣ ಆ ಪ್ರದೇಶದ ಬೌದ್ಧ ದೇವಾಲಯಕ್ಕೆ ಹೊಂದಿಕೊಂಡಂತೆ ಅದರ ಅಡ್ಡಹೆಸರು ಕೂಡಿಕೊಳ್ಳುತ್ತದೆ. ನಾಮಕರಣವು ಕೂಡ ಬೌದ್ಧ ದೇವಾಲಯದಲ್ಲಿಯೇ ನಡೆಯುತ್ತದೆ. ಅಲ್ಲಿ ಒಂದಿಷ್ಟು ಹೆಸರುಗಳ ಚೀಟಿಗಳಿರುತ್ತವೆ. ಬೌದ್ಧ ಗುರು ಯಾವುದಾದರೂ ಚೀಟಿ ಎತ್ತಿ, ಯಾವ ಹೆಸರು ಬರುತ್ತದೆಯೋ ಅದನ್ನು ಆ ಮಗುವಿಗೆ ಇಡಲಾಗುತ್ತದೆ!

ಪಾರೋ ಕಣಿವೆಯಿಂದ ಭೂತಾನದ ರಾಜಧಾನಿ ತಿಂಪುವಿಗೆ ಹೋದೆವು. ಇಲ್ಲಿ ರಾಜನ ಆಡಳಿತ ಕಛೇರಿಯನ್ನು ನೋಡಿದೆವು. ಅದರ ಒಳಗಿರುವ ಚಿತ್ರಕಲೆಯಂತೂ ಬಲು ಚಂದ. ರಾಜನಿಗೂ, ರಾಜ ಗುರುಗಳಿಗೂ, ಇತರ ಆಡಳಿತ ಮಂದಿಗೂ ಪ್ರತ್ಯೇಕ ಆಸನಗಳಿವೆ. ಅದರ ಒಳಗಣ ವಾಸ್ತುಸೌಂದರ್ಯ ಮುದ ನೀಡುತ್ತದೆ.

ತಿಂಪುವಿನಲ್ಲಿ ಪಾರೋ ಮತ್ತು ತಿಂಪು ನದಿಗಳ ಸಂಗಮವಾಗುತ್ತದೆ. ಆ ದೃಶ್ಯ ಚಿತ್ತಾಕರ್ಶಕವಾಗಿದೆ. ಅಲ್ಲಿರುವ ಮೆಮೊರಿಯಲ್ ಸ್ತೂಪ ಭೂತಾನದ ಮೂರನೇ ರಾಜನ ನೆನಪಿಗೆ ಕಟ್ಟಿಸಿರುವಂಥದ್ದು.

ತಿಂಪುವಿನಲ್ಲಿರುವ ರಾಷ್ಟ್ರೀಯ ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ ನೀಡಿದೆವು. ಇಲ್ಲಿ ಅಲ್ಲಿನ ರಾಷ್ಟ್ರಪ್ರಾಣಿ ಟರ್ಕಿನ್ ಅನ್ನು ಕಾಣಬಹುದು. ಭೂತಾನದ ಕಥೆಗಳ ಪ್ರಕಾರ ಲಾಮಾ ಡ್ರಕ್ಪಾ ಕಿನ್ಲೇ ಎಂಬ ಮಹಾಮಹಿಮೆಯುಳ್ಳ ಸಂತನ ಮಹಿಮೆಯನ್ನು ವೀಕ್ಷಿಸಲು ಆತನ ಅನುಯಾಯಿಗಳು ಕಾತರರಾಗಿದ್ದರು. ಆಗ ಆತನು ನಿರ್ಜೀವ ಮೇಕೆಯ ತಲೆ ಮತ್ತು ದನದ ಶರೀರವನ್ನು ಜೋಡಿಸಿ, ಜೀವ ಬರಿಸಿದನು. ಈ ಪ್ರಾಣಿಯೇ ಟರ್ಕಿನ್. ಇದೊಂದು ವಿಶಿಷ್ಟ ಪ್ರಭೇದದ ಪ್ರಾಣಿಯಾಗಿದ್ದು, ಪ್ರಾಣಿ ಶಾಸ್ತ್ರಜ್ನರು ’ಬುಡೊ ಕ್ರಸ್ ಟಾಕ್ಸಿ ಕಲರ್’ ಎಂಬ ನಾಮಧೇಯವನ್ನು ನೀಡಿದ್ದಾರೆ. ಟರ್ಕಿನ್ ಅಲ್ಲದೇ ಈ ಪ್ರಾಣಿ ಸಂಗ್ರಹಾಲಯದಲ್ಲಿ ಬೊಗಳುವ ಜಿಂಕೆ ಗಳನ್ನೂ ಕಾಣಬಹುದು.


ತದ ನಂತರ ನಾವು ಬಿಲ್ಲುಗಾರಿಕೆಯ ಕ್ರೀಡೆಯನ್ನು ನೋಡಲು ಹೋಗಿದ್ದೆವು. ಇದು ಇಲ್ಲಿಯ ರಾಷ್ಟ್ರ ಕ್ರೀಡೆಯಾಗಿದೆ. ಸುಮಾರು ೨೦೦ ಮೀಟರ್ ಗಳಿಗಿಂತಲೂ ದೂರದಲ್ಲಿರುವ ಗುರಿಯತ್ತ ಬಾಣ ಹೂಡುವ ನುರಿತ ಬಿಲ್ಲುಗಾರರನ್ನು ಕಂಡೆವು.


ರಾಷ್ಟ್ರೀಯ ಸಂತಸ ಸೂಚ್ಯಂಕ (Gross National Happiness) :
೧೯೭೨ ರಲ್ಲಿ ಭೂತಾನದ ೩ ನೇ ರಾಜನಾದ ಜಿಗ್ಮೆ ಸಿ೦ಘೆ ವಾಂಚುಕ್ ಜಾರಿಗೆ ತಂದಿರುವ ವಿನೂತನ ಸೂಚ್ಯಂಕ ಪದ್ಧತಿ. ಇದರ ಪ್ರಕಾರ ಉತ್ತಮ ಗುಣಮಟ್ಟದ ನೆಮ್ಮದಿಯ ಜೀವನ ಮತ್ತು ಸಾಮಾಜಿಕ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಇದು ರಾಷ್ಟ್ರೀಯ ಉತ್ಪನ್ನ ಸೂಚ್ಯಂಕ (Gross Domestic Product (GDP)) ಕ್ಕಿಂತ ಹೆಚ್ಚಿನ ಮಹತ್ವವನ್ನು ಹೊಂದಿದೆ. ಭೂತಾನ್ ಏಶಿಯಾ ಖಂಡದಲ್ಲಿಯೇ ಅತ್ಯಂತ ಖುಷಿಯಿಂದ ಇರುವ ರಾಷ್ಟಗಳ ಪೈಕಿ ಪ್ರಥಮ ಸ್ಥಾನ ಪಡೆದಿದೆ. ವಿತ್ತೀಯ ಪರಿಗಣನೆಯಲ್ಲಿ ಇದು ಅಷ್ಟಾಗಿ ಎದ್ದು ಕಾಣದಿದ್ದರೂ ಖುಶಿ, ನೆಮ್ಮದಿ ಮತ್ತು ಸೌಖ್ಯ ಮುಂತಾದ ಸ್ತರಗಳಲ್ಲಿ ಮುಂಚೂಣಿಯಲ್ಲಿದ್ದು, ಪ್ರಪಂಚದಲ್ಲಿ ೮ನೇ ಸ್ಥಾನವನ್ನು ಪಡೆದಿದೆ.


ಭೂತಾನದ ರಾಷ್ಟ್ರೀಯ ಉಡುಪು:
ಭೂತಾನದಲ್ಲಿ ಕೆಲಸದ ಹೊತ್ತಿನಲ್ಲಿ ಎಲ್ಲರೂ ಕಡ್ಡಾಯವಾಗಿ ರಾಷ್ಟ್ರೀಯ ಉಡುಪನ್ನು ಧರಿಸಲೇಬೇಕು. ಇಲ್ಲವಾದಲ್ಲಿ ದಂಡ ವಿಧಿಸಲಾಗುತ್ತದೆ. ಪುರುಷರ ಉಡುಪಿನ ಹೆಸರು: ಘ್ಹೊ. ಇದು ಒಂದು ರೀತಿಯ ನಿಲುವಂಗಿ, ಉದ್ದನೆಯ ಸಾಕ್ಸ್ ಮತ್ತು ಶೂಗಳನ್ನು ಹೊಂದಿದೆ. ಮಹಿಳೆಯರ ಉಡುಪಿನ ಹೆಸರು: ಕೀರ. ಇದು ಒಂದು ರೀತಿಯ ಟಾಪ್ ಮತ್ತು ಉದ್ದ ಲಂಗದ ರೀತಿ ಇದೆ.


ತಿಂಪುವಿನಿಂದ ಪುನಖ ವ್ಯಾಲಿಗೆ ನಮ್ಮ ಮುಂದಿನ ಪಯಣ. ದಾರಿಯುದ್ದಕ್ಕೂ ಸೇಬಿನ ತೋಟಗಳು, ಬತ್ತದ ಗದ್ದೆಗಳು, ವನರಾಶಿ, ಸಣ್ಣ ತೊರೆಗಳು, ಅಲ್ಲೊಂದು ಇಲ್ಲೊಂದು ಬಳುಕುತ್ತಾ ಇಳಿಯುವ ಜಲಧಾರೆ, ಶ್ವೇತ ಶುಭ್ರ ನದಿ ಇವುಗಳೆಲ್ಲದರ ನಡುವೆ ಸಾಗುತ್ತಿದ್ದಂತೆ ನಾನು ಹಿರಿ ಹಿರಿ ಹಿಗ್ಗಿದೆ. ದಾರಿ ಬದಿಯಲ್ಲಿ ಹಲವೆಡೆ ಆಗ ತಾನೇ ಕೊಯ್ದ ತಾಜಾ ಸೇಬಿನ ಹಣ್ಣುಗಳನ್ನು ಮಾರುತ್ತಾರೆ. ಢೊಕುಲ ಪಾಸ್ (Dochkula Pass) ಮೂಲಕ ಮುಂದೆ ಸಾಗಿದಂತೆ ೧೦೮ ಡ್ರಕ್ ವಾಂಗ್ಲೆ ಸ್ತೂಪಗಳು ಎದುರಾದವು. ಅವುಗಳನ್ನು ಭೂತಾನದ ರಾಜ ಮಾತೆ ಕಟ್ಟಿಸಿದ್ದಾರೆ. ಪುನಖ ಮೊದಲು ಭೂತಾನದ ರಾಜಧಾನಿಯಾಗಿತ್ತು. ಇಲ್ಲಿ ವಿಶಾಲವಾದ ಪುನಖ ತ್ಸೊಂಗ್ ಇದೆ. ನದಿಯ ದಡದಲ್ಲಿ ಎದ್ದು ಕಾಣುವ ಭವ್ಯ ಸೌಧವು ವಿಶಾಲವಾಗಿದ್ದು, ಬುದ್ಧನ ಜೀವನ ಚರಿತ್ರೆಯ ಪ್ರಮುಖ ಚಿತ್ರಗಳನ್ನು ಹೊಂದಿದೆ. ಬುದ್ಧನ ವಿಗ್ರಹವಂತೂ ಬಹಳ ಆಕರ್ಷಕವಾಗಿದೆ. ಪುನಖ ವ್ಯಾಲಿಯನ್ನು ಸಂದರ್ಶಿಸಿದ ಬಳಿಕ ಮತ್ತೆ ಪಾರೊ ಗೆ. ’ತಶಿ ದಲೇಕ್’ (ಧನ್ಯವಾದ: ಭೂತಾನದ ಭಾಷೆ ಸೊನ್ಖ (Dsonkha) ದಲ್ಲಿ) ಎನ್ನುತ್ತಾ, ಅಲ್ಲಿಂದ ಕೊಲ್ಕತಾ ಮತ್ತೆ ಬೆಂಗಳೂರಿಗೆ! ನನ್ನ ಕನಸಿನ ಪಯಣ ಮುಗಿದಿತ್ತು.ಅದರ ನೆನಪುಗಳು ಮಾತ್ರ ಹಚ್ಚ ಹಸಿರು!



ತಾರೀಕು ೩೧-ಒಕ್ಟೋಬರ್-೨೦೧೦ ರಂದು ವಿಜಯಕರ್ನಾಟಕದಲ್ಲಿ ಪ್ರಕಟವಾದ ಲೇಖನ.ಓದಲು ಕೆಳಗಿನ ಚಿತ್ರಗಳ ಮೇಲೆ ಕ್ಲಿಕ್ ಮಾಡಿ.



-------------------------------------------------------------------------------------

ಮತ್ತಷ್ಟು ಫೊಟೊಗಳು ಇಲ್ಲಿವೆ :
ಪಾರೋ ನ ಹೋಟೆಲ್



ಸಾಂಪ್ರದಾಯಿಕ ಭೂತಾನಿ ಭೋಜನ :

ನ್ಯಾಶನಲ್ ಮ್ಯೂಸಿಯಂ




ಟೈಗರ್ಸ್ ನೆಸ್ಟ್



ಈ ಕೆಳಗಿನ ಫೋಟೊ ಇಂದಿನ ವಿಜಯಕರ್ನಾಟಕ, ’ಈ ಜಗ ಸೋಜಿಗ ’ವಿಭಾಗದಲ್ಲಿ ಪ್ರಕಟವಾಗಿದೆ.



೧೦೮ ಸ್ತೂಪಗಳು



ತಿಂಪು ಪಟ್ಟಣ



ತಿಂಪು-ಪಾರೊ ನದಿಗಳ ಸಂಗಮ





ತಿಂಪು ತ್ಸೊಂಗ್



ಮೆಮೊರಿಯಲ್ ಸ್ತೂಪ





ಪುನಖ ತ್ಸೊಂಗ್

Sunday, December 14, 2008

ಇಂಗ್ಲೆಂಡ್ ಪ್ರವಾಸ ಕಥನ...

ಹೌದು..ಮತ್ತೊಮ್ಮೆ ಕಣ್ಣುಜ್ಜಿಕೊಂಡೆ..ನಾನು ನೋಡುತ್ತಿರುವುದು ಕನಸೋ ಅಥವಾ ನಿಜವೋ ಎಂದು ಅರಿಯಲು ಕೊಂಚ ಸಮಯವೇ ಬೇಕಾಯಿತು. ಹೌದು..ನಾನು ಇಂಗ್ಲೆಂಡಿನಲ್ಲೇ ಇದ್ದೇನೆ.’ಮೊನೊಪಲಿ’ ಎಂಬ ಆಟದಲ್ಲಿ ಬರುವ ಬೀದಿಗಳು,ರೈಲ್ವೇ ನಿಲ್ದಾಣಗಳು ಇವೆಲ್ಲಾ ನನ್ನ ಕಣ್ಣ ಮುಂದೆಯೇ ಇವೆ!! ಸೊನ್ನೆ ಡಿಗ್ರಿಯಷ್ಟು ಕೊರೆಯುವ ಚಳಿಯಲ್ಲಿ ಟೊಪ್ಪಿ,ಕೈಗವಸು,ಶೂ,ಕೋಟು ಹಾಕಿಯೇ ಜನ ಓಡಾಡುತ್ತಿದ್ದಾರೆ.

ಬಹುಷ: ಇಂಗ್ಲೆಂಡಿನ ಬಗ್ಗೆ ಕೇಳಿದಷ್ಟು ,ಛಾಯಾಚಿತ್ರಗಳನ್ನು ನೋಡಿದಷ್ಟು ನಾನು ಬೇರಾವ ದೇಶದ ಬಗ್ಗೆಯೂ ಮಾಡಿಲ್ಲ.ನನ್ನ ಆಪ್ತ ವರ್ಗದ ಹಲವರು ಅಲ್ಲಿ ನೆಲೆಸಿಬಂದವರೋ, ನೆಲೆಸಿರುವವರೋ ಆಗಿರುವ ಕಾರಣ ಮತ್ತು ಅವರೆಲ್ಲರೂ ಇಂಗ್ಲೆಂಡಿನ ಪ್ರ್‍ಏಕ್ಷಣೀಯ ಸ್ಥಳಗಳ ಬಗ್ಗೆ,ಅಲ್ಲಿಯ ಜನಜೀವನದ ಬಗ್ಗೆ ವರ್ಣಿಸಿದಾಗ ನನಗೂ ಅಲ್ಲಿ ಜೀವನದಲ್ಲಿ ಒಮ್ಮೆಯಾದರೂ ಹೋಗಬೇಕೆಂಬ ಆಸೆ ಮೂಡುತ್ತಿದ್ದದ್ದು ಸುಳ್ಳಲ್ಲ.

ಕಡೆಗೂ ನನ್ನ ಆಸೆ ಈಡೇರುವ ದಿನ ಬಂದೇ ಬಿಟ್ಟಿತು.ಕಂಪನಿ ಕೆಲಸದ ನಿಮಿತ್ತ ನನ್ನ ಇಂಗ್ಲೆಂಡ್ ಪ್ರವಾಸ ನಿಶ್ಚಯವಾಯಿತು.ಸ್ವಾಮಿ ಕಾರ್ಯ,ಸ್ವಕಾರ್ಯ ಎರಡನ್ನೂ ಒಟ್ಟಿಗೇ ಮಾಡುವ ಹಂಬಲ ನನ್ನದು.ಹಾಗಾಗಿ ಕಿರುಅವಧಿಯ ಪ್ರವಾಸದಲ್ಲೇ ಆಫ಼ೀಸು ಕೆಲಸದ ಜತೆಗೆ ಸಾಕಷ್ಟು ಪ್ರ್‍ಏಕ್ಷಣೀಯ ಸ್ಥಳಗಳನ್ನು ಸಂದರ್ಶಿಸುವ ಮತ್ತು ನನ್ನ ಆತ್ಮೀಯ ಸ್ನೇಹಿತೆಯೋರ್ವಳನ್ನು ಭೇಟಿಯಾಗುವ ಕಾರ್ಯಕ್ರಮಗಳನ್ನು ಯೋಜಿಸಿದೆ.



ಎರಡು ದಿನಗಳ ಬಿಡುವು ಮಾಡಿಕೊಂಡು ಲಂಡನ್ ಸುತ್ತಿದೆ.ಬಿಗ್ ಬೆನ್,ಟವರ್ ಬ್ರಿಡ್ಜ್,ಬಂಕಿಂಗ್ ಹಾಮ್ ಅರಮನೆ,ಲಂಡನ್ ಐ ,ಮೇಡಮ್ ಟುಸಾಟ್ಸ್ ಇವುಗಳನ್ನು ಸಂದರ್ಶಿಸಿದೆ.ಹತ್ತು ಹಲವು ಚರ್ಚುಗಳೂ,ಸುಂದರ ವಾಸ್ತುವಿನ್ಯಾಸದ ಕಟ್ಟಡಗಳೂ ನನ್ನ ಮನಸ್ಸನ್ನು ಸೆಳೆದವು.ಕ್ರಿಸ್ಮಸ್ ಗೆ ಈಗಾಗಲೇ ನಗರವು ಸಜ್ಜುಗೊಂಡಿತ್ತು.ಎಲ್ಲಿ ನೋಡಿದರೂ ಕ್ರಿಸ್ಮಸ್ ಟ್ರೀ ಅಲಂಕಾರ !! ಅಂಗಡಿಗಳೆಲ್ಲವೂ ಝಗಮಗಿಸುವ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ!!



ಇಂಗ್ಲೆಂಡ್ ಗೆ ಹೋಗುವ ಮುನ್ನ ನನ್ನ ಮನಸ್ಸಲ್ಲಿ ಇದ್ದ ಕೊಂಚ ಗೊಂದಲ ಮೂಡಿಸಿದ್ದ ವಿಷಯಗಳೆಂದರೆ ೧)ವಿಪರೀತ ಚಳಿ :ಬೆಂಗಳೂರಿನ ೧೮-೨೦ ಡಿಗ್ರಿಗಳಷ್ಟು ತಾಪಮಾನದಲ್ಲೇ ಚಳಿ ಎಂದು ಗಟ್ಟಿ ಹೊದಿಕೆ ಹೊದ್ದು ಮಲಗುವ ನಾನು ,೦ ಡಿಗ್ರಿಯ ತಾಪಮಾನದಲ್ಲಿ ವಾಸಮಾಡುವುದು ಹೇಗೆ ಎಂದು. ಸಾಕಷ್ಟು ಬೆಚ್ಚನೆಯ ವಸ್ತ್ರಗಳು ಚಳಿಯಿಂದ ನನ್ನನ್ನು ರಕ್ಷಿಸಿಕೊಳ್ಳಲು ನೆರವಾದವು.ಹೋಟೆಲ್,ಕಛೇರಿ ಗಳಲ್ಲಿ ಹೀಟರ್ ಇದ್ದ ಕಾರಣ ಏನೂ ತೊಂದರೆ ಆಗಲಿಲ್ಲ. ೨) ಇನ್ನೊಂದು ವಿಷಯವೆಂದರೆ ಲಂಡನ್ ನ ಸಂಚಾರಿ ವ್ಯವಸ್ಥೆ. ಇಲ್ಲಿ ಟ್ಯೂಬ್ (ಭೂಮಿಯೊಳಗೆ ಚಲಿಸುವ ವಾಹನ),ಟ್ರೈನ್, ಬಸ್ಸು ಇವೆಲ್ಲವೂ ನನಗೆ ಕೊಂಚ ಹೆದರಿಕೆ ಹುಟ್ಟಿಸಿದ್ದವು.ನಾನು ಟ್ರೈನ್ ನಿಂದ ಹೊರಗೆ ಬರುವ ಮುಂಚೆಯೇ ಬಾಗಿಲು ಮುಚ್ಚಿಕೊಂಡರೆ ಏನು ಮಾಡಲಿ ? ನಕಾಶೆ ಓದುವಲ್ಲಿ ಅತ್ಯಂತ ಕೆಳಗಿನ ಸ್ಥಾನದಲ್ಲಿರುವ ನನಗೆ ಟ್ಯೂಬ್ ನ ನಕಾಶೆಯನ್ನು ಓದಿ ಅದರಲ್ಲಿ ಸಂಚರಿಸಲಾದೀತೆ ಇತ್ಯಾದಿ ನನಗಿದ್ದ ಸಂಶಯಗಳು.ಆದರೆ ಅಲ್ಲಿ ಹೋದ ಮೇಲೆ ನನಗೆ ಅತೀವ ಆತ್ಮವಿಶ್ವಾಸ ಮೂಡಿ,ಲಂಡನ್ ನ ಎಲ್ಲಾ ರೀತಿಯ ಸಾರಿಗೆ ವ್ಯವಸ್ಥೆಗಳಲ್ಲೂ ಸಂಚಾರ ಮಾಡಿದೆ!! ನನಗೆ ಈಗಲೂ ಅದು ಹೇಗೆ ಸಾಧ್ಯವಾಯಿತು ಎಂದು ನಂಬಲಾಗುತ್ತಿಲ್ಲ!!



ನನ್ನ ಮುಂದಿನ ಭೇಟಿ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯಕ್ಕೆ. ಆಕ್ಸ್ ಫರ್ಡ್ ಎನ್ನುವುದು ಒಂದು ಪುಟ್ಟ ಊರು. ಊರು ತುಂಬಾ ಕಾಲೇಜುಗಳು. ಎಲ್ಲಿ ನೋಡಿದರೂ ವಿದ್ಯಾರ್ಥಿಗಳು.ಕಾಲೇಜು ಕಟ್ಟಡಗಳೆಲ್ಲವೂ ಹಳೆಯ ಕಾಲದ ವಾಸ್ತುವಿನ್ಯಾಸವನ್ನು ಹೊಂದಿದ್ದವು. ನನಗ್ಯಾಕೋ ನಾನೊಂದು ಬೇರೆಯೇ ಪ್ರಪಂಚಕ್ಕೆ ಬಂದಂತೆ ಅನಿಸಿತು. ಚಿಕ್ಕದಾಗಿ,ಚೊಕ್ಕದಾಗಿ ಇರುವ ಈ ಸುಂದರ ಊರು ನನ್ನನ್ನು ಬಹಳಷ್ಟು ಆಕರ್ಷಿಸಿತು.

ಮತ್ತೆ ಸ್ವಲ್ಪ ದಿನಗಳ ಕಾಲ ನಾನು ಕಚೇರಿ ಕೆಲಸದಲ್ಲಿ ಮಗ್ನಳಾದೆ.ನಾನು ವಾಸಮಾಡಿದ್ದ ಊರಿನ ಹೆಸರು ’ರೆಡ್ಡಿಂಗ್ ’. ಒಂದು ಪುಟ್ಟ ಊರು. ಅದೂ ಸಹ ಬಹಳ ಸುಂದರವಾಗಿತ್ತು. ನನಗೆ ಅದು ಕಲಾವಿದ ಬಿಡಿಸಿದ ಒಂದು ಚಂದದ ಚಿತ್ರದಂತೆ ಭಾಸವಾಗುತ್ತಿತ್ತು.
ಕೆಲವೊಂದು ಆಂಗ್ಲ ಭಾಷಾ ಚಲನಚಿತ್ರಗಳಲ್ಲಿ ನೋಡಿದ್ದ ಊರುಗಳಂತೆ...ಎಲ್ಲವೂ ಅಚ್ಚುಕಟ್ಟು..ಎಲ್ಲೆಡೆಯೂ ಸ್ವಚ್ಛತೆ...ಶಿಸ್ತು..ನನಗೇಕೋ ನಾನೊಂದು ಕನಸಿನ ಲೋಕಕ್ಕೆ ಬಂದಂತೆ ಭಾಸವಾಗುತ್ತಿತ್ತು.ರೆಡ್ಡಿಂಗ್ ನಲ್ಲಿ ಇರುವ ’ಥೇಮ್ಸ್ ವ್ಯಾಲಿ ಪಾರ್ಕ್’ :ಥೇಮ್ಸ್ ನದಿಯ ದಂಡೆಯ ಮೇಲೆ ಇರುವ ಹಲವಾರು ಸಾಫ಼್ಟ್ ವೇರ್ ಕಂಪನಿಗಳ ಸಮೂಹ. ನನಗೆ ವಿಶಿಷ್ಟ ಎನಿಸಿದ್ದು : ಅಲ್ಲಿಯ ಕಟ್ಟಡಗಳು ಹೆಚ್ಚೆಂದರೆ ೩ ಮಹಡಿಗಳಷ್ಟೇ ಎತ್ತರ!!




ಕಛೇರಿ ಕೆಲಸದ ನಂತರ ನನ್ನ ಮುಂದಿನ ಪಯಣ ಬ್ಲಾಕ್ ಪೂಲ್ ನಲ್ಲಿರುವ ನನ್ನ ಸ್ನೇಹಿತೆಯ ಮನೆಗೆ. ರೆಡ್ಡಿಂಗ್ ನಿಂದ ಲಂಡನ್ ಗೆ ನನ್ನ ಲಗ್ಗೇಜುಗಳ ಜತೆ ಸಾಗಿದೆ.ಲಂಡನ್ ಸ್ಟೇಶನ್ ನಲ್ಲಿ ನನ್ನ ಸ್ನೇಹಿತೆಯ ಪತಿ ಕಾಯುತ್ತಿದ್ದರು.ನನ್ನ ಸ್ಯೂಟ್ ಕೇಸ್ ಗಳನ್ನು ಅವರಿಗೆ ವರ್ಗಾಯಿಸಿದೆ.. ನಾನೊಬ್ಬಳೇ ಲಂಡನ್ ಸುತ್ತುವಾಗ ಇದ್ದ ಆತಂಕ,ನಕಾಶೆಗಳನ್ನು ಓದುವ ಕೆಲಸ ಯಾವುದೂ ನನ್ನ ಜತೆಗಿರಲಿಲ್ಲ.ಪುಟ್ಟ ಬ್ಯಾಗ್ ಗಳನ್ನು ನಾನು ಹಿಡಿದುಕೊಂಡು ಅವರನ್ನು ಹಿಂಬಾಲಿಸಿದೆ. ದಿಕ್ಕು ಸೂಚನಾ ಫಲಕಗಳನ್ನು ಓದುವ ಗೋಜಿಗೂ ಹೋಗಲಿಲ್ಲ!! ನನ್ನ ಲಂಡನ್ ಪ್ರವಾಸದಲ್ಲಿ ನಿರಾತಂಕದಿಂದ ಇದ್ದ ಕ್ಷಣಗಳವು!!:)

ಲಂಡನ್-->ಪ್ರೆಸ್ಟನ್-->ಬ್ಲಾಕ್ ಪೂಲ್ ಗೆ ತಲುಪಿದೆ. ನನ್ನ ಸ್ನೇಹಿತೆ ಬಿಸಿಬೇಳೆ ಭಾತ್,ಅನ್ನ,ತಂಬುಳಿ,ಪಾಯಸ ತಯಾರಿಸಿ ನನಗಾಗಿ ಕಾಯುತ್ತಿದ್ದಳು. ಇಷ್ಟು ದಿನಗಳ ಪ್ರವಾಸದ ಸಮಯದಲ್ಲಿ ಬರೀ ತರಕಾರಿ,ಬ್ರ್‍ಎಡ್,ಪಿಜ಼ಾಗಳನ್ನೇ ಕಂಡ ನನಗೆ ಆಕೆ ತಯಾರಿಸಿದ ಖಾದ್ಯಪದಾರ್ಥಗಳನ್ನು ಕಂಡು ಬಾಯಿಯಲ್ಲಿ ನೀರೂರಿತು :) ನನ್ನ ಗೆಳತಿಗೆ ನಾನು ’ಬೆಸ್ಟ್ ಕುಕ್ ’ ಎಂಬ ಬಿರುದನ್ನು ಘೋಷಿಸಿದೆ. ಅಷ್ಟೊಂದು ರುಚಿಕರವಾಗಿ ಅಡುಗೆ ತಯಾರಿಸಿದ್ದಳು!!ನನಗೆ ಸ್ವರ್ಗಕ್ಕೆ ಮೂರೇ ಗೇಣು ಎನಿಸಿತು!!




ಮರುದಿನ ನಾವು ಮಾಂಚೆಸ್ಟರ್ ನ ಶೋಪಿಂಗ್ ಸೆಂಟರ್ ಗೆ ಹೋದೆವು. ಟ್ರಾಫರ್ಡ್ ಸ್ಕ್ವಾರ್ ಎನ್ನುವುದು ಅದರ ಹೆಸರು. ಇಡೀ ದಿನ ಅಲ್ಲಿ ಸುತ್ತಾಡಿ ಬಂದೆವು. ನನ್ನ ಪ್ರವಾಸದಲ್ಲಿ ನಾನು ಬಹಳಷ್ಟು ಖುಶಿ ಪಟ್ಟ ಸ್ಥಳ ’ಲೇಕ್ ಡಿಸ್ಟ್ರಿಕ್ಟ್. ನಾನು ಇಷ್ಟರವರೆಗೆ ಹಿಮ ಕವಿದ ಪ್ರದೇಶವನ್ನು ಕಂಡಿರಲಿಲ್ಲ. ಸುತ್ತಮುತ್ತಲೂ ಹಿಮದ ಚಾದರ ಹರಡಿದರೆ ಅದು ಹೇಗೆ ಕಂಡೀತೆಂದು ಛಾಯಾಚಿತ್ರಗಳಲ್ಲಿ ಮಾತ್ರ ಕಂಡಿದ್ದೆ. ಹಿಮವನ್ನು ನನ್ನ ಕಣ್ಣಾರೆ ಕಂಡಾಗ ನನಗಾದ ಆನಂದಕ್ಕೆ ಪಾರವೇ ಇರಲಿಲ್ಲ. ಅಷ್ಟು ಚಳಿ ಕೊರೆಯುತ್ತಿದ್ದರೂ ಹಿಮವನ್ನು ಕೈಯಲ್ಲಿ ಹಿಡಿದುಕೊಂಡು ಛಾಯಾಚಿತ್ರ ತೆಗೆದುಕೊಳ್ಳಲು ಮರೆಯಲಿಲ್ಲ.ನಾನು ಅತೀವ ಹರ್ಷಿಸಿದ ಸಮಯ ಅದು!!

ಲೇಕ್ ಡಿಸ್ಟ್ರಿಕ್ಟ್ ಹೆಸರೇ ಸೂಚಿಸುವಂತೆ ಅನೇಕ ಸರೋವರಗಳನ್ನು ಹೊಂದಿರುವ ಊರು. ಹಿಮದ ಹೊದಿಕೆ ಹೊದ್ದಿರುವ ,ಚಂದದ ಚಿತ್ರ ಅದು.ಜನಸಂಖ್ಯೆಯಂತೂ ತೀರಾ ಕಡಿಮೆ.ಚಳಿಗೆ ಇಡೀ ಊರೇ ನಿದ್ದೆಯಲ್ಲಿರುವಂತೆ ಕಾಣುತ್ತದೆ.ಅಲ್ಲಿಯ ಸೌಂದರ್ಯವನ್ನು ಬಣ್ಣಿಸಲು ನನ್ನ ಲೇಖನಿಗೆ ಶಕ್ತಿ ಸಾಲದು ಎನಿಸುತ್ತಿದೆ. ಅಷ್ಟೊಂದು ಸೊಗಸು.



ಒಟ್ಟಿನಲ್ಲಿ ನನ್ನ ಇಂಗ್ಲೆಂಡ್ ಪ್ರವಾಸವು ಆಂಗ್ಲ ಭಾಷೆಯಲ್ಲಿ ಹೇಳುವುದಾದರೆ "short,sweet and cold "!! :)

Friday, March 9, 2007

ಕೇಪ್ ಟೌನ್..ಪ್ರವಾಸಾನುಭವ




ಚಿಕ್ಕಂದಿನಿಂದಲೂ ನನಗೆ ಆಫ್ರಿಕಾದ ಬಗೆಗೆ ಅವ್ಯಕ್ತ ಕುತೂಹಲ. 'ಕಗ್ಗತ್ತಲೆಯ ಖಂಡ'ವೆಂದು ಸಮಾಜ ಅಧ್ಯಾಪಕರು ವಿವರಿಸುವಾಗ "ಅಯ್ಯೋ ಪಾಪ, ಅಲ್ಲಿ ಕರೆಂಟು ಇಲ್ಲವೇನೋ!! " ಎಂದು ಅನಿಸುತ್ತಿತ್ತು. ಭಾರತವನ್ನು ಹುಡುಕ ಹೊರಟ ಸಾಹಸ ಯಾತ್ರಿಗಳು ಅದಕ್ಕೆ ಮುನ್ನ ತಲುಪಿದ 'ಕೇಪ್ ಆಫ್ ಗುಡ್ ಹೋಪ್'ಬಗ್ಗೆ ಓದುವಾಗ ರೋಮಾಂಚನಗೊಳ್ಳುತ್ತಿದ್ದೆ.ಆಫ್ರಿಕಾ ನನ್ನ ಪಾಲಿಗೆ ಒಂದು ರೀತಿಯ























ನಿಗೂಢ ವಿಸ್ಮಯವಾಗಿತ್ತು.

ಕಂಪೆನಿ ಕೆಲಸದ ನಿಮಿತ್ತ ನನಗೆ ದಕ್ಷಿಣ ಆಫ್ರಿಕಾವನ್ನು ಸಂದರ್ಶಿಸುವ ಅವಕಾಶ ಒದಗಿ ಬಂದಿತು."ಅಲ್ಲಿ ಹೋದರೆ ಅಲ್ಲಿಯವರಂತೆ ಕರ್ರಗಾಗಿ ಹೋಗುತ್ತೀಯಾ" ಎಂದ ಮಿತ್ರರ ಮಾತುಗಳಿಗೆ ನಕ್ಕು ತಲೆಯಾಡಿಸಿದೆ. "ಹೋದೆಡೆಯಲ್ಲೆಲ್ಲಾ ಜಾಗ್ರತೆ "ಎಂದು ಎಚ್ಚರಿಸಿದವರು ಹಲವರು.ಅಂತೂ ಕಡೆಗೆ ವಿಮಾನವೇರಿದೆ.ಬೆಂಗಳೂರು-ಮುಂಬೈ, ಮುಂಬೈ-ಜೊಹಾನ್ಸ್ ಬರ್ಗ್, ಜೊಹಾನ್ಸ್ ಬರ್ಗ್ - ಕೇಪ್ ಟೌನ್- ಹೀಗೆ ಮೂರು ವಿಮಾನಗಳ ಮೂಲಕ ಸುಮಾರು ಹದಿಮೂರು ಗಂಟೆಗಳ ಕಾಲ ಪಯಣಿಸಿ, ಕೇಪ್ ಟೌನ್ ತಲುಪಿದೆ.ಕಟ್ಟಾ ಸಸ್ಯಾಹಾರಿಯಾದ ನನ್ನ ಬ್ಯಾಗಿನಲ್ಲಿ ಅಕ್ಕಿ, ಬೇಳೆ,ಜೀರಿಗೆ, ಎಂ.ಟಿ. ಆರ್. ಪುಡಿಗಳು ತುಂಬಿದ್ದವು.

ದಕ್ಷಿಣ ಆಫ್ರಿಕಾ, ಆಫ್ರಿಕಾ ಖಂಡದ ದಕ್ಷಿಣ ತುದಿಯಲ್ಲಿ ಇರುವ ದೇಶ.ಭಾರತಕ್ಕೂ ಅಲ್ಲಿಗೂ ಮೂ ರುವರೆ ಗಂಟೆಗಳ ಕಾಲ ವ್ಯತ್ಯಾಸ.ಅಲ್ಲಿಗೆ ತೆರಳಿದ ಮೊದಲ ವಾರದಲ್ಲಿ ಬೆಳಗ್ಗೆ ಐದು ಗಂಟೆಗೇ ವಿಪರೀತ ಹಸಿವಾಗುತ್ತಿತ್ತು.ನನ್ನ ಶರೀರದ ಗಡಿಯಾರ ದಕ್ಷಿಣ ಆಫ್ರಿಕಾದ ಕಾಲಮಾನಕ್ಕೆ ಹೊಂದಿಕೊಳ್ಳಲು ಕೊಂಚ ಸಮಯ ಬೇಕಾಯಿತು.

ಭಾರತಕ್ಕೆ ಜಲಮಾರ್ಗ ಕಂಡುಹಿಡಿಯುವ ಪ್ರಯತ್ನದಲ್ಲಿ ಬಾರ್ತಾಲೋಮ್ಯು ಡಯಾಸನು ೧೪೮೮ರಲ್ಲಿ ದಕ್ಷಿಣ ಆಫ್ರಿಕಾದ ತುದಿಯನ್ನು ತಲುಪಿದನು.ಅಲ್ಲಿಯ ಸಮುದ್ರ ಕಿನಾರೆಯಲ್ಲಿ ಬಡಿಯುವ ಅಬ್ಬರದ ಅಲೆಗಳನ್ನು ಕಂಡು, ಅದನ್ನು 'ಕೇಪ್ ಆಫ್ ಸ್ಟೊರ್ಮ್ಸ್' ಎಂದು ಕರೆದನು. ಮುಂದೆ ೧೬೫೨ ರಲ್ಲಿ ಡಚ್ಚರು ಇಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಿದರು. ಎರಡನೇ ಜಾನ್ ಇದನ್ನು ಕೇಪ್ ಆಫ್ ಗುಡ್ ಹೋಪ್ ಎಂದು ಕರೆದನು.ಇಲ್ಲಿ ವ್ಯಾಪಾರ ವ್ಯವಹಾರಗಳಿಗೆ ಸರಬರಾಜು ಕೇಂದ್ರವೂ ಸ್ಥಾಪಿತವಾಯಿತು.ಇಲ್ಲಿ ಬೆಳೆದ ಪಟ್ಟಣವೇ ಕ್ರಮೇಣ 'ಕೇಪ್ ಟೌನ್' ಎಂಬ ಹೆಸರನ್ನು ಪಡೆಯಿತು.


ಅಟ್ಲಾಂಟಿಕ್ ಸಾಗರದ ಅಬ್ಬರ, ಹಿಂದೂ ಮಹಾಸಾಗರದ ಶಾಂತ ಸ್ವಭಾವ ,ಪರ್ವತ ಶ್ರೇಣಿಯ ದಿಟ್ಟತನ, ಗಿಡಮರ ಬಳ್ಳಿಗಳ ತುಂಟತನ ಇವುಗಳೆಡೆಯಲ್ಲಿ ತಲೆಯೆತ್ತಿ ನಿಂತಿರುವ ಪಟ್ಟಣವೇ ಕೇಪ್ ಟೌನ್. ಇದು ಪ್ರವಾಸಿ ಆಕರ್ಷಣೆಯ ಕೇಂದ್ರವಾಗಿದ್ದು, ವಿಶ್ವದ ಹತ್ತು ಪ್ರಮುಖ ಪ್ರೇಕ್ಷಣೀಯ ಸ್ಠಳಗಳಲ್ಲಿ ಒಂದೆಂದು ಖ್ಯಾತವಾಗಿದೆ. ಇಲ್ಲಿ ಚಳಿಗಾಲದಲ್ಲಿ ಮಳೆಯಾಗುತ್ತದೆ(ಇದು ಮೆಡಿಟರೇನಿಯನ್ ವಾಯುಗುಣದ ಲಕ್ಷಣ), ಗಿಡಮರಗಳು ಬೋಳಾಗುತ್ತವೆ. ವಸಂತನ ಆಗಮನವಾಗುತ್ತಿದ್ದಂತೆ ಅವುಗಳಿಗೆ ನವಚೈತನ್ಯ ಬಂದು ಚಿಗುರತೊಡಗುತ್ತವೆ.


ಕೇಪ್ ಟೌನ್ ನ ಪ್ರತಿಯೊಂದು ಪ್ರದೇಶವೂ ಸೌಂದರ್ಯದಲ್ಲಿ ಒಂದಕ್ಕಿಂತ ಇನ್ನೊಂದು ಮಿಗಿಲು.ಸಮುದ್ರ ಕಿನಾರೆಗಳು ,ವೈವಿಧ್ಯಮಯ ಸಸ್ಯ ಹಾಗೂ ಪ್ರಾಣಿ ಸಂಕುಲ, ಗಿರಿ ಶಿಖರಗಳ ಸಾಲು ,ಮುಗಿಲಿನ ಸರಮಾಲೆ , ಶಿಸ್ತುಬದ್ಧ ಜನ ಜೀವನ ಇವೆಲ್ಲವೂ ನಮ್ಮ ಕಣ್ಣ ಮುಂದೆ ಹೊಸದೊಂದು ಲೋಕವನ್ನು ಸೃಷ್ಟಿಸುತ್ತವೆ.























ಟೇಬಲ್ ಮೌಂಟೇನ್
: ಇದು ಕೇಪ್ ಟೌನ್ ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.ಇದು ಸುಮಾರು ೪೪೩ ಮಿಲಿಯನ್ ವರ್ಷಗಳ ಹಿಂದೆ ರಚಿತವಾದ ಶಿಲೆಯೆಂದು ಪರಿಗಣಿಸಲಾಗಿದೆ.ಇದು ೧೦೮೬ ಮೀಟರ್ ಎತ್ತರವಾಗಿದ್ದು, ಚಪ್ಪಟೆಯಾದ ತುದಿಯನ್ನು ಹೊಂದಿದೆ. ಆದ ಕಾರಣವೇ ಇದರ ಹೆಸರು ಟೇಬಲ್ ಮೌಂಟೇನ್ ಎಂದಾಗಿದೆ. ಮೋಡಗಳ ಸಾಲು ಇದನ್ನು ಸುತ್ತುವರಿದಾಗ ಮೇಜಿನ ಮೇಲೆ ಶ್ವೇತವರ್ಣದ ವಸ್ತ್ರವನ್ನು ಹಾಸಿದಂತೆ ಭಾಸವಾಗುತ್ತದೆ.ಇಲ್ಲಿ ೧೪೭೦ ಕ್ಕೂ ಹೆಚ್ಚಿನ ಸಸ್ಯಪ್ರಭೇದಗಳನ್ನು ಗುರುತಿಸಲಾಗಿದ್ದು,ಇವುಗಳಲ್ಲಿ ಹೆಚ್ಚಿನವು ಪ್ರಪಂಚದ ಇನ್ನಿತರ ಭಾಗಗಳಲ್ಲಿ ಕಂಡು ಬರುವುದಿಲ್ಲ.























ಇದನ್ನು ಏರಲು 'ಕೇಬಲ್ ಕಾರು'ಗಳ ವ್ಯವಸ್ಥೆ ಮಾಡಿದ್ದಾರೆ.ಹಗ್ಗದ ಹಾದಿಯಲ್ಲಿ ನಿಧಾನವಾಗಿ ಏರುವ ಕೇಬಲ್ ಕಾರಿನೊಳಗೆ ಕುಳಿತು ,ಸುತ್ತಮುತ್ತಲಿನ ಗಿರಿ, ಕಾನನ, ಸಾಗರಗಳ ಸೌಂದರ್ಯವನ್ನು ಆಸ್ವಾದಿಸುತ್ತಾ ಸಾಗುವುದು ಒಂದು ರಮ್ಯ ಅನುಭವ. ಸುತ್ತಮುತ್ತಲಿನ ಪ್ರಕೃತಿಮಾತೆಯ ಸಿರಿಯನ್ನು ನೋಡಲು ಕಂಗಳೆರಡು ಸಾಲವು. ಪರ್ವತದ ತುದಿಯಲ್ಲಿ ಹೋಟೆಲ್ ಮತ್ತು ಅಂಗಡಿಗಳಿವೆ . ಅಲ್ಲಿ ಕುಳಿತು,ಸುತ್ತಲಿನ ಪ್ರಕೃತಿಯನ್ನು ಸವಿಯುವುದು ಒಂದು ಅವಿಸ್ಮರಣೀಯ ಅನುಭವ.





















ಕೇಪ್ ಪಾಯಿಂಟ್:
ಇದು ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರಗಳ ಸಂಗಮ ತಾಣ.ಭೂಮಿ ತಾಯಿಯ ರುದ್ರ ರಮಣೀಯ ದೃಶ್ಯವನ್ನು ಇಲ್ಲಿ ಕಾಣಬಹುದು. ಎತ್ತರದ ಶಿಖರದ ಮೇಲಿಂದ ಕೆಳಗೆ ಬಗ್ಗಿ ನೋಡಿದಾಗ ಸಾಗರಗಳ ಸಂಗಮ ಅತ್ಯದ್ಭುತವಾಗಿ ಗೋಚರವಾಗುತ್ತದೆ.ನಾನು ಇದನ್ನು ಸಂದರ್ಶಿದ ದಿನ ಒಂದೆಡೆ ಸಂಪೂರ್ಣವಾಗಿ ಮೋಡ ಆವರಿಸಿತ್ತು. ಅದು ನನಗೆ ಪೌರಾಣಿಕ ಚಲನಚಿತ್ರಗಳ ಸ್ವರ್ಗದ ಸೆಟ್ಟಿಂಗ್ ನಂತೆ ಅನಿಸಿತು. ಚಲಿಸುವ ಮೋಡಗಳು ತಮ್ಮ ಸೌಂದರ್ಯದಿಂದ ನನ್ನನ್ನು ಮೂಕ ವಿಸ್ಮಿತಳನ್ನಾಗಿ ಮಾಡಿದ್ದವು.


ರೋಬಿನ್ ಐಲಾಂಡ್ : ಕೇಪ್ ಟೌನ್ ನಿಂದ ೧೨ ಕಿ.ಮೀ. ಇರುವ ದ್ವೀಪ 'ರೊಬಿನ್ ಐಲಾಂಡ್'.೧೮೩೬ ರಿಂದ ೧೯೩೧ ರವರೆಗೆ ಇದನ್ನು ಕುಷ್ಟ ರೋಗಿಗಳ ನೆಲೆಯಾಗಿ ಬಳಸಲಾಯಿತು. ಇಪ್ಪತ್ತನೇ ಶತಮಾನದಲ್ಲಿ ಇಲ್ಲಿ ವರ್ಣಭೇದ ವಿರೋಧಿ ಚಳುವಳಿಯ ನಾಯಕರನ್ನು ಸೆರೆಯಲ್ಲಿಟ್ಟಿದ್ದರು.


ನೆಲ್ಸನ್ ಮಂಡೇಲಾ ತಮ್ಮ ಸುದೀರ್ಘ ೨೭ ವರ್ಷಗಳ ಜೈಲುವಾಸವನ್ನು ಅನುಭವಿಸಿದ್ದು ಇಲ್ಲಿಯೇ. ಮೂಲಭೂತ ಸೌಕರ್ಯಗಳೂ ಇಲ್ಲದ ಆ ಸೆರೆಮನೆಯಲ್ಲಿ ಅವರು ಹೇಗೆ ಕಾಲ ಕಳೆದಿರಬಹುದೆಂಬ ಪ್ರಶ್ನೆ ಮನವನ್ನು ಕಾಡಿತು.ನಮ್ಮನ್ನು ಅಲ್ಲಿಗೆ ಕರೆದೊಯ್ದ ದೋಣಿ ವಾಪಾಸು ಬರುವಾಗ ,ಎಲ್ಲರ ಮನದಾಳದಲ್ಲಿ ವಿಷಾದದ ಅಲೆಗಳು ಅಪ್ಪಳಿಸುತ್ತಿದ್ದವು.ಶರೀರದ ಬಾಹ್ಯವರ್ಣ ಮನುಕುಲದಲ್ಲಿ ಎಂತೆಂತಹ ಸಮಸ್ಯೆಗಳನ್ನು ಹುಟ್ಟು ಹಾಕಿತು ಎಂದು ಯೋಚಿಸಿದೆ.






















ಕಾನ್ಸ್ಟನ್ಶಿಯಾ :
ಕೇಪ್ ಟೌನ್ ಉತ್ಕೃಷ್ಟ ಗುಣಮಟ್ಟದ ವೈನ್ ತಯಾರಿಕೆಗೆ ಬಹಳ ಖ್ಯಾತಿ ಪಡೆದಿದೆ.ಎಕರೆಗಟ್ಟಲೆ ಹರಡಿರುವ ದ್ರಾಕ್ಷಿ ತೋಟಗಳು ಪ್ರವಾಸೋದ್ಯಮದಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿವೆ. 'ವೈನ್ ಟೂರ್' ವೈನ್ ತಯಾರಿಸುವ ,ಶೇಖರಿಸುವ ಮತ್ತು ಅದನ್ನು ಸವಿಯುವ ವಿಧಾನಗಳ ಪ್ರಾತ್ಯಕ್ಷಿಕೆಯನ್ನು ನೀಡುತ್ತದೆ.ಬಗೆಬಗೆಯ ವೈನ್ ಗಳು ಖರೀದಿಗೆ ಲಭ್ಯವಿವೆ.ಕಾನ್ಸ್ಟನ್ಶಿಯಾ ಇಂತಹ ಒಂದು ವೈನ್ ಉದ್ಯಮದ ಹೆಸರು.






















ಕ್ರಿಶ್ಟನ್ ಬೊಷ್:
ಇದು ದಕ್ಷಿಣ ಆಫ್ರಿಕಾದ ಒಂದು ಪ್ರಮುಖ ಸಸ್ಯೋದ್ಯಾನ(ಬೊಟಾನಿಕಲ್ ಗಾರ್ಡನ್). ದಕ್ಷಿಣ ಆಫ್ರಿಕಾದ ವಿವಿಧ ಸಸ್ಯರಾಶಿಯನ್ನು ಇಲ್ಲಿ ಕಲೆ ಹಾಕಿದ್ದಾರೆ.ಸುಮಾರು ೫೨೮ ಎಕರೆ ಪ್ರದೇಶದಲ್ಲಿ ಹರಡಿರುವ ಅಪೂರ್ವ ಸಸ್ಯ ಸಂಪತ್ತು ಕಣ್ಣಿಗೆ ಹಬ್ಬ.


ಕೇಪ್ ಟೌನ್ ನಲ್ಲಿ ಪ್ರವಾಸೋದ್ಯಮವನ್ನು ಎಷ್ಟು ವ್ಯವಸ್ಥಿತವಾಗಿ ಇರಿಸಿದ್ದಾರೆಂದರೆ ಅದನ್ನು ನೋಡಿ ನಾವು ಕಲಿಯುವುದು ಬಹಳಷ್ಟಿದೆ.ಸಹಸ್ರಾರು ಪ್ರವಾಸಿಗಳು ಸೇರುವ ಪ್ರದೇಶ ಕೂಡ ಅತ್ಯಂತ ಸ್ವಚ್ಛವಾಗಿರುತ್ತದೆ.ಯಾವುದೇ ಸಮುದ್ರ ಕಿನಾರೆಯಲ್ಲಾಗಲೀ ರಸ್ತೆಯಲ್ಲಾಗಲೀ ಒಂದಿನಿತೂ ಕಸ,ಪ್ಲಾಸ್ಟಿಕ್ ಬಿದ್ದಿರುವುದಿಲ್ಲ. ಅವೆಲ್ಲವನ್ನೂ ಕಸದ ಬುಟ್ಟಿಯಲ್ಲೇ ಹಾಕುತ್ತಾರೆ.ಹೆಚ್ಚೇಕೆ ತಮ್ಮ ಜತೆ ನಾಯಿಯನ್ನು ಕರೆದೊಯ್ದರೆ ಅದರ ತ್ಯಾಜ್ಯವನ್ನು ಕೂಡ ಸಂಗ್ರಹಿಸಿ,ಕಸದ ಬುಟ್ಟಿಯಲ್ಲಿ ಹಾಕುತ್ತಾರೆ.ಎಲ್ಲೇ ಹೊದರೂ ಪ್ರವಾಸೀ ಸ್ಥಳದ ನಕ್ಷೆ ಲಭ್ಯವಿರುತ್ತದೆ. ಉಚಿತ ಮಾರ್ಗದರ್ಶಿ ಪುಸ್ತಿಕೆಗಳು ಹೇರಳವಾಗಿ ದೊರಕುತ್ತವೆ.ರಸ್ತೆಗಳಂತೂ ತೀರಾ ಅಚ್ಚುಕಟ್ಟು. ಟ್ರಾಫಿಕ್ ನಿಯಮಗಳೆಲ್ಲವನ್ನೂ ಎಲ್ಲರೂ ಸರಿಯಾಗಿ ಪಾಲಿಸುತ್ತಾರೆ.


ಒಟ್ಟಿನಲ್ಲಿ ಕೇಪ್ ಟೌನ್ ಪ್ರವಾಸ ನನ್ನ ಜೀವನದ ಅತ್ಯಂತ ಸವಿಯಾದ ಸಮಯ.ಬಲು ಸುಂದರ ಪ್ರದೇಶವೊಂದನ್ನು ಭೇಟಿ ಮಾಡಿದ ತೃಪ್ತಿ ನನ್ನದಾಗಿತ್ತು.ಪ್ರಕೃತಿ ದೇವಿಯ ಸಿರಿ ಸೊಬಗು ನನ್ನ ಮನವನ್ನು ಸೂರೆಗೊಂಡಿತ್ತು.

* ಜನರು ಸ್ನೇಹಪರರು. ಇಂಗ್ಲಿಷ್ ಮತ್ತು ಆಫ್ರಿಕನ್ ಮುಖ್ಯ ಭಾಷೆಗಳು. ಇಲ್ಲಿ ಯುರೋಪಿಯನ್ನರೇ ಬಹಳ ಸಂಖ್ಯೆಯಲ್ಲಿದ್ದಾರೆ.
























* ರಸ್ತೆಯ ಬದಿಯಲ್ಲಿ ಆಸ್ಟ್ರಿಚ್ ,ಬಬೂನ್ ಮುಂತಾದ ಪ್ರಾಣಿಗಳನ್ನು ಕಾಣಬಹುದು.























* ಆಫ್ರಿಕನ್ ಮಹಿಳೆಯರ ಕೇಶ ಶೃಂಗಾರ: ಅವರ ನೈಜ ತಲೆಕೂದಲಿಗೆ ಕೃತಕ ಕೇಶವನ್ನು ಸೇರಿಸಿ ಸಣ್ಣ ಸಣ್ಣ ಜಡೆಯಾಗಿ ಹೆಣೆಯುತ್ತಾರೆ.


*ಟ್ರಾಫಿಕ್ ಸಿಗ್ನಲ್ ಗೆ ಅಲ್ಲಿ 'ರೊಬೊಟ್' ಎಂದು ಕರೆಯುತ್ತಾರೆ.




*ಶಿಸ್ತು, ಸ್ವಚ್ಛತೆಗೆ ಬಹಳ ಆದ್ಯತೆ.



























*ಹಿಂದಿ ಚಲನಚಿತ್ರ 'ಐತ್ ರಾಜ್' ಇಲ್ಲಿ ಚಿತ್ರೀಕೃತವಾಗಿದೆ.




*ಅಲ್ಲಿಯ ಕರೆನ್ಸಿ ರಾಂಡ್. ಒಂದು ರಾಂಡ್ ಎಂದರೆ ಸುಮಾರು ಏಳು ರೂಪಾಯಿ.
* ಸೌತ್ ಆಫ್ರಿಕಾಕ್ಕೆ ಮೂರು ರಾಜಧಾನಿಗಳು.ಕೇಪ್ ಟೌನ್ ಶಾಸನ ಸಭೆಯ ಕಾರ್ಯಾಲಯ , ಪ್ರಿಟೋರಿಯಾ ಆಡಳಿತಾತ್ಮಕ ಕಾರ್ಯಾಲಯ ಹಾಗೂ ಬ್ಲೊಮ್ ಫ್ಲೊಂಟೈನ್ ನಾಯಾಲಯ ಸಂಬಂಧಿ ಕಾರ್ಯಾಲಯವನ್ನು ಹೊಂದಿದೆ.