Pages

Monday, August 14, 2017

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಕೃಷ್ಣ

ಶ್ರೀಕೃಷ್ಣಪರಮಾತ್ಮನ ಲೀಲೆಗಳು ಅಪಾರ. ಕಾವ್ಯ ಪ್ರಪಂಚದಲ್ಲಿ ,ನೃತ್ಯ ನಾಟಕಗಳಲ್ಲಿ ಕೃಷ್ಣನಷ್ಟು ವರ್ಣನೆಗೆ ಒಳಗಾದವರು ಬೇರಾರೂ ಇಲ್ಲವೆಂದೇ ಹೇಳಬೇಕು. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿಯಂತೂ ಬಂದಿಶ್, ಠುಮ್ರಿ ,ಧಮಾರ್  ಮತ್ತು ಭಜನ್ ಗಳಲ್ಲಿ ಕೃಷ್ಣನ ಗುಣಗಾನವು  ಯಥೇಚ್ಛವಾಗಿ ಕಾಣಸಿಗುತ್ತದೆ. ಆತನ ಬಾಲಲೀಲೆ, ಗೋಪಿಯರೊಡನೆ ಸರಸ,ರಾಧೆಯ ಪ್ರೇಮ ಮತ್ತು ವಿರಹ, ಭಕ್ತನ ಪ್ರಾರ್ಥನೆ ಇವುಗಳೆಲ್ಲ ಅತ್ಯಂತ ಸೊಗಸಾಗಿ ಚಿತ್ರಿತವಾಗಿವೆ. ಧಮಾರ್  ಎನ್ನುವ ಪ್ರಕಾರವು  ಕೃಷ್ಣನ ಹೋಳಿ ಹಬ್ಬದ ವರ್ಣನೆಗೆಂದೇ  ಮೀಸಲಾಗಿದೆ. ಹಿಂದೂಸ್ತಾನೀ ಸಂಗೀತದಲ್ಲಿ ಕೃಷ್ಣನನ್ನು ವಿವಿಧ ಹೆಸರುಗಳಿಂದ ಸಂಬೋಧಿಸಲಾಗುತ್ತದೆ. ಶ್ಯಾಮ್, ಮನಮೋಹನ, ಮೋಹನ, ಕಾನ್ಹಾ, ಕೃಷ್ಣ, ಗೋಪಾಲ, ಮುರಳೀಧರ, ವಿಹಾರೀ, ಮುಕುಂದ, ನಂದನಂದನ, ಯದುನಂದನ, ಯಶೋದಾನಂದನ, ಗಿರಿಧರ, ಮುರಾರಿ ಮುಂತಾದ ಹೆಸರುಗಳೆಲ್ಲವೂ ಕೃಷ್ಣನದ್ದೇ. ಕೃಷ್ಣನದ್ದು ತುಂಬು ಜೀವನ. ಆತನ ಜೀವನದ ಪ್ರತಿಯೊಂದು ಘಟ್ಟವೂ ಸಂಭ್ರಮ ಸಡಗರದಿಂದ ಕೂಡಿದ್ದು. ಕವಿಗಳು, ಸಾಹಿತಿಗಳೆಲ್ಲ ತಮ್ಮ ಕಲ್ಪನೆಯ ಆಗಸದಲ್ಲಿ ಕೃಷ್ಣನನ್ನು ವಿಧ ವಿಧ ರೀತಿಗಳಲ್ಲಿ ಕಂಡು ಆ ಸೃಷ್ಟಿಯ ಸಂತಸವನ್ನು ತಮ್ಮ ಅಸಂಖ್ಯಾತ ರಚನೆಗಳ ಮೂಲಕ ನಮ್ಮೊಂದಿಗೆಲ್ಲ ಹಂಚಿಕೊಂಡಿದ್ದಾರೆ. ಈ ಲೇಖನದಲ್ಲಿ ನಮೂದಿಸಿರುವ ಕವನಗಳೆಲ್ಲವೂ ವಿವಿಧ ಶ್ರೇಷ್ಠ ಸಂಗೀತಗಾರರು ಹಿಂದೂಸ್ತಾನಿ ಸಂಗೀತ ಪರಂಪರೆಗೆ ಕೊಟ್ಟ ಕೊಡುಗೆ. 

೧. ನಂದ ಗೋಕುಲದಲ್ಲಿ ಕೃಷ್ಣನ ಆಗಮನ 
ಶ್ರೇಷ್ಠ ವಾಗ್ಗೇಯಕಾರ  ಪಂಡಿತ್ ರಾಮಶ್ರೇಯ ಝಾ  "ರಾಮರಂಗ"ರು ತಮ್ಮ ಬಂದಿಶ್ ನಲ್ಲಿ  ಯಶೋದೆಯನ್ನು ಈ ಪರಿಯಾಗಿ ವಿನಂತಿಸುತ್ತಾರೆ :

ರಾಗ: ನಂದ್     ತಾಳ:  ಏಕ್ ತಾಲ್ 

ನಂದ್ ಘರ್ ಆನಂದ್ ಕೀ 
ಬಧಾಯೀ ಬಾಜೇ 
ಯಶುದಾ ತಿಹಾರೇ ಆಜ್ 
ಭಾಗ್ ರಾಗ್  ಜಾಗೇ ಜಾಗೇ ।

ಐಸೊ ಲಾಲ್ ಪಾಯೋರೀ 
ಜೈಸೊ ಕೋಉ ಪಾವೇ ನಾಹೀ 
"ರಾಮರಂಗ್"  ನಯನ್ ಮೇರೋ 
ದರಸ್ ದಾನ್ ಮಾಂಗೇ ಮಾಂಗೇ ।।

ಗೋಕುಲದ ನಂದನ ಮನೆಯಲ್ಲಿ ಆನಂದದ ವಾದ್ಯಗಳು ಮೊಳಗಿ ಸಂತಸದ ವಾತಾವರಣ ನಿರ್ಮಾಣವಾಗಿದೆ. ಕೃಷ್ಣನ ಆಗಮನದಿಂದ ಯಶೋದೆಗೆ ಅಪರಿಮಿತ ಹರ್ಷವಾಗಿದೆ. ಇಂತಹ ಸಂದರ್ಭದಲ್ಲಿ ಕವಿಯು ತಾಯಿ ಯಶೋದೆಯನ್ನು " ನಿನಗೆ ಅಪೂರ್ವವಾದ ,ಬೇರೆಲ್ಲೂ ಕಾಣಸಿಗದಂತಹ ಸುಂದರ ಶಿಶುವು ದೊರಕಿದೆ. ಅಂತಹ ಮಗುವಿನ ದರ್ಶನವನ್ನು ನನಗೆ ಕರುಣಿಸು " ಎಂದು ಪ್ರಾರ್ಥಿಸುತ್ತಾರೆ. 

ರಾಗ: ಕೋಮಲ ರಿಷಭ  ಅಸಾವರಿ      ತಾಳ:  ತೀನ್  ತಾಲ್ 

ಬಢಯ್ಯಾ ಲಾವೋ ಲಾವೊರೆ ಲಾವೋ 
ರೀ ಆಜ್ ಸುಘರ ಘಡ್ ಪಲನಾ ।

ರತನ್ ಜತನ ಸೊ ಜಡಿತ್ ಹಿಂಡೋಲನಾ 
ಝುಲಾವತ್  ಜಸೋಮತ್  ಲಲನಾ ।।

ಬಾಲ ಕೃಷ್ಣನ ದಿನಚರಿಯ ಪ್ರಮುಖ ಅಂಗ ನಿದ್ದೆ. ಯಶೋದೆಯು ನಂದನ ಬಳಿ ಸುಂದರವಾದ  ತೊಟ್ಟಿಲನ್ನು ತರಲು ಆದೇಶಿಸುತ್ತಿರುವ ಚಿತ್ರಣ ಇಲ್ಲಿದೆ. ಹಾಗೆ ಆದೇಶಿಸಿ ತರಿಸಿದ ತೊಟ್ಟಿಲು ಸಾಮಾನ್ಯವಾದದಲ್ಲ. ರತ್ನಖಚಿತವಾದದ್ದು.  ಈ ವಿಶೇಷವಾದ ತೊಟ್ಟಿಲನ್ನು ತೂಗುತ್ತಾ ಯಶೋದೆಯು ಕೃಷ್ಣನನ್ನು ಮಲಗಿಸುತ್ತಾಳೆ . 

ರಾಗ : ಕೋಮಲ ರಿಷಭ  ಅಸಾವರಿ      ತಾಳ:   ಆಡಾ  ಚೌತಾಲ್ 

ಯೇ ಮಾ ಕೌನ್ ಜೋಗೀ ಆಯಾ 
ನಜರ್ ಜೋ ಲಾಗೀ ಮೇರಾ ತೋ  ಕಾನ್ಹಾ ರೋವೆ ।

ಘರ್ ಘರ್ ಜಸೋದಾ ಲಿಯೇ ಫಿರತ್ ಹೇ 
ನಾ ದೂಧ್ ಪೀವೆ ನಾ ಸೋವೆ ।।


ಎಲ್ಲ ತಾಯಂದಿರಿಗೆ ಇರುವಂತೆ ಯಶೋದೆಗೂ ತನ್ನ ಮಗುವಿನ ಬಗೆಗೆ ಎಲ್ಲಿಲ್ಲದ ಕಳಕಳಿ. ಶಿವನು  ಕೃಷ್ಣನನ್ನು ಜೋಗಿಯ ರೂಪದಲ್ಲಿ ಬಂದು ಭೇಟಿಯಾಗಿ ಹೋಗುತ್ತಾನೆ. ಜೋಗಿಯು ಹೋದ ಬಳಿಕ ಬಾಲಕೃಷ್ಣನು ಹೆದರಿಕೊಂಡಿದ್ದಾನೆ. ಮಂಕಾಗಿದ್ದಾನೆ. ಸತತವಾಗಿ ಅಳುತ್ತಿದ್ದಾನೆ. ಮಲಗಲು ನಿರಾಕರಿಸುತ್ತಿದ್ದಾನೆ. ಹಾಲನ್ನು ಸೇವಿಸಲೂ ಒಲ್ಲೆನೆನ್ನುತ್ತಾನೆ. ಆತನಿಗೆ ಆ ಜೋಗಿಯದೇ ದೃಷ್ಟಿಯಾಗಿರಬೇಕು ಎಂದು ಯಶೋದಾ ಮಾತೆಯು ಗೋಕುಲದ ಮನೆಮನೆಗಳಲ್ಲಿ ಕೃಷ್ಣನ್ನು ಹೊತ್ತೊಯ್ದು ಹೇಳುತ್ತಿರುವ ಸನ್ನಿವೇಶವನ್ನು ಉಸ್ತಾದ್ ಬಡೇ ಗುಲಾಂ ಅಲಿ ಖಾನ್ ಸಾಹೇಬರು ಇಲ್ಲಿ ಸುಂದರವಾಗಿ ವಿವರಿಸಿದ್ದಾರೆ. 

ರಾಗ: ಶ್ಯಾಮ್ ಕಲ್ಯಾಣ್  ತಾಳ :   ತೀನ್  ತಾಲ್ 

ಝೂಲತ ಗೋಪಾಲ ಹೋ ಪಲನಾ 
ಘು೦ಘರಿ  ಲಲ್ ಕೆ ಲಲ್ ಕೇ  ಕಪೋಲ ಭಾಲ್  ಹೋ ಪಲನಾ ।

ಬಾಲ ಮುಕುಂದ ಆನಂದ ಕಂದ 
ಪುನಿ ಪುನಿ ಮಲಕೆ ಕಿಲಕೆ "ಪ್ರಣವೇಶ" ನಂದ ಲಾಲ್  ಹೋ ಪಲನಾ ।।


ಬಾಲ ಕೃಷ್ಣನು  ಜೋಕಾಲಿ ಆಡುವ ಪರಿ ಇಲ್ಲಿದೆ. ಕೃಷ್ಣನ ಗುಂಗುರು ಕೂದಲು ಜೋಕಾಲಿ ಆಟದ ಸಂದರ್ಭದಲ್ಲಿ ಹಣೆ ಮತ್ತು ಗಲ್ಲಗಳ ಮೇಲೆ ನಲಿದಾಡುತ್ತಿವೆ. ಹೀಗಿರುವಾಗ ಕೃಷ್ಣನು ನಸುನಗುತ್ತಾ ಕೇಕೆ ಹಾಕುತ್ತಾ ಇನ್ನೂ ಜೋರಾಗಿ ಜೋಕಾಲಿ ಆಡುತ್ತಿದ್ದಾನೆ . 

೨. ಬಾಲಕೃಷ್ಣನ ಲೀಲೆಗಳು 

ರಾಗ: ಶ್ಯಾಮ್ ಕಲ್ಯಾಣ್       ತಾಳ: ಏಕ್ ತಾಲ್

ಬೇಲಾ ಹೋ ಸಾಂಝ ಕೀ  
ಸುಖದ್ ಸುಹಾವನೋ
ಭಯೋ ರೀ ಆಲೀ ಆಜ್ ತೋ  ।

ಅಚಾನಕ್ ಆಯೇ ಶ್ಯಾಮ್  
ಬರಜೋರಿ ಅಚರಾ ಥಾಮ್ 
ಸರಬಸ್ ಲಯ್ "ರಾಮರಂಗ್"
ಚಲೇ ಜಗಾಯೆ ಬಾಲ್ ಕೋ ।।

ಗೋಕುಲದ ಸ್ತ್ರೀಯರಿಗೆ ಸಂಜೆಯ ಹೊತ್ತು ತುಂಬಾ ಸುಂದರವಾಗಿ ಕಾಣಹತ್ತಿದೆ. ಕಾರಣವಿಷ್ಟೇ.  "ಪ್ರತಿದಿನ ಸಂಜೆಯ ಸುಂದರ ಹೊತ್ತಿನಲ್ಲಿ ಕೃಷ್ಣನು ಅಚಾನಕ್ಕಾಗಿ ತಮ್ಮ ಮನೆಗಳಿಗೆ ನುಗ್ಗಿ ತನ್ನ ಯಾವತ್ತಿನ ತುಂಟಾಟದ ವಿವಿಧ ನಮೂನೆಗಳನ್ನು ಪ್ರಸ್ತುತಪಡಿಸಿ, ಧಾ೦ಧಲೆ ಎಬ್ಬಿಸಿ ಇನ್ನೇನು ಹೊರನಡೆಯುತ್ತಿದಂತೆ ತಮ್ಮ ಮನೆಗಳಲ್ಲಿ ಶಾಂತವಾಗಿ ನಿದ್ರಿಸುತ್ತಿರುವ ಹಸುಗೂಸುಗಳನ್ನು ಎಬ್ಬಿಸಿ ಕಾಲು   ಕೀಳುತ್ತಾನೆ ". ಪರಮಾತ್ಮನ ಈ ಲೀಲೆಯು ಯಾರಿಗೆ ತಾನೇ ಇಷ್ಟವಾಗದು ? 


ರಾಗ: ಸೋಹನಿ        ತಾಳ:  ತೀನ್  ತಾಲ್

ಏರೀ ಏ ಯಶೋದಾ ತೋಸೆ ಕರೂಂಗೀ ಲರಾಯೀ 
ತುಮ್ ಹರೇ ಕುಂ ವರ್ ನೇ ಧೂಮ್ ಮಚಾಯೀ ।

ಕಾಹು ಕೆ ಸರ್ ಸೇ ಮಟಕಿಯಾ ಛೀನೀ 
ಕಾಹುಕೇ ಸರ್ ಸೇ ಮಟಕಿಯಾ ಡುರ್ ಕಾಯೀ 
ಬಾಟ್ ಚಲತ್ ಮೋಹೇ ಛೇಡತ್  ಸಾಂವರ್ 
ಚಾ೦ದ್ ಹಸೇ ಔರ್ ಬೃಜ್ ಕೀ ಲುಗಾಯೀ ।।

ಗೋಪಿಯರು ಕೃಷ್ಣನ ತುಂಟಾಟಗಳನ್ನು ಸಹಿಸುತ್ತಲೇ ಇದ್ದರೂ ಕೆಲವೊಮ್ಮೆ ಸಹನ ಶಕ್ತಿಯ ಎಲ್ಲೆ  ಮೀರಿದಾಗ ಯಶೋದೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಕೃಷ್ಣನು ತಮ್ಮ ನೀರಿನ ಮಡಕೆಗಳನ್ನು ಕಸಿದುಕೊಂಡು ,ಕೆಲವರ ಮಡಕೆಗಳನ್ನು ಒಡೆದು ,ತಮ್ಮನ್ನು ಛೇಡಿಸುತ್ತಿದ್ದರೂ ಗೋಕುಲದ ಜನರು ಇದನ್ನು ಕಂಡು ಆನಂದ ಪಡುತ್ತಿದ್ದಾರೆ ಎಂದು ದೂರುತ್ತಾರೆ. 

ರಾಗ: ದೇಸ್        ತಾಳ: ರೂಪಕ್  

ನಿರತತ್ ಶ್ಯಾಮ್ ಆಜ್ ನಟವರ್ ಭೇಷ್  
ಮುರಲೀ ಕರ್ ಧಾರೆ ।

ನಿರತತ್ ಗಾವೇ ಕಾಲಿಯಾ ಫನ್ ಪೇ 
"ರಾಮರ೦ಗ್" ಉಮಂಗೀ ತಾತಾ ಥೈಯ್ಯಾ ಕರೇ  ।।

ಕೃಷ್ಣನ ಬಾಲಲೀಲೆಗಳಲ್ಲಿ ಪ್ರಮುಖವಾದ ಕಾಳಿಂಗ ಮರ್ದನದ ಸಂದರ್ಭದಲ್ಲಿ ಕೃಷ್ಣನು ದೈತ್ಯ ಕಾಳಿಂಗನ ಹೆಡೆಯನ್ನೇರಿ ನರ್ತಿಸಿದ ವಿಚಾರವನ್ನು ಈ ಕವನದಲ್ಲಿ ಪ್ರಸ್ತುತಪಡಿಸಲಾಗಿದೆ. 

೩. ಕೃಷ್ಣನ   ಯೌವನ 

ಕವಿಯು ರಾಧಾ ಕೃಷ್ಣರನ್ನು ಜೊತೆಯಾಗಿ ಕಾಣುತ್ತಾನೆ. 

ರಾಗ: ಮುಲ್ತಾನೀ  ತಾಳ: ಆಡಾ ಚೌತಾಲ್  

ಗೋಕುಲ್ ಗಾಂವ್ ಕೇ ಛೋರಾ 
ಬರಸಾನೇ ಕೀ  ನಾರೀ ರೇ ।

ಇನ್ ದೋಉನ್ ಮನ್ ಮೋಹ್ ಲಿಯೋ ಹೇ 
ರಹೇ "ಸದಾರಂಗ್" ನಿಹಾರ್ ರೇ ।।

ಗೋಕುಲದ ಹುಡುಗನಾದ  ಕೃಷ್ಣ  ಮತ್ತು ಬರ್ಸಾನಾ ಎಂಬ ಊರಿನ ಹುಡುಗಿಯಾದ  ರಾಧೆ - ಇವರಿಬ್ಬರನ್ನು ಜತೆಯಾಗಿ ಕಂಡು ಕವಿಗೆ (ಸದಾರಂಗ್) ಮನಸ್ಸು ತುಂಬಿ ಬಂತು. 

ರಾಗ: ಜೋನ್ ಪುರೀ        ತಾಳ : ಏಕ್ ತಾಲ್ 

ಮೋರೆ  ಮಂದಿರ್ ಶ್ಯಾಮ್ ಆಯೆ 
ಸಪನೇ ನಿಶಿ ದರಶ್ ಪಾಯೇ 
ರಾಧಾ ಸಂಗ್ ಹಸತ್ ಬೋಲತ್ 
ಜಮುನಾ ಜಲ ಡಗ್ ಮಗಾಯೇ  ।

"ದೀನ್" ದೇಖಿ ಪುಲಕಿತ್ ಮನ್ 
ಧಾಯೇ ಧೋಯ್ ಜುಗಲ್ ಚರನ್ 
ಕರ್ ಆರತಿ ಆನಂದ್ ಭರೇ 
ಗಾಯೇ ಗಾಯೇ ನಾಚೆ ನಾಚೆ  ।।

ಕವಿಯ ಕನಸಿನಲ್ಲಿ ರಾಧೆಯ ಜತೆ ಕೃಷ್ಣ ನಗುತ್ತಾ ಸರಸವಾಡುತ್ತ ಯಮುನಾ ನದಿಯಲ್ಲಿ  ಜಲ ತರಂಗ ಗಳನ್ನು ಎಬ್ಬಿಸುವ ಪ್ರಸಂಗ ನಡೆಯುತ್ತದೆ. ಅವರಿಬ್ಬರನ್ನು ಕಂಡ ಕವಿಗೆ ಅತ್ಯಂತ ಹರ್ಷವಾಗಿ, ಅವರಿಬ್ಬರ ಚರಣಗಳನ್ನು ತೊಳೆದು, ಆರತಿ ಮಾಡಿ, ಹಾಡಿ ನರ್ತಿಸುತ್ತಾನೆ.   

ರಾಗ : ರಾಗೇಶ್ರೀ    ತಾಳ: ತೀನ್  ತಾಲ್ 

ಜಾನೇ ದೇ ಜಾನೇ ದೇ ಸಖೀ ಜಾನೇ ದೇ 
ಮೋಹನ್ ಯಾದ್ ಕರೇ ಜಾನೇ ದೇ ।

ಮನ್ ಮೋಹನ್ ಕೀ ಪ್ರೀತ್ ಹೀ ನ್ಯಾರೀ 
ಮನ್ ಕೋ ಲುಭಾವತ್  ಸುಖದ್  ಕರೇ  ಜಾನೇ ದೇ ।।

ರಾಧೆಯು ತನ್ನ ಸಖಿಯರಲ್ಲಿ "ಮನಮೋಹನ ಕೃಷ್ಣನ ಪ್ರೀತಿಯು ತನ್ನ ಮನಸ್ಸಿಗೆ ಆಪಾರ ಸುಖವನ್ನು ನೀಡುವುದು. ತನ್ನ ಪ್ರಿಯತಮ ಕೃಷ್ಣನನ್ನು ಭೇಟಿಯಾಗಲು ಅವಕಾಶ ನೀಡಿ " ಎಂದು  ಈ ಪರಿಯಾಗಿ ವಿನಂತಿಸುತ್ತಾಳೆ. 

ರಾಗ : ತಿಲಕ್  ಕಾಮೋದ್     ತಾಳ:  ಜತ್   

ದೇಖೋ ಸಖೀ ಶ್ಯಾಮ್ ನಿಠುರ್ ನಾಹೀ ಮಾನತ್ 
ಕರತ್  ಠಿಠೋರೀ ಕಾನ್ಹಾ ರೋಕತ್ ಮಗ್  ಚಲತ್ । 

ಜಮುನಾ ತಟ ಪರ್  ಬನ್ಸೀ  ಬಜಾವತ್ 
"ದೀನ್" ಕೆ ತನ್ ಮನ್  ಸಬ್ ಅಕುಲಾವತ್ 
ಘರ್ ಆ೦ಗನ್ ಮೋಹೇ ಕಛು ನಾ ಸುಹಾವತ್ ।।

ಇದು ಒಂದು ಠುಮ್ರಿ.   ರಾಧೆಯು ತನ್ನ ಸಖಿಯರಲ್ಲಿ " ಯಮುನೆಯ ದಡದಲ್ಲಿ ತೇಲಿ ಬರುತ್ತಿರುವ ಮುರಳಿನಾದವು ಮತ್ತು ಮುರಳೀಧರನ ಸುಂದರ ಸರಸ ಲೀಲೆಗಳು ನನ್ನ ಹೃದಯವನ್ನು ಆವರಿಸಿಕೊಂಡಿವೆ. ಬೇರಾವುದರ ಪರಿವೆಯೂ ನನಗಿಲ್ಲ " ಎಂದು ಭಾವಪರವಶಳಾಗಿ ನುಡಿಯುತ್ತಾಳೆ .
ರಾಗ : ದೇವ  ಗಾಂಧಾರ್   ತಾಳ: ತೀನ್  ತಾಲ್
ಬರಜೋರಿ ನಾ  ಕರೋರೆ ಏ ಕಾನ್ಹಾಯೀ 
ಜಮುನಾ ಕೆ ಘಾಟ್ ಪನಿಯಾ ಜೋ ಭರನ್ 
ಗಗರ್  ಮೋರೀ ಗಿರಾಯೀ ಮೋಸೇ  ಕರ್ ಕೇ  ಲರಾಯೀ ।

"ಮನ್ ರಂಗ್"  ಹೋ  ತುಮ ಢೀಟ್ ಲಂಗರ್ ವಾ 
ವಹೀ ರಹೋ ಜಹಾಂ ರೈನ್ ಬಿರಮಾಯೀ   
ಮೋಸೇ ಕರ್ ಕೇ ಲರಾಯೀ  ।।

ರಾಧಾ ಕೃಷ್ಣರ ಹುಸಿಮುನಿಸಿನ ವರ್ಣನೆ ಇಲ್ಲಿದೆ. ರಾಧೆಯು ಕೃಷ್ಣನಲ್ಲಿ "ನನ್ನನ್ನು ಛೇಡಿಸಬೇಡ, ಯಮುನೆಯ ತೀರದಲ್ಲಿ ನೀರು ತುಂಬುತ್ತಿರುವ ನನ್ನ ಕೆಲಸಕ್ಕೆ ಅಡ್ಡಿ ಬರಬೇಡ, ಜಗಳವಾಡಬೇಡ. ನಿನ್ನೆ ರಾತ್ರಿಯನ್ನು ನೀನು ಎಲ್ಲಿ ಕಳೆದಿದ್ದೀಯ ಅಲ್ಲಿಯೇ  ಇರು. ನನ್ನ ಬಳಿ ಬರಬೇಡ." ಎಂದು ಕೋಪಗೊಳ್ಳುತ್ತಾಳೆ. 

ರಾಗ : ಪೂರಿಯಾ ಕಲ್ಯಾಣ್       ತಾಳ: ತೀನ್  ತಾಲ್ 

ಇತನೀ ಬಿನತೀ ಮೋರೀ ಮಾನ್ ಶಾಮ್ ಜೀ 
ಪನ್ ಘಟ್ ಪೇ ಮೋಹೇ ಛೇಡೊ ನಾ ಛೇಡೊ ನಾ।

ದೇಖತ್ ಹೇ ಸಬ್ ಬ್ರಿಜ್ ಕೇ ಲುಗವಾ 
ಜಾಕೇ ಕಹೇಂಗೇ ಘರ್ ಘರ್ ವಾ ।।

"ನೀರು ತುಂಬುವ ಜಾಗದಲ್ಲಿ ನಮ್ಮನ್ನು ಛೇಡಿಸಬೇಡ. ಬ್ರ೦ದಾವನದ ಜನರೆಲ್ಲಾ ನಮ್ಮನ್ನು ನೋಡುತ್ತಾರೆ. ಮನೆಮನೆಗಳಲ್ಲಿ ನಮ್ಮ ಬಗ್ಗೆ ಮಾತನಾಡುತ್ತಾರೆ" ಎಂದು ಗೋಪಿಕೆಯರೆಲ್ಲ ಕೃಷ್ಣನಲ್ಲಿ ವಿನಂತಿಸಿ ಕೊಳ್ಳುತ್ತಾರೆ. ಅವರೆಲ್ಲರ ಮನದಲ್ಲಿ ಕೃಷ್ಣನು ತಮ್ಮನ್ನು  ಛೇಡಿಸಲಿ ಎಂದೇ ಬಯಕೆಯಿದೆ. ಆದರೂ ಜನರು ಏನೆಂದು ಕೊಳ್ಳುತ್ತಾರೆ ಎಂಬ ಆತಂಕವೂ ಇದೆ.  ಕೃಷ್ಣನ ಒಡನಾಟವೇ ಅಂಥದ್ದು. 

೪. ಸಂಗೀತಗಾರ ಕೃಷ್ಣ 

ಬೃಂದಾವನೀ ಸಾರಂಗದಲ್ಲಿ ನಿಬದ್ಧವಾಗಿರುವ ಈ ರಚನೆಗಳು  ಕೃಷ್ಣನ  ವೇಣುವಾದನದ ನಿಪುಣತೆಯನ್ನು ಎತ್ತಿ ಹಿಡಿಯುತ್ತದೆ. 

ರಾಗ : ಬೃಂದಾವನೀ  ತಾಳ : ತೀನ್ ತಾಲ್ 

ಮಧುರ್ ಧುನ್ ಬಾಜೇ ಬಾಜೇ ರೀ  ಕಿತ 
ಸುನ್ ಸುನ್ ಜಿಯಾ ಅಕುಲಾತ್ ಆಜ್ ಸಖಿ ।

ಯಹ್ ಮುರಲೀ  ಬೈರನ್ ಭಯೀ  ಹಮ್ ರೀ 
ಅಧರನ್ ಬೈಠಿ ಸತಾವತ್  ಸಬ್  ಹೀ 
"ರಾಮ್ ರಂಗ" ಬಸೀ ಬೋದೂ ಬರ ಸಖೀ  ।।

ಕೃಷ್ಣನ ಕೊಳಲಿನ ನಾದವು ಮಧುರವಾಗಿದೆ. ಆತನ ತುಟಿಯ ಮೇಲಿರುವ ಕೊಳಲಿನ ನಾದವು ತನ್ನ ಇಂಪಾದ ಧ್ವನಿಯಿಂದ ಎಲ್ಲರನ್ನು ಸತಾಯಿಸುತ್ತಿದೆ. 

ರಾಗ : ಬೃಂದಾವನೀ  ತಾಳ: ಮಠ್ಯ 

ನಾದ ಮುರಳೀಧರ ಗೋಪೀ ಮನೋಹರ 
ಬನ ಬನ ಸುಂದರ್ ಖೇಲತ್ ರಾಧೇ ।

ಬಛರನ್ ಚರಾವತ್ ಬನ ಬನ ಆವತ್ 
ತಾನನ  ತಾನನ  ತಾನ ಸುನಾವೇ ।।

ಕೃಷ್ಣನು ಅತ್ಯಂತ ಮನೋಹರವಾದ ವೇಣುವಾದಕ. ಆತನ ವೇಣುವಾದನವು ನಾದವೇ ಮೂರ್ತಿವೆತ್ತಂತೆ.  ಅರಣ್ಯಗಳು, ಗೋಕುಲದ ಗೋವುಗಳು, ರಾಧೆ ಮತ್ತು ಗೋಪಿಯರು  ಈ ಅದ್ಭುತ  ಕೊಳಲು ವಾದನದ ಆಸ್ವಾದಕರು. 

೫.  ಹೋಳಿಯ ರಂಗು

ಕೃಷ್ಣನ ಜೀವನದ ರಸಮಯ ಘಟ್ಟಗಳಲ್ಲಿ ಒಂದು  ಹೋಳಿ ಹಬ್ಬದ ಆಚರಣೆ ಮತ್ತು ಸಂಭ್ರಮ ಇಲ್ಲಿದೆ . 

ರಾಗ: ಭೀಮ್ ಪಲಾಸಿ  ತಾಳ : ತೀನ್ ತಾಲ್ 

ಮಲತ  ಹೇ ಗುಲಾಲ್ ಲಾಲ್ ಹೋರೀ ಮೇ
ನಾ ಮಾನೇ ಬರ ಜೋರೀ ಕ ರ್ ಪ ಕ ರ ತ್  ಹೇ ।

ತಕ್ ತಕ್ ಮಾರತ್  ಹೇ ಪಿಚ್ಕಾರೀ 
ಚೂನರ್ ಮೋರೀ ಭೀಗೀ ಸಾರೀ 
ಉಡತ್  ಗುಲಾಲ್ ಲಾಲ್ ಭಯೇ ಬಾದರ್ 
ರಂಗ್ ಕೀ ಫುಹಾರ್ ಪರತ್ ಹೇ ।।

ಹೋಳಿ ಹಬ್ಬದ ಸಂದರ್ಭದಲ್ಲಿ ಕೃಷ್ಣನು ಗೋಪಿಕೆಯರ ಮೇಲೆ ಗುಲಾಬಿ ಬಣ್ಣವನ್ನು ಎರಚುತ್ತಿದ್ದಾನೆ. ಗೋಪಿಯರು ಒಲ್ಲೆನೆಂದರೂ ಕೇಳದೆ ಅವರ ಸೀರೆ ಸೆರಗುಗಳನ್ನು ಪಿಚಕಾರಿಯ ಬಣ್ಣದ ನೀರಿನಿಂದ ತೋಯಿಸುತ್ತಿದ್ದಾನೆ. ವರ್ಣಗಳ ಅಬ್ಬರದಿಂದ ಆಕಾಶವೂ ಕೆಂಪಾದಂತೆ ಕಾಣುತ್ತಿದೆ. 

ಧಮಾರ್ ಸಾಹಿತ್ಯದ ಒಂದು ರಚನೆ.  

ರಾಗ: ಗೋರಖ್      ತಾಳ : ಧಮಾರ್ 

ಅಬೀರ್ ಗುಲಾಲ್ ಛಾಯೋ ಹೇ ರೀ 
ಚಹೂ ದಿಸ್ ಅಂಬರ್ ಮೇ।

ಕುಂಕುಮ್ ಕೀ ಕೀಚ್ ಮಚೀ  ಹೇ 
ಬ್ರಿಜ್ ಕೀ ಡಗರ್ ಡಗರ್ ಮೇ ।।

ಮಥುರೆಯ ಗಲ್ಲಿ ಗಲ್ಲಿಗಳಲ್ಲಿ ಹೋಳಿಯ ಸಡಗರವು ಆಗಸವನ್ನು ವರ್ಣಮಯವಾಗಿಸಿತು. 

ರಾಗ : ಬಸಂತ್          ತಾಳ: ತೀನ್  ತಾಲ್ 

ಫಗವಾ ಬ್ರಜ್ ದೇಖನ ಕೋ ಚಲೋ ರೀ 
ಫಗವೆ ಮೇ ಮಿಲೇಂಗೆ ಕುಂವರ್ ಕಾನ್ಹಾಯೀ 
ಜಹಾ೦ ಬಾಟ್ ಚಲತ್ ಬೋಲೇ ಕಗವಾ ।

ಆಯೀ ಬಹಾರ್ ಸಕಲ ಬನ ಫೂಲೇ 
ರಸೀಲೇ ಲಾಲ್ ಕೋ ಲೇ ಅಗವಾ ।।

ಹೋಳಿಯನ್ನು ಆಸ್ವಾದಿಸಬೇಕೆಂದರೆ ನೀವು ಮಥುರೆಗೇ  ಹೋಗಬೇಕು. ಅಲ್ಲಿ ಹೋದಲ್ಲಿ ನಿಮಗೆ ಕೃಷ್ಣನ ದರ್ಶನವಾದೀತು ಎಂದು ಕಾಗೆಯು ಶುಭಶಕುನವನ್ನು ನುಡಿಯುತ್ತಿದೆ. ವನವೆಲ್ಲ ಚಿಗುರುವ ಈ ವಸಂತ ಕಾಲದಲ್ಲಿ ಕೃಷ್ಣನನ್ನು ಎತ್ತಿಕೊಂಡು ಹೋಗಿ ಹೋಳಿ ಆಡೋಣ ಎಂದು ನಾಯಿಕೆಯು ಆಶಿಸುತ್ತಿದ್ದಾಳೆ. 

೬. ದ್ವಾರಕೆಗೆ ಪಯಣ 

ರಾಗ: ತಿಲಂಗ್     ತಾಳ:  ಜತ್   

ಮೋರೀ ಸುಧ ಬಿಸರಾಯೀ  
ನಂದ ದುಲ್ಹಾರೇ  ।

ಆಪ್ ತೋ ಜಾಯೇ ದ್ವಾರಿಕಾ ಮೇ ಛಾಯೇ 
ಹಮ್ ಕಾ ಜೋಗ್ ಪಠಾಯೇ ।।

ಮುಂದೆ ಕೃಷ್ಣನು ಮಥುರೆಯನ್ನು ತ್ಯಜಿಸಿ, ದ್ವಾರಕೆಯಲ್ಲಿ ತನ್ನ ರಾಜ್ಯಭಾರವನ್ನು ನಡೆಸುತ್ತಿದ್ದಾಗ ಕೃಷ್ಣನ ವಿರಹದಿಂದ ವ್ಯಾಕುಲಿತರಾದ ಗೋಪಿಕೆಯರ ಮನಸ್ಥಿತಿಯನ್ನು ಈ ಠುಮ್ರಿಯಲ್ಲಿ ಚಿತ್ರಿಸಲಾಗಿದೆ.  
"ನಮ್ಮ ನೆಮ್ಮದಿಯನ್ನು ನೀನು ನಿನ್ನೊಂದಿಗೆ ದ್ವಾರಕೆಗೆ ಹೊತ್ತೊಯ್ದಿದ್ದೀಯಾ. ಅಲ್ಲಿ ರಾಜ್ಯವಾಳುತ್ತಿರುವ ನೀನು ನಮ್ಮನ್ನೆಲ್ಲ ಜೋಗಿನಿಯರನ್ನಾಗಿ ಮಾಡಿದ್ದೀಯಾ" ಎಂದು ದುಃಖಿಸುತ್ತಾರೆ. 

೭. ಭಕ್ತರ ದೃಷ್ಠಿಯಲ್ಲಿ ಕೃಷ್ಣ 

ಶ್ರೀಕೃಷ್ಣನ ಪರಮ ಭಕ್ತೆಯಾದ ಮೀರಾ ಬಾಯಿಯ ಭಜನೆಗಳು ಸುಪ್ರಸಿದ್ಧ. 

ರಾಗ: ಪೂರ್ವಿ  ತಾಳ: ಆಧಾ 

ಮಾಯೀ ಮೋರೆ ನೈನನ್ ಬಾನ್ ಪರೀ ರೀ 
ಜಾದಿನ್ ನೈನಾ ಶ್ಯಾಮ್ ನಾ ದೇಖೂಂ  
ಬಿಸರತ್ ನಾಹೀ ಘರೀ ರೀ  ।

ಚಿತ್  ಮೇ ಬಸ್ ಗಯೀ ಸಾ೦ವರೀ ಸೂರತ್ 
ಉತರೇ ನಾಹೀ ಧರೀ ರೀ 
"ಮೀರಾ" ಹರೀ ಕೇ ಹಾಥ್  ಬಿಕಾನೀ 
ಸರಬಸ್ ದೇನೀ  ಬರೀ ರೀ ।।

ಕೃಷ್ಣನನ್ನು ನೋಡದೆ ಕಣ್ಣುಗಳಿಗೆ ಬಾಣ ಬಿದ್ದಂತಾಗಿದೆ, ಸಮಯವೂ ಯುಗಗಳಂತೆ ಕಳೆಯುತ್ತಿದೆ. ಆತನ ಸ್ವರೂಪವು ತನ್ನ ಹೃದಯದಲ್ಲಿ ಅಚ್ಚಳಿಯದೆ ನಿಂತಿದೆ ಎಂದು ಪರಮಭಕ್ತೆ ಮೀರಾಬಾಯಿ ತನ್ನ 
ಭಜನೆಯೊಂದರಲ್ಲಿ ಹೇಳುತ್ತಾಳೆ  . 

ಆಕೆ ತನ್ನ ಇನ್ನೊಂದು ಭಜನೆಯಲ್ಲಿ ಕೃಷ್ಣನ ಬರುವಿಕೆಗಾಗಿ ಪ್ರಾರ್ಥಿಸುತ್ತಿದ್ದಾಳೆ.  

ರಾಗ : ಭೈರವಿ    ತಾಳ : ಭಜನ್ ತಾಲ್ 
ಕೋಯೀ ಕಹಿಯೋ ರೇ ಪ್ರಭು ಆವನ್ ಕೀ  
ಆವನ್ ಕೀ ಮನ್ ಭಾವನ್ ಕೀ  ।

ಆಪ್ ನಾ ಆವೇ ಲಿಖ್ ನಹೀ ಭೇಜೇ 
ಬಾನ್ ಪರೇ ಲಲ್ಚಾವನ್ ಕೀ ।।

ಏ ದೋ  ನೈನಾ ಕಹಾ ನಹೀ ಮಾನೆ 
ನದಿಯಾ ಬಹೆ ಜೈಸೇ ಸಾವನ್ ಕೀ ।।

"ಮೀರಾ" ಕಹೇ  ಪ್ರಭು ಕಬ್  ರೇ ಮಿಲೋಗೆ 
ಚೇರಿ  ಭಯೀ  ತೇರೇ  ದಾಮನ್  ಕೀ  ।।

ಮೀರಾಬಾಯಿಯು ಈ ಭಜನೆಯ ಮೂಲಕ ಕೃಷ್ಣನನ್ನು ಪ್ರೇಮದಿಂದ ಪ್ರತ್ಯಕ್ಷವಾಗಲು ವಿನಂತಿಸುತ್ತಿದ್ದಾಳೆ. ಕೃಷ್ಣನು ಬಂದಲ್ಲಿ ತನ್ನ ಮನಸ್ಸಿಗೆ ತುಂಬಾ ಸಂತಸವಾಗುವುದು. ಆದರೆ ಕೃಷ್ಣನು ಬರಲೂ ಇಲ್ಲ. ತಾನು ಬರುತ್ತೇನೆ ಎಂಬ ಸಂದೇಶವನ್ನೂ ಕಳುಹಿಸಿಲ್ಲ. ಈ ಸ್ಥಿತಿಯಲ್ಲಿ ಮೀರಾಬಾಯಿಯು ದುಃಖದಿಂದ ಅಳುತ್ತಿದ್ದಾಳೆ. ಇಷ್ಟು ಹತಾಶೆಗೆ ಒಳಗಾಗಿದ್ದರೂ ಆಕೆಗೆ ಕೃಷ್ಣ ಮುಂದೊಂದು ದಿನ ತನಗೆ ದರ್ಶನವನ್ನು ಕೊಟ್ಟು ತನ್ನ ಬಳಿ ವಿರಮಿಸುವ ಸೌಭಾಗ್ಯವನ್ನು ನೀಡುತ್ತಾನೆ ಎಂಬ ಆಶಾವಾದವನ್ನು ಹೊಂದಿದ್ದಾಳೆ. ಇದು ಆಕೆಯ ಕೃಷ್ಣ ಭಕ್ತಿಗೆ ಸಾಕ್ಷಿ. 

( ಈ ಲೇಖನವನ್ನು ಸಿದ್ಧಪಡಿಸುವಲ್ಲಿ ಪೂರಕ ಮಾಹಿತಿಯನ್ನು ಒದಗಿಸಿದ  ಪಂ. ಕುಲದೀಪ್ ಡೋಂಗ್ರೆಯವರಿಗೆ ಆಭಾರಿ ) 

ಗ್ರಂಥ ಋಣ :
೧.ಅಭಿನವ ಗೀತಾಂಜಲಿ - ಪಂಡಿತ್ ರಾಮಶ್ರೇಯ ಝಾ  "ರಾಮರಂಗ"
೨. ಕ್ರಮಿಕ್ ಪುಸ್ತಕ ಮಾಲಿಕಾ -ಪಂಡಿತ್ ವಿಷ್ಣು ನಾರಾಯಣ ಭಾತಖಂಡೆ 
೩. ಸಂಗೀತಾಂಜಲಿ - ಪಂಡಿತ್ ಓಂಕಾರ್ ನಾಥ್ ಠಾಕೂರ್ 


ವಿಜಯವಾಣಿಯಲ್ಲಿ ಪ್ರಕಟಿತ


6 comments:

Dkrbhat said...

Detailed wrting. Good

Prakash KB said...

Good one, thanks for narrating various stages of Krishna's life in this consolidated article as seen by various composers.

Unknown said...

Very nicely written!

Unknown said...

Nice and brilliant narration

Unknown said...

Brilliantly narrated.. keep writing

sunaath said...

ಅಬ್ಬಾ! ಎಷ್ಟೆಲ್ಲಾ ಪ್ರಕಾರಗಳಲ್ಲಿ ಕೃಷ್ಣನ ವರ್ಣನೆಯನ್ನು ಬಂದಿಶ್‍ಗಳ ಮೂಲಕ ಮಾಡಿರುವಿರಿ! ಓದಿ ತುಂಬ ಸಂತೋಷವಾಯಿತು.