Pages

Saturday, November 29, 2014

ಮಾಧ್ಯಮಗಳ ಜವಾಬ್ದಾರಿಯೇನು ?



ಜ್ಯೋತಿಷ್ಯ ಶಾಸ್ತ್ರವು ಖಗೋಳದ ಗ್ರಹಗಳ ಚಲನೆಗಳ ಸತತ ವೀಕ್ಷಣೆ  ಮತ್ತು ಅದು ಮನುಷ್ಯನ ಜೀವನದ ಆಗು ಹೋಗುಗಳ ಮೇಲೆ ಅದು ಉಂಟು ಮಾಡುವ ಪರಿಣಾಮಗಳ ಕ್ರಮಬದ್ಧವಾದ ಅಧ್ಯಯನದ ಮೂಲಕ ಬೆಳೆದುಬಂದಂತಹ ಶಾಸ್ತ್ರವಾಗಿದೆ. ಇಲ್ಲಿ ಗಣಿತವಿದೆ. ಇಲ್ಲಿ ವಿಜ್ಞಾನವಿದೆ. ಮನಶ್ಯಾಸ್ತ್ರವಿದೆ. ಜೀವನವನ್ನು ಯಾವ ರೀತಿಯಾಗಿ ನಡೆಸಿದರೆ ಒಳಿತು ಎನ್ನುವುದರ ಸಂದೇಶವಿದೆ.

SWOT analysis  (strengths, weaknesses, opportunities and threats  ಅನಾಲಿಸಿಸ್ )ಎನ್ನುವುದು management ತರಗತಿಗಳಲ್ಲಿ ಬಹಳ ಬಳಕೆಯಲ್ಲಿರುವ ತಂತ್ರವಾಗಿದೆ. ಯಾವುದೇ ಪ್ರಾಜೆಕ್ಟ್ ಅಥವಾ ವ್ಯವಹಾರಗಳಲ್ಲಿ ಇದು ಬಳಕೆಯಾಗುತ್ತದೆ. ಜ್ಯೋತಿಷ್ಯವನ್ನು ನಾವು   ಜೀವನದ   SWOT analysis   ಎಂದು ಕರೆಯಬಹುದಾಗಿದೆ.    ಬಲ ,ನಮ್ಮಲ್ಲಿರುವ ಪ್ರತಿಭೆ ಇತ್ಯಾದಿ , ನಮ್ಮ ಬಲಹೀನತೆಗಳು ,ನಮಗಿರುವ ಅವಕಾಶಗಳು ಮತ್ತು ಅಪಾಯಗಳು  ಇವುಗಳನ್ನು ಸರಿಯಾಗಿ ತಿಳಿದುಕೊಂಡಲ್ಲಿ ಜೀವನವನ್ನು ಸುಂದರವಾಗಿಸಬಹುದು.  ಸಾಮಾನ್ಯವಾಗಿ ಜ್ಯೋತಿಷಿಯ ಬಳಿಗೆ ಸಲಹೆಗೆ ಬರುವವರು ಏನಾದರೂ ಸಮಸ್ಯೆಯಿದ್ದಾಗಲೇ. ಅಂತಹವರನ್ನು ಮತ್ತಷ್ಟು ಹೆದರಿಸಿ ಕಳುಹಿಸಿದರೆ ಈ ಶಾಸ್ತ್ರಕ್ಕೆ ಅಗೌರವ ಸಲ್ಲಿಸಿದಂತೆಯೆ. ಜ್ಯೋತಿಷಿಯ ಕನಿಷ್ಠ ಸಾಮಾಜಿಕ ಜವಾಬ್ದಾರಿಯೆಂದರೆ ಒಬ್ಬ ಉತ್ತಮ ಸಮಾಲೋಚಕನಂತೆ ವ್ಯವಹರಿಸುವುದು. ಬಂದ ವ್ಯಕ್ತಿಗೆ ಮನಸ್ಸಿಗೆ ಸಮಾಧಾನವಾಗಿ ಜೀವನದ ಬಗ್ಗೆ ಸಕಾರಾತ್ಮಕ ಧೋರಣೆ ಉಂಟಾಗುವಂತೆ  ಮಾಡುವುದು. ಅಂತಹ ಉತ್ತಮ ಜ್ಯೋತಿಷಿಗಳು ನಮ್ಮ ನಡುವೆಯೇ ಇದ್ದಾರೆ. 

ಜ್ಯೋತಿಷ್ಯದ ಬಗೆಗಿನ ಕಾರ್ಯಕ್ರಮಗಳು  ಟಿ.ವಿ.ಯಲ್ಲಿ ಎಷ್ಟರ ಮಟ್ಟಿಗೆ ಜನಪ್ರಿಯವಾಗಿವೆಯೆಂದರೆ ಬಹುತೇಕ ಹೆಚ್ಚಿನ ಚಾನಲ್ ಗಳಲ್ಲಿ ಇದಕ್ಕೇ ಸಮಯವನ್ನು ಮೀಸಲಾಗಿಡಲಾಗುತ್ತಿದೆ.  ಚಿತ್ರ ವಿಚಿತ್ರ ವೇಷ ತೊಟ್ಟ ಅಸಂಬದ್ಧವಾಗಿ ಮಾತಾಡುವ 'ಟಿ.ವಿ. ' ಜ್ಯೋತಿಷಿಗಳು ಟಿ.ವಿ. ಪರದೆಯಲ್ಲಿ ಮೋಡಿಬರುತ್ತಾರೆ. ತಾವೇ ದೈವಾಂಶ ಸಂಭೂತರೋ ಏನೋ ಅನ್ನುವ ಮಟ್ಟಿಗೆ ತಮ್ಮ ಅತ್ಯುನ್ನತ ಮಟ್ಟದ ಜ್ಞಾನ ಪ್ರದರ್ಶನವನ್ನು (?)   ಮಾಡುತ್ತಾರೆ. ಸಮಾಜಕ್ಕೆ ಇದರಿಂದ ಯಾವ ರೀತಿಯ ಸಂದೇಶವನ್ನು ತಾವು ನೀಡುತ್ತಿದ್ದೇವೆ ಅನ್ನುವ ಅರಿವು ಆ ಜ್ಯೋತಿಷಿಗಳಿಗೆ ಮೊದಲೇ ಇಲ್ಲ. ಕಡೆಪಕ್ಷ  ಅಂತಹ ಕಾರ್ಯಗಳನ್ನು ಪ್ರಸಾರ ಮಾಡುವ ಚಾನಲ್ ಗಳಿಗಾದರೂ ಅಷ್ಟರ ಮಟ್ಟಿನ ವಿವೇಚನೆ ಇಲ್ಲವಲ್ಲ ಎಂದು ಖೇದವಾಗುತ್ತದೆ.

ಇತ್ತೀಚೆಗಷ್ಟೇ ಟಿ.ವಿ, ಚಾನಲ್ ನಲ್ಲಿ ಜ್ಯೋತಿಷ್ಯದ ಬಗ್ಗೆ ಕರ್ಯಕ್ರಮವೊಂದು ಪ್ರಸಾರವಾಯಿತು. ಅದು ಎಷ್ಟರ ಮಟ್ಟಿಗಿನ ಮಟ್ಟಿಗೆ ಕೆಟ್ಟದಾಗಿತ್ತೆಂ ದರೆ  ಆದರೆ ಬಗ್ಗೆ ಬರೆಯಲು ಅಸಹ್ಯವಾಗುತ್ತಿದೆ. ಸಮಾಜದಲ್ಲಿ ನಡೆಯುವ ಅತ್ಯಾಚಾರಗಳ ಬಗ್ಗೆ ಯಾವ ರಾಶಿಯವರಿಗೆ ಎಲ್ಲಿ ಯಾರಿಂದ ಅತ್ಯಾಚಾರವಾಗುತ್ತದೆ  ಇತ್ಯಾದಿ ವಿಷಯಗಳ ಬಗ್ಗೆ ಟಿ.ವಿ.ವಾಹಿನಿಯು ಆ ಕಾರ್ಯಕ್ರವನ್ನು ಪ್ರಸಾರ ಮಾಡುತ್ತಲೇ ಇತ್ತು. ಆಗ ನನ್ನ ಮನದಲ್ಲೆದ್ದ ಪ್ರಶ್ನೆಗಳು ಹಲವಾರು.

೧. ಯಾವುದೇ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮುನ್ನ ಅದು ಪ್ರಸಾರಕ್ಕೆ ಸೂಕ್ತವೆ ಅಲ್ಲವೇ ಎಂದು ವಾಹಿನಿಯ ವಿಭಾಗದವರು ನೋಡುವುದಿಲ್ಲವೇ ?
೨.ನಕಾರತ್ಮಕ ಸಂದೇಶವನ್ನು ಜನತೆಗೆ ನೀಡುತ್ತ 'ಕೆಟ್ಟ ಸಮಾಜ' ದ ನಿರ್ಮಾಣ ಮಾಡುತ್ತಿದ್ದೇವೆ ಎಂಬ ಕನಿಷ್ಠ ತಿಳುವಳಿಕೆ ವಾಹಿನಿಗೆ ಇರುವುದಿಲ್ಲವೇ ?
೩. ಟಿಽಅರ್.ಪಿ  , ದುಡ್ಡು ಇತ್ಯಾದಿ ಗಳ ಬಗ್ಗೆ ಬಹಳಷ್ಟು ಯೋಚನೆ ಇದೆಎಂದಾದಲ್ಲಿ  'ಉತ್ತಮ ಸಮಾಜ' ನಿರ್ಮಾಣದ ಬಗೆಗಿನ ಕಾರ್ಯಕ್ರಮಗಳನ್ನು ನೀಡಿಯೂ ಅವರ 'target ' ತಲುಪಬಹುದಲ್ಲವೇ ?

ನಾನು ಜ್ಯೋತಿಷ್ಯ ಶಾಸ್ತ್ರದ ವಿದ್ಯಾರ್ಥಿನಿ ಕೂಡ . ಕೀಳು  ಅಭಿರುಚಿಯ, ಜನರನ್ನು ತಪ್ಪುದಾರಿಗೊಯ್ಯುವ , ಅದಕ್ಕೂ ಮೇಲಾಗಿ ನಾನು ಅಧ್ಯಯನ ಮಾಡುತ್ತಿರುವ ಇಂತಹ ವಿಶೇಷವಾದ ವಿಜ್ಞಾನ ಶಾಸ್ತ್ರದ ಬಗೆಗಿನ ಅಗೌರವ ಸಲ್ಲುವಂತಹ ಕಾರ್ಯಕ್ರಮದ ಬಗ್ಗೆ ಸುಮ್ಮನಿರಲು ಸಾಧ್ಯವಾಗಲಿಲ್ಲ. ಇಂತಹ ಕಪಟ ಟಿ.ವಿ. ಜ್ಯೋತಿಷಿಗಳ ಬಗ್ಗೆ ಮತ್ತು ಅಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಟಿ.ವಿ. ವಾಹಿನಿಯವರಿಗೆ ನನ್ನ ಧಿಕ್ಕಾರ.