ಅರ್ಚನಾ

Friday, January 8, 2010

ಹಗಲುಗನಸು...

ಜನವರಿ ೮, ವಿಜಯಕರ್ನಾಟಕ ಲವಲವಿಕೆ ವಿಭಾಗ ಬೆಂಗಳೂರು ವಿಜಯದಲ್ಲಿ ಪ್ರಕಟವಾಗಿದೆ.
ಆದರೆ ಅಲ್ಲಿ ನನ್ನ ಹೆಸರು ಬಿಟ್ಟು ಹೋಗಿರುವುದು ಸ್ವಲ್ಪ ಬೇಜಾರು..
ಆದರೆ ಒಂದು ಪ್ರಶ್ನೆ:ಹೆಸರಿನಲ್ಲೇನಿದೆ?!!



Saturday, January 2, 2010

ಕೃಷಿಯಲ್ಲದ ಕೃಷಿ..

ಈ ಲೇಖನ ೭-ಜನವರಿ-೨೦೧೦ ರ ಸುಧಾ ವಾರಪತ್ರಿಕೆ ಪುಟ ಸಂಖ್ಯೆ ೭೨ ರಲ್ಲಿ ಪ್ರಕಟವಾಗಿದೆ. ಓದಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ..

Sunday, December 27, 2009

ಕನಸಿನ ಉದ್ಯೋಗ..

ಈ ಲೇಖನ ೨೭-ಡಿಸೆಂಬರ್-೨೦೦೯ ರ ವಿಜಯಕರ್ನಾಟಕ-ಲವಲವಿಕೆಯಲ್ಲಿ ಪ್ರಕಟವಾಗಿದೆ. ಓದಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ..

Thursday, November 5, 2009

ಬಗೆ ಬಗೆ ಸಲಾಡ್

’ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’

ಮೊಳೆತ ಕಾಳು, ಹಸಿ ತರಕಾರಿ ಇವುಗಳು ಆರೋಗ್ಯಕ್ಕೆ ಅತೀ ಉತ್ತಮ. ಬಗೆ ಬಗೆಯ ವಿಟಮಿನ್ ಗಳಿಂದ ಸಮೃದ್ಧವಾಗಿರುವ ಇವುಗಳನ್ನು ಸಲಾಡ್ ರೂಪದಲ್ಲಿ ಬಳಸಿಕೊಳ್ಳಬಹುದು. ನಾಲಗೆಗೂ ರುಚಿ, ಶರೀರಕ್ಕೂ ಹಿತವೆನಿಸುವ ಬಗೆ ಬಗೆಯ ಸಲಾಡ್ ಗಳನ್ನೂ ಮಾಡುವ ವಿಧಾನವನ್ನು ಅರಿತುಕೊಳ್ಳೋಣ..

---------------------------------
೧.ಹೆಸರು, ದಾಳಿಂಬೆ , ಕಡಲೆ ಬೇಳೆ ಸಲಾಡ್
----------------------------------




ಬೇಕಾಗುವ ಪದಾರ್ಥಗಳು
ದಾಳಿಂಬೆ ಬೀಜಗಳು :ಒಂದು ಹಿಡಿ
ಮೊಳೆತ ಹೆಸರು ಕಾಳು :ಎರಡು ಹಿಡಿ
ಕಡಲೆ ಬೇಳೆ :ಒಂದು ಹಿಡಿ
ಕೊತ್ತಂಬರಿ ಸೊಪ್ಪು :ಸ್ವಲ್ಪ
ಹಸಿ ಮೆಣಸು :ಎರಡು
ನಿಂಬೆ ರಸ :ಒಂದು ಚಮಚ
ಗೇರು ಬೀಜ : ನಾಲ್ಕು

ವಿಧಾನ :
೧.ಹೆಸರು ಕಾಳನ್ನು ಸುಮಾರು ಎಂಟು ಗಂಟೆಗಳ ಕಾಲ ನೆನೆಸಿ,ಮೊಳಕೆ ಬರಿಸಿ.
೨.ಕಡಲೆ ಬೇಳೆಯನ್ನು ಸುಮಾರು ಎರಡು ಗಂಟೆಗಳ ಕಾಲ ನೆನೆಸಿ .
೩.ಮೊಳೆತ ಹೆಸರು ಕಾಳು, ನೆನೆದ ಕಡಲೆ ಬೇಳೆ, ದಾಳಿಂಬೆ ಬೀಜಗಳು,ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ,ಉದ್ದಕ್ಕೆ ಹೆಚ್ಚಿದ ಹಸಿ ಮೆಣಸು ಇವುಗಳನ್ನು ಮಿಶ್ರ ಮಾಡಿ.
೪.ಇದಕ್ಕೆ ನಿಂಬೆ ರಸ,ಉಪ್ಪು, ಗೇರು ಬೀಜ ಹಾಕಿ ಕಲಸಿ .

ವಿ.ಸೂ. ಹಸಿ ಮೆಣಸು ಹೆಚ್ಚುವಾಗ ಉದ್ದಕ್ಕೆ ಹೆಚ್ಚಿದರೆ ಒಳ್ಳೆಯದು. ಏಕೆಂದರೆ ಸಣ್ಣಗೆ ಹೆಚ್ಚಿದರೆ ಮೆಣಸಿನ ಚೂರು ಎಂದು ಗೊತ್ತಾಗದೆ ಕಚ್ಚಿ ಖಾರ ನೆತ್ತಿಗೇರುತ್ತದೆ.


------------------------------------------------------------
2.ಕೇಸರಿ , ಬಿಳಿ, ಹಸಿರು ಸಲಾಡ್
------------------------------------------------------------

ಬೇಕಾಗುವ ಪದಾರ್ಥಗಳು
ಕೇಸರಿ ಬಣ್ಣಕ್ಕೆ : ಕ್ಯಾರೆಟ್ ತುರಿ : ಎರಡು ಲೋಟ
ಬಿಳಿ : ತೆಂಗಿನ ತುರಿ : ಕಾಲು ಲೋಟ,ಉಪ್ಪು :ರುಚಿಗೆ ತಕ್ಕಷ್ಟು , ಮೊಸರು :ಸ್ವಲ್ಪ
ಹಸಿರು :ಮೊಳೆತ ಹೆಸರು ಕಾಳು :ಅರ್ಧ ಲೋಟ, ಕೊತ್ತಂಬರಿ ಸೊಪ್ಪು :ಸ್ವಲ್ಪ , ಹಸಿ ಮೆಣಸು :ಎರಡು

ವಿಧಾನ

ಕೇಸರಿ,ಬಿಳಿ, ಹಸಿರು ವಸ್ತುಗಳನ್ನು ಸೇರಿಸಿ, ಕಲಸಿ. ಮೊಸರಿನ ಬದಲು ನಿಂಬೆ ರಸವನ್ನು ಕೂಡ ಬಳಸಬಹುದು.


----------------------------------------------
೩. ಸೌತೆ -ಹೆಸರು ಬೇಳೆ ಕೋಸಂಬರಿ
-----------------------------------------------

ಕಾಲು ಲೋಟ :ಹೆಸರು ಬೇಳೆ
ಸಣ್ಣಗೆ ಹೆಚ್ಚಿದ ಮುಳ್ಳು ಸೌತೆ :ಅರ್ಧ ಲೋಟ
ತೆಂಗಿನ ತುರಿ :೩ ಚಮಚ
ಕೊತ್ತಂಬರಿ ಸೊಪ್ಪು :ಸ್ವಲ್ಪ
ಸಣ್ಣಗೆ ಹೆಚ್ಚಿದ ಶು೦ಠಿ :ಎರಡು ಚಮಚ
ನಿಂಬೆ ರಸ :ಒಂದು ಚಮಚ
ರುಚಿಗೆ ತಕ್ಕಷ್ಟು ಉಪ್ಪು

ಒಗ್ಗರಣೆಗೆ
ಎಣ್ಣೆ :ಎರಡು ಚಮಚ
ಸಾಸಿವೆ:ಒಂದು ಚಮಚ
ಜೀರಿಗೆ:ಒಂದು ಚಮಚ
ಕೆಂಪು ಮೆಣಸು:ಮೂರು
ಬೇವಿನೆಲೆ: ಹತ್ತು ಎಸಳು



ವಿಧಾನ :
ಹೆಸರು ಬೇಳೆಯನ್ನು ನೀರಿನಲ್ಲಿ ಸುಮಾರು ೩ ಗಂಟೆಗಳ ಕಾಲ ನೆನೆಸಿ.
ನೆನೆದ ಹೆಸರು ಬೇಳೆ ,ಸಣ್ಣಗೆ ಹೆಚ್ಚಿದ ಮುಳ್ಳು ಸೌತೆ,ತೆಂಗಿನ ತುರಿ,ಕೊತ್ತಂಬರಿ ಸೊಪ್ಪು ,ಸಣ್ಣಗೆ ಹೆಚ್ಚಿದ ಶು೦ಠಿ ,ನಿಂಬೆ ರಸ ,ರುಚಿಗೆ ತಕ್ಕಷ್ಟು ಉಪ್ಪು ಇವುಗಳನ್ನು ಚೆನ್ನಾಗಿ ಕಲಸಿ.
ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ಸಾಸಿವೆ, ಜೀರಿಗೆ ,ಕತ್ತರಿಸಿದ ಕೆಂಪು ಮೆಣಸು ಹಾಕಿ. ಸಾಸಿವೆ ಚಟಪಟ ಸಿಡಿಯುತ್ತಿದ್ದಂತೆ ಬೇವಿನೆಲೆ ಹಾಕಿ. ಇದನ್ನು ಕಲಸಿಟ್ಟ ಬೆಳೆಯ ಮಿಶ್ರಣಕ್ಕೆ ಹಾಕಿ.
ಸಮಾರಂಭಗಳಿಗೆ ಈ ಥರದ ಕೋಸಂಬರಿಯನ್ನು ಹೆಚ್ಚಾಗಿ ಮಾಡುತ್ತಾರೆ. ಹೆಸರು ಬೆಳೆಯ ಬದಲು ಕಡಲೆ ಬೇಳೆಯನ್ನು ಬಳಸಬಹುದು.

-------------------------------------
೪.ಟೋಮಾಟೊ -ನೀರುಳ್ಳಿ ಸಲಾಡ್
-------------------------------------
ಟೊಮ್ಯಾಟೋ :ಒಂದು
ನೀರುಳ್ಳಿ :ಒಂದು
ಹಸಿ ಮೆಣಸು :ಒಂದು
ನಿಂಬೆ ರಸ :ಒಂದು ಚಮಚ
ಉಪ್ಪು :ರುಚಿಗೆ ತಕ್ಕಷ್ಟು
ವಿಧಾನ
ಟೋಮಾಟೊ ,ನೀರುಳ್ಳಿ ,ಕೊತ್ತಂಬರಿ ಸೊಪ್ಪು,ಹಸಿ ಮೆಣಸು ಇವುಗಳನ್ನು ಸಣ್ಣಗೆ ಹೆಚ್ಚಿ ಕಲಸಿ. ಉಪ್ಪು, ನಿಂಬೆ ರಸ ಬೆರೆಸಿ ಮಿಶ್ರ ಮಾಡಿ .ಟೋಮಾಟೊ ನೀರುಳ್ಳಿ ಸಲಾಡ್ ತಯಾರು.
--------------------------------------

೫.ಫ್ರುಟ್ ಸಲಾಡ್

-------------------------------------
ಬಾಳೆ ಹಣ್ಣು, ಸೇಬು, ಕಿತ್ತಳೆ ತೊಳೆ,ಅನಾನಸು ಇವುಗಳನ್ನು ಸಣ್ಣಗೆ ಹೆಚ್ಚಿ ,ಮಿಶ್ರ ಮಾಡಿ.
ಇದಕ್ಕೆ ಸ್ವಲ್ಪ ದಾಳಿಂಬೆ ಬೀಜ, ದ್ರಾಕ್ಷಿ,ಚೆರ್ರಿ ಇವುಗಳನ್ನು ಹಾಕಿ ಕಲಕಿ. ಇದಕ್ಕೆ
ಸ್ವಲ್ಪ ಸಕ್ಕರೆ ಹಾಕಿ. ಸವಿಯಿರಿ. ಬೇಕಿದ್ದರೆ ನಿಮ್ಮ ಇಷ್ಟದ ಐಸ ಕ್ರೀಮ್ ಬೆರೆಸಿ ಸವಿಯಿರಿ.

-----------------------------------
೬.ಕಾರ್ನ್ ,ಅವಕಾಡೋ(ಬೆಣ್ಣೆ ಹಣ್ಣು ) ಸಲಾಡ್
-------------------------------------

ಬೇಕಾಗುವ ವಸ್ತುಗಳು
ಕಾರ್ನ್ (ಜೋಳ ) :ಎರಡು ಲೋಟ
ಅವಕಾಡೋ :ಒಂದು
ಟೋಮಾಟೊ :ಒಂದು
ನೀರುಳ್ಳಿ :ಒಂದು
ಆಲಿವ್ ಎಣ್ಣೆ :ಒಂದು ಚಮಚ
ಉಪ್ಪು :ರುಚಿಗೆ ತಕ್ಕಷ್ಟು
ಕಾಳುಮೆಣಸು ಪುಡಿ :ಸ್ವಲ್ಪ
ನಿಂಬೆ ರಸ :ಸ್ವಲ್ಪ
ಕೊತ್ತಂಬರಿ ಸೊಪ್ಪು :ಸ್ವಲ್ಪ

ವಿಧಾನ :
ಜೋಳವನ್ನು ನೀರಿನಲ್ಲಿ ಬೇಯಿಸಿ.
ಬೆಂದ ಜೋಳವನ್ನು ಹೋರತೆಗೆದು ,ಅದಕ್ಕೆ ಸಣ್ಣಗೆ ಹೆಚ್ಚಿದ ಅವಕಾಡೋ, ನೀರುಳ್ಳಿ,ಟೋಮಾಟೊ,ಕಾಳು ಮೆಣಸಿನ ಪುಡಿ,ಉಪ್ಪು, ನಿಂಬೆ ರಸ ,ಕೊತ್ತಂಬರಿ ಸೊಪ್ಪು ,ಆಲಿವ್ ಎಣ್ಣೆ ಇವುಗಳನ್ನು ಒಟ್ಟಿಗೆ ಬೆರೆಸಿ.

----------------------------------------

೭. ಸೀಬೆಹಣ್ಣು ಮತ್ತು ಮೊಳೆತ ಕಾಳುಗಳ ಸಲಾಡ್

--------------------------------------
ಹೆಸರು ಕಾಳು ,ಕಾಬುಲ್ ಕಡಲೆ ತಲಾ ಒಂದು ಹಿಡಿ
ಸೀಬೆ ಹಣ್ಣು :ಒಂದು
ಚಾಟ್ ಮಸಾಲ : ಚಿಟಿಕೆ
ಉಪ್ಪು ,ನಿಂಬೆ ರಸ :ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು :ಸ್ವಲ್ಪ

ವಿಧಾನ : ಹೆಸರು ಕಾಳು ಮತ್ತು ಕಡಲೆ ಕಾಳುಗಳನ್ನು ಸುಮಾರು ಎಂಟು ಗಂಟೆಗಳ ಕಾಲ ನೆನೆಸಿ, ಮೊಳಕೆ ಬರಿಸಬೇಕು.
ಇದಕ್ಕೆ ಸಣ್ಣಗೆ ಹೆಚ್ಚಿದ ಸೀಬೆ ಹಣ್ಣು, ಚಾಟ್ ಮಸಾಲ, ಉಪ್ಪು, ಕೊತ್ತಂಬರಿ ಸೊಪ್ಪು,ನಿಂಬೆ ರಸ ಇವುಗಳನ್ನು ಹಾಕಿ ಕಲಕಿ.


-------------------------------------

೮. ನೆಲ ಕಡಲೆ ಸಲಾಡ್

-------------------------------------
ಬೇಕಾಗುವ ಪದಾರ್ಥಗಳು
ನೆಲಕಡಲೆ (ಶೇಂಗಾ) :ಎರಡು ಹಿಡಿ
ನೀರುಳ್ಳಿ : ಒಂದು
ಹಸಿ ಮೆಣಸು :ಎರಡು
ಟೊಮೇಟೊ :ಒಂದು
ಕೊತ್ತಂಬರಿ ಸೊಪ್ಪು :ಸ್ವಲ್ಪ
ನಿಂಬೆ ರಸ :ಒಂದು ಚಮಚ
ತೆಂಗಿನ ತುರಿ :ಎರಡು ಚಮಚ
ವಿಧಾನ :
ಎರಡು ಹಿಡಿ ನೆಲಕಡಲೆಯನ್ನು ನೀರಿನಲ್ಲಿ ಸುಮಾರು ಎರಡು ಗಂಟೆಗಳ ನೆನೆಸಿಡಿ.
ನೆನೆದ ನೆಲಕಡಲೆಗೆ ಸಣ್ಣಗೆ ಕತ್ತರಿಸಿದ ಈರುಳ್ಳಿ ಹಾಕಿ .
ಇದಕ್ಕೆ ಹೆಚ್ಚಿದ ಹಸಿ ಮೆಣಸು,
ತೆಂಗಿನ ತುರಿ,ಟೊಮೇಟೊ ಮತ್ತು ನಿಂಬೆರಸ ,ಉಪ್ಪು ಹಾಕಿ ಕಲಸಿ. ಸ್ವಾದಿಷ್ಟಕರ ನೆಲ ಕಡಲೆ ಸಲಾಡ್ ತಯಾರು !
-----------------------------------------------------------
೯.ಲೇಟಯೂಸ್ ಸಲಾಡ್
----------------------------------------------------------

ಇದು ಇಟಾಲಿಯನ್ ಸಲಾಡ್ .
ಬೇಕಾಗುವ ವಸ್ತುಗಳು

ಲೆಟ್ ಯೂಸ್ ಎಲೆ :ಒಂದು
ಬೆಳ್ಳುಳ್ಳಿ :ಎರಡು ಎಸಳು
ಒರೆಗಾನೋ : ಚಿಟಿಕೆ (ಇದು ಒಂದು ರೀತಿಯ ಸಾಂಬಾರ ಪದಾರ್ಥ )
ಕಾಳು ಮೆಣಸು:ಚಿಟಿಕೆ
ಆಲಿವ್ ಎಣ್ಣೆ :ಎರಡು ಚಮಚ
ಉಪ್ಪು :ರುಚಿಗೆ ತಕ್ಕಷ್ಟು
ವಿನೆಗರ್ :ಒಂದು ಚಮಚ
ವಿಧಾನ :
ಲೆಟ್ ಯೂಸ್ ಎಲೆ ಮತ್ತು ಬೆಳ್ಳುಳ್ಳಿಯನ್ನು
ಸಣ್ಣಗೆ ಹೆಚ್ಚಿ. ಉಳಿದ ವಸ್ತುಗಳನ್ನೆಲ್ಲ ಹಾಕಿ ಕಲಕಿ. ಸಲಾಡ್ ತಯಾರು.

-------------------------
೧೦.ವೆಜಿಟೇಬಲ ಸಲಾಡ್
-------------------------
ಬೇಕಾಗುವ ವಸ್ತುಗಳು
ಸಣ್ಣಗೆ ಹೆಚ್ಚಿದ ಕ್ಯಾಬೇಜ್ , ನೀರುಳ್ಳಿ,ಟೋಮಾಟೊ, ಸೌತೆ, ಕ್ಯಾರೆಟ್ :ತಲಾ ಅರ್ಧ ಲೋಟ
ಚಾಟ್ ಮಸಾಲ :ಸ್ವಲ್ಪ
ಉಪ್ಪು :ರುಚಿಗೆ ತಕ್ಕಷ್ಟು
ನಿಂಬೆ ರಸ :ಒಂದು ಚಮಚ
ಕೊತ್ತಂಬರಿ ಸೊಪ್ಪು :ಸ್ವಲ್ಪ
ಕಾಳು ಮೆಣಸು ಪುಡಿ :ಸ್ವಲ್ಪ

ವಿಧಾನ
ಮೇಲೆ ಸೂಚಿಸಿದ ಎಲ್ಲಾ ವಸ್ತುಗಳನ್ನು ಒಟ್ಟಿಗೆ ಹಾಕಿ ಕಲಕಿ.

Friday, October 16, 2009

ತಂಬುಳಿ


'ಸಖಿ ' ಪಾಕ್ಷಿಕ (october 1-15 ) 'ಹೊಟ್ಟೆಗೆ ಹಿಟ್ಟು' ಅಂಕಣದಲ್ಲಿ ಪ್ರಕಟಿತ


ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಬಹುವಾಗಿ ಬಳಕೆಯಲ್ಲಿರುವ ಒಂದು ಬಗೆಯ ಮೇಲೋಗರಕ್ಕೆ ತಂಬುಳಿ ಎಂದು ಹೆಸರು.
ಬಿಸಿ ಬಿಸಿ ಅನ್ನಕ್ಕೆ ತಂಪಾದ ಈ ತಂಬುಳಿಯನ್ನು ಕಲಸಿಕೊಂಡು ಊಟ ಮಾಡುವುದೆಂದರೆ..ಆಹಾ..ಎಂಥ ರುಚಿ!! ಹಲವು ವಿಧದ ಸೊಪ್ಪು, ಚಿಗುರುಗಳನ್ನು ಬಳಸಿ ತಂಬುಳಿ ಮಾಡುವಲ್ಲಿ ಮಲೆನಾಡು ಮತ್ತು ಕರಾವಳಿ ಪ್ರದೇಶದವರು ಸಿದ್ಧ ಹಸ್ತರು. "ತಂಬುಳಿ ಅಂಥ ಊಟವಿಲ್ಲ. ಕಂಬಳಿ ಅಂಥ ಹೊದಿಕೆಯಿಲ್ಲ " ಎಂಬ ಗಾದೆ ಜನಪ್ರಿಯವಾಗಿದೆ.
ನನ್ನ ಸಹೋದ್ಯೋಗಿ ಮಿತ್ರರಾದ ಶ್ರೀ ರವಿರಾಜ ಭಟ್ಟರು ತಂಬುಳಿ ಬಗ್ಗೆ ಈ ರೀತಿ ಬರೆದಿದ್ದಾರೆ :

ತಾರಕ್ಕ ತಂಬುಳಿ
ನಾ ಊಟಕ್ಕೆ ಬರುವೆನು
ತಾರೆ ತಂಬುಳಿಯಾ

ತಂಬುಳಿ ಹೀರಿದರೆ
ತಲೆಯೆ ತಂಪು
ತಾರೆ ತಂಬುಳಿಯಾ

ಬೇಸಿಗೆಯ ಬಿಸಿಲಿಗೆ
ತಂಪಾದ ತಂಬುಳಿ
ತಾರೆ ತಂಬುಳಿಯಾ

ನಾಲಗೆಗೆ ರುಚಿ ಆರೋಗ್ಯಕ್ಕೆ ಹಿತಕರವಾಗಿರುವ ತಂಬುಳಿಯನ್ನು ತಯಾರಿಸುವುದು ಅತ್ಯಂತ ಸುಲಭ. ಇದರ ಮೂಲವಸ್ತು ತೆಂಗಿನ ತುರಿ, ಜೀರಿಗೆ , ಮಜ್ಜಿಗೆ ಮತ್ತು ಒಗ್ಗರಣೆ. ವಿಧಾನ ಒಂದೇ ರೀತಿಯಾಗಿದ್ದರೂ , ಕೆಲವನ್ನು ಹುರಿದು, ಕೆಲವನ್ನು ಬೇಯಿಸಿ, ಕೆಲವನ್ನು ಸುಟ್ಟು ಹೀಗೆ ಕೊಂಚ ವ್ಯತ್ಯಾಸಗಳಿವೆ.
ಬನ್ನಿ, ವಿಧ ವಿಧ ರೀತಿಯ ತಂಬುಳಿಗಳನ್ನು ಮಾಡಿ ಸವಿಯೋಣ.

-----------------------------------
೧. ಮೆಂತೆ ತಂಬುಳಿ
-----------------------------------





ಬೇಕಾಗುವ ಸಾಮಗ್ರಿಗಳು
ಮೆಂತೆ:ಅರ್ಧ ಚಮಚ
ಮಜ್ಜಿಗೆ:ಎರಡು ಲೋಟ
ತೆಂಗಿನ ಕಾಯಿ ತುರಿ:ಅರ್ಧ ಲೋಟ
ಉಪ್ಪು:ರುಚಿಗೆ ತಕ್ಕಷ್ಟು
ಬೆಲ್ಲ :ಒಂದು ಸಣ್ಣ ಚೂರು

ಒಗ್ಗರಣೆಗೆ:ಎಣ್ಣೆ :ಒಂದು ಚಮಚ
ಬೇವಿನೆಲೆ :೬ ಎಸಳು
ಜೀರಿಗೆ:ಅರ್ಧ ಚಮಚ
ಸಾಸಿವೆ:ಅರ್ಧ ಚಮಚ
ಕೆಂಪು ಮೆಣಸು :2

ವಿಧಾನ :
೧.ಮೆಂತೆಯನ್ನು ಹುರಿದುಕೊಂಡು, ತೆಂಗಿನಕಾಯಿ ತುರಿಯ ಜತೆ ರುಬ್ಬಿ.
೨.ಈ ಮಿಶ್ರಣಕ್ಕೆ ಮಜ್ಜಿಗೆ,ಉಪ್ಪು ಹಾಕಿ ಕಲಸಿ.
೩.ಸಣ್ಣ ಪಾತ್ರೆಯಲ್ಲಿ/ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ,ಬಿಸಿಯಾಗುತ್ತಿದ್ದಂತೆ,ಸಾಸಿವೆ,ಜೀರಿಗೆ,ಕೆಂಪು ಮೆಣಸು ಹಾಕಿ. ಸಾಸಿವೆ ಚಟಪಟ ಎನ್ನುತ್ತಿದ್ದಂತೆ,ಬೇವಿನ ಎಸಳು ಹಾಕಿ
೪.ಇದನ್ನು ರುಬ್ಬಿ ಇಟ್ಟ ಮಿಶ್ರಣಕ್ಕೆ ಹಾಕಿ. ಬೆಲ್ಲವನ್ನು ಪುಡಿ ಮಾಡಿ ಹಾಕಿ ಚೆನ್ನಾಗಿ ಕಲಕಿ.
೫.ಇದೇ ತಂಬುಳಿ.ಇನ್ನೇಕೆ ತಡ..ಅನ್ನದ ಜತೆ ಕಲಸಿ ತಿನ್ನಿ .

ಮೆಂತೆ ಕಹಿಯಿರುವ ಕಾರಣ ಪ್ರಮಾಣದ ಬಗ್ಗೆ ಎಚ್ಚರಿಕೆ ವಹಿಸಿ. ಸ್ವಲ್ಪ ಜಾಸ್ತಿ ಹಾಕಿದರೂ ತಂಬುಳಿ ಕಹಿಯಾಗುತ್ತದೆ. ಬೇಕಿದ್ದರೆ ಕಾಲು ಚಮಚ ಜೀರಿಗೆ, ಕಾಲು ಚಮಚ ಕಾಳು ಮೆಣಸನ್ನು ಕೂಡ ಮೆಂತೆ ಜತೆ ಹುರಿದು ಒಟ್ಟಿಗೆ ರುಬ್ಬಬಹುದು.

-----------------------------------
೨.ಶುಂಠಿ ತಂಬುಳಿ
----------------------------------


ಬೇಕಾಗುವ ಸಾಮಗ್ರಿಗಳು
ಶುಂಠಿ :ಒಂದು ಇಂಚು
ಜೀರಿಗೆ:ಒಂದು ಚಮಚ
ಹಸಿ ಮೆಣಸು :ಒಂದು
ಮಜ್ಜಿಗೆ:ಎರಡು ಲೋಟ
ತೆಂಗಿನ ಕಾಯಿ ತುರಿ:ಕಾಲು ಲೋಟ
ಉಪ್ಪು:ರುಚಿಗೆ ತಕ್ಕಷ್ಟು

ಒಗ್ಗರಣೆಗೆ:ಎಣ್ಣೆ :ಒಂದು ಚಮಚ
ಬೇವಿನೆಲೆ :೬ ಎಸಳು
ಜೀರಿಗೆ:ಅರ್ಧ ಚಮಚ
ಸಾಸಿವೆ:ಅರ್ಧ ಚಮಚ
ಇಂಗು :ಚಿಟಿಕೆ


ವಿಧಾನ :
೧. ಶುಂಠಿ,ಜೀರಿಗೆ,ಹಸಿ ಮೆಣಸು,ತೆಂಗಿನ ಕಾಯಿ ತುರಿ ಇವುಗಳನ್ನು ನುಣ್ಣಗೆ ರುಬ್ಬಿ.
೨.ಈ ಮಿಶ್ರಣಕ್ಕೆ ಮಜ್ಜಿಗೆ,ಉಪ್ಪು ಹಾಕಿ ಕಲಸಿ.
೩.ಸಣ್ಣ ಪಾತ್ರೆಯಲ್ಲಿ/ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ,ಬಿಸಿಯಾಗುತ್ತಿದ್ದಂತೆ,ಸಾಸಿವೆ,ಜೀರಿಗೆ ಹಾಕಿ. ಸಾಸಿವೆ ಚಟಪಟ ಎನ್ನುತ್ತಿದ್ದಂತೆ,ಬೇವಿನ ಎಸಳು,ಇಂಗು ಹಾಕಿ
೪.ಇದನ್ನು ರುಬ್ಬಿ ಇಟ್ಟ ಮಿಶ್ರಣಕ್ಕೆ ಹಾಕಿ. ಕಲಸಿ.

ಅಜೀರ್ಣವಾಗಿದ್ದರೆ,ಬಾಯಿ ರುಚಿ ಕೆಟ್ಟಿದ್ದರೆ ಈ ತಂಬುಳಿ ಅತ್ಯುತ್ತಮ ಔಷಧಿ.ಮಜ್ಜಿಗೆ ಹಾಕದೆ ಗಟ್ಟಿಯಾಗಿ ಮಾಡಿದರೆ ಇದು ಶುಂಠಿ ಚಟ್ನಿ ಯಾಗುತ್ತದೆ.

--------------------------------
೩.ನೆಲ್ಲಿಕಾಯಿ ತಂಬುಳಿ
-------------------------------


ಬೇಕಾಗುವ ಸಾಮಗ್ರಿಗಳು

ನೆಲ್ಲಿಕಾಯಿ :ಹತ್ತು
ಮಜ್ಜಿಗೆ:ಎರಡು ಲೋಟ
ತೆಂಗಿನ ಕಾಯಿ ತುರಿ:ಕಾಲು ಲೋಟ
ಉಪ್ಪು:ರುಚಿಗೆ ತಕ್ಕಷ್ಟು
ಹಸಿ ಮೆಣಸು :ಒಂದು



ವಿಧಾನ :
೧.ನೆಲ್ಲಿಕಾಯಿಯನ್ನು ಕತ್ತರಿಸಿ ಬೀಜವನ್ನು ಬೇರ್ಪಡಿಸಿ.
೨.ಬೀಜರಹಿತ ನೆಲ್ಲಿಕಾಯಿ,ತೆಂಗಿನ ತುರಿ , ಹಸಿ ಮೆಣಸು, ಜೀರಿಗೆ ಇವುಗಳನ್ನು ನುಣ್ಣಗೆ ರುಬ್ಬಿ.
೩.ಇದಕ್ಕೆ ಮಜ್ಜಿಗೆ, ಉಪ್ಪು ಸೇರಿಸಿ ಕಲಕಿ.


ವಿ.ಸೂ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಈ ತಂಬುಳಿ ಸಹಕಾರಿ.
ಒಣ ನೆಲ್ಲಿಕಾಯಿಯನ್ನು ಬಳಸುವುದಾದರೆ, ಆದನ್ನು ನೀರಿನಲ್ಲಿ ೨ ಗಂಟೆಗಳ ಕಾಲ ನೆನೆಸಿ, ಬಳಿಕ ತೆಂಗಿನ ತುರಿ ಜತೆ ರುಬ್ಬಬೇಕು. ಹಸಿ ನೆಲ್ಲಿಕಾಯಿಯನ್ನು ಬೇಯಿಸಿ ಬಳಸಿದರೆ ತಂಬುಳಿಗೆ ವಿಭಿನ್ನ ರೀತಿಯ ರುಚಿ ಬರುತ್ತದೆ. ಹಸಿ ಮೆಣಸಿನ ಬದಲು ಕಾಳು ಮೆಣಸನ್ನು ಬಳಸಬಹುದು.

೪.ಸಾಂಬ್ರಾಣಿ ತಂಬುಳಿ /ಸೀಬೇಕಾಯಿ ಚಿಗುರಿನ ತಂಬುಳಿ /ಮೆಂತೆ ಸೊಪ್ಪಿನ ತಂಬುಳಿ/ ಪಾಲಕ್ ತಂಬುಳಿ

ಯಾವುದೇ ಸೊಪ್ಪಿನ ತಂಬುಳಿ ಮಾಡಬೇಕಾದಲ್ಲಿ ಒಂದು ಹಿಡಿ ಎಲೆಗಳನ್ನು ಬೆಣ್ಣೆ ಅಥವಾ ತುಪ್ಪದಲ್ಲಿ ಹುರಿದು, ತೆಂಗಿನಕಾಯಿ, ಜೀರಿಗೆ,ಹಸಿ ಮೆಣಸಿನ ಜತೆ ರುಬ್ಬಿ. ಉಪ್ಪು ಹಾಕಿ. ಒಗ್ಗರಣೆಗೆ ತುಪ್ಪ ಬಳಸಬೇಕು .


5.ಬ್ರಾಹ್ಮಿ ತಂಬುಳಿ





ತೆಂಗಿನ ತುರಿ :ಅರ್ಧ ಲೋಟ
ಬ್ರಾಹ್ಮಿ ಎಲೆ : ಅರ್ಧ ಲೋಟ
ಮೊಸರು :ಒಂದು ಲೋಟ
ಉಪ್ಪು :ರುಚಿಗೆ ತಕ್ಕಷ್ಟು
ಎಣ್ಣೆ :ಒಂದು ಚಮಚ
ಜೀರಿಗೆ :ಒಂದು ಚಮಚ
ಮಜ್ಜಿಗೆ ಮೆಣಸು :೪

ವಿಧಾನ :
ಬ್ರಾಹ್ಮಿ ಎಲೆ ಮತ್ತು ತೆಂಗಿನಕಾಯಿ ತುರಿಯನ್ನು ರುಬ್ಬಿ.
ಅದಕ್ಕೆ ಮೊಸರು, ಉಪ್ಪು ಸೇರಿಸಿ.

ಒಗ್ಗರಣೆ ಸೌಟಿನಲ್ಲಿ ಎಣ್ಣೆ, ಜೀರಿಗೆ ಹಾಕಿ, ಬಿಸಿ ಮಾಡಿ, ಬ್ರಾಹ್ಮಿ ,ಮೊಸರಿನ ಮಿಶ್ರಣಕ್ಕೆ ಹಾಕಿ.
ಮಜ್ಜಿಗೆ ಮೆಣಸನ್ನು ಕರಿದು ಅದಕ್ಕೆ ಸೇರಿಸಿ.

ಈಗ ರುಚಿಯಾದ ತಂಬುಳಿ ಸಿದ್ಧ.

ಸ್ಮರಣ ಶಕ್ತಿಯ ವೃದ್ಧಿಗೆ ಈ ತಂಬುಳಿ ಅತ್ಯುತ್ತಮ. ಬ್ರಾಹ್ಮಿ ಅಥವಾ ಒಂದೆಲಗ ಎಂದು ಕರೆಯಲ್ಪಡುವ ಈ ಎಲೆಗಳನ್ನು ಬೆಳಗ್ಗೆ ಹಸಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದು ಅತೀ ಉತ್ತಮ.

6.ಮಾವಿನ ಮಿಡಿ ತಂಬುಳಿ

ಬೇಕಾಗುವ ಸಾಮಗ್ರಿಗಳು
ಉಪ್ಪಿನಕಾಯಿಯಲ್ಲಿರುವ ಮಾವಿನ ಮಿಡಿ :೧
ತೆಂಗಿನ ತುರಿ :ಅರ್ಧ ಲೋಟ
ಮಜ್ಜಿಗೆ:ಎರಡು ಲೋಟ
ಉಪ್ಪು :ರುಚಿಗೆ ತಕ್ಕಷ್ಟು

ಒಗ್ಗರಣೆಗೆ:ಎಣ್ಣೆ :ಒಂದು ಚಮಚ
ಬೇವಿನೆಲೆ :೬ ಎಸಳು
ಜೀರಿಗೆ:ಅರ್ಧ ಚಮಚ
ಸಾಸಿವೆ:ಅರ್ಧ ಚಮಚ
ಇಂಗು :ಚಿಟಿಕೆ
ಕೆಂಪು ಮೆಣಸು :2

ವಿಧಾನ :
೧.ಮಾವಿನ ಮಿಡಿಯನ್ನು ಉಪ್ಪಿನ ಕಾಯಿಯಿಂದ ಹೊರತೆಗೆದು, ಸಣ್ಣದಾಗಿ ಹೆಚ್ಚಿ. ಅದರಲ್ಲಿ ಗೊರಟೆನಾದರೂ ಬಲಿತಿದ್ದರೆ, ಹೆಚ್ಚುವಾಗ ಜಾಗ್ರತೆವಹಿಸಿ, ಗೊರಟನ್ನು ನಿಧಾನವಾಗಿ ಹೊರತೆಗೆದು ಉಳಿದ ಮಾವಿನ ಕಾಯಿಯನ್ನು ಬಳಸಿ.
೨. ಇದನ್ನು ತೆಂಗಿನ ತುರಿಯ ಜತೆ ರುಬ್ಬಿ.
೩.ಸಣ್ಣ ಪಾತ್ರೆಯಲ್ಲಿ/ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ,ಬಿಸಿಯಾಗುತ್ತಿದ್ದಂತೆ,ಸಾಸಿವೆ,ಜೀರಿಗೆ,ಕೆಂಪು ಮೆಣಸು ಹಾಕಿ. ಸಾಸಿವೆ ಚಟಪಟ ಎನ್ನುತ್ತಿದ್ದಂತೆ,ಬೇವಿನ ಎಸಳು,ಇಂಗು ಹಾಕಿ.
೪.ಸಿದ್ಧಪಡಿಸಿದ ಒಗ್ಗರಣೆಯನ್ನು ರುಬ್ಬಿದ ತೆಂಗಿನ ತುರಿ,ಮಾವಿನ ಮಿಶ್ರಣಕ್ಕೆ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ , ಕಲಸಿ.
೫.ಇನ್ನೇಕೆ ತಡ , ತಂಬುಳಿ ಸವಿಯಿರಿ !

ವಿ.ಸೂ : ಮಾವಿನ ಮಿಡಿ ಇರುವ ಕಾಲದಲ್ಲಿ ಹಸಿ ಮಾವಿನ ಮಿಡಿಯನ್ನು ಬಳಸಬಹುದು.



7.ದಾಳಿಂಬೆ ಸಿಪ್ಪೆ ತಂಬುಳಿ /ಕಿತ್ತಳೆ ಸಿಪ್ಪೆ ತಂಬುಳಿ

ಒಣಗಿದ ದಾಳಿಂಬೆ ಸಿಪ್ಪೆಯನ್ನು ತುಪ್ಪದಲ್ಲಿ ಹುರಿಯಿರಿ. ಇದನ್ನು ತೆಂಗಿನ ತುರಿಯ ಜತೆ ರುಬ್ಬಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿ. ತುಪ್ಪದ ಒಗ್ಗರಣೆ ಕೊಡಿ. ಇದೇ ಥರ ಕಿತ್ತಳೆ ಸಿಪ್ಪೆಯ ತಂಬುಳಿಯನ್ನು ಮಾಡಬಹುದು. ಎಚ್ಚಿರಿಕೆ ವಹಿಸಬೇಕಾದ ವಿಚಾರವೆಂದರೆ ದಾಳಿಂಬೆಯ ಸಿಪ್ಪೆಯನ್ನು ಅತ್ಯಲ್ಪ ಪ್ರಮಾಣದಲ್ಲಿ ಬಳಸಬೇಕು . ಇಲ್ಲವೆಂದಾದಲ್ಲಿ ತಂಬುಳಿ ಒಗರಾಗುತ್ತದೆ.

೮. ಬಾಳೆ ಹೂವಿನ ತಂಬುಳಿ

ಬಾಳೆ ಹೂವನ್ನು ಬಿಡಿಸಿ, ಅದರ ಒಳ ತಿರುಳನ್ನು ಕೆಂಡದ ಮೇಲೆ /ಗ್ಯಾಸ್ ಮೇಲೆ ನೀರವಾಗಿ / ಮೈಕ್ರೋ ವೇವ್ ಓವನ್ ನಲ್ಲಿ ಸುಟ್ಟು ಬಳಿಕ ತೆಂಗಿನಕಾಯಿ, ಹಸಿ ಮೆಣಸಿನ ಜತೆ ರುಬ್ಬಿ .
ಇದಕ್ಕೆ ಎರಡು ಲೋಟ ಮಜ್ಜಿಗೆ , ಉಪ್ಪು ಹಾಕಿ ಕಲಸಿ. ಒಗ್ಗರಣೆ ಕೊಡಿ .

೯.ಕೇಪುಳ ಹೂವಿನ ತಂಬುಳಿ


ಒಂದು ಹಿಡಿ ಕೇಪುಳ ಹೂವನ್ನು ನೀರಿನಲ್ಲಿ ಬೇಯಿಸಬೇಕು. ಇದನ್ನು ತೆಂಗಿನ ತುರಿ, ಹಸಿ ಮೆಣಸಿನ ಜತೆ ರುಬ್ಬಿ .
ಇದಕ್ಕೆ ಎರಡು ಲೋಟ ಮಜ್ಜಿಗೆ , ಉಪ್ಪು ಹಾಕಿ ಕಲಸಿ. ಒಗ್ಗರಣೆ ಕೊಡಿ .

೧೦. ಪುನರ್ಪುಳಿ ತಂಬುಳಿ

೫-೬ ಪುನರ್ಪುಳಿ (ಕೋಕಂ ) ಅನ್ನು ನೀರಿನಲ್ಲಿ ಸುಮಾರು ಹತ್ತು ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ. ಇದನ್ನು ತೆಂಗಿನ ತುರಿ, ಹಸಿ ಮೆಣಸಿನ ಜತೆ ರುಬ್ಬಿ .
ಇದಕ್ಕೆ ಎರಡು ಲೋಟ ಮಜ್ಜಿಗೆ , ಉಪ್ಪು ಹಾಕಿ ಕಲಸಿ. ಒಗ್ಗರಣೆ ಕೊಡಿ .

ಬಿಸಿಲಿಂದಾಗಿ ತೀರಾ ದಣಿವಾಗಿದ್ದರೆ, ಕರಿದ ಪದಾರ್ಥಗಳನ್ನು ತಿಂದು ಹೊಟ್ಟೆ ಕೆಟ್ಟಿದ್ದರೆ ಈ ತಂಬುಳಿ ಅತ್ಯತ್ತಮ auShadhi .

Saturday, September 12, 2009

ಚಹಾ ಬಗೆ ಬಗೆ..

'ಹೊಟ್ಟೆಗೆ ಹಿಟ್ಟು' ಅಂಕಣ...
'ಸಖಿ ' ಪಾಕ್ಷಿಕ (ಸಪ್ಟಂಬರ್ ೧-೧೫ ) 'ಹೊಟ್ಟೆಗೆ ಹಿಟ್ಟು' ಅಂಕಣದಲ್ಲಿ ಪ್ರಕಟಿತ

ಚಹಾ ಬಗೆ ಬಗೆ..

ಕಲ್ಪಿಸಿಕೊಳ್ಳಿ ..ಹೊರಗೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ನಿಮ್ಮ ಕೈಯಲ್ಲೊಂದು ಲೋಟ ಹಬೆಯಾಡುವ ಚಹಾ..ಆಹಾ..ಮಳೆಯ ಚಳಿಗೆ ಬೆಚ್ಚನೆಯ ಚಹಾ !! ಎಷ್ಟೊಂದು ಹಿತ!

ಚೈನಾದ ದಂತ ಕಥೆಯ ಪ್ರಕಾರ ಅಲ್ಲಿಯ ಚಕ್ರವರ್ತಿಯಾಗಿದ್ದ ಶೆನಂಗ್ ಬಿಸಿ ನೀರು ಕುಡಿಯುತ್ತಿದ್ದಾಗ ಗಾಳಿಗೆ ಹಾರಿ ಬಂದ ಸಸ್ಯವೊಂದರ ಎಲೆಗಳು ಬಿಸಿ ನೀರಿಗೆ ಬಿದ್ದು ,ನೀರಿನ ಬಣ್ಣ ಬದಲಾಗುವುದನ್ನು ಕಂಡನಂತೆ. ಆತನೇ ಟೀ ಯನ್ನು ಕಂಡು ಹುಡುಕಿದ ಎನ್ನುತ್ತಾರೆ. ಇನ್ನೊಂದು ಕಥೆಯ ಪ್ರಕಾರ ಝೆನ್ ಗುರು ಬೋಧಿಧರ್ಮ ಎಂಬಾತನ ಕಣ್ಣ ರೆಪ್ಪೆಗಳೇ ಚಹಾ ಗಿಡಗಳು ಆದವು ಎಂಬ ಪ್ರತೀತಿ. ಬ್ರಿಟಿಷರು ಜಾರಿಗೆ ತಂದ ಟೀ ಶಾಸನದ ವಿರುದ್ದ ಸಿಡಿದೆದ್ದ ಬೋಸ್ಟನ್ ನಿವಾಸಿಗಳ ಪ್ರತಿಭಟನೆಯ ಪರಿ 'ಬೋಸ್ಟನ್ ನ ಟೀ ಪಾರ್ಟಿ' ಎಂದು ಚರಿತ್ರೆಯಲ್ಲಿ
ದಾ ಖಲಾಗಿದೆ.
ಅತ್ಯುತ್ತಮ ಜೋಡಿಗೆ ಉತ್ತರ ಕರ್ನಾಟಕದ ಮಂದಿ 'ಚಹಾ ದ ಜೋಡಿ ಚೂಡಾದ ಹಂ~ಗ ' ಅನ್ನುವ ಉಪಮೆಯನ್ನು ನೀಡಿಯಾರು!!

ಕಥೆ ಏನೇ ಇರಲಿ, ಹಿತ ಮಿತವಾದ ಚಹಾ ಸೇವನೆ ಆರೋಗ್ಯಕ್ಕೆ ಉತ್ತಮವೆಂದು ಸಂಶೋಧನೆಗಳಿಂದ ಸಾಬೀತಾಗಿದೆ. ಇದು ನಮ್ಮ ನಿಮ್ಮೆಲ್ಲರ ದಿನ ನಿತ್ಯದ ಪೇಯವಾಗಿ ಮಹತ್ತರ ಸ್ಥಾನ ಪಡೆದಿದೆ.

ನವೀನತೆಯ ಅನ್ವೇಷಣೆಯಲ್ಲಿ ಮನುಷ್ಯ ಈ ವರೆಗೆ ಅನೇಕ ಪ್ರಕಾರಗಳಲ್ಲಿ ತನ್ನ ಚಾತುರ್ಯವನ್ನು ಪ್ರಚುರಪಡಿಸಿದ್ದಾನೆ. ಇದಕ್ಕೆ ಚಹಾವೂ ಹೊರತಲ್ಲ.
ನಿತ್ಯವೂ ಮಾಡುವ ಚಹಾ ಕ್ಕೆ ಕೊಂಚ ಹೊಸತನವನ್ನು ಸೇರಿಸಿ, ಮತ್ತಷ್ಟು ಉಲ್ಲಾಸದಾಯಕ ಅನುಭವ ವನ್ನು ಉಂಟು ಮಾಡಬೇಕೆ ? ಕೆಳಗಿನ ಪ್ರಯೋಗಗಳನ್ನು ಮಾಡಿ ನೋಡಿ.


-------------------------------------------------------------
ನಿಂಬೆ ಚಹಾ
-------------------------------------------------------------
ಬೇಕಾಗುವ ಸಾಮಗ್ರಿಗಳು

ನೀರು :ಅರ್ಧ ಲೋಟ
ಟೀ ಪುಡಿ :ಒಂದು ಚಮಚ
ಸಕ್ಕರೆ :ರುಚಿಗೆ ತಕ್ಕಷ್ಟು
ಲಿಂಬೆ ರಸ :ನಾಲ್ಕು ಚಮಚ

೧.ನೀರಿನೊಂದಿಗೆ ಚಹಾ ಪುಡಿ ಹಾಕಿ ಕುದಿಸಿ.
೨.ಬಳಿಕ ಅದನ್ನು ತಣಿಸಿ ಸೋಸಿ ಇಟ್ಟುಕೊಳ್ಳಿ
೩.ಇದಕ್ಕೆ ಲಿಂಬೆ ರಸ ಮತ್ತು ಸಕ್ಕರೆ ಬೆರೆಸಿ ಕಲಕಿ. ಬೇಕಿದ್ದರೆ ಮಂಜುಗಡ್ಡೆಯ ತುಂಡುಗಳನ್ನು ಸೇರಿಸಿ. ಸವಿಯಿರಿ.

ಬಿಸಿ ನಿಂಬೆ ಚಹಾ ಬೇಕೆಂದಿದ್ದರೆ (೨) ರಲ್ಲಿ ಕುದಿಸಿದ ಚಹವನ್ನು ತಣಿಸುವ ಅವಶ್ಯಕತೆ ಇಲ್ಲ.


--------------------------------------------------------------------
ಮಸಾಲೆ ಚಹಾ
----------------------------------------------------------------
ಮಸಾಲೆ ಪುಡಿಗೆ
ಲವಂಗ : 2
ಏಲಕ್ಕಿ :ಸ್ವಲ್ಪ
ದಾಲ್ಚಿನ್ನಿ :ಒಂದು ಸಣ್ಣ ಚೂರು

ಈ ಮೇಲೆ ಸೂಚಿಸಿದ ಸಾಮಗ್ರಿಗಳನ್ನು ಕುಟ್ಟಿ ಪುಡಿ ಮಾಡಿಟ್ಟುಕೊಳ್ಳಿ.

ಹಾಲು :ಒಂದು ಲೋಟ
ಸಕ್ಕರೆ :ಒಂದು ಚಮಚ
ಚಹಾ ಪುಡಿ: ಒಂದು ಚಮಚ

ವಿಧಾನ
೧.ಹಾಲು, ಸಕ್ಕರೆ, ಚಹಾ ಪುಡಿ ಮತ್ತು ಮಸಾಲೆ ಪುಡಿಗಳನ್ನು ಮಿಶ್ರ ಮಾಡಿ ಸಣ್ಣ ಉರಿಯಲ್ಲಿ ಕುದಿಸಿ.
೨.ಬಳಿಕ ಸೋಸಿ, ಬಿಸಿ ಬಿಸಿಯಾಗಿ ಕುಡಿಯಿರಿ.

--------------------------------
ಶುಂಠಿ ಚಹಾ
--------------------------------
ಮೇಲೆ ಸೂಚಿಸಿರುವ ವಿಧಾನದಲ್ಲಿ , ಮಸಾಲೆ ಪುಡಿಗೆ ಬದಲಾಗಿ ಹಸಿ ಶುಂಠಿಯ ೩-೪ ಸಣ್ಣ ತುಂಡುಗಳನ್ನು ಸೇರಿಸಿ ಹಾಲು,ಸಕ್ಕರೆ,ಚಹಾ ಪುಡಿ ಯ ಜತೆ ಕುಡಿಸಿದರೆ ಶುಂಠಿ ಚಹಾ ಸಿದ್ಧ.ಉತ್ತರ ಭಾರತದಲ್ಲಿ ಬಹುವಾಗಿ ಬಳಕೆಯಲ್ಲಿರುವ ' ಅಧ್ರಕ್ ವಾಲೀ ಚಾಯಿ ' ಅಂದರೆ ಇದೇ.


-----------------------------------
ಏಲಕ್ಕಿ ಚಹಾ
--------------------------------------------
ಮಸಾಲೆ ಪುಡಿಗೆ ಬದಲಾಗಿ ಏಲಕ್ಕಿ ಯ ಪುಡಿಯನ್ನು ಸೇರಿಸಿದರೆ ಸುವಾಸನಾ ಭರಿತ ಇಲಾಇಚಿ ಟೀ ಅರ್ಥಾತ್ ಏಲಕ್ಕಿ ಚಹಾ ತಯಾರು !


-------------------------------
ತುಳಸಿ ಚಹಾ
-------------------------------
ಅರ್ಧ ಹಿಡಿ ತುಳಸಿಯ ಎಲೆಗಳನ್ನು ಚಹಾ ಪುಡಿ, ಹಾಲು, ಸಕ್ಕರೆಯ ಜತೆ ಕುದಿಸಿ, ಸೋಸಿ , ಕುಡಿಯಿರಿ. ಇದು ವಿಶಿಷ್ಟ ಪರಿಮಳದಿಂದ ಕೂಡಿದ ಚಹಾ. ಪರ್ವತ ಪ್ರದೇಶಗಳಲ್ಲಿ ಇದು ಹೆಚ್ಚಾಗಿ ಬಳಕೆಯಲ್ಲಿದೆ.

----------------------
ಬ್ಲಾಕ್ ಟೀ
---------------------
ಒಂದು ಲೋಟ ನೀರಿಗೆ ಒಂದು ಚಮಚ ಚಹಾ ಪುಡಿಯನ್ನು ಹಾಕಿ .ಕುದಿಸಿ, ಸೋಸಿ ಕುಡಿಯಿರಿ.

--------------------
ಗ್ರೀನ್ ಟೀ
-------------------
ಗ್ರೀನ್ ಟೀಯು ಇತ್ತೀಚೆಗಿನ ದಿನಗಳಲ್ಲಿ ಬಹುವಾಗಿ ಉಪಯೋಗಿಸಲ್ಪಡುವ ಆರೋಗ್ಯಕರ ಪೇಯಗಳಲ್ಲಿ ಒಂದೆಂದು ಖ್ಯಾತವಾಗಿದೆ. ಚಹಾ ಎಲೆಗಳನ್ನು ವಿಶೇಷ ರೀತಿಯಲ್ಲಿ ಸಂಸ್ಕರಿಸುವ ಮೂಲಕ ಗ್ರೀನ್ ಟೀ ಪುಡಿಯನ್ನು ತಯಾರಿಸಲಾಗುತ್ತದೆ.

ಒಂದು ಲೋಟ ಕುದಿಯುವ ಬಿಸಿ ನೀರಿಗೆ ಒಂದು ಟೀ ಬ್ಯಾಗ್ ಗ್ರೀನ್ ಟೀ ಯನ್ನು ಸುಮಾರು ಐದು ನಿಮಿಷಗಳ ಕಾಲ ಮುಳುಗಿಸಿಡಬೇಕು. ಆ ಬಳಿಕ ಟೀ ಬ್ಯಾಗನ್ನು ಹೊರ ತೆಗೆಯಿರಿ. ಹಸಿರು ಚಹಾ ಪುಡಿಯ ಸ್ವಾದವನ್ನು, ಬಣ್ಣವನ್ನು ಹೀರಿಕೊಂಡ ಬಿಸಿ ನೀರನ್ನು ಹಾಗೇ ಅಥವಾ ಜೇನು ತುಪ್ಪ ಬೆರೆಸಿ ಕುಡಿಯಬಹುದು.

----------------------------------------------------------------------------------------------------------------------------------------------------------------------

Monday, August 24, 2009

'ಹೊಟ್ಟೆಗೆ ಹಿಟ್ಟು' ಅಂಕಣ...

'ಸಖಿ ' ಪಾಕ್ಷಿಕ (ಆಗಸ್ಟ್ ೧೬- ೩೧ ) 'ಹೊಟ್ಟೆಗೆ ಹಿಟ್ಟು' ಅಂಕಣದಲ್ಲಿ ಪ್ರಕಟಿತ


ಅಕ್ಕಿ ವಿಶ್ವದಾದ್ಯಂತ ಬಹು ಜನರ ಪ್ರಮುಖ ಆಹಾರವಾಗಿದ್ದು, ಲ್ಯಾಟಿನ್ ಅಮೇರಿಕ , ವೆಸ್ಟ್ ಇಂಡೀಸ್ ಮತ್ತು ಏಶಿಯಾ ಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. 'ಅಕ್ಕಿ ತಿಂದವನು ಹಕ್ಕಿಯಂತಾಗುವನು ' ಎಂಬ ಗಾದೆ ಬಹಳ ಪ್ರಚಲಿತವಾಗಿದೆ. 'ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು ,ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ ' ಇಲ್ಲಿ ಅನ್ನ ಎನ್ನುವುದು ಆಹಾರ ಎಂಬ ಅರ್ಥದಲ್ಲಿ ಬಳಕೆಯಾಗಿದೆ. ಅನ್ನವನ್ನು ಪರಬ್ರಹ್ಮ ಸ್ವರೂಪಿ ಎಂತಲೂ , ಅನ್ನದಾನವನ್ನು ಮಹಾದಾನವೆಂದು ಪರಿಗಣಿಸಲಾಗುತ್ತದೆ.

ಅಕ್ಕಿಯಲ್ಲಿ ಕಾರ್ಬೊಹೈಡ್ರೇಟ ಅಂಶ ಹೇರಳವಾಗಿದೆ. (ಪ್ರತಿ ನೂರು ಗ್ರಾಮಿಗೆ ೭೯ ಗ್ರಾಮಿನಷ್ಟು ). ವಿಟಮಿನ್ ಬಿ ೬,ವಿಟಮಿನ್ ಬಿ ೯,ಕ್ಯಾಲ್ಸಿಯಂ, ಕಬ್ಬಿಣ ಮುಂತಾದ ಪೋಷಕಾಂಶಗಳನ್ನು ಹೊಂದಿದೆ.

ಸಾಮಾನ್ಯವಾಗಿ ಅಕ್ಕಿಯನ್ನು ಅನ್ನ ಮಾಡಿ, ಸಾರು ಸಾಂಬಾರುಗಲ ಜತೆ ಸವಿಯುವುದು ಒಂದು ವಿಧವಾದರೆ, ಇನ್ನೊಂದು ಪ್ರಕಾರದಲ್ಲಿ ಅಕ್ಕಿಯ ಜತೆ ವಿವಿಧ ಪದಾರ್ಥಗಳನ್ನು ಮಿಶ್ರ ಮಾಡಿ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ.

--------------------------------------------------------
1.ಪುಳಿಯೋಗರೆ
---------------------------------------------------------





ಬೇಕಾಗುವ ಸಾಮಗ್ರಿಗಳು:

ಗೊಜ್ಜು ತಯಾರಿಸಲು:
ಹುಣಸೇ ಹಣ್ಣು: ಎರಡು ಹಿಡಿ
ಜೀರಿಗೆ,ಕಾಳು ಮೆಣಸು: ತಲಾ ಒಂದು ಚಮಚ
ಮೆಂತ್ಯ: ಕಾಲು ಚಮಚ
ಕೊತ್ತಂಬರಿ ಕಾಳು: ಆರ್ಧ ಹಿಡಿ
ಎಳ್ಳು:ಒಂದು ಚಮಚ
ನೆಲಕಡಲೆ: ಒಂದು ಹಿಡಿ
ಇಂಗು: ಒಂದು ಚಿಟಿಕೆ
ಕೆಂಪು ಮೆಣಸು: ೬
ಉಪ್ಪು: ರುಚಿಗೆ ತಕ್ಕಷ್ಟು
ಬೆಲ್ಲ: ಒಂದು ತುಂಡು

ಒಗ್ಗರಣೆಗೆ:
ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ: ತಲಾ ಒಂದು ಚಮಚ
ಗೋಡಂಬಿ: ಒಂದು ಹಿಡಿ
ಅರಿಶಿಣ: ಕಾಲು ಚಮಚ
ಬೇವಿನ ಎಲೆ: ೧೦ ಎಸಳು
ಕೊಬ್ಬರಿ ತುರಿ: ಅರ್ಧ ಲೋಟ


ವಿಧಾನ :

ಗೊಜ್ಜು ತಯಾರಿ:

೧.ಗೊಜ್ಜು ತಯಾರಿಸಲು ಸೂಚಿಸಿರುವ ಪದಾರ್ಥಗಳಲ್ಲಿ ನೆಲಕಡಲೆ, ಹುಣಸೇಹುಳಿ ಹೊರತು ಪಡಿಸಿ, ಉಳಿದವುಗಳನ್ನು ಎಣ್ಣೆ ಹಾಕದೆ ಹುರಿದು, ನೀರು ಹಾಕದೆ ರುಬ್ಬಿ.
೨.ಹುಣಸೇ ಹಣ್ಣನ್ನು ಒಂದು ಲೋಟ ಬಿಸಿ ನೀರಿನಲ್ಲಿ ಹತ್ತು ನಿಮಿಷ ನೆನೆಸಿ, ರಸ ಹಿಂಡಿ ಇಟ್ಟುಕೊಳ್ಳಿ.
೩.ಒಂದು ಕಡಾಯಿಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ಸಾಸಿವೆ, ಅರಸಿನ, ಬೇವಿನೆಲೆ ಹಾಕಿ ಒಗ್ಗರಣೆ ತಯಾರಿಸಿ ಇಟ್ಟುಕೊಳ್ಳಿ. ಇದಕ್ಕೆ ನೆಲಕಡಲೆ ಸೇರಿಸಿ ಹುರಿಯಿರಿ.
೪.ಈಗ ಹುಣಸೇ ರಸ,ರುಬ್ಬಿದ ಮಸಾಲೆಯನ್ನು ಇದರ ಜತೆ ಹಾಕಿ ಕಲಸಿ.
೫.ಮಿಶ್ರಣವು ಕುದಿಯುತ್ತಿದ್ದಂತೆ ಇದಕ್ಕೆ ಸ್ವಲ್ಪ ಉಪ್ಪು, ಬೆಲ್ಲ ಸೇರಿಸಿ ಕಲಕಿ.
೬.ಮಿಶ್ರಣವು ಗಟ್ಟಿಯಾಗುತ್ತಿದ್ದಂತೆ ಒಲೆ ಆರಿಸಿ.
೭.ಈ ಗೊಜ್ಜು ಆರಿದ ಮೇಲೆ ಬಾಟಲಿನಲ್ಲಿ ತುಂಬಿಸಿ ಇಟ್ಟುಕೊಳ್ಳಬಹುದು. ಬೇಕೆಂದಾಗ ಪುಳಿಯೋಗರೆ ಮಾಡಿಕೊಳ್ಳಲು ಉಪಯೋಗಿಸಬಹುದು.


ಪುಳಿಯೋಗರೆ ತಯಾರಿಗೆ:

೧.ಅನ್ನ ತಯಾರಿಸಿ ಇಟ್ಟುಕೊಳ್ಳಿ.
೨.ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಬೇವಿನೆಲೆ ಹಾಕಿ ಒಗ್ಗರಣೆ ತಯಾರಿಸಿ.
೩.ಇದಕ್ಕೆ ಗೋಡಂಬಿ, ನೆಲಕಡಲೆ ಸೇರಿಸಿ,ಕಲಕಿ.
೪.ಗೋಡಂಬಿ, ನೆಲಕಡಲೆ ಕೆಂಪಗಾಗುತ್ತಿದ್ದಂತೆ ಇದಕ್ಕೆ ಕೊಬ್ಬರಿ ತುರಿ ಸೇರಿಸಿ.
೫.ಈಗಾಗಲೇ ತಯಾರಿಸಿರುವ ಗೊಜ್ಜನ್ನು ಹಾಕಿ, ಕಲಸಿ.
೬.ಈಗ ಅನ್ನ, ಉಪ್ಪು ಸೇರಿಸಿ, ಕಲಸಿ.
೭.ಇನ್ನೇಕೆ ತಡ, ಪುಳಿಯೋಗರೆ ತಿನ್ನಿ!




-------------------------------------------------------------------------------
2.ಬಿಸಿ ಬೇಳೆ ಭಾತ್
--------------------------------------------------------------------------------




ಬೇಕಾಗುವ ಪದಾರ್ಥಗಳು


ಮಸಾಲೆಗೆ:
ಕೊತ್ತಂಬರಿ ಕಾಳು: ೪ ಚಮಚ
ಲವಂಗ: ೪
ದಾಲ್ಚಿನ್ನಿ: ೨ ಚೂರು
ಸಾಸಿವೆ, ಜೀರಿಗೆ, ಉದ್ದು, ಅರಸಿನ, ಎಣ್ಣೆ: ತಲಾ ಒಂದು ಚಮಚ
ಇಂಗು: ಚಿಟಿಕೆ
ಕಾಳು ಮೆಣಸು: ಅರ್ಧ ಚಮಚ
ಕೆಂಪು ಮೆಣಸು: ೩
ಬೇವಿನ ಎಲೆ: ೧೦ ಎಸಳು
ಎಣ್ಣೆ: ಒಂದು ಚಮಚ

ಹೆಚ್ಚಿದ ತರಕಾರಿ:

ಬೀನ್ಸು, ಕ್ಯಾರೆಟ್, ನೀರುಳ್ಳಿ, ಬಟಾಣಿ: ತಲಾ ಕಾಲು ಲೋಟ
ಬಟಾಟೆ: ಒಂದು
ತೆಂಗಿನ ತುರಿ: ಒಂದು ಲೋಟ

ಅಕ್ಕಿ: ಒಂದು ಲೋಟ
ತುಪ್ಪ: ೨ ಚಮಚ
ತೊಗರಿ ಬೇಳೆ: ಅರ್ಧ ಲೋಟ

ಉಪ್ಪು: ರುಚಿಗೆ ತಕ್ಕಷ್ಟು
ಹುಣಸೆ ರಸ: ಎರಡು ಚಮಚ

ವಿಧಾನ

೧.ಅನ್ನ ತಯಾರಿಸಿ ಇಟ್ಟುಕೊಳ್ಳಿ.
೨.ಬೇಳೆ ಮತ್ತು ತರಕಾರಿಗಳನ್ನು ಒಟ್ಟಿಗೆ ಕುಕ್ಕರಿನಲ್ಲಿ ಬೇಯಿಸಿ ಇಟ್ಟುಕೊಳ್ಳಿ.
೩.ಮಸಾಲೆಗೆ ಹೇಳಿದ ಸಾಮಗ್ರಿಗಳನ್ನು ಎಣ್ಣೆಯಲ್ಲಿ ಹುರಿದು, ತೆಂಗಿನ ತುರಿಯ ಜತೆ ರುಬ್ಬಿ. ಸ್ವಲ್ಪ ನೀರು ಹಾಕಬೇಕು.
೪.ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಗೋಡಂಬಿ ಕರಿದು ಇಟ್ಟುಕೊಳ್ಳಿ.ಇದಕ್ಕೆ ಬೇಯಿಸಿದ ತರಕಾರಿ, ಬೇಳೆ ಮತ್ತು ರುಬ್ಬಿಟ್ಟ ಮಿಶ್ರಣವನ್ನು ಸೇರಿಸಿ ಕಲಕಿ.
೫.ಸ್ವಲ್ಪ ಉಪ್ಪು ಹಾಕಿ ಕಲಕಿ.
೬.ದಪ್ಪನೆಯ ಹದಕ್ಕೆ ಬರುತ್ತಿದ್ದಂತೆ ಅನ್ನವನ್ನು ಸೇರಿಸಿ. ಇನ್ನೂ ಸ್ವಲ್ಪ ಉಪ್ಪು ಹಾಕಿ ಕಲಕಿ. ಇದಕ್ಕೆ ಹುಣಸೆ ರಸ ಸೇರಿಸಿ. ಬೇಕಿದ್ದರೆ ಸಣ್ಣ ತುಂಡು ಬೆಲ್ಲ ಹಾಕಬಹುದು.
೭.ಈಗ ಬಿಸಿ ಬೇಳೆ ಭಾತ್ ತಯಾರು.
೮.ಚಿಪ್ಸ್ ಅಥವಾ ಖಾರ ಬೂಂದಿ ಕಾಳು / ಸೌತೆಕಾಯಿ ಮೊಸರು ಬಜ್ಜಿಯೊಂದಿಗೆ ಸವಿಯಿರಿ.


-----------------------------------------------
3.ಕಾಪ್ಸಿಕಮ್ ರೈಸ್ (ದೊಣ್ಣೆ ಮೆಣಸಿನ ಕಾಯಿ ಅನ್ನ)
--------------------------------------------------

ಬೇಕಾಗುವ ಸಾಮಗ್ರಿಗಳು

ಅಕ್ಕಿ: ಒಂದು ಲೋಟ
ಬೇವಿನೆಲೆ: ೧೦ ಎಸಳು
ಉಪ್ಪು: ರುಚಿಗೆ ತಕ್ಕಷ್ಟು
ಕೊತ್ತಂಬರಿ ಕಾಳು: ಎರಡು ಚಮಚ
ನೆಲಕಡಲೆ: ಒಂದು ಹಿಡಿ
ಕೆಂಪು ಮೆಣಸು: ೩
ಜೀರಿಗೆ, ಸಾಸಿವೆ, ಉದ್ದು: ತಲಾ ಒಂದು ಚಮಚ

ದೊಣ್ಣೆ ಮೆಣಸು ಸಣ್ಣಗೆ ಹೆಚ್ಚಿದ್ದು: ೧ ಲೋಟ
ತುಪ್ಪ: ೨ ಚಮಚ
ಕೊತ್ತಂಬರಿ ಸೊಪ್ಪು: ಸ್ವಲ್ಪ

ವಿಧಾನ:

೧.ಕೊತ್ತಂಬರಿ ಕಾಳು, ನೆಲಕಡಲೆ, ಕೆಂಪು ಮೆಣಸು, ಜೀರಿಗೆ, ಸಾಸಿವೆ, ಉದ್ದು ಇವುಗಳನ್ನು ಎಣ್ಣೆ ಹಾಕದೆ ಹುರಿಯಿರಿ. ಪರಿಮಳ ಬರುತ್ತಿದ್ದಂತೆ ಬೇವಿನ ಎಲೆ ಹಾಕಿ.
೨.ಹುರಿದ ಸಾಮಗ್ರಿಗಳನ್ನು ಮಿಕ್ಸಿಯಲ್ಲಿ ನೀರು ಹಾಕದೆ ರುಬ್ಬಿ. ಈ ಪುಡಿಯನ್ನು ಡಬ್ಬದಲ್ಲಿ ಇಟ್ಟುಕೊಂಡರೆ, ದೊಣ್ಣೆ ಮೆಣಸಿನ ಅನ್ನಕ್ಕೆ ಬೇಕೆಂದಾಗ ಬಳಸಬಹುದು.
೩.ತುಪ್ಪವನ್ನು ಬಾಣಲೆಗೆ ಹಾಕಿ, ಸ್ವಲ್ಪ ಬಿಸಿಯಾಗುತ್ತಿದ್ದಂತೆ ಹೆಚ್ಚಿದ ದೊಣ್ಣೆ ಮೆಣಸಿನ ತುಂಡುಗಳನ್ನು ಹಾಕಿ, ಬಾಡಿಸಿ. ಬೇಕೆಂದರೆ ಸ್ವಲ್ಪ ನೀರು ಚಿಮುಕಿಸಿ, ಮುಚ್ಚಳದಿಂದ ಮುಚ್ಚಿ.
೪.ದೊಣ್ಣೆ ಮೆಣಸು ಸರಿಯಾಗಿ ಬಾಡುತ್ತಿದ್ದಂತೆ, ಇದಕ್ಕೆ ರುಬ್ಬಿಟ್ಟ ಪುಡಿಯನ್ನು ಹಾಕಿ ಕಲಕಿ. ಉಪ್ಪು ಸೇರಿಸಿ. ೨-೩ ನಿಮಿಷ ಮಂದ ಉರಿಯಲ್ಲಿ ಬೇಯಿಸಿ.
೫.ದೊಣ್ಣೆ ಮೆಣಸಿನ ಮಸಾಲೆಯ ಜತೆ ಅನ್ನ ಕಲಸಿ. ಸ್ವಲ್ಪ ಉಪ್ಪು, ನಿಂಬೆ ರಸ ಹಾಕಿ. ಕಲಕಿ.
೬.ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
೭.ದೊಣ್ಣೆ ಮೆಣಸಿನ ಅನ್ನ ತಯಾರು. ಇದನ್ನು ಸೌತೆಕಾಯಿ ಮೊಸರು ಗೊಜ್ಜಿನ ಜತೆ ಸವಿಯಿರಿ.


---------------------------------
4. ಸಬ್ಜಿಯೋಂಕಿ ತೆಹ್ರಿ
------------------------------------

ಇದು ಉತ್ತರ ಪ್ರದೇಶದ ಖಾದ್ಯ.

ಬೇಕಾಗುವ ಸಾಮಗ್ರಿಗಳು

ಅಕ್ಕಿ: ೧ ಲೋಟ
ಜೀರಿಗೆ: ೨ ಚಮಚ
ಜಜ್ಜಿದ ಬೆಳ್ಳುಳ್ಳಿ: ೬ ಎಸಳು
ಜಾಯಿಕಾಯಿ ಪುಡಿ, ಏಲಕ್ಕಿ ಪುಡಿ: ತಲಾ ಒಂದು ಚಮಚ
ಕಸೂರಿ ಮೇಥಿ: ೧ ಲೋಟ
ಹಸಿ ಮೆಣಸು: ೪
ತೆಳ್ಳನೆ ಹೆಚ್ಚಿದ ಶುಂಠಿ: ೨ ಚಮಚ
ಕ್ಯಾರ್‍ಎಟ್: ೨
ಬೀನ್ಸ್ : ೧೦
ಬಟಾಟೆ: ೨
ಹಸಿ ಬಟಾಣಿ: ಒಂದು ಹಿಡಿ
ತುಪ್ಪ: ೫ ಚಮಚ
ಮೊಸರು: ಅರ್ಧ ಲೋಟ
ಮೆಣಸಿನ ಹುಡಿ: ಒಂದು ಚಮಚ
ಅರಸಿನ: ಕಾಲು ಚಮಚ
ಹಾಲಿನ ಕೆನೆ: ಅರ್ಧ ಲೋಟ
ಉಪ್ಪು: ರುಚಿಗೆ ತಕ್ಕಷ್ಟು

ವಿಧಾನ:
೧.ಬಟಾಟೆ, ಕ್ಯಾರೆಟ್, ಬೀನ್ಸ್ ಇವುಗಳನ್ನು ೧ ಇಂಚು ಉದ್ದನೆಯ ಹೋಳುಗಳಾಗಿ ಹೆಚ್ಚಿಕೊಳ್ಳಿ.
೨.ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಜೀರಿಗೆ, ಜಜ್ಜಿದ ಬೆಳ್ಳುಳ್ಳಿ, ಕಸೂರಿ ಮೇಥಿ ಎಲೆಗಳನ್ನು ಹಾಕಿ ಕಲಕಿ.
೩.ಹೆಚ್ಚಿದ ತರಕಾರಿ, ಬಟಾಣಿ, ಉಪ್ಪು ಹಾಕಿ ಮಂದ ಉರಿಯಲ್ಲಿ ಸುಮಾರು ಐದು ನಿಮಿಷ ಕಲಕಿ.
೪.ಇದಕ್ಕೆ ಮೊಸರು, ಮೆಣಸಿನ ಹುಡಿ, ಅರಸಿನ ಹುಡಿ ಸೇರಿಸಿ. ಬೇಕಿದ್ದರೆ ಸ್ವಲ್ಪ ನೀರು ಹಾಕಬಹುದು.
೫.ಸ್ವಲ್ಪ ಹೊತ್ತು ಹಾಗೇ ಕುದಿಸಿ.
೬.ಇದಕ್ಕೆ ಹೆಚ್ಚಿದ ಹಸಿ ಮೆಣಸು, ಏಲಕ್ಕಿ, ಜಾಯಿಕಾಯಿ ಹುಡಿ, ಸ್ವಲ್ಪ ನೀರು ಮತ್ತು ಅಕ್ಕಿಯನ್ನು ಸೇರಿಸಿ.
೭.ಪಾತ್ರೆಗೆ ಮುಚ್ಚಳ ಇಟ್ಟು ಸುಮಾರು ಹತ್ತರಿಂದ ಹದಿನೈದು ನಿಮಿಷ ಬೇಯಿಸಿ.
೮.ಅನ್ನ ಬೆಂದಿದೆಯೆ ಇಲ್ಲವೇ ಪರೀಕ್ಷಿಸಿ. ಇಲ್ಲವೆಂದಾದಲ್ಲಿ ಇನ್ನೂ ಸ್ವಲ್ಪ ನೀರು ಚಿಮುಕಿಸಿ,ಬೇಯಿಸಿ.
೯.ಅನ್ನ ಸರಿಯಾಗಿ ಬೆಂದ ಮೇಲೆ, ಇದಕ್ಕೆ ಸ್ವಲ್ಪ ಉಪ್ಪು, ಹಾಲಿನ ಕೆನೆ ಹಾಕಿ ಕಲಕಿ.
೧೦.ಇದೀಗ ’ಸಬ್ಜಿಯೋಂಕಿ ತೆಹ್ರಿ’ ತಯಾರು. ಬಿಸಿ ಬಿಸಿ ಇರುವಾಗಲೇ ತಿನ್ನಿ.

Friday, July 24, 2009

ಅನ್ನದಲ್ಲಿ ಬಗೆ ಬಗೆ...
------------------------------


ಪುದೀನಾ ಪಲಾವು
------------------------------



ಪುದೀನಾ ಎಲೆ: ೧ ಲೋಟ
ಅಕ್ಕಿ: ೧ ಲೋಟ
ನೀರುಳ್ಳಿ: ೧
ಬೆಳ್ಳುಳ್ಳಿ: ೪ ಎಸಳು
ಶುಂಠಿ: ಒಂದು ಸಣ್ಣ ಚೂರು
ಲವಂಗ: ೪
ಕಾಳು ಮೆಣಸು: ೫
ಜಾಯಿಕಾಯಿ ಹೂವು: ಒಂದು ಸಣ್ಣ ಚೂರು
ಚಕ್ರ ಮೊಗ್ಗು: ೧ ಸಣ್ಣ ಚೂರು
ಎಣ್ಣೆ: ಎರಡು ಚಮಚ
ಹಸಿ ಮೆಣಸು: ೧
ಜೀರಿಗೆ: ೧ ಚಮಚ
ಲಿಂಬೆ ರಸ: ೧ ಚಮಚ
ಉಪ್ಪು: ರುಚಿಗೆ ತಕ್ಕಷ್ಟು

ವಿಧಾನ:
೧.ಅಕ್ಕಿಯನ್ನು ತೊಳೆದು, ಉದುರುದುರಾಗಿ ಅನ್ನ ಮಾಡಿಟ್ಟುಕೊಳ್ಳಿ.
೨.ಬಾಣಲೆಯಲ್ಲಿ ಲವಂಗ, ಕಾಳು ಮೆಣಸು, ಜಾಯಿಕಾಯಿ ಹೂವು, ಚಕ್ರ ಮೊಗ್ಗು ಇವುಗಳನ್ನು ಎಣ್ಣೆ ಹಾಕದೆ ಹುರಿದುಕೊಳ್ಳಿ.
೩.ಮಿಕ್ಸಿಯಲ್ಲಿ ಪುದೀನಾ, ಬಾಣಲೆಯಲ್ಲಿ ಹುರಿದಿಟ್ಟ ಸಾಮಗ್ರಿಗಳು, ಶುಂಠಿ, ಬೆಳ್ಳುಳ್ಳಿ ಇವುಗಳನ್ನು ಒಟ್ಟಿಗೆ ರುಬ್ಬಿ.
೪.ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಜೀರಿಗೆ ಹಾಕಿ.
೫.ಬಳಿಕ ಹೆಚ್ಚಿದ ಈರುಳ್ಳಿಯನ್ನು ಸೇರಿಸಿ, ಕಂದು ಬಣ್ಣ ಬರುವ ತನಕ ಹುರಿಯಿರಿ. ಒಂದು ಹಸಿ ಮೆಣಸನ್ನು ಚೂರು ಮಾಡಿ ಹಾಕಿ.
೬.ಇದಕ್ಕೆ ರುಬ್ಬಿದ ಪುದೀನಾ ಮಿಶ್ರಣವನ್ನು ಹಾಕಿ, ಕಲಕಿ.
೭.ಇದು ಕುದಿಯುತ್ತಿದ್ದಂತೆ, ಅನ್ನವನ್ನು ಸೇರಿಸಿ. ನಿಂಬೆ ರಸ, ಉಪ್ಪು ಹಾಕಿ ಕಲಕಿ.
೮.ಎರಡು ನಿಮಿಷ ಮಂದ ಉರಿಯಲ್ಲಿ ಕಲಕಿ. ಇದೀಗ ಪುದೀನಾ ಪಲಾವು ತಯಾರು. ಇದೇ ಥರ ಮೆಂತೆ ಸೊಪ್ಪಿನ ಪಲಾವನ್ನು ಮಾಡಬಹುದು.

-------------------------------------------
ಜೀರಾ ರೈಸ್
---------------------------------------------
ಅತ್ಯಂತ ಸುಲಭವಾದ ಅಡುಗೆ ವಿಧಾನ ಇದು.



ಬೇಕಾಗುವ ಸಾಮಗ್ರಿಗಳು

ಅಕ್ಕಿ: ೧ ಲೋಟ
ಜೀರಿಗೆ: ೪ ಚಮಚ
ನೀರುಳ್ಳಿ: ೧
ಪಲಾವು ಎಲೆ: ೧
ಲವಂಗ: ೪
ಲಿಂಬೆ ರಸ/ಆಮ್ ಚೂರ್ ಪೌಡರ್/ಹುಳಿ ಪುಡಿ: ಯಾವುದಾದರೂ ಒಂದು ( ಹುಳಿಗೆ ಬೇಕಾಗಿ )
ಉಪ್ಪು: ರುಚಿಗೆ ತಕ್ಕಷ್ಟು


ವಿಧಾನ

೧.ಉದುರುದುರಾಗಿ ಅನ್ನ ಮಾಡಿಟ್ಟುಕೊಳ್ಳಿ.
೨.ಬಾಣಲೆಯಲ್ಲಿ ಎಣ್ಣೆ ಹಾಕಿ, ಬಿಸಿಯಾಗುತ್ತಿದ್ದಂತೆ ಜೀರಿಗೆ ಹಾಕಿ, ಕಲಕಿ.
೩.ಇದಕ್ಕೆ ಸಣ್ಣಗೆ ಹೆಚ್ಚಿದ ನೀರುಳ್ಳಿ ಹಾಕಿ, ಕಂದು ಬಣ್ಣ ಬರುವ ತನಕ ಹುರಿಯಿರಿ.
೪.ಲವಂಗ ಮತ್ತು ಪಲಾವಿನ ಎಲೆಯನ್ನು ಇದಕ್ಕೆ ಸೇರಿಸಿ, ಇನ್ನೂ ಎರಡು ನಿಮಿಷ ಕಲಕಿ.
೫.ಬಾಣಲೆಗೆ ಅನ್ನ ಸೇರಿಸಿ, ಉಪ್ಪು, ಹುಳಿ ಪುಡಿ ಹಾಕಿ ಕಲಕಿ.
೬.ಜೀರಾ ರೈಸ್ ತಯಾರು.

ವಿ.ಸೂ:ಇಡೀ ಲವಂಗದ ಬದಲು ಲವಂಗದ ಪುಡಿಯನ್ನೂ ಹಾಕಬಹುದು.

-----------------------------------------------------
ವಾಂಗಿ ಭಾತ್

ಬೇಕಾಗುವ ಪದಾರ್ಥಗಳು

ಅಕ್ಕಿ: ಒಂದು ಲೋಟ

ಬದನೆ ಪಲ್ಯಕ್ಕೆ:

ಬದನೆಕಾಯಿ: ೪
ಎಣ್ಣೆ: ೪ ಚಮಚ
ಸಾಸಿವೆ: ಒಂದು ಚಮಚ
ಜೀರಿಗೆ: ಒಂದು ಚಮಚ
ಉದ್ದು:ಒಂದು ಚಮಚ
ಅರಸಿನ: ಕಾಲು ಚಮಚ
ಇಂಗು: ಚಿಟಿಕೆ
ಕೆಂಪು ಮೆಣಸು: ೩
ಉಪ್ಪು:ರುಚಿಗೆ ತಕ್ಕಷ್ಟು
ಬೇವಿನ ಎಲೆ: ೧೦
ಲಿಂಬೆ ರಸ: ಒಂದು ಚಮಚ

ಮಸಾಲೆಗೆ:

ಕಡಲೆ ಬೇಳೆ, ಉದ್ದಿನ ಬೇಳೆ, ದಾಲ್ಚಿನ್ನಿ, ಲವಂಗ, ಗಸಗಸೆ, ಕಾಳು ಮೆಣಸು, ಕೊತ್ತಂಬರಿ ಕಾಳು: ತಲಾ ಒಂದು ಚಮಚ
ಕೊಬ್ಬರಿ ತುರಿ: ಅರ್ಧ ಲೋಟ





ವಿಧಾನ:

೧.ಅನ್ನ ತಯಾರಿಸಿ ಇಟ್ಟುಕೊಳ್ಳಿ.
೨.ಮಸಾಲೆಗೆ ಎಂದು ಸೂಚಿಸಿದ ಪದಾರ್ಥಗಳನ್ನು ಎಣ್ಣೆ ಹಾಕದೆ ಹುರಿದು, ಕೊಬ್ಬರಿ ತುರಿ ಜತೆ ನೀರು ಹಾಕದೆ ರುಬ್ಬಿ ಇಟ್ಟುಕೊಳ್ಳಿ.
೩.ಬಾಣಲೆಯಲ್ಲಿ ಎಣ್ಣೆ ಹಾಕಿ, ಕೆಂಪು ಮೆಣಸು, ಸಾಸಿವೆ, ಜೀರಿಗೆ, ಉದ್ದು, ಅರಸಿನ, ಇಂಗು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಬೇವಿನ ಎಲೆ ಸೇರಿಸಿ.
೪.ಇದಕ್ಕೆ ಹೆಚ್ಚಿದ ಬದನೆ ಹೋಳುಗಳನ್ನು ಸೇರಿಸಿ, ಕಲಕಿ. ಸ್ವಲ್ಪ ಹೊತ್ತು ಬೇಯಿಸಿ.
೫.ಈಗ ಇದಕ್ಕೆ ಉಪ್ಪು ಮತ್ತು (೨) ಹಂತದಲ್ಲಿ ತಯಾರಾದ ಮಸಾಲೆಯನ್ನು ಸೇರಿಸಿ, ಕಲಕಿ.
೬.ಈಗ ಬದನೆಕಾಯಿಯ ಮಸಾಲೆ ಪಲ್ಯ ತಯಾರಾಯಿತು.
೭.ಇದಕ್ಕೆ ಅನ್ನ ಸೇರಿಸಿ ಕಲಸಿ. ಸ್ವಲ್ಪ ಉಪ್ಪು ಸೇರಿಸಿ, ನಿಂಬೆ ರಸ ಹಿಂಡಿ.
೮.ಆಹಾ..ರುಚಿರುಚಿಯಾದ ಈ ವಾಂಗಿ ಭಾತ್ ಗೆ ವಾಂಗಿ ಭಾತೇ ಸಾಟಿ.

--------------------------------------
ಪೀಸ್ ಪುಲಾವ್ (ಬಟಾಣಿ ಪುಲಾವು)
-----------------------------------------


ಬೇಕಾಗುವ ಸಾಮಗ್ರಿಗಳು

ಅಕ್ಕಿ: ಒಂದು ಲೋಟ
ಬಟಾಣಿ: ಅರ್ಧ ಲೋಟ

ಎಣ್ಣೆ: ನಾಲ್ಕು ಚಮಚ
ಜೀರಿಗೆ, ಸಾಸಿವೆ, ಉದ್ದು ತಲಾ ಒಂದು ಚಮಚ
ಕೊತ್ತಂಬರಿ ಸೊಪ್ಪು: ಸ್ವಲ್ಪ
ಉಪ್ಪು: ರುಚಿಗೆ ತಕ್ಕಷ್ಟು
ನೀರುಳ್ಳಿ: ಒಂದು
ಕಾಳು ಮೆಣಸು: ೧ ಚಮಚ
ಜಾಯಿಕಾಯಿ ಹೂವು: ೧ ಸಣ್ಣ ಚೂರು
ದಾಲ್ಚಿನ್ನಿ: ೧ ಸಣ್ಣ ಚೂರು
ಲವಂಗ: ೪
ಬೆಳ್ಳುಳ್ಳಿ: ೪ ಎಸಳು
ಹಸಿಮೆಣಸು: ೧
ನಿಂಬೆ ರಸ: ಒಂದು ಚಮಚ
ಉಪ್ಪು: ರುಚಿಗೆ ತಕ್ಕಷ್ಟು


ವಿಧಾನ:

೧.ನೀರುಳ್ಳಿ, ಕಾಳು ಮೆಣಸು, ಜಾಯಿಕಾಯಿ ಹೂವು, ದಾಲ್ಚಿನ್ನಿ, ಲವಂಗ, ಬೆಳ್ಳುಳ್ಳಿ, ಹಸಿಮೆಣಸು ಇವುಗಳನ್ನು ಮಿಕ್ಸಿಗೆ ಹಾಕಿ ರುಬ್ಬಿ.
೨.ಅನ್ನ ತಯಾರಿಸಿ ಇಟ್ಟುಕೊಳ್ಳಿ.
೩.ಬಟಾಣಿಯನ್ನು ನೀರಿನಲ್ಲಿ ೧೦ ನಿಮಿಷ ಬೇಯಿಸಿ.
೪.ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆ, ಸಾಸಿವೆ, ಉದ್ದು ಇವುಗಳನ್ನು ಹಾಕಿ, ಒಗ್ಗರಣೆ ಮಾಡಿ.
೫.ಇದಕ್ಕೆ ರುಬ್ಬಿದ ಮಸಾಲೆ ಮತ್ತು ಬೇಯಿಸಿದ ಬಟಾಣಿಯನ್ನು ಹಾಕಿ ಕಲಕಿ. ಇದಕ್ಕೆ ಚಿಟಿಕೆ ಉಪ್ಪು ಸೇರಿಸಿ.
೬.ಮಂದ ಉರಿಯಲ್ಲಿ ೩-೪ ನಿಮಿಷ ಕಲಕಿ.
೭.ಇದಕ್ಕೆ ಅನ್ನವನ್ನು ಸೇರಿಸಿ, ಕಲಸಿ.ಉಪ್ಪು, ನಿಂಬೆ ರಸ ಸೇರಿಸಿ. ಇನ್ನೊಮ್ಮೆ ಕಲಕಿ.
೮.ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
೯.ಸೌತೆಕಾಯಿ ಮೊಸರು ಬಜ್ಜಿಯೊಂದಿಗೆ ಅಥವಾ ಟೊಮಾಟೊ ನೀರುಳ್ಳಿ ರಾಯಿತದೊಂದಿಗೆ ಸವಿಯಿರಿ.

------------------------------
ಕಾಶ್ಮೀರಿ ಪುಲಾವು
---------------------------------
ಬೇಕಾಗುವ ಸಾಮಗ್ರಿಗಳು
ಅಕ್ಕಿ: ಒಂದು ಲೋಟ
ಹಾಲು: ಒಂದು ಲೋಟ
ಹಾಲಿನ ಕೆನೆ: ೫ ಚಮಚ
ಹೆಚ್ಚಿದ ಹಣ್ಣುಗಳು: ೧ ಲೋಟ
ಸಕ್ಕರೆ: ಒಂದು ಚಮಚ
ತುಪ್ಪ: ಎರಡು ಚಮಚ
ಲವಂಗ: ೪
ಪಲಾವು ಎಲೆ: ೧
ದಾಲ್ಚಿನ್ನಿ: ಸಣ್ಣ ಚೂರು
ಏಲಕ್ಕಿ: ೪
ಜೀರಿಗೆ: ಎರಡು ಚಮಚ
ಗುಲಾಬಿ ನೀರು (ರೋಸ್ ವಾಟರ್): ಎರಡು ಚಮಚ
ಉಪ್ಪು: ರುಚಿಗೆ ತಕ್ಕಷ್ಟು

ವಿಧಾನ:
೧.ಅಕ್ಕಿಯನ್ನು ತೊಳೆದು ೧೫-೨೦ ನಿಮಿಷ ನೆನೆಸಿಡಿ.
೨.ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಲವಂಗ, ದಾಲ್ಚಿನ್ನಿ, ಏಲಕ್ಕಿ, ಜೀರಿಗೆ, ಪಲಾವು ಎಲೆ ಇವುಗಳನ್ನು ಜಜ್ಜಿ ಹಾಕಿ.
೩.ನೆನೆಸಿದ ಅಕ್ಕಿಯಿಂದ ನೀರು ಬೇರ್ಪಡಿಸಿ, ಬಾಣಲೆಗೆ ಹಾಕಿ. ೨-೩ ನಿಮಿಷ ಕಲಕಿ.
೪.ಈಗ ಇದಕ್ಕೆ ಹಾಲು, ಕೆನೆ, ಸಕ್ಕರೆ ಇವುಗಳನ್ನು ಸೇರಿಸಿ. ಅರ್ಧ ಲೋಟ ನೀರು ಸೇರಿಸಿ, ಮುಚ್ಚಳ ಹಾಕಿ, ೧೫-೨೦ ನಿಮಿಷಗಳ ಕಾಲ ಬೇಯಿಸಿ.
೫.ಈಗ ಅನ್ನ ಬೆಂದಿದೆಯೋ ಇಲ್ಲವೊ ಎಂದು ಪರೀಕ್ಷಿಸಿ. ಇಲ್ಲವೆಂದಾದಲ್ಲಿ, ಸ್ವಲ್ಪ ನೀರು ಚಿಮುಕಿಸಿ ಬೇಯಲು ಬಿಡಿ.
೬.ಅನ್ನ ಸರಿಯಾಗಿ ಬೆಂದ ಮೇಲೆ ಇದಕ್ಕೆ ಉಪ್ಪು, ಕತ್ತರಿಸಿಟ್ಟ ಹಣ್ಣುಗಳನ್ನು ಹಾಕಿ ಕಲಕಿ.
೭.ಕಾಶ್ಮೀರಿ ಪಲಾವು ತಯಾರು. ಬಡಿಸುವ ಮುನ್ನ, ರೋಸ್ ವಾಟರ್ ಚಿಮುಕಿಸಿ, ತುಪ್ಪದಲ್ಲಿ ಹುರಿದ ಒಣ ದ್ರಾಕ್ಷಿ, ಗೋಡಂಬಿಗಳನ್ನು ಸೇರಿಸಿ ಬಡಿಸಿ.


---------------------------------------------
ಫ಼್ರೈಡ್ ರೈಸ್
--------------------------------------------

ಬೇಕಾಗುವ ಸಾಮಗ್ರಿಗಳು

ಅಕ್ಕಿ: ೧ ಲೋಟ
ಸಣ್ಣಗೆ ಹೆಚ್ಚಿದ ನೀರುಳ್ಳಿ ಕಡ್ಡಿ (ಫ಼್ರೆಂಚ್ ಓನಿಯನ್ ): ೫
ಸೊಯಾ ಸಾಸ್: ೨ ಚಮಚ
ವಿನೆಗರ್: ೧ ಚಮಚ
ತುಪ್ಪ: ಎರಡು ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಗೋಬಿ: ಸಣ್ಣಗೆ ಹೆಚ್ಚಿದ್ದು :ಕಾಲು ಲೋಟ
ಬಟಾಣಿ: ಅರ್ಧ ಲೋಟ


ವಿಧಾನ:

೧.ಬಾಣಲೆಯಲ್ಲಿ ತುಪ್ಪ ಹಾಕಿ, ಬಿಸಿ ಮಾಡಿ. ನೀರುಳ್ಳಿ ಕಡ್ಡಿಯನ್ನು ಸೇರಿಸಿ ೩-೪ ನಿಮಿಷ ಹುರಿಯಿರಿ.
೨.ಕುಕ್ಕರ್ ನಲ್ಲಿ ಗೋಬಿ ಮತ್ತು ಬಟಾಣಿಯನ್ನು ಬೇಯಿಸಿ.
೩. (೧) ರ ಮಿಶ್ರಣಕ್ಕೆ ಬೇಯಿಸಿದ ಗೋಬಿ ಮತ್ತು ಬಟಾಣಿಯನ್ನು ಸೇರಿಸಿ.
೪.ಇದಕ್ಕೆ ವಿನೆಗರ್, ಸೊಯ ಸಾಸ್, ಉಪ್ಪು ಹಾಕಿ ಕಲಕಿ.
೫.ಈ ಮಿಶ್ರಣಕ್ಕೆ ಅನ್ನ ಸೇರಿಸಿ, ಕಲಸಿ.
೬.೩-೪ ನಿಮಿಷ ಮಂದ ಉರಿಯಲ್ಲಿ ಕಲಕಿ.
೭.ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಡಿಸಿ.


-------------------------------------------
ಆಲೂ ಭಾತ್
-------------------------------------------
ಇದು ಮಹಾರಾಷ್ಟ್ರ ಪ್ರಾಂತ್ಯದ ಅಡುಗೆ

ಬೇಕಾಗುವ ಸಾಮಗ್ರಿಗಳು

ಅಕ್ಕಿ: ೧ ಲೋಟ
ತುಪ್ಪ: ೮ ಚಮಚ
ಅಲೂಗಡ್ಡೆ: ೨
ಮೊಸರು: ಅರ್ಧ ಲೋಟ
ಶುಂಠಿ: ಒಂದು ಸಣ್ಣ ಚೂರು
ಅರಸಿನ: ಕಾಲು ಚಮಚ
ದಾಲ್ಚಿನ್ನಿ, ಲವಂಗ ಪುಡಿ, ಕೊತ್ತಂಬರಿ ಪುಡಿ: ತಲಾ ಒಂದು ಚಮಚ
ಕೊತ್ತಂಬರಿ ಸೊಪ್ಪು: ಕಾಲು ಲೋಟ
ಕೊಬ್ಬರಿ ತುರಿ: ಕಾಲು ಲೋಟ
ಹಸಿ ಮೆಣಸು: ೩
ಉಪ್ಪು: ರುಚಿಗೆ ತಕ್ಕಷ್ಟು
ಗೋಡಂಬಿ: ೧೦

ವಿಧಾನ:
೧.ಸಿಪ್ಪೆ ಸುಲಿದು ಸಣ್ಣಗೆ ಕತ್ತರಿಸಿದ ಆಲೂಗಡ್ಡೆಯನ್ನು ತುಪ್ಪದಲ್ಲಿ ಹುರಿಯಿರಿ.
೨.ಇದಕ್ಕೆ ದಾಲ್ಚಿನ್ನಿ, ಕೊತ್ತಂಬರಿ, ಲವಂಗ ಪುಡಿ, ಮೊಸರು ಮತ್ತು ಜಜ್ಜಿದ ಶುಂಠಿಯನ್ನು ಹಾಕಿ ಕಲಕಿ.
೩.ಸಣ್ಣ ಉರಿಯಲ್ಲಿ ಅದನ್ನು ಬೇಯಿಸಿ. ಸ್ವಲ್ಪ ನೀರು ಚಿಮುಕಿಸಿ.
೪.ಆಲೂಗಡ್ಡೆ ಸರಿಯಾಗಿ ಬೆಂದ ಮೇಲೆ, ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಕಲಸಿ.
೫.ಈಗ ಇದಕ್ಕೆ ಅನ್ನವನ್ನು ಸೇರಿಸಿ. ೨-೩ ನಿಮಿಷ ಕಲಕಿ.
೬.ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಬಡಿಸಿ.

----------------------------------------------------------------------------------


ವಿ.ಸೂ:
೧.ಸಾಧಾರಣ ಅಕ್ಕಿಯ ಬದಲಿಗೆ ಬಾಸ್ಮತಿ ಅಕ್ಕಿಯನ್ನು ಬಳಸಿದರೆ ಅದರ ಸೊಗಸೇ ಬೇರೆ.
೨.ಅನ್ನ ಮಾಡುವಾಗ ಸ್ವಲ್ಪ ಎಣ್ಣೆ ಅಥವಾ ನಿಂಬೆ ರಸ ವನ್ನು ಅಕ್ಕಿಯ ಜತೆ ಹಾಕಿದರೆ ಅನ್ನ ಉದುರುದುರಾಗಿರುತ್ತದೆ.
೩.ಸಿಹಿ ಅಡುಗೆಗೆ ತುಪ್ಪ, ಖಾರದ ಅಡುಗೆಗೆ ಎಣ್ಣೆ ಬಳಸುವುದು ವಾಡಿಕೆ. ಆದರೂ ಖಾರದ ಅಡುಗೆಗೂ ತುಪ್ಪ ಬಳಸಿದರೆ ವಿಷೇಷ ರುಚಿ ಬರುತ್ತದೆ.
೪.ಮೇಲೆ ಸೂಚಿಸಿದ ಎಲ್ಲಾ ಪ್ರಮಾಣಗಳು ಇಬ್ಬರಿಗೆ ಸಾಕಾಗುವಷ್ಟು.

ಸುಧಾದಲ್ಲಿ ಪ್ರಕಟಿತ

Thursday, June 25, 2009

ಅವಸರದ ಅವನತಿಯತ್ತ ಕನ್ನಡ ಚಿತ್ರ ಸಾಹಿತ್ಯ ,ಸಂಗೀತ

ಕನ್ನಡ ಚಲನಚಿತ್ರ ಸಂಗೀತ ಕೇಳುವ ಸೌಭಾಗ್ಯ ಒದಗಿ ಬರುವುದು ನಾನು ಆಫ಼ೀಸ್ ಕ್ಯಾಬ್ ನಲ್ಲಿ ಪ್ರಯಾಣಿಸುವಾಗ ಮಾತ್ರ. ದಿನ ನಿತ್ಯವೂ ಅನುಭವಿಸುವ ಈ ಮಾನಸಿಕ ತುಮುಲವನ್ನು ಹೊರಗೆಡಹಲು ಒಂದು ಸಣ್ಣ ಪ್ರಯತ್ನ ಈ ಲೇಖನ .

ಕೆಲವು ದಿನಗಳ ಹಿಂದಿನ ಮಾತು.ಆಫೀಸಿನಿಂದ ಮನೆಗೆ ಬರುತ್ತಿರುವಾಗ ’ಮಾನಸ ಸರೋವರ’ ಎಂಬ ಹಳೆಯ ಹಾಡು ಪ್ರಸಾರವಾಯಿತು.ಮೂರು ನಿಮಿಷ ಅದೆಂತಹ ಮಾನಸಿಕ ಸೌಖ್ಯವನ್ನು ಆ ಹಾಡು ಒದಗಿಸಿತು ಎಂಬುವುದು ಬಣ್ಣಿಸಲಸದಳ.ಆ ಮೂರು ನಿಮಿಷಗಳು ಮುಗಿಯುತ್ತಿದ್ದಂತೆ ಆರ್. ಜೆ. ತನ್ನ ಅರಚಾಟ ಶುರು ಮಾಡಿದ. ನಾನಿನ್ನೂ ಮಾನಸ ಸರೋವರದ ಗುಂಗಿನಲ್ಲಿದ್ದೆ.ಇನ್ನು ಮುಂದಿನ ಹಾಡಿನ ಸರದಿ. ಚಿಂದಿ ಉಡಾಯಿಸಿ,ಮಸ್ತ್ ಮಜಾ ಮಾಡಿ ಎಂದೆಲ್ಲಾ ಹರಕು ಕನ್ನಡವನ್ನು ಆಂಗ್ಲ ಭಾಷೆಯ ಮಾದರಿಯಲ್ಲಿ ಒಟಗುಟ್ಟಿ ಹಿಂಸಿಸಿದ.
ಐತಲಕಡಿ(ಇದರ ಅರ್ಥ ನನಗೆ ತಿಳಿದಿಲ್ಲ )...ಅಂತ ಶುರುವಾಯಿತು. ಜಲಜಾಕ್ಷಿ, ಮೀನಾಕ್ಷಿ ಅಂತೆಲ್ಲಾ ಆದ ಮೇಲೆ ನನಗೆ ಅರ್ಥವಾದ ಹಾಡು ಇದು.
ಐತಲಕಡಿ ಬಾರೆ
ಲಕ್ಕ ಆಗುಮ
ಪಾಠ ಓದ್ಕುಮ
ಊಟ ಹಾಕುಮ
ಕಟ್ಟಿಕೊ
ಯಮ ಯಮ ಮುದ ಚುಮ
ಕರ್ನಾಟಕದಲ್ಲೇ ಹುಟ್ಟಿ ಬೆಳೆದು, ಕನ್ನಡ ಮಾಧ್ಯಮದಲ್ಲೆ ಶಿಕ್ಷಣ ಪಡೆದ ನನಗೆ ಈ ಹಾಡು ಅರ್ಥವಾಗಿಲ್ಲ.ಬಹುಶ: ನನ್ನ ಕನ್ನಡ ಭಾಷೆಯ ಅಲ್ಪ ಜ್ಞಾನವೇ ಇದಕ್ಕೆ ಕಾರಣವಿರಬೇಕು.

ಅಂತೂ ಸುಮಾರು ಐದು ನಿಮಿಷಗಳತನಕ ಈ ಹಾಡನ್ನು ಸಹಿಸಿಕೊಂಡೆ.
ಯಾಕೆ ಹೊಗಳ್ತೀಯ
ಹೈಟು ಜಾಸ್ತಿ ಮಾಡ್ತೀಯ
ಅಂತ ಏನೇನೋ ಅದ್ಭುತ ಸಂಗೀತದೊಂದಿಗೆ ಈ ಹಾಡು ಮುಗಿಯಿತು.

ನಾನು ಚಿಂತಿಸತೊಡಗಿದೆ.ವರ್ಷದಲ್ಲಿ ಬರುವ ಸುಮಾರು ೫೦೦- ೬೦೦ ಕನ್ನಡ ಚಲನಚಿತ್ರಗೀತೆಗಳಲ್ಲಿ ಸುಂದರ, ಮಧುರ, ಮತ್ತೆ ಕೇಳಬಲ್ಲ ಹಾಡುಗಳ ಸಂಖ್ಯೆ ಎಷ್ಟು ಬೇಗನೆ ಕ್ಷೀಣವಾಗುತ್ತಿವೆ ? ಯಾಕೆ?
ಇದೀಗ ಮುಂದಿನ ಹಾಡಿನ ಸರದಿ.

ಕಮ್ ಓನ್ ಐ ಸೇ ...ಕಮ್ ಓನ್ ಐ ಸೇ ..
ಅಂತ ಶುರುವಾಯಿತು. ಕೆಹರವಾ ತಾಳ ಡೋಲಿನ ಮೇಲೆ ಬೊಬ್ಬಿಡುತ್ತಿತ್ತು.ಹಾಡಿನ ಮುಂದಿನ ಸಾಲುಗಳನ್ನು ಏನೆಂದು ಬರೆಯಲಿ? ನನಗೆ ಅರ್ಥವಾದದ್ದಿಷ್ಟು.

ಸೇಜ ಸೇಜ ಬಾರೆ
ಮವ್ವೆ ಮವ್ವೆ ಬಾರೆ
ಅಲೆ ಕೆಂಚಿ ತಾರೆ ಅರದೋ..

ಬಾರೆ ಎನ್ನುವ ಪದಗಳನ್ನು ಹೊರತುಪಡಿಸಿ ನನಗೆ ಬೇರೆ ಯಾವ ಪದಗಳು ಅರ್ಥವಾಗಿಲ್ಲ. ಬಲ್ಲವರು ವಿವರಿಸಬೇಕು.
ಎಫ಼್.ಎಮ್. ಆರಿಸಲು ಕಾರಿನ ಚಾಲಕನಿಗೆ ವಿನಂತಿಸಿಕೊಂಡೆ. ಆದರೆ ಕೆಲವರು ಇಂತಹ ಸಂಗೀತವನ್ನು ಆಸ್ವಾದಿಸಿ ಆನಂದಿಸುತ್ತಿದ್ದುದರಿಂದ ನನ್ನ ವಿನಂತಿ ಈಡೇರಲಿಲ್ಲ.

ಆರ್. ಜೆ. ಮತ್ತೆ ತನ್ನ ಆಂಗ್ಲ ಮಿಶ್ರಿತ ಸುಸಂಸ್ಕೃತ ಕನ್ನಡದಲ್ಲಿ ಚಮ್ಕಾಯಿಸಿ, ಚಿಂದಿ ಉಡಾಯಿಸಿ ಎಂದು ಅರಚಿದ.
ಪಾರೋ ಪಾರೋ ಅಂತ ಇನ್ನೊಂದು ಹಾಡು ಶುರುವಾಯಿತು.ಅದರ ಸಾಲುಗಳು ಹೀಗಿದ್ದವು.
ಲೇಟಾಗಿ ಬರುವುದಿಲ್ಲ..
ಸೋರಿ ಕೇಳುವುದಿಲ್ಲ..
ಆಸಿಡ್ ಹಾಕುವುದಿಲ್ಲ.

ಇನ್ನೇನೋ ಬರೆಯಬೇಕಾದ ನೆನಪಿಸಿ ಇಟ್ಟುಕೊಳ್ಳಬೇಕಾದ ಸಾಹಿತ್ಯವೇನೂ ಅಲ್ಲ. ಏಳು ಜ್ಞಾನಪೀಠ ಪ್ರಶಸ್ತಿ ಸಂದಿರುವ ಕನ್ನಡ ಭಾಷೆ ಇದೇನಾ ಎನ್ನುವ ಸಂದೇಹ ಒಂದು ಕ್ಷಣ ಮನಸ್ಸಿನಲ್ಲಿ ಸುಳಿಯಿತು.
ಕನ್ನಡ ಹಾಡುಗಳ ಗುಣಮಟ್ಟ ಕಡಿಮೆಯಾಗಿದೆ ಎಂಬುವುದರಲ್ಲಿ ಸಂದೇಹವಿಲ್ಲ. ಆತಂಕದ ವಿಚಾರವೆಂದರೆ ಈಗಿನ ಚಿತ್ರ ಸಂಗೀತದ ಹಾಡುಗಳಲ್ಲಿ ಅರ್ಥವಿಲ್ಲ. ಅರ್ಥವಿದ್ದರೂ ಆಳವಿಲ್ಲ. ಆದರೂ ಇಂತಹ ಹಾಡುಗಳೇ ಬಹುಜನರಿಗೆ ಮೆಚ್ಚುಗೆಯಾಗುತ್ತಿವೆ.
ಹೊಡಿ ಮಗ, ಹಳೆ ಪಾತ್ರೆ,ಚಿತ್ರಾನ್ನ, ಜಿಂಕೆ ಮರಿ ಮುಂತಾದ ಕಳಪೆ ಗುಣಮಟ್ಟದ ಹಾಡುಗಳನ್ನು ನಾವಿಂದು ತುಂಬು ಹೃದಯದಿಂದ ಆನಂದಿಸುತ್ತಿದ್ದೇವೆ. ಇತ್ತೀಚೆಗೆ ಮಕ್ಕಳಲ್ಲೂ ಈ ನಾಲ್ಕೂ ಹಾಡುಗಳು ಅತ್ಯಂತ ಪ್ರಿಯವಾಗಿವೆ ಎಂಬುದು ಖೇದದ ವಿಷಯ. ಈ ಅವನತಿಗೆ ಚಿಂತನೆಯಾಗಬೇಕಾಗಿದೆ.

ಇದರ ಸಂಭಾವ್ಯ ಕಾರಣಗಳನ್ನು ಅವಲೋಕಿಸಿದಾಗ ಕೆಳಗೆ ಸೂಚಿಸಿದ ಕೆಲವು ಅಂಶಗಳು ಸ್ವಷ್ಟವಾಗುತ್ತವೆ.
೧) ಕನ್ನಡ ಭಾಷೆಯ ಪಾಶ್ಚಾತ್ಯೀಕರಣ :ಇಂದು ಕನ್ನಡ ಹಾಡುಗಳನ್ನು ಆಂಗ್ಲ ಭಾಷೆಯ ಶೈಲಿಯಲ್ಲಿ ಹಾಡುವುದು ರೂಢಿಯಾಗುತ್ತಿದೆ.ಹೀಗೆ ಆಂಗ್ಲದನಿಯ ಕನ್ನಡ ನನ್ನ ಮನಸ್ಸಿನಲ್ಲಿ ಒಂದು ವಿಧವಾದ ಉದ್ವೇಗವನ್ನು ಮೂಡಿಸುತ್ತದೆ.
ಉದಾ: ’ನಮ್ದೇ ಈ ಲೋಕ’ ಎಂಬ ಹಾಡಿನ ವಿಚಿತ್ರವಾದ ಆಂಗ್ಲ ರೀತಿಯ ಉಚ್ಚಾರಣೆ ಮನಸ್ಸಿನಲ್ಲಿ ರೋಷ ಉಕ್ಕಿಸುತ್ತದೆ.

೨)ಹಾಡುಬರೆಯುವವರನ್ನು ಕಾಡುವ ಕನ್ನಡ ಶಬ್ದಗಳ ಕೊರತೆ:ಅನ್ಯ ಭಾಷೆಯ ಶಬ್ದಗಳ ಬಾಹುಳ್ಯ ಇತ್ತೀಚಿನ ಚಲನ ಚಿತ್ರ ಹಾಡುಗಳಲ್ಲಿ ಗೋಚರಿಸುತ್ತಿದೆ.ವಿಚಿತ್ರ ಕನ್ನಡ ಪದಗಳ ಬಳಕೆಯೂ ಹೆಚ್ಚುತ್ತಿದೆ. ಕಿಚಾಯಿಸು, ಚಮಕಾಯಿಸು ಮುಂತಾದ ಅಧಿಕವಾಗಿ ಪ್ರಯೋಗಗೊಂಡು ಭಾಷೆಯನ್ನು ಶ್ರೀಮಂತಗೊಳಿಸುವ ಬದಲು ಗಲಾಟೆಯ ವಾತಾವರಣವನ್ನು ಸೃಷ್ಟಿಸುತ್ತವೆ.
ಮಿಶ್ರ ಭಾಷಾ ಹಾಡಿಗೆ ಒಂದು ಉದಾಹರಣೆ :
ಸ್ಟ್ರಾಬೆರಿ ಕೆನ್ನೆಯವಳೇ
ಕ್ಯಾಡ್ಬರೀ ಹುಡುಗನೇ...
ಇತ್ತೀಚಿನ ಸಂದರ್ಶನವೊಂದರಲ್ಲಿ ಜಯಂತ ಕಾಯ್ಕಿಣಿಯವರು ತಮ್ಮ ಒಂದು ಚಿತ್ರಗೀತೆಯ ಸನ್ನಿವೇಶವನ್ನು ವಿವರಿಸುತ್ತಾ.."ಅಸು ನೀಗಿತು" ಎಂಬ ಪದದ ಬಳಕೆ ಎಲ್ಲರಿಗೂ ಆಶ್ಚರ್ಯವನ್ನು ಉಂಟುಮಾಡಿತು ಎಂದು ವಿವರಿಸಿದರು. ’ಅಸು ನೀಗಿತು’ ಎಂಬ ಸರಳ ಕನ್ನಡ ಪದವು ಇತ್ತೀಚೆಗಿನ ಜನಾಂಗದಲ್ಲಿ ಆಶ್ಚರ್ಯವನ್ನು ಉಂಟು ಮಾಡಬೇಕಾದರೆ ಕನ್ನಡದ ತಿಳುವಳಿಕೆ ಎಷ್ಟರಮಟ್ಟಿಗೆ ಕಡಿಮೆಯಾಗಿದೆ ಎಂಬ ಕಳವಳದ ಅಂಶವು ಬೆಳಕಿಗೆ ಬರುತ್ತದೆ.

೩)ಕಥಾವಸ್ತುವಿನ ಕೊರತೆ :ಇತ್ತೀಚೆಗೆ ಹೊರಬರುತ್ತಿರುವ ೯೯% ಕನ್ನಡ ಚಲನಚಿತ್ರಗಳು ಕುಟುಂಬ ಸಮೇತರಾಗಿ ನೋಡಲು ಅರ್ಹವಲ್ಲ.ಕಾರಣಗಳು ಹಲವಾರು.
೧)ಮುಖ್ಯವಾಗಿ ಚಿತ್ರದ ಹೆಸರು ಲೂಸ್ ಮಾದ , ಮೆಂಟಲ್ ಮಂಜ, ಸ್ಲಮ್ ಬಾಲ ಮುಂತಾದ ವಿಚಿತ್ರ ಹೆಸರುಗಳು
೨)ಮುಜುಗರವಾಗುವ ದೃಶ್ಯಗಳ ಭರಾಟೆ.
೩)ಅಸಹಜತೆ :ಸನ್ನಿವೇಶಗಳ ಅಸಹಜತೆ ,ಪಾತ್ರಗಳ ಅಸಹಜತೆ ,ಕಥಾ ಹಂದರದ ಅಸಹಜತೆ,ನಟನೆಯ ಅಸಹಜತೆ
ಎರಡು ಪ್ರಮುಖ ವಿಷಯಗಳು ಇಂದಿನ ಕನ್ನಡ ಚಲನ ಚಿತ್ರಗಳ ಮೂಲ ಕಥಾವಸ್ತುವಾಗಿ ವಿಜ್ರಂಭಿಸುತ್ತವೆ.
೧)ರಾಜಕೀಯ ಪುಢಾರಿಗಳ ದೌರ್ಜನ್ಯದ ವಿರುದ್ಧ ನಾಯಕನ ಬಂಡಾಯ
೨)ಪರಿಸ್ಥಿತಿಯಿಂದ ಬೇಸತ್ತ ಹತಾಶೆಗೊಳಗಾದ ನಾಯಕ ತಪ್ಪು ದಾರಿ ಹಿಡಿದು ರೌಡಿಯಾಗುವ ಕಥೆ.
ಈ ಎರಡು ಕಥಾ ಸುರುಳಿಗಳಲ್ಲಿ ಅವಕಾಶವಿರುವುದು ಹೊಡಿಮಗ , ಬಾರೆ ಮವ್ವೆ ಬಾರೆ ಮುಂತಾದ ಹಾಡುಗಳಿಗೇ ವಿನಹ ಮಾನಸ ಸರೋವರ,’ಸಾಗಲಿ ತೇಲು ತರಂಗದೊಳು..’ ದಂತಹ ಹಾಡುಗಳಿಗಲ್ಲ ಎಂಬುದು ಹಲವು ಚಿತ್ರರಂಗದವರ ಅಂಬೋಣ.ಇದು ಅತ್ಯಂತ ದುರದೃಷ್ಟಕರ ಬೆಳವಣಿಗೆ.
ಮೇಲೆ ವ್ಯಕ್ತಪಡಿಸಿರುವ ಅಭಿಪ್ರಾಯವೇ ಇವತ್ತಿನ ಕಳಪೆ ಸಂಗೀತ,ಸಾಹಿತ್ಯದ ಬುನಾದಿ.

೪)ಚಿತ್ರರಂಗವು ಕಲಾಮಾಧ್ಯಮದ ಬದಲಾಗಿ ಮಾರುಕಟ್ಟೆಯ ಸರಕಾಗಿ ಮಾರ್ಪಾಡಾಗಿದೆ.ಕಥಾ ವಸ್ತುವಿನ ಕೊರತೆ ಕನ್ನಡ ಸಾಹಿತ್ಯಲೋಕದಲ್ಲಂತೂ ಎಳ್ಳಷ್ಟೂ ಇಲ್ಲ .ಇತ್ತೀಚೆಗಿನ ಯುವ ಲೇಖಕರೂ,ಕವಿಗಳೂ ಬರೆದಿರುವ ಕಥೆ ಮತ್ತು ಕವನ ಸಂಕಲನಗಳೇ ಇವಕ್ಕೆ ಸಾಕ್ಷಿ. ಆದರೆ ಚಿತ್ರರಂಗವು ಅವುಗಳ ಸಮರ್ಪಕ ಬಳಕೆಯನ್ನು ಮಾಡಿಕೊಳ್ಳುವಲ್ಲಿ ವಿಫಲವಾಗಿದೆ.
ಮೂಲ ಕಥಾ ವಸ್ತುವಿನ ಚಿಂತನೆ ನಡೆಸುವ ಸೈರಣೆ ಚಿತ್ರರಂಗದ ಹೆಚ್ಚಿನವರಲ್ಲಿ ಉಳಿದಿಲ್ಲ.

ಯಾವತ್ತಿನ ವರೆಗೆ ಕನ್ನಡ ಜನತೆ ಕಳಪೆ ಗುಣಮಟ್ಟದ ಚಿತ್ರಗಳನ್ನು ಮತ್ತು ಹಾಡುಗಳನ್ನು ಬಹಿಷ್ಕರಿಸುವುದಿಲ್ಲವೋ ,ಯಾವತ್ತಿನ ವರೆಗೆ ಕನ್ನಡ ಚಲನ ಚಿತ್ರದ ಸೆನ್ಸಾರ್ ಮಂಡಳಿಯು ಇಂತಹ ಅರ್ಥಹೀನ,ಕೀಳು ಅಭಿರುಚಿಯ ಚಲನಚಿತ್ರಗಳಿಗೆ ಕತ್ತರಿಹಾಕುವುದಿಲ್ಲವೋ ಅಲ್ಲಿಯ ತನಕ ಇದನ್ನೆಲ್ಲಾ ಸಹಿಸಿಕೊಳ್ಳಬೇಕಾದ ದೌರ್ಭಾಗ್ಯ ನಮ್ಮದು.
ಜೈ ಕನ್ನಡಾಂಬೆ!!

Thursday, May 28, 2009

ಜಿ ಟಾಕ್ ಸ್ಟೇಟಸ್ ಮೆಸೇಜು

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ||
ಬೆಂಗಳೂರು ರಸ್ತೆಲೆಲ್ಲಾ ದೊಡ್ಡ್ ದೊಡ್ಡ್ ಗುಂಡಿ ||
ಟ್ರಾಫಿಕ್ ಜಾಮ್ ನಲ್ಲಿ ನರಳಾಡ್ತಿದೆ ಎಲ್ಲಾರ್ ಬಂಡಿ ||

--------ಅರ್ಚನಾ

Tuesday, May 19, 2009

ನೀವೂ ಮೋಸ ಹೋದೀರಿ ಎಚ್ಚರಿಕೆ!

ಈ ಶನಿವಾರ, ಬಹುದಿನದಿಂದ ಕೆಟ್ಟು ಹೋಗಿದ್ದ ನಮ್ಮ ಲ್ಯಾಪ್ ಟಾಪನ್ನು ಸರಿಪಡಿಸುವ ಮುಹೂರ್ತ ಬಂದೊದಗಿತ್ತು. ಅದನ್ನು ಸರಿಪಡಿಸಲೋಸುಗ ಜಯನಗರದ ಒಂದು ಅಂಗಡಿ ನುಗ್ಗಿದ್ದಾಯಿತು. ಕೆಲವು ಪರೀಕ್ಷೆಗಳ ನಂತರ ಹಾರ್ಡ್ ಡಿಸ್ಕ್ ಬದಲಿಸಬೇಕೆಂಬ ಸೂಚನೆ ಗಟ್ಟಿಯಾಗತೊಡಗಿತು. ನಮಗೆ ಬೇಕಾದ ಹಾರ್ಡ್ ಡಿಸ್ಕ್ ಆ ಅಂಗಡಿಯಲ್ಲಿ ಇಲ್ಲದ ಕಾರಣ ಫೋನಾಯಿಸಿ, ಬೇರೊಂದು ಕಡೆಯಿಂದ ಅದನ್ನು ಅಂಗಡಿ ಮಾಲೀಕರು ತರಿಸಿದರು. ಹೊಚ್ಚ ಹೊಸ ಹಾರ್ಡ್ ಡಿಸ್ಕನ್ನು ನಮ್ಮ ಕಣ್ಣೆದುರಿಗೇ ಪಾಕೆಟ್ ನ ಸೀಲು ಒಡೆದು ತೆಗೆದು ತೋರಿಸಿ, ಜೋಡಿಸಿ, ಪರೀಕ್ಷಿಸಿ, ಎಲ್ಲವೂ ಸಮರ್ಪಕವಾಗಿದೆಯೆಂದು ಭಾವಿಸಿ, ಅಲ್ಲೇ ಆಪರೇಟಿಂಗ್ ಸಿಸ್ಟಮನ್ನು ಇನ್ ಸ್ಟಾಲ್ ಮಾಡಿ ನೋಡಿದೆವು. ಎಲ್ಲ ಓಕೆ.. ಚಿಂತೆ ಯಾಕೆ ಎಂದು ಭಾವಿಸಿ ಮನೆಗೆ ಬಂದೆವು. ಕಥೆ ಇಲ್ಲಿಗೇ ಮುಗಿಯಲಿಲ್ಲ. ಮುಗಿಯುತ್ತಿದ್ದರೆ ಈ ಲೇಖನ ಬರೆಯುವ ಅವಶ್ಯಕತೆಯೂ ಇರಲಿಲ್ಲ.

ಮನೆಗೆ ಬಂದು ಸರಿಯಾದ ಲಾಪ್ ಟಾಪ್ ನಲ್ಲಿ ಮತ್ತೊಂದಷ್ಟು ಸಾಫ್ಟ್ ವೇರ್ ಗಳನ್ನು ಇನ್ ಸ್ಟಾಲ್ ಮಾಡುವ ಉತ್ಸಾಹದಲ್ಲಿ, ಮತ್ತೆ ಅದನ್ನು ಪರಿಶೀಲಿಸತೊಡಗಿದೆ. ಲಾಪ್ ಟಾಪ್ ನ ಡಿ ಡ್ರೈವ್ ಅನ್ನು ತೆರೆದು ನೋಡಿದಾಗ ನನಗೆ ಸಖೇದಾಶ್ಚರ್ಯವಾಗಿತ್ತು. ಯಾಕೆ ಅಂತೀರಾ? ಯಾರೋ ಒಬ್ಬರ ಹಲವಾರು ಕಡತಗಳು ಅದರಲ್ಲಿದ್ದವು. ಹೊಸ ಹಾರ್ಡ್ ಡಿಸ್ಕ್ ಖಾಲಿಯಾಗಿರಬೇಕಷ್ಟೆ? ಈ ಥರದ ಕಡತಗಳು ಅದರಲ್ಲಿ ಮುಂಚಿನಿಂದಲೂ ಇದೆ ಅಂದ ಮೇಲೆ ಇದು ಹೊಸದಾಗಿರಲು ಹೇಗೆ ಸಾಧ್ಯ? ಮತ್ತೊಮ್ಮೆ ಆ ಕಂಪ್ಯೂಟರ್ ಅಂಗಡಿಗೆ ಫೋನಾಯಿಸಿ, ಬದಲಿಸಿದ ಹಾರ್ಡ್ ಡಿಸ್ಕ್ ಹೊಸತೇ ಅಲ್ಲವೇ ಎಂಬ ಗುಮಾನಿಯನ್ನು ವ್ಯಕ್ತಪಡಿಸಿದೆವು. "ಅದು ಹೊಚ್ಚ ಹೊಸದೇ" ಎಂಬ ಉತ್ತರ ದೊರಕಿತು.

ಡಿ ಡ್ರೈವ್ ನ ಕಡತಗಳಲ್ಲಿ ಏನೇನಿದೆ ಎನ್ನುತ್ತೀರಾ? 1. ಬ್ಯಾಂಕ್ ಸ್ಟೇಟ್ ಮೆಂಟ್ ಗಳು 2. ಕ್ರೆಡಿಟ್ ಕಾರ್ಡ್ ಸ್ಟೇಟ್ ಮೆಂಟ್ ಗಳು 3. ಷೇರು ವ್ಯವಹಾರದ ಅಂಕಿ ಅಂಶ 4. ಗೃಹಸಾಲದ ವಿವರಗಳು 5. ಕುಟುಂಬದ ಛಾಯಾಚಿತ್ರಗಳು 6. ಆಫೀಸಿನ ವಿವರಗಳು.

ಇತ್ತೀಚೆಗೆ 'Identity theft' , ಅಂತರ್ಜಾಲದಲ್ಲಿ ಆಗುವ ಮೋಸ ಹೆಚ್ಚಾಗಿವೆಯಷ್ಟೆ. ನನ್ನೆದುರು ಒಂದು ಪ್ರತ್ಯಕ್ಷ ನಿದರ್ಶನವಿತ್ತು.

ಆ ಕಡತಗಳಲ್ಲಿ ಆ ವ್ಯಕ್ತಿಯ ದೂರವಾಣಿ ಸಂಖ್ಯೆಯನ್ನು ಪಡೆದು ಅವರಿಗೆ ಫೋನಾಯಿಸಿ, ಎಲ್ಲ ವಿಷಯಗಳನ್ನು ತಿಳಿಸಿ, ಅವರ ಅಂತರ್ಜಾಲದ ಪಾಸ್ ವರ್ಡ್ಗಳನ್ನು ತಕ್ಷಣವೇ ಬದಲಾಯಿಸಲು ಆಗ್ರಹಿಸಿದೆವು. ಈ ವಿಷಯ ತಿಳಿದು ಅವರಿಗೂ ಗಾಬರಿಯಾಯಿತೆಂದು ಹೊಸದಾಗಿ ಹೇಳಬೇಕೆ?

ಇಲ್ಲಿ ಇಬ್ಬರಿಗೆ ಮೋಸವಾಗಿದೆ. 1. ಹೊಸ ಹಾರ್ಡ್ ಡಿಸ್ಕ್ ನ ಬೆಲೆ ತೆತ್ತು ಹಳೆಯದನ್ನು ಪಡೆದ ನನಗೆ 2. ಈ ಪರಿಯ ವೈಯಕ್ತಿಕ ದಾಖಲೆಗಳು ಯಾರದಾಗಿದ್ದವೋ ಅವರಿಗೆ. ಹಾಗೆ ನೋಡಹೋದರೆ ಮೊದಲನೆಯದ್ದಕ್ಕಿಂತ ಎರಡನೆಯದು ಅತ್ಯಂತ ಗಂಭೀರ ವಿಷಯ. ಎಲ್ಲಾ ತರಹದ ವಿಷಯಗಳೂ ಒಂದು ಚಿಕ್ಕ ಡಿಸ್ಕ್ ನಲ್ಲಿ ಅಡಕವಾಗಿಸಬಹುದಾದ ಈ ಕಾಲದಲ್ಲಿ ಸುರಕ್ಷತೆಯ ಕೊರತೆ ಎದ್ದು ಕಾಣುತ್ತಿದೆ.

ಕಂಪ್ಯೂಟರ್ ನಲ್ಲಿ ತಕ್ಕಮಟ್ಟಿನ ಸಾಕ್ಷರರಾಗಿದ್ದರೂ ಮೋಸ ಹೋಗುವ ಭಯ ಬೆಂಗಳೂರಿನಲ್ಲಿ ಇಲ್ಲದಿಲ್ಲ. ಈ ಥರದ ಘಟನೆಗಳು ನಡೆದಲ್ಲಿ ಸಾರ್ವಜನಿಕರ ಗಮನಕ್ಕೆ ತಂದು ಜನರಲ್ಲಿ ಸೂಕ್ತ ಜಾಗೃತಿಯನ್ನು ಮೂಡಿಸುವುದು ಅತ್ಯಗತ್ಯ. ಎಲ್ಲಕ್ಕಿಂತ ಮುಖ್ಯವಾದ ವಿಷಯವೆಂದರೆ ವೈಯಕ್ತಿಕ ವಿವರಗಳನ್ನು ಒಂದೆಡೆ ಕಲೆ ಹಾಕಿದಾಗ ಅದಕ್ಕೆ ತಕ್ಕ ಭದ್ರತೆಯನ್ನು ಕಲ್ಪಿಸುವುದು ಇವತ್ತಿನ ಅಗತ್ಯ. ಇಲ್ಲವಾದಲ್ಲಿ ನಿಮ್ಮ ವೈಯಕ್ತಿಕ ವಿವರಗಳು ಜಗಜ್ಜಾಹೀರಾಗುವುದರಲ್ಲಿ ತುಂಬಾ ಸಮಯ ಹಿಡಿಯುವುದಿಲ್ಲ!
ದಟ್ಸ್ ಕನ್ನಡದಲ್ಲಿ

Tuesday, March 31, 2009

ಮೆಂತೆ ತಂಬುಳಿ


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಬೇಸಗೆಯಲ್ಲಿ ತಯಾರಿಸುವ ಒಂದು ಬಗೆಯ ಮೇಲೋಗರಕ್ಕೆ ’ತಂಬುಳಿ’ ಎಂದು ಹೆಸರು.ಬಿಸಿ ಬಿಸಿ ಅನ್ನಕ್ಕೆ ತಂಪಾದ ಈ ತಂಬುಳಿಯನ್ನು ಕಲಸಿಕೊಂಡು ಊಟ ಮಾಡುವುದೆಂದರೆ..ಆಹಾ..ಎಂಥ ರುಚಿ!! ತಂಬುಳಿಯ ಮೂಲವಸ್ತು :ತೆಂಗಿನಕಾಯಿ ತುರಿ ಮತ್ತು ಮಜ್ಜಿಗೆ. ಮತ್ತೆ ಒಗ್ಗರಣೆ. ಮೆಂತೆ ತಂಬುಳಿ,ಒಂದೆಲಗದ ತಂಬುಳಿ,ಶುಂಠಿ ತಂಬುಳಿ,ದೊಡ್ಡ ಪತ್ರೆ ತಂಬುಳಿ,ಮಾವಿನ ಮಿಡಿ ತಂಬುಳಿ..ಒಂದೇ ಎರಡೇ..ಹಲವಾರು ವಿಧದ ತಂಬುಳಿಗಳು ಜನಪ್ರಿಯವಾಗಿವೆ.

ಇಲ್ಲಿ ಮೆಂತೆ ತಂಬುಳಿ ಮಾಡುವ ವಿಧಾನವನ್ನು ಬರೆಯುತ್ತಿದ್ದೇನೆ.

ಬೇಕಾಗುವ ಸಾಮಗ್ರಿಗಳು
ಮೆಂತೆ:ಅರ್ಧ ಚಮಚ
ಜೀರಿಗೆ:ಒಂದು ಚಮಚ
ಕಾಳು ಮೆಣಸು :೬
ಮಜ್ಜಿಗೆ:ಎರಡು ಲೋಟ
ತೆಂಗಿನ ಕಾಯಿ ತುರಿ:ಅರ್ಧ ಲೋಟ
ಉಪ್ಪು:ರುಚಿಗೆ ತಕ್ಕಷ್ಟು

ಒಗ್ಗರಣೆಗೆ:ಎಣ್ಣೆ :ಒಂದು ಚಮಚ
ಬೇವಿನೆಲೆ :೬ ಎಸಳು
ಜೀರಿಗೆ:ಅರ್ಧ ಚಮಚ
ಸಾಸಿವೆ:ಅರ್ಧ ಚಮಚ

ವಿಧಾನ :
೧.ಮೆಂತೆ,ಜೀರಿಗೆ,ಕಾಳು ಮೆಣಸು ಇವುಗಳನ್ನು ಹುರಿದುಕೊಂಡು, ತೆಂಗಿನಕಾಯಿ ತುರಿಯ ಜತೆ ರುಬ್ಬಿ.
೨.ಈ ಮಿಶ್ರಣಕ್ಕೆ ಮಜ್ಜಿಗೆ,ಉಪ್ಪು ಹಾಕಿ ಕಲಸಿ.
೩.ಸಣ್ಣ ಪಾತ್ರೆಯಲ್ಲಿ/ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ,ಬಿಸಿಯಾಗುತ್ತಿದ್ದಂತೆ,ಸಾಸಿವೆ,ಜೀರಿಗೆ ಹಾಕಿ. ಸಾಸಿವೆ ಚಟಪಟ ಎನ್ನುತ್ತಿದ್ದಂತೆ,ಬೇವಿನ ಎಸಳು ಹಾಕಿ
೪.ಇದನ್ನು ರುಬ್ಬಿ ಇಟ್ಟ ಮಿಶ್ರಣಕ್ಕೆ ಹಾಕಿ. ಕಲಸಿ.
೫.ಇದೇ ತಂಬುಳಿ.ಇನ್ನೇಕೆ ತಡ..ಅನ್ನದ ಜತೆ ಕಲಸಿ ತಿನ್ನಿ .

Monday, February 16, 2009

ರಿಯಾಲಿಟಿ ಶೋ...






ದಿನ ಬೆಳಗಾದರೆ ಸಾಕು,ಯಾವುದೇ ಚ್ಯಾನಲನ್ನು ಒತ್ತಿದರೂ ಸಾಮಾನ್ಯವಾಗಿ ಕಾಣಿಸುವ ಕಾರ್ಯಕ್ರಮ ’ರಿಯಾಲಿಟಿ ಶೋ’.ಸಂಗೀತ ಕ್ಷೇತ್ರಕ್ಕೆ ಇದು ಪ್ರೋತ್ಸಾಹವನ್ನು ನೀಡುತ್ತಿರುವಂತೆ ಮೇಲ್ನೊಟಕ್ಕೆ ಅನಿಸಿದರೂ, ಕೆಳಕಂಡ ಅಂಶಗಳು ಅದಕ್ಕೆ ವಿರುದ್ಧವಾದ ವಾದವನ್ನು ಪುಷ್ಟೀಕರಿಸುತ್ತವೆ.

೧.ಸಂಗೀತ ಸ್ಪರ್ಧೆಯನ್ನು ಒಂದು ರೀತಿಯ ಯುದ್ಧದಂತೆ ಬಿಂಬಿಸಲಾಗುತ್ತದೆ.ವೇದಿಕೆಯು ಸಮರಾಂಗಣ.ಅದಕ್ಕೆ ತಕ್ಕುದಾದ ಹಿನ್ನೆಲೆ ಸಂಗೀತ ಹಾಗೂ ಬೆಳಕಿನ ಅಬ್ಬರ.ಭಯಭೀತರಾಗಿರುವ ಸ್ಪರ್ಧಿಗಳು!!

೨.ಹಾಡಿಗಿಂತಲೂ ಹಾಡುಗಾರರ ವಸ್ತ್ರಾಲಂಕಾರ,ಮನೆಯ ಆರ್ಥಿಕ ಪರಿಸ್ಥಿತಿ,ಅವರ ಹೆತ್ತವರ/ಸಂಬಧಿಕರ ಆತಂಕ,ಹಾರೈಕೆ,ಸ್ಪರ್ಧಿಗಳ ಮಾನಸಿಕ ತುಮುಲಗಳ ಬಗ್ಗೆ ಕಾಮೆರ ಹಾಯಿಸಲಾಗುತ್ತದೆ.ಕ್ಯಾಮರಾದ ಕಣ್ಣ ಮುಂದೆಯೇ ತೀರ್ಪುಗಾರರ ವಾಗ್ವಿವಾದವೂ ನಡೆಯುತ್ತದೆ.ಕೆಲವೊಮ್ಮೆ ಸ್ಪರ್ಧಿಯ ಧಾರ್ಮಿಕ ನಂಬಿಕೆಗಳ ಚಿತ್ರೀಕರಣವನ್ನೂ ಪ್ರೇಕ್ಷಕರಿಗೆ ತೋರಿಸಲಾಗುತ್ತದೆ.ಇವೆಲ್ಲವೂ ಚ್ಯಾನಲ್ ನ ಟಿ.ಆರ್.ಪಿ.ಹೆಚ್ಚಿಸುವ ತಂತ್ರಗಳೆಂದು ಬೇರೆ ಹೇಳಬೇಕಾಗಿಲ್ಲ.

೩.ಸ್ಪರ್ಧೆಯಲ್ಲಿ ಖ್ಯಾತ ಹಾಡುಗಾರರು ತೀರ್ಪುಗಾರರಾಗಿ ಬಂದರೂ, ಫಲಿತಾಂಶ ತೀರ್ಮಾನವಾಗುವುದು ಎಸ್.ಎಮ್.ಎಸ್.ಮೂಲಕ.ಹೀಗಾಗಿ ಕೆಲವೊಮ್ಮೆ ಅತ್ಯುತ್ತಮ ಹಾಡುಗಾರರೂ ಮುಂದಿನ ಹಂತಗಳಿಗೆ ಹೋಗುವ ಅವಕಾಶದಿಂದ ವಂಚಿತರಾಗುತ್ತಾರೆ.

೪.ಹೊಸ ಚಲನಚಿತ್ರ ತೆರೆ ಕಾಣುವುದಿದ್ದಲ್ಲಿ,ಅದರ ನಟ/ನಟಿ/ನಿರ್ದೇಶಕರು ಅತಿಥಿಯಾಗಿ ಕಾರ್ಯಕ್ರಮಕ್ಕೆ ಬರುತ್ತಾರೆ.ಹೊಸ ಚಿತ್ರಗಳು ಹಿಟ್ ಆಗುವಲ್ಲಿ ಇಂತಹ ಜಾಹೀರಾತು ತಂತ್ರಗಳು ಚಿತ್ರತಂಡಕ್ಕೆ ಅಗತ್ಯವೆನಿಸಿವೆ.


೫.ಸತತ ಸಾಧನೆ,ಸ್ವರ,ಲಯ,ತಾಳಗಳ ನಿರಂತರ ಅಭ್ಯಾಸದಿಂದ ಕರಗತವಾಗುವ ವಿದ್ಯೆ -ಸಂಗೀತ.ಇಂತಹ ರಿಯಾಲಿಟಿ ಶೊಗಳು ಜನರಲ್ಲಿ ಹಾಡಬೇಕೆಂಬ ಆಸೆ ಹುಟ್ಟಿಸುವುದು ನಿಜ.ಟಿ.ವಿ.ಯಲ್ಲಿ ತಮ್ಮ ಮಗ/ಮಗಳು ಹಾಡುವುದೆಂದರೆ ಯಾರಿಗೆ ತಾನೆ ಇಷ್ಟವಿಲ್ಲ? ಡಿ.ವಿ.ಜಿ.ಯವರು ಹೇಳಿದಂತೆ ’ಮನ್ನಣೆಯ ದಾಹವೀ ಎಲ್ಲಕ್ಕಿಂತ ತೀಕ್ಷ್ಣತಮ!! ’. ಆದರೂ ಇಂತಹ ಸ್ಪರ್ಧೆಗಳು ಜನರಲ್ಲಿ ಕ್ಷಿಪ್ರ ಕಲಿಕೆಯ ಭ್ರಾಂತಿಯನ್ನು ಹುಟ್ಟಿಸುತ್ತವೆ.ನನ್ನ ಸಂಗೀತ ಟೀಚರು ಮೊನ್ನೆ ಹೀಗೇ ಮಾತಾಡುವಾಗ ಅಂದರು "ನನ್ನಲ್ಲಿ ಸಂಗೀತ ಕಲಿಯಲು ಬರುವ ಕೆಲವರದ್ದು ಈ ಪರಿಯ ಪ್ರಶ್ನೆ "ಎಷ್ಟು ದಿನದಲ್ಲಿ ನನ್ನ ಮಗ/ಮಗಳು ಸಂಗೀತ ಕಲಿತು ಟಿ.ವಿ.ಯಲ್ಲಿ ಹಾಡಬಹುದು?" ಟೀಚರಂದರಂತೆ "ಸಂಗೀತವೇನೂ ಕ್ರೇಶ್ ಕೋರ್ಸ್ ಅಲ್ಲ..ಇಂತಿಷ್ಟು ದಿನದಲ್ಲಿ ಕಲಿಯಲು."

ಕೆಲವೆಡೆ ಇಂತಹ ಸ್ಪರ್ಧೆಗಳಿಗಾಗಿಯೇ ತರಬೇತಿ ನೀಡಲಾಗುತ್ತದೆ.ಸಂಗೀತದ ಕಲಿಕೆಗಿಂತಲೂ ಕೆಲವು ಹಾಡುಗಳನ್ನು ಹಾಡಲು ಅಭ್ಯಾಸ ಮಾಡಿಸಲಾಗುತ್ತದೆ. ಆದರೆ ಕೆಲವೊಂದು ರಿಯಾಲಿಟಿ ಶೋಗಳಲ್ಲಿ ಮಿಂಚಿದವರು ಗಮನಾಹ್ರವಾಗಿ ಮುಂದೆ ಬರುತ್ತಿರುವ ಲಕ್ಷಣಗಳು ಕಾಣಿಸುತ್ತಿಲ್ಲ.
ಹೀಗೆಂದು ಬರುವ ಎಲ್ಲರೂ ಇದೇ ರೀತಿ ಎಂದು ನಾನು ಹೇಳುವುದಿಲ್ಲ.ಬಲು ಸೊಗಸಾಗಿ ಹಾಡುವವರೂ ಇದ್ದಾರೆ. ಆದರೆ ರಿಯಾಲಿಟಿ ಶೊದ ಆಯ್ಕೆ ಪ್ರಕ್ರಿಯೆಯು ಎಸ್.ಎಮ್.ಎಸ್.ಮತ್ತು ಪ್ರಚಾರತಂತ್ರಗಳ ಮೇಲೆ ಅವಲಂಬಿತವಾಗಿರುವುದು ವಿಶಾದನೀಯ!!

Sunday, December 14, 2008

ಇಂಗ್ಲೆಂಡ್ ಪ್ರವಾಸ ಕಥನ...

ಹೌದು..ಮತ್ತೊಮ್ಮೆ ಕಣ್ಣುಜ್ಜಿಕೊಂಡೆ..ನಾನು ನೋಡುತ್ತಿರುವುದು ಕನಸೋ ಅಥವಾ ನಿಜವೋ ಎಂದು ಅರಿಯಲು ಕೊಂಚ ಸಮಯವೇ ಬೇಕಾಯಿತು. ಹೌದು..ನಾನು ಇಂಗ್ಲೆಂಡಿನಲ್ಲೇ ಇದ್ದೇನೆ.’ಮೊನೊಪಲಿ’ ಎಂಬ ಆಟದಲ್ಲಿ ಬರುವ ಬೀದಿಗಳು,ರೈಲ್ವೇ ನಿಲ್ದಾಣಗಳು ಇವೆಲ್ಲಾ ನನ್ನ ಕಣ್ಣ ಮುಂದೆಯೇ ಇವೆ!! ಸೊನ್ನೆ ಡಿಗ್ರಿಯಷ್ಟು ಕೊರೆಯುವ ಚಳಿಯಲ್ಲಿ ಟೊಪ್ಪಿ,ಕೈಗವಸು,ಶೂ,ಕೋಟು ಹಾಕಿಯೇ ಜನ ಓಡಾಡುತ್ತಿದ್ದಾರೆ.

ಬಹುಷ: ಇಂಗ್ಲೆಂಡಿನ ಬಗ್ಗೆ ಕೇಳಿದಷ್ಟು ,ಛಾಯಾಚಿತ್ರಗಳನ್ನು ನೋಡಿದಷ್ಟು ನಾನು ಬೇರಾವ ದೇಶದ ಬಗ್ಗೆಯೂ ಮಾಡಿಲ್ಲ.ನನ್ನ ಆಪ್ತ ವರ್ಗದ ಹಲವರು ಅಲ್ಲಿ ನೆಲೆಸಿಬಂದವರೋ, ನೆಲೆಸಿರುವವರೋ ಆಗಿರುವ ಕಾರಣ ಮತ್ತು ಅವರೆಲ್ಲರೂ ಇಂಗ್ಲೆಂಡಿನ ಪ್ರ್‍ಏಕ್ಷಣೀಯ ಸ್ಥಳಗಳ ಬಗ್ಗೆ,ಅಲ್ಲಿಯ ಜನಜೀವನದ ಬಗ್ಗೆ ವರ್ಣಿಸಿದಾಗ ನನಗೂ ಅಲ್ಲಿ ಜೀವನದಲ್ಲಿ ಒಮ್ಮೆಯಾದರೂ ಹೋಗಬೇಕೆಂಬ ಆಸೆ ಮೂಡುತ್ತಿದ್ದದ್ದು ಸುಳ್ಳಲ್ಲ.

ಕಡೆಗೂ ನನ್ನ ಆಸೆ ಈಡೇರುವ ದಿನ ಬಂದೇ ಬಿಟ್ಟಿತು.ಕಂಪನಿ ಕೆಲಸದ ನಿಮಿತ್ತ ನನ್ನ ಇಂಗ್ಲೆಂಡ್ ಪ್ರವಾಸ ನಿಶ್ಚಯವಾಯಿತು.ಸ್ವಾಮಿ ಕಾರ್ಯ,ಸ್ವಕಾರ್ಯ ಎರಡನ್ನೂ ಒಟ್ಟಿಗೇ ಮಾಡುವ ಹಂಬಲ ನನ್ನದು.ಹಾಗಾಗಿ ಕಿರುಅವಧಿಯ ಪ್ರವಾಸದಲ್ಲೇ ಆಫ಼ೀಸು ಕೆಲಸದ ಜತೆಗೆ ಸಾಕಷ್ಟು ಪ್ರ್‍ಏಕ್ಷಣೀಯ ಸ್ಥಳಗಳನ್ನು ಸಂದರ್ಶಿಸುವ ಮತ್ತು ನನ್ನ ಆತ್ಮೀಯ ಸ್ನೇಹಿತೆಯೋರ್ವಳನ್ನು ಭೇಟಿಯಾಗುವ ಕಾರ್ಯಕ್ರಮಗಳನ್ನು ಯೋಜಿಸಿದೆ.



ಎರಡು ದಿನಗಳ ಬಿಡುವು ಮಾಡಿಕೊಂಡು ಲಂಡನ್ ಸುತ್ತಿದೆ.ಬಿಗ್ ಬೆನ್,ಟವರ್ ಬ್ರಿಡ್ಜ್,ಬಂಕಿಂಗ್ ಹಾಮ್ ಅರಮನೆ,ಲಂಡನ್ ಐ ,ಮೇಡಮ್ ಟುಸಾಟ್ಸ್ ಇವುಗಳನ್ನು ಸಂದರ್ಶಿಸಿದೆ.ಹತ್ತು ಹಲವು ಚರ್ಚುಗಳೂ,ಸುಂದರ ವಾಸ್ತುವಿನ್ಯಾಸದ ಕಟ್ಟಡಗಳೂ ನನ್ನ ಮನಸ್ಸನ್ನು ಸೆಳೆದವು.ಕ್ರಿಸ್ಮಸ್ ಗೆ ಈಗಾಗಲೇ ನಗರವು ಸಜ್ಜುಗೊಂಡಿತ್ತು.ಎಲ್ಲಿ ನೋಡಿದರೂ ಕ್ರಿಸ್ಮಸ್ ಟ್ರೀ ಅಲಂಕಾರ !! ಅಂಗಡಿಗಳೆಲ್ಲವೂ ಝಗಮಗಿಸುವ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ!!



ಇಂಗ್ಲೆಂಡ್ ಗೆ ಹೋಗುವ ಮುನ್ನ ನನ್ನ ಮನಸ್ಸಲ್ಲಿ ಇದ್ದ ಕೊಂಚ ಗೊಂದಲ ಮೂಡಿಸಿದ್ದ ವಿಷಯಗಳೆಂದರೆ ೧)ವಿಪರೀತ ಚಳಿ :ಬೆಂಗಳೂರಿನ ೧೮-೨೦ ಡಿಗ್ರಿಗಳಷ್ಟು ತಾಪಮಾನದಲ್ಲೇ ಚಳಿ ಎಂದು ಗಟ್ಟಿ ಹೊದಿಕೆ ಹೊದ್ದು ಮಲಗುವ ನಾನು ,೦ ಡಿಗ್ರಿಯ ತಾಪಮಾನದಲ್ಲಿ ವಾಸಮಾಡುವುದು ಹೇಗೆ ಎಂದು. ಸಾಕಷ್ಟು ಬೆಚ್ಚನೆಯ ವಸ್ತ್ರಗಳು ಚಳಿಯಿಂದ ನನ್ನನ್ನು ರಕ್ಷಿಸಿಕೊಳ್ಳಲು ನೆರವಾದವು.ಹೋಟೆಲ್,ಕಛೇರಿ ಗಳಲ್ಲಿ ಹೀಟರ್ ಇದ್ದ ಕಾರಣ ಏನೂ ತೊಂದರೆ ಆಗಲಿಲ್ಲ. ೨) ಇನ್ನೊಂದು ವಿಷಯವೆಂದರೆ ಲಂಡನ್ ನ ಸಂಚಾರಿ ವ್ಯವಸ್ಥೆ. ಇಲ್ಲಿ ಟ್ಯೂಬ್ (ಭೂಮಿಯೊಳಗೆ ಚಲಿಸುವ ವಾಹನ),ಟ್ರೈನ್, ಬಸ್ಸು ಇವೆಲ್ಲವೂ ನನಗೆ ಕೊಂಚ ಹೆದರಿಕೆ ಹುಟ್ಟಿಸಿದ್ದವು.ನಾನು ಟ್ರೈನ್ ನಿಂದ ಹೊರಗೆ ಬರುವ ಮುಂಚೆಯೇ ಬಾಗಿಲು ಮುಚ್ಚಿಕೊಂಡರೆ ಏನು ಮಾಡಲಿ ? ನಕಾಶೆ ಓದುವಲ್ಲಿ ಅತ್ಯಂತ ಕೆಳಗಿನ ಸ್ಥಾನದಲ್ಲಿರುವ ನನಗೆ ಟ್ಯೂಬ್ ನ ನಕಾಶೆಯನ್ನು ಓದಿ ಅದರಲ್ಲಿ ಸಂಚರಿಸಲಾದೀತೆ ಇತ್ಯಾದಿ ನನಗಿದ್ದ ಸಂಶಯಗಳು.ಆದರೆ ಅಲ್ಲಿ ಹೋದ ಮೇಲೆ ನನಗೆ ಅತೀವ ಆತ್ಮವಿಶ್ವಾಸ ಮೂಡಿ,ಲಂಡನ್ ನ ಎಲ್ಲಾ ರೀತಿಯ ಸಾರಿಗೆ ವ್ಯವಸ್ಥೆಗಳಲ್ಲೂ ಸಂಚಾರ ಮಾಡಿದೆ!! ನನಗೆ ಈಗಲೂ ಅದು ಹೇಗೆ ಸಾಧ್ಯವಾಯಿತು ಎಂದು ನಂಬಲಾಗುತ್ತಿಲ್ಲ!!



ನನ್ನ ಮುಂದಿನ ಭೇಟಿ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯಕ್ಕೆ. ಆಕ್ಸ್ ಫರ್ಡ್ ಎನ್ನುವುದು ಒಂದು ಪುಟ್ಟ ಊರು. ಊರು ತುಂಬಾ ಕಾಲೇಜುಗಳು. ಎಲ್ಲಿ ನೋಡಿದರೂ ವಿದ್ಯಾರ್ಥಿಗಳು.ಕಾಲೇಜು ಕಟ್ಟಡಗಳೆಲ್ಲವೂ ಹಳೆಯ ಕಾಲದ ವಾಸ್ತುವಿನ್ಯಾಸವನ್ನು ಹೊಂದಿದ್ದವು. ನನಗ್ಯಾಕೋ ನಾನೊಂದು ಬೇರೆಯೇ ಪ್ರಪಂಚಕ್ಕೆ ಬಂದಂತೆ ಅನಿಸಿತು. ಚಿಕ್ಕದಾಗಿ,ಚೊಕ್ಕದಾಗಿ ಇರುವ ಈ ಸುಂದರ ಊರು ನನ್ನನ್ನು ಬಹಳಷ್ಟು ಆಕರ್ಷಿಸಿತು.

ಮತ್ತೆ ಸ್ವಲ್ಪ ದಿನಗಳ ಕಾಲ ನಾನು ಕಚೇರಿ ಕೆಲಸದಲ್ಲಿ ಮಗ್ನಳಾದೆ.ನಾನು ವಾಸಮಾಡಿದ್ದ ಊರಿನ ಹೆಸರು ’ರೆಡ್ಡಿಂಗ್ ’. ಒಂದು ಪುಟ್ಟ ಊರು. ಅದೂ ಸಹ ಬಹಳ ಸುಂದರವಾಗಿತ್ತು. ನನಗೆ ಅದು ಕಲಾವಿದ ಬಿಡಿಸಿದ ಒಂದು ಚಂದದ ಚಿತ್ರದಂತೆ ಭಾಸವಾಗುತ್ತಿತ್ತು.
ಕೆಲವೊಂದು ಆಂಗ್ಲ ಭಾಷಾ ಚಲನಚಿತ್ರಗಳಲ್ಲಿ ನೋಡಿದ್ದ ಊರುಗಳಂತೆ...ಎಲ್ಲವೂ ಅಚ್ಚುಕಟ್ಟು..ಎಲ್ಲೆಡೆಯೂ ಸ್ವಚ್ಛತೆ...ಶಿಸ್ತು..ನನಗೇಕೋ ನಾನೊಂದು ಕನಸಿನ ಲೋಕಕ್ಕೆ ಬಂದಂತೆ ಭಾಸವಾಗುತ್ತಿತ್ತು.ರೆಡ್ಡಿಂಗ್ ನಲ್ಲಿ ಇರುವ ’ಥೇಮ್ಸ್ ವ್ಯಾಲಿ ಪಾರ್ಕ್’ :ಥೇಮ್ಸ್ ನದಿಯ ದಂಡೆಯ ಮೇಲೆ ಇರುವ ಹಲವಾರು ಸಾಫ಼್ಟ್ ವೇರ್ ಕಂಪನಿಗಳ ಸಮೂಹ. ನನಗೆ ವಿಶಿಷ್ಟ ಎನಿಸಿದ್ದು : ಅಲ್ಲಿಯ ಕಟ್ಟಡಗಳು ಹೆಚ್ಚೆಂದರೆ ೩ ಮಹಡಿಗಳಷ್ಟೇ ಎತ್ತರ!!




ಕಛೇರಿ ಕೆಲಸದ ನಂತರ ನನ್ನ ಮುಂದಿನ ಪಯಣ ಬ್ಲಾಕ್ ಪೂಲ್ ನಲ್ಲಿರುವ ನನ್ನ ಸ್ನೇಹಿತೆಯ ಮನೆಗೆ. ರೆಡ್ಡಿಂಗ್ ನಿಂದ ಲಂಡನ್ ಗೆ ನನ್ನ ಲಗ್ಗೇಜುಗಳ ಜತೆ ಸಾಗಿದೆ.ಲಂಡನ್ ಸ್ಟೇಶನ್ ನಲ್ಲಿ ನನ್ನ ಸ್ನೇಹಿತೆಯ ಪತಿ ಕಾಯುತ್ತಿದ್ದರು.ನನ್ನ ಸ್ಯೂಟ್ ಕೇಸ್ ಗಳನ್ನು ಅವರಿಗೆ ವರ್ಗಾಯಿಸಿದೆ.. ನಾನೊಬ್ಬಳೇ ಲಂಡನ್ ಸುತ್ತುವಾಗ ಇದ್ದ ಆತಂಕ,ನಕಾಶೆಗಳನ್ನು ಓದುವ ಕೆಲಸ ಯಾವುದೂ ನನ್ನ ಜತೆಗಿರಲಿಲ್ಲ.ಪುಟ್ಟ ಬ್ಯಾಗ್ ಗಳನ್ನು ನಾನು ಹಿಡಿದುಕೊಂಡು ಅವರನ್ನು ಹಿಂಬಾಲಿಸಿದೆ. ದಿಕ್ಕು ಸೂಚನಾ ಫಲಕಗಳನ್ನು ಓದುವ ಗೋಜಿಗೂ ಹೋಗಲಿಲ್ಲ!! ನನ್ನ ಲಂಡನ್ ಪ್ರವಾಸದಲ್ಲಿ ನಿರಾತಂಕದಿಂದ ಇದ್ದ ಕ್ಷಣಗಳವು!!:)

ಲಂಡನ್-->ಪ್ರೆಸ್ಟನ್-->ಬ್ಲಾಕ್ ಪೂಲ್ ಗೆ ತಲುಪಿದೆ. ನನ್ನ ಸ್ನೇಹಿತೆ ಬಿಸಿಬೇಳೆ ಭಾತ್,ಅನ್ನ,ತಂಬುಳಿ,ಪಾಯಸ ತಯಾರಿಸಿ ನನಗಾಗಿ ಕಾಯುತ್ತಿದ್ದಳು. ಇಷ್ಟು ದಿನಗಳ ಪ್ರವಾಸದ ಸಮಯದಲ್ಲಿ ಬರೀ ತರಕಾರಿ,ಬ್ರ್‍ಎಡ್,ಪಿಜ಼ಾಗಳನ್ನೇ ಕಂಡ ನನಗೆ ಆಕೆ ತಯಾರಿಸಿದ ಖಾದ್ಯಪದಾರ್ಥಗಳನ್ನು ಕಂಡು ಬಾಯಿಯಲ್ಲಿ ನೀರೂರಿತು :) ನನ್ನ ಗೆಳತಿಗೆ ನಾನು ’ಬೆಸ್ಟ್ ಕುಕ್ ’ ಎಂಬ ಬಿರುದನ್ನು ಘೋಷಿಸಿದೆ. ಅಷ್ಟೊಂದು ರುಚಿಕರವಾಗಿ ಅಡುಗೆ ತಯಾರಿಸಿದ್ದಳು!!ನನಗೆ ಸ್ವರ್ಗಕ್ಕೆ ಮೂರೇ ಗೇಣು ಎನಿಸಿತು!!




ಮರುದಿನ ನಾವು ಮಾಂಚೆಸ್ಟರ್ ನ ಶೋಪಿಂಗ್ ಸೆಂಟರ್ ಗೆ ಹೋದೆವು. ಟ್ರಾಫರ್ಡ್ ಸ್ಕ್ವಾರ್ ಎನ್ನುವುದು ಅದರ ಹೆಸರು. ಇಡೀ ದಿನ ಅಲ್ಲಿ ಸುತ್ತಾಡಿ ಬಂದೆವು. ನನ್ನ ಪ್ರವಾಸದಲ್ಲಿ ನಾನು ಬಹಳಷ್ಟು ಖುಶಿ ಪಟ್ಟ ಸ್ಥಳ ’ಲೇಕ್ ಡಿಸ್ಟ್ರಿಕ್ಟ್. ನಾನು ಇಷ್ಟರವರೆಗೆ ಹಿಮ ಕವಿದ ಪ್ರದೇಶವನ್ನು ಕಂಡಿರಲಿಲ್ಲ. ಸುತ್ತಮುತ್ತಲೂ ಹಿಮದ ಚಾದರ ಹರಡಿದರೆ ಅದು ಹೇಗೆ ಕಂಡೀತೆಂದು ಛಾಯಾಚಿತ್ರಗಳಲ್ಲಿ ಮಾತ್ರ ಕಂಡಿದ್ದೆ. ಹಿಮವನ್ನು ನನ್ನ ಕಣ್ಣಾರೆ ಕಂಡಾಗ ನನಗಾದ ಆನಂದಕ್ಕೆ ಪಾರವೇ ಇರಲಿಲ್ಲ. ಅಷ್ಟು ಚಳಿ ಕೊರೆಯುತ್ತಿದ್ದರೂ ಹಿಮವನ್ನು ಕೈಯಲ್ಲಿ ಹಿಡಿದುಕೊಂಡು ಛಾಯಾಚಿತ್ರ ತೆಗೆದುಕೊಳ್ಳಲು ಮರೆಯಲಿಲ್ಲ.ನಾನು ಅತೀವ ಹರ್ಷಿಸಿದ ಸಮಯ ಅದು!!

ಲೇಕ್ ಡಿಸ್ಟ್ರಿಕ್ಟ್ ಹೆಸರೇ ಸೂಚಿಸುವಂತೆ ಅನೇಕ ಸರೋವರಗಳನ್ನು ಹೊಂದಿರುವ ಊರು. ಹಿಮದ ಹೊದಿಕೆ ಹೊದ್ದಿರುವ ,ಚಂದದ ಚಿತ್ರ ಅದು.ಜನಸಂಖ್ಯೆಯಂತೂ ತೀರಾ ಕಡಿಮೆ.ಚಳಿಗೆ ಇಡೀ ಊರೇ ನಿದ್ದೆಯಲ್ಲಿರುವಂತೆ ಕಾಣುತ್ತದೆ.ಅಲ್ಲಿಯ ಸೌಂದರ್ಯವನ್ನು ಬಣ್ಣಿಸಲು ನನ್ನ ಲೇಖನಿಗೆ ಶಕ್ತಿ ಸಾಲದು ಎನಿಸುತ್ತಿದೆ. ಅಷ್ಟೊಂದು ಸೊಗಸು.



ಒಟ್ಟಿನಲ್ಲಿ ನನ್ನ ಇಂಗ್ಲೆಂಡ್ ಪ್ರವಾಸವು ಆಂಗ್ಲ ಭಾಷೆಯಲ್ಲಿ ಹೇಳುವುದಾದರೆ "short,sweet and cold "!! :)

Friday, November 14, 2008

ಒಂದು ಸಂದೇಹ ...

ಎಷ್ಟೇ ಜನ ಓಡಾಡಿದರೂ
ಎಷ್ಟೇ ವಾಹನ ಗುದ್ದಾಡಿದರೂ
ಬೆಂಗಳೂರ ರಸ್ತೆ ಮೂಕ ||

ಹಾರ್ನುಗಳ ಕಿರಿಕಿರಿ
ಜನರ ಚರಿಪಿರಿ
ಬೆಂಗಳೂರ ರಸ್ತೆ ಕಿವುಡು ||

ಮರಗಳು ಉರುಳಿದರೂ
ಬುವಿ ಧಗೆಯೇರಿದರೂ
ಬೆಂಗಳೂರ ರಸ್ತೆ ಕುರುಡು ||


ಹೊಗೆಯುಗುಳುವ ವಾಹನ
ವಾಸನೆಯ ಒಳಚರಂಡಿ
ಮಾರ್ಗಕ್ಕೆ ಮೂಗಿದೆಯೇ ?


ರಸ್ತೆಯ ಡಾಮರು ಕಿತ್ತರೂ
ಕೆಸರು ಜತೆಗೂಡಿದರೂ
ರಸ್ತೆಗೆ ಸ್ಪರ್ಶ ಜ್ಞಾನವಿದೆಯೇ?

ಪ್ರತಿ ದಿನವೂ ಇದೇ ರಸ್ತೆಯಲ್ಲಿ ಸಾಗುವ
ಮುಂದೆಯೂ ಸಾಗಲಿರುವ
ಪ್ರತಿ ಸಲವೂ ಇದೇ ವಿಷಯ ಕೊರೆಯುವ
ನನಗೆ ತಲೆ ಇದೆಯೇ ?

Friday, October 10, 2008

ಒಂದು ಸುಂದರ ಮುಂಜಾವು..ನಮ್ಮ ಮನೆಯ ಎದುರಲ್ಲಿ..

Monday, September 29, 2008

ಮೊಸರನ್ನ


ನಮಸ್ಕಾರ.
ನಾನೀಗ ಬರೆಯಹೊರತಿರುವುದು ಅತ್ಯಂತ ಸುಲಭವಾದ ಅಡುಗೆ ವಿಧಾನ.
ಮೊಸರನ್ನ.ಸರಳವಾದ ಮತ್ತು ರುಚಿಕರವಾದ ಖಾದ್ಯ.ನಾನು ಮೊಸರನ್ನ ಮಾಡುವುದು ಮೂರು ಸಂದರ್ಭಗಳಲ್ಲಿ :೧. ನನಗೊಬ್ಬಳಿಗೆ ಮಾತ್ರ ಅಡಿಗೆ ಮಾಡಿಕೊಳ್ಳಬೇಕಾಗಿ ಬಂದಾಗ ೨)ಅಡಿಗೆ ಮಾಡಲು ಉದಾಸೀನ ಆದಾಗ ೩)ಹೊಸ ಶೈಲಿಯ ಅಡುಗೆ ಪ್ರಯೋಗ ಮಾಡಿದಾಗ.(ಅದು ಸರಿಯಾಗದಿದ್ದರೆ ಕಡೇ ಪಕ್ಷ ಮೊಸರನ್ನವಾದರೂ ಇರಲಿ ಅಂತ ) :)

ಸರಿ,ಮೊಸರನ್ನ ಮಾಡುವ ಪರಿ ಹೀಗಿದೆ.

ಬೇಕಾಗುವ ಸಾಮಗ್ರಿಗಳು :

ಅಕ್ಕಿ : ಎರಡು ಕಪ್
ನೀರು : ನಾಲ್ಕು ಕಪ್

ದಾಳಿಂಬೆ ಬೀಜ : ಅರ್ಧ ಹಿಡಿ
ಗೇರು ಬೀಜ :೧೦
ಎಣ್ಣೆ :ಎರಡು ಚಮಚ
ಮಜ್ಜಿಗೆ ಮೆಣಸು :೪
ಬೇವಿನ ಎಲೆ : ೧೦
ಸಾಸಿವೆ ,ಜೀರಿಗೆ,ಉದ್ದಿನ ಬೆಳೆ ತಲಾ ಒಂದು ಚಮಚ


೨ ಲೋಟ ಅಕ್ಕಿಯನ್ನು ತೊಳೆದು, ೪ ಲೋಟ ನೀರು ಹಾಕಿ, ಕುಕ್ಕರ್ ನಲ್ಲಿ ಇಟ್ಟು ಅನ್ನ ಮಾಡಿಕೊಳ್ಳಿ.( ಮೂರು ಸೀಟಿ ಬರುವ ತನಕ ಅಕ್ಕಿ ಬೇಯಬೇಕು.)


ಒಂದು ಸಣ್ಣ ಕಡಾಯಿಯಲ್ಲಿ, ಎಣ್ಣೆ,ಜೀರಿಗೆ,ಸಾಸಿವೆ,ಉದ್ದಿನ ಬೇಳೆ, ಸಾಸಿವೆ ಸಿಡಿಯುವ ತನಕ ಒಲೆಯ ಮೇಲೆ ಇಡಿ. ಬೇವಿನ ಎಲೆಯನ್ನು ಕೊನೆಗೆ ಹಾಕಿದರೆ ಒಳ್ಳೆಯದು. ಅದನ್ನು ಅನ್ನದ ಮೇಲೆ ಹಾಕಿ.ಈಗ ಮಜ್ಜಿಗೆ ಮೆಣಸನ್ನು ಕರಿದುಕೊಂಡು, ಅನ್ನಕ್ಕೆ ಹಾಕಿ. ಗೇರು ಬೀಜವನ್ನು ಕರಿದು, ಅನ್ನಕ್ಕೆ ಹಾಕಿ. ಗೇರು ಮತ್ತು ಮಜ್ಜಿಗೆ ಮೆಣಸನ್ನು ಪ್ರತ್ಯೇಕವಾಗಿ ಕರಿಯುವುದು ಒಳ್ಳೆಯದು. ಈಗ ದಾಳಿಂಬೆ ಬೀಜಗಳನ್ನು ಅನ್ನಕ್ಕೆ ಸೇರಿಸಿ.ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.

ಈಗ ನೊಡಿ, ಮೊಸರನ್ನ ತಯಾರು.ತಡ ಏಕೆ, ಕೂಡಲೇ ತಿನ್ನಿ. :)

Tuesday, August 12, 2008

ಹೀಗೊಂದು ಸ್ವಗತ...

ಸುಮಾರು ದಿನಗಳಿಂದ ಅಂದುಕೊಳ್ಳುತ್ತಿದ್ದೆ.ಕನ್ನಡ ಅಕ್ಷರ ಬರೆಯದೆ ಬಹಳ ದಿನಗಳಾದವು.ಏನಾದರೂ ಲೇಖನ ಬರೆಯಲೆ? ಉಹ್ಮ್ಮ್..ಕವನ..ಕಥೆ..ಅಂತೂ ಏನೋ ಒಂದು..ಮನಸ್ಸಿಗೆ ತೋಚಿದ್ದು..ಕಾಗದ,ಪೆನ್ನು ಕೈಗೆತ್ತಿಕೊಳ್ಳುತ್ತಿದ್ದಂತೆ ಮನಸ್ಸೆಲ್ಲಾ ಖಾಲಿ ಖಾಲಿ..ಮನಸ್ಸು ಮೌನದ ಮೊರೆ ಹೊಕ್ಕಿಬಿಟ್ಟಿದೆ..ಯಾಕೆ ಹೀಗಾಯ್ತು? ನನ್ನ ಏಕತಾನದ ಜೀವನ ನನ್ನನ್ನು ಈ ಪರಿಯಾಗಿಸಿದೆಯೇ ? ನನಗೆ ಗೊತ್ತಿಲ್ಲ !! :(

ಇವತ್ತಿಗೆ ಆರು ತಿಂಗಳ ಹಿಂದೆ ನನ್ನ ಅಫೀಸು , ನನ್ನ ಮನೆಯಿಂದ ೧೬ ಕಿ.ಮೀ.ದೂರಕ್ಕೆ ಸ್ಥಳಾಂತರಗೊಂಡಿತು.ಗಡಿಯಾರದ ಟಿಕ್ ಟಿಕ್ ಸದ್ದಿಗೆ ಅನುಗುಣವಾಗಿ ನಡೆಯುವ ನನ್ನ ದಿನಚರಿ ಅಲ್ಲಿಂದ ಶುರುವಾಯಿತು..ಬೆಳಗ್ಗೆ ೬ ೩೦ ಗೆ ಅಲಾರ್ಮ್ ಸದ್ದಿಗೆ ಎದ್ದು, ಆಫೀಸಿಗೆ ಹೊರಡಲು ತಯಾರಾಗಿ,ತಿಂಡಿ ತಯಾರಿಸಿ,ತಿಂದು (ಮಾಡಿದ್ದುಣ್ಣೋ ಮಹಾರಾಯ !! ), ೭ ೪೫ ಕ್ಕೆ ಬಸ್ ಸ್ಟಾಪ್ ಗೆ ಬರುವ ಆಫೀಸ್ ಬಸ್ಸನ್ನು ಹಿಡಿಯುತ್ತೇನೆ.ಬಸ್ಸಲ್ಲಿ ಕುಳಿತಾಗ ಬೆಳಗ್ಗಿಂದ ಆ ಕ್ಷಣದವರೆಗಿನ ಗಡಿಬಿಡಿ ಕೊಂಚ ಹತೋಟಿಗೆ ಬಂದು,ಮನಸ್ಸು ನಿರಾಳವೆನಿಸುತ್ತದೆ.ಆಗೊಮ್ಮೆ ನೆಮ್ಮದಿಯ ನಿಟ್ಟುಸಿರು ಬಿಡುವಷ್ಟರಲ್ಲಿ, ಅಗೋ ನೋಡಿ ಶುರುವಾಯಿತು..ಬಸ್ಸಿನ ಯಾತ್ರೆ.ಬೆಂಗಳೂರಿನ ಟ್ರಾಫಿಕ್ ನಲ್ಲಿ ಸಿಲುಕಿ,ನೊಂದು,ಬೆಂದು,ಬಸವಳಿಯುವ ದುರವಸ್ಥೆಯನ್ನು ಅನುಭವಿಸಿದರೆ ಮಾತ್ರ ಅರಿಯಬಹುದೇ ವಿನಹ ನನ್ನ ಲೇಖನಿಯಿಂದ ಹೊರಬರುವ ಪದಗುಚ್ಛಗಳ ಸೆಣಸಾಟದಿಂದಲ್ಲ!!

ಜನಸಂಖ್ಯೆಯ ಹೆಚ್ಚಳ,ಕಿರಿದಾದ ರಸ್ತೆಗಳು,ಶಿಸ್ತು ಪಾಲಿಸದ (ಪಾಲಿಸುವ ಮಂದಿಯೂ ಇದ್ದಾರೆ ಕೆಲವರು ) ಜನ ಏನೆಲ್ಲ ಕಾರಣಗಳನ್ನು ಪಟ್ಟಿ ಮಾಡಲಿ?ಸಿಗ್ನಲ್ ಗಳಲ್ಲಿ ಒಂದಷ್ಟು ವಾಹನಗಳು ನಿಲ್ಲುತ್ತಿದ್ದಂತೆ ,ಕೆಂಪು ಸಿಗ್ನಲ್ ಕಾಣಿಸಿದರೂ ಸಕಲ ವಾಹನಗಳೂ ಏಕಕಾಲಕ್ಕೆ ಹಾರ್ನ್ ಬಳಸುವಾಗ ಉಂಟಾಗುವ ಶಬ್ದದ ಉತ್ಕಟತೆಗೆ,ಅದರ ನಾದ ತರಂಗಗಳ ವೈಭವಕ್ಕೆ ನಿಮ್ಮ ಕೋಮಲವಾದ ಕರ್ಣಗಳು ಎಷ್ಟೇ ಸಧೃಢವಾದ ಸ್ಥಿತಿಯಲ್ಲಿದ್ದರೂ ಹಾನಿಗೊಳಗಾಗವುವು ಎಂಬ ಮಾತು ಉತ್ಪ್ಪ್ರೇಕ್ಷೆಯಲ್ಲ!!

ರಾಶಿ ರಾಶಿ ವಾಹನಗಳು ಹೊರಹಾಕುವ ಧೂಮಸಾಗರದ ಲೀಲೆಯನ್ನು ಏನೆಂದು ಬರೆಯಲಿ?ಪುರಾಣ ಕಾಲದಲ್ಲಿ ಋಷಿ ಮುನಿಗಳ ಆಶ್ರಮಗಳ ಆವರಣದಲ್ಲಿ ಹೋಮ ಹವನಾದಿಗಳ ಹೊಗೆಯೂ,ಮಂತ್ರಘೋಷವೂ , ಘಂಟಾ ನಾದವೂ ಕೇಳಿಬರುತ್ತಿತ್ತಂತೆ.ಈ ಕಾಲದಲ್ಲಿ ಬೆಂಗಳೂರಿನ ರಸ್ತೆಯಲ್ಲಿ ವಾಹನಗಳ ಹೊಗೆಯೂ,ಹಾರ್ನುಗಳ ಕರ್ಕಶ ಧ್ವನಿಯೂ ತುಂಬಿ ಹೋಗಿದೆ. ಮಧ್ಯ ಮಧ್ಯ ವಾಹನ ಚಾಲಕರಿಂದ ಹೊರಹೊಮ್ಮುವ ಆಣಿಮುತ್ತುಗಳ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೆ?

ಇವೆಲ್ಲದರ ಮಧ್ಯೆ ವಾಹನಗಳು ಯಾವ ದಿಕ್ಕಿನಿಂದಲೂ ಬರಬಹುದು.ಯಾವುದೇ ಸೂಚನೆ ನೀಡದೆಯೂ ಅವು ಬೇಕಾದ ದಿಕ್ಕಿಗೆ ತಿರುಗಬಹುದು.ನಿಮ್ಮ ಹಣೆಯಲ್ಲಿ ಬ್ರಹ್ಮ ಆಯುಷ್ಯದ ರೇಖೆಯನ್ನು ಸ್ವಲ್ಪ ದೀರ್ಘವಾಗಿ ಎಳೆದಿದ್ದರೆ ನೀವು ಬಚಾವ್.ಇಲ್ಲದಿದ್ದರೆ ಯಮನ ದೂತರು ನಿಮ್ಮನ್ನು ಕರೆದೊಯ್ಯಲು ತಯಾರಾಗಿಯೇ ಇದ್ದಾರೆ.ರಸ್ತೆಗಳ ಮೇಲೆ ವಾಹನಗಳ ಜತೆ ಜತೆಯೇ ಸಾಗುವ ಎಮ್ಮೆಗಳು ಹಾಗೂ ಕೋಣಗಳ ಹಿಂಡು ಕಾಣಿಸಿಕೊಂಡರೆ ಅಚ್ಚರಿಯೇನಿಲ್ಲ!!

ವಾಹನಗಳ ಬಗ್ಗೆ ಇಶ್ಟೆಲ್ಲಾ ಬರೆದು,ರಸ್ತೆ ಬಗ್ಗೆ ಬರೆಯದಿದ್ದರೆ ಹೇಗೆ? ಕೆಲವೊಂದೆಡೆ ಡಾಮರು , ಕೆಲವೊಂದೆಡೆ ಬರೀ ನೆಲ,ಮತ್ತೆ ಕೆಲವೆಡೆ ತೇಪ ಹಾಕಿದ ರಸ್ತೆಗಳು, ಅನವಶ್ಯಕ ರಸ್ತೆ ಉಬ್ಬುಗಳು ಕೆಲವೆಡೆ..ಮಳೆ ಬಂದರಂತೂ ಬೆಂಗಳೂರಿನ ರಸ್ತೆಗಳು ದೇವರಿಗೇ ಪ್ರೀತಿ.ಒಳಚರಂಡಿಯ ಅಷ್ಟೂ ನೀರು ರಸ್ತೆ ಮೇಲೆ ಬಂದು ಬಿಡುತ್ತದೆ. ಪಾಪ ಅದಕ್ಕೂ ಮಳೆ ನೋಡುವ ಉತ್ಸಾಹ !! ಆ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋದಿರೋ,ಚರಂಡಿ ನೀರು ಚೆಲುವಿನ ಚಿತ್ತಾರವನ್ನು ನಿಮ್ಮ ಮೇಲೆ ಮೂಡಿಸದೇ ಇರುವುದಿಲ್ಲ.
ಒಂದಂತೂ ನಿಜ, ನೀವು ನಾಲ್ಕು ಸಲ ಸ್ನಾನ ಮಾಡದ ಹೊರತು, ನಿಮ್ಮ ಹತ್ತಿರ ಬೇರೆ ಯಾರೂ ಬರಲಾರರು.
" ಹೇಮಾ ಮಾಲಿನಿಯ ಕೆನ್ನೆಗಿಂತಲೂ ನುಣುಪಾಗಿರುವ ರಸ್ತೆಗಳು" ಎಂಬ ವರ್ಣನೆ ನಿಮಗೆ ಕಡತದಲ್ಲಿ ಮಾತ್ರ ಸಿಕ್ಕೀತು.

ಹ್ಮ್ಮ್..ಮರಗಳು..ಮನೆಗೊಂದು ಮರ..ಊರಿಗೊಂದು ವನ..ಗಾದೆಯೇನೋ ಇದೆ. ರಸ್ತೆ ಅಗಲೀಕರಣದ ನೆಪದಲ್ಲಿ ಇರುವ ಮರಗಳು ನಿರ್ಧಾಕ್ಷಿಣ್ಯವಾಗಿ ಕತ್ತರಿಸಿ ಹಾಕುವವರ ಮಧ್ಯೆ "ಪರಿಸರ ಉಳಿಸಿ" ಘೋಷಣೆ ಮೆತ್ತಗಾಗಿ ಬಿಡುತ್ತದೆ. ಕಾಂಕ್ರೀಟ್ ಕಾಡಿನಲ್ಲಿ ಹಸಿರ ಹುಡುಕುವ ನಿಮ್ಮ ಕಣ್ಣುಗಳು ಸುಸ್ತಾಗಿ ಹೋಗುತ್ತವೆ.ಧೂಳಿನ ಕಣಗಳು ನಿಮ್ಮ ಕಣ್ಣಲ್ಲಿ ತುಂಬಿ ಕಣ್ಣು ಮಂಜಾಗುವಂತೆ ಮಾಡುತ್ತವೆ.

ನನ್ನ ಶಾಲಾ ದಿನಗಳಲ್ಲೂ ನಾನು ಬಸ್ನಲ್ಲಿ ಪಯಣಿಸುತ್ತಿದ್ದೆ.ಹೆಗಲಲ್ಲಿ ಪುಸ್ತಕದ ಹೊರೆ,ಕೈಯಲ್ಲಿ ಬುತ್ತಿ ಛತ್ರಿ.ದಾರಿಯುದ್ದಕ್ಕೂ ಕಾಡು ಅಥವಾ ಕಾಡಿನ ಮಧ್ಯದಲ್ಲೇ ದಾರಿ ಎನ್ನಲೆ? ಆಗ ಇದ್ದ ೨-೩ ಬಸ್ಸುಗಳು,೪-೫ ಜೀಪುಗಳು,ಮತ್ತೆ ಕೆಲವು ಮಿನಿ ವಾಹನಗಳು ಟ್ರಾಫಿಕ್ ಜಾಮ್ ಗೆ ಕಾಣಿಕೆ ನೀಡಲು ಸೋತಿದ್ದವು.ಮಳೆ,ಹಕ್ಕಿಗಳ ಚಿಲಿಪಿಲಿ,ತಲೆಯಲ್ಲಿ ಮುಡಿದ ಮಲ್ಲಿಗೆ,ಗುಲಾಬಿಯ ಪರಿಮಳ,ಸಹಪಯಣಿಗ ವಿದ್ಯಾರ್ಥಿಗಳ ಸ್ನೇಹದ ನುಡಿಗಳು ಆ ಬಸ್ ಪಯಣದ ಸಂತಸಕ್ಕೆ ಕಾರಣವಾಗಿದ್ದವು.ಆಗಲೂ ನಾನು ದಿನಕ್ಕೆ ೩೨ ಕಿ.ಮೀ ಪಯಣಿಸುತ್ತಿದ್ದೆ. ಈಗಲೂ ಅಷ್ಟೇ ದೂರ ..ಆದರೆ ಬಸ್ ಪಯಣದ ಅನುಭವಕ್ಕೆ ಅಜ ಗಜಾಂತರ!!

ಆದರೆ ಇದ್ದುದರಲ್ಲೇ ನೆಮ್ಮದಿಯ ವಿಷಯವೆಂದರೆ ನಾನು ಆಫೀಸ್ ಬಸ್ ನಲ್ಲಿ ಸಂಚರಿಸುವ ಕಾರಣ ಬಸ್ ನೊಳಗಿನ ನೂಕು ನುಗ್ಗಲು,ಸ್ಥಳಾವಕಾಶದ ಕೊರತೆ,ಪಿಕ್ ಪಾಕೆಟ್ ಭಯ ಇತ್ಯಾದಿಗಳ ಚಿಂತೆ ಇಲ್ಲ.ಕೆಲವು ಖಾಸಗಿ ಬಸ್ ಗಳಲ್ಲಿ ಕೇಳಿಸುವಂತಹ ಕರ್ಕಷ ಹಾಡುಗಳಿಲ್ಲ.



ಅಂತೂ ಇಂತೂ ಸುದೀರ್ಘ ಪಯಣ, ಆಫೀಸಿನ ಕೆಲಸ ಮುಗಿಸಿ ಮನೆಗೆ ಬಂದು ಮತ್ತೆ ಮನೆಕೆಲಸದಲ್ಲಿ ತೊಡಗುತ್ತೇನೆ.ಒಂದಷ್ಟು ಹೊತ್ತು ಮೌನವಾಗಿದ್ದು,ಧ್ಯಾನ ಮಾಡಿ,ದೇವರ ಸ್ತೋತ್ರ ಹೇಳಿ,ಪಿಟೀಲು ನುಡಿಸಿ, ಕೆಲವೊಮ್ಮೆ ಯಾವುದಾದರೂ ಪುಸ್ತಕ ತಿರುವಿ ಹಾಕಿ,ಅಡಿಗೆ ಮಾಡಿ,ಊಟ ಮಾಡಿ, ನಿದ್ದೆಗೆ ಜಾರುತ್ತೇನೆ. ಮರುದಿನ ಯಥಾಪ್ರಕಾರ...

Sunday, August 3, 2008

ಕಣಿಲೆ ಪಲ್ಯ




ಮಲೆನಾಡಿನಲ್ಲಿ ಮಳೆಗಾಲದ ಸಮಯ ಚಿಗುರುವ ಎಳೆ ಬಿದಿರು ವಿಧ ವಿಧದ ಖಾದ್ಯಗಳಾಗಿ ಪರಿವರ್ತನೆಯಾಗುತ್ತದೆ.
ಕಣಿಲೆಯ ಪಲ್ಯವನ್ನು ಮಾಡುವ ವಿಧಾನವನ್ನು ಇಲ್ಲಿ ವಿವರಿಸುತ್ತಿದ್ದೇನೆ.

ಹೆಚ್ಚಿದ ಕಣಿಲೆ :೩ ಕಪ್
ಎಣ್ಣೆ:ಸ್ವಲ್ಪ
ಸಾಸಿವೆ,ಜೀರಿಗೆ,ಅರಸಿನ,ಉದ್ದಿನ ಬೇಳೆ ತಲಾ ಒಂದು ಚಮಚ
ಕೆಂಪು ಮೆಣಸು : ೫
ಬೆಲ್ಲ : ಸ್ವಲ್ಪ (ಸಣ್ಣ ಅಡಿಕೆ ಗಾತ್ರದಷ್ಟು)
ಉಪ್ಪು :ರುಚಿಗೆ ತಕ್ಕಷ್ಟು

ವಿಧಾನ

ಕಣಿಲೆಯನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. (ಸುಮಾರು ೭-೮ ಸೀಟಿ ಬರುವ ತನಕ )
ಅಮೇಲೆ ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ,ಜೀರಿಗೆ,ಮೆಣಸು,ಅರಸಿನ, ಉದ್ದು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಅದಕ್ಕೆ ಬೇಯಿಸಿದ ಕಣಿಲೆಯನ್ನು ಸೇರಿಸಿ. ಬೆಲ್ಲ,ಉಪ್ಪು ಹಾಕಿ, ಮಂದ ಉರಿಯಲ್ಲಿ ೧೦ ನಿಮಿಷ ಬೇಯಿಸಿ.

ಈಗ ಕಣಿಲೆಯ ಪಲ್ಯ ತಯಾರು.

ವಿ.ಸೂ. ಕಣಿಲೆಯನ್ನು ಕತ್ತರಿಸಿ ತಂದ ಕೂಡಲೇ ತಿನ್ನುವಂತಿಲ್ಲ. ಅದನ್ನು ಸಣ್ಣದಾಗಿ ಹೆಚ್ಚಿ, ನೀರಿನಲ್ಲಿ ಮೂರು-ನಾಲ್ಕು ದಿನ ನೆನೆ ಹಾಕಿದ ಬಳಿಕವಷ್ಟೇ ಬಳಕೆಗೆ ಯೋಗ್ಯವಾಗುತ್ತದೆ. ಕಣಿಲೆಯ ತೊಗಟೆಯನ್ನು ನಮ್ಮ ಕಡೆ ನೆಲದಲ್ಲಿ ಹೂತು ಹಾಕುತ್ತಾರೆ.ಕಾರ್‍ಅಣ ಜಾನುವಾರುಗಳು ತಿಂದು ಅವಕ್ಕೆ ಅಪಾಯವಾಗದಿರಲಿ ಎಂದು.

Wednesday, May 21, 2008

ನನ್ನೂರು ಹೊಸಮಠ ...



























































Note:School photo is by Sankeerth, dam photo is by raveesh and river in rainy season by Suhas. Rest all clicked by the author.

Sunday, April 20, 2008

ತೊಂಡೆಕಾಯಿ ,ಗೋಡಂಬಿ ಪಲ್ಯ



ಬೇಕಾಗುವ ಸಾಮಗ್ರಿಗಳು:
ತೊಂಡೆಕಾಯಿ : ಅರ್ಧ ಕಿಲೋ
ತೆಂಗಿನಕಾಯಿ : ಅರ್ಧ
ಗೋಡಂಬಿ :ಎರಡು ಹಿಡಿ
ಬೆಲ್ಲ : ಒಂದು ಸಣ್ಣ ಚೂರು
ಉಪ್ಪು:ರುಚಿಗೆ
ಸಾಸಿವೆ : ಒಂದು ಚಮಚ
ಕೆಂಪು ಮೆಣಸು : ೪
ಒಗ್ಗರಣೆಗೆ :
ಎಣ್ಣೆ, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ ತಲಾ ಒಂದು ಚಮಚ
ವಿಧಾನ :
೧.ಒಂದು ಸಣ್ಣ ಕಡಾಯಿಯಲ್ಲಿ ಎಣ್ಣೆ,ಮೆಣಸು, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ ಇವುಗಳನ್ನು ಹಾಕಿ ,ಒಲೆಯ ಮೇಲೆ ಇಡಿ.ಸಾಸಿವೆ ಚಟ ಪಟ ಅನ್ನುತಿದ್ದಂತೆ ಒಲೆ ಆರಿಸಿ.
೨.ತೆಂಗಿನಕಾಯಿ,ಮೆಣಸು,ಸಾಸಿವೆ ಇವನ್ನು ಒಟ್ಟಿಗೆ ತರಿ ತರಿಯಾಗಿ ರುಬ್ಬಿ.
೩.ತೊಂಡೆಕಾಯಿ ಹಾಗೂ ಗೋಡಂಬಿಯನ್ನು ಕುಕ್ಕರಿನಲ್ಲಿ ೩ ಸೀಟಿ ಬರುವ ತನಕ ಬೇಯಿಸಿ.
೩.ಈಗ ಒಲೆ ಉರಿಸಿ, ಈಗಾಗಲೇ ಮಾಡಿಟ್ಟ ಒಗ್ಗರಣೆ ಯ ಪಾತ್ರೆಗೆ ತೆಂಗಿನಕಾಯಿಯ ಮಿಶ್ರಣ ಹಾಗೂ ಬೇಯಿಸಿದ ತೊಂಡೆಕಾಯಿ,
ಗೋಡಂಬಿಯನ್ನು ಸೇರಿಸಿ.
೪.ಮಂದ ಉರಿಯಲ್ಲಿ ಸ್ವಲ್ಪ ಹೊತ್ತು ಹಾಗೆ ಬೇಯಿಸಿ.
೫.ಈಗ ಬೆಲ್ಲ ಹಾಗೂ ಉಪ್ಪು ಸೇರಿಸಿ.ಮತ್ತೂ ಎರಡು ನಿಮಿಷ ಬೇಯಿಸಿ.

ಘಮಘಮಿಸುವ ಪಲ್ಯ ತಯಾರು!!
ಇದು ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷ ಖಾದ್ಯ.

Sunday, April 13, 2008

ಉದರ ನಿಮಿತ್ತಂ ಬಹುಕೃತ ಪಾಕಂ


ಅದೊಂದು ಕಾಲವಿತ್ತು. ನನಗೆ ಅನ್ನ ಸಾರು ಮಾಡುವುದಿರಲಿ ನೀರು ಬಿಸಿ ಮಾಡಲು ಸಹ ಬರುತ್ತಿರಲಿಲ್ಲ! ವಿದ್ಯಾಭ್ಯಾಸದ ಹೆಚ್ಚಿನ ಸಮಯವನ್ನು ಹಾಸ್ಟೆಲ್ ವಾಸದಲ್ಲಿ ಕಳೆದುದರಿಂದಲೊ ಏನೊ, ಮನೆಗೆ ಹೋದಾಗಲೂ ಅಡುಗೆ ಮಾಡುವ ಅವಶ್ಯಕತೆ ಇಲ್ಲದಿದ್ದುದರಿಂದಲೊ ಏನೊ, ನನ್ನ ಗಮನ ಅಡುಗೆಮನೆಯತ್ತ (ಐ ಮೀನ್, ಅಡುಗೆ ಮಾಡಲಿಕ್ಕೆ) ಹರಿದದ್ದೇ ಇಲ್ಲ! ತಿನ್ನಲಿಕ್ಕಾದರೆ ರೆಡಿ ಇದ್ದೇನಲ್ಲ... ದೊಡ್ಡ ಬಟ್ಟಲಮ್ಮ ದೊಡ್ಡ ಬಟ್ಟಲು!

ನನ್ನ ಇಂಜನಿಯರಿಂಗ್ ಶಿಕ್ಷಣ ಮುಗಿದು, ಮದುವೆಯಾದ ಮೇಲೆ ಅಡುಗೆ ಕಲಿಯುವುದು ಅನಿವಾರ್ಯವಾಯಿತು. ಆಗ ಶುರುವಾಯಿತು ನೋಡಿ... "ಕೆಲವಂ ಬಲ್ಲವರಿಂದ ಕಲ್ತು... ಕೆಲವಂ ಶಾಸ್ತ್ರಗಳಮ್ ಓದುತಲಿ... ಕೆಲವಂ ದೂರದರ್ಶವಂ ನೋಡುತಲಿ..." ಅಡುಗೆಮನೆಯಲ್ಲಿ ನನ್ನ ನಿತ್ಯ ಪ್ರಯೋಗಗಳು!! ನನ್ನ ಬಡಪಾಯಿ ಗಂಡ (ತುಂಬ ಪ್ರೀತಿಸ್ತಾರೆ ಕಣ್ರೀ ನನ್ನನ್ನು!) ನನ್ನೀ ಪ್ರಯೋಗಗಳ ಗಿನ್ನಿ ಪಿಗ್ ಎಂದು ಬೇರೆ ಹೇಳಬೇಕಿಲ್ಲ ತಾನೆ?

ನನ್ನ ಪಾಕಪ್ರಾವೀಣ್ಯವನ್ನು ದಾಖಲೆಯಾಗಿರಿಸುವುದಕ್ಕಾಗಿ ನನ್ನ ಪಾಕಕಲಾ ಚಿತ್ರಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದೇನೆ. ಆ ಚಿತ್ರಗಳದೊಂದು "ಕೊಲಾಜ್" ಮಾಡಿದ್ದೇನೆ. ಅದಕ್ಕೆ "ಉದರ ನಿಮಿತ್ತಂ ಬಹುಕೃತ ಪಾಕಂ" ಎಂಬ ಟೈಟಲ್ ಕೊಟ್ಟು ನಿಮಗೀಗ ಆ ಚಿತ್ರಗಳನ್ನಿಲ್ಲಿ ತೋರಿಸುತ್ತಿದ್ದೇನೆ.

Thursday, April 10, 2008

ಬ್ರಾಹ್ಮಿ ಎಲೆಯ ತಂಬುಳಿ



ತೆಂಗಿನ ತುರಿ :ಅರ್ಧ ಲೋಟ
ಬ್ರಾಹ್ಮಿ ಎಲೆ : ಅರ್ಧ ಲೋಟ
ಮೊಸರು :ಒಂದು ಲೋಟ
ಉಪ್ಪು :ರುಚಿಗೆ ತಕ್ಕಷ್ಟು
ಎಣ್ಣೆ :ಒಂದು ಚಮಚ
ಜೀರಿಗೆ :ಒಂದು ಚಮಚ
ಮಜ್ಜಿಗೆ ಮೆಣಸು :೪

ವಿಧಾನ :
ಬ್ರಾಹ್ಮಿ ಎಲೆ ಮತ್ತು ತೆಂಗಿನಕಾಯಿ ತುರಿಯನ್ನು ರುಬ್ಬಿ.
ಅದಕ್ಕೆ ಮೊಸರು, ಉಪ್ಪು ಸೇರಿಸಿ.

ಒಗ್ಗರಣೆ ಸೌಟಿನಲ್ಲಿ ಎಣ್ಣೆ, ಜೀರಿಗೆ ಹಾಕಿ, ಬಿಸಿ ಮಾಡಿ, ಬ್ರಾಹ್ಮಿ ,ಮೊಸರಿನ ಮಿಶ್ರಣಕ್ಕೆ ಹಾಕಿ.
ಮಜ್ಜಿಗೆ ಮೆಣಸನ್ನು ಕರಿದು ಅದಕ್ಕೆ ಸೇರಿಸಿ.

ಈಗ ರುಚಿಯಾದ ತಂಬುಳಿ ಸಿದ್ಧ.

Saturday, March 29, 2008

ಬ್ರಾಹ್ಮಿ ಎಲೆಯ ಶರಬತ್ತು




ಬೇಕಾಗುವ ಸಾಮಗ್ರಿಗಳು :
ಎರಡು ಹಿಡಿ ಬ್ರಾಹ್ಮಿ ಎಲೆ
ಬೆಲ್ಲ :ಮಧ್ಯಮ ಗಾತ್ರದ ಚೂರು
ನೀರು ಸ್ವಲ್ಪ

ವಿಧಾನ:
ಬ್ರಾಹ್ಮಿ ಎಲೆಗಳನ್ನು ಚೆನ್ನಾಗಿ ತೊಳೆದು, ಮಿಕ್ಸಿಗೆ ಹಾಕಿ. ಸ್ವಲ್ಪ ನೀರು ಮತ್ತು ಬೆಲ್ಲ ಸೇರಿಸಿ.ನುಣ್ಣಗೆ ರುಬ್ಬಿ.
ಆಮೇಲೆ ಅದನ್ನು ಮಿಕ್ಸಿ ಯಿಂದ ತೆಗೆದು, ಸೋಸಿ.
ಬೇಕಿದ್ದರೆ ಮಂಜುಗಡ್ಡೆ ಸೇರಿಸಿ.
ಇನ್ನೇಕೆ ತಡ...ರುಚಿ ನೋಡಿ :)
ಬೇಸಗೆಯ ಧಗೆಗೆ ತಂಪಾದ ,ಆರೋಗ್ಯಕರವಾದ ಪಾನೀಯ ಇದು!!

Friday, March 21, 2008

ನಿನ್ನೆ ರಾತ್ರಿಯ ಊಟ....



ನಿನ್ನೆ ರಾತ್ರಿಯ ಊಟಕ್ಕೆ ಮಾಡಿದ ಅಡುಗೆ ಇದು..


ಸಾಂಬ್ರಾಣಿ ಎಲೆಯ ಸಾರು :

ಬೇಕಾಗುವ ಸಾಮಗ್ರಿಗಳು:

ಸಾಂಬ್ರಾಣಿ ಎಲೆ : ಎರಡು ಹಿಡಿ
ನೀರುಳ್ಳಿ :ಒಂದು
ತುಪ್ಪ :ಎರಡು ಚಮಚ

ಉದ್ದು,ಅರಿಸಿನ,ಸಾಸಿವೆ ,ಜೀರಿಗ,ಎಣ್ಣೆ, : ತಲಾ ಒಂದು ಚಮಚ
ಕೆಂಪು ಮೆಣಸು : 3

ಹುಣಸೆ ರಸ :4 ಚಮಚ
ಬೆಲ್ಲ :ಮಧ್ಯಮ ಗಾತ್ರದ ಚೂರು
ಉಪ್ಪು :ರುಚಿಗೆ ತಕ್ಕಷ್ಟು


ಮೊದಲಿಗೆ ನೀರುಳ್ಳಿ ಹಾಗೂ ಸಾಂಬ್ರಾಣಿ ಎಲೆಗಳನ್ನು ತುಪ್ಪದಲ್ಲಿ ಹುರಿದುಕೊಳ್ಳಿ.
ನೀರಿಗೆ ಹುರಿದ ನೀರುಳ್ಳಿ ಹಾಗೂ ಸಾಂಬ್ರಾಣಿ ಎಲೆಗಳನ್ನು ಸೇರಿಸಿ, ಕುದಿಯಲು ಬಿಡಿ.
ಇದಕ್ಕೆ ಹುಣಸೆ ರಸ ಹಾಗೂ ಬೆಲ್ಲವನ್ನು ಸೇರಿಸಿ.
ಕುಡಿಯುತ್ತ ಬಂದಂತೆ ಉಪ್ಪನ್ನು ಹಾಕಿ.
ಆಮೇಲೆ ಒಲೆಯಿಂದ ಇಳಿಸಿ.

ಈಗ ಒಂದು ಸಣ್ಣ ಕಡಾಯಿಯಲ್ಲಿ ಎಣ್ಣೆ,ಮೆಣಸು, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ ಇವುಗಳನ್ನು ಹಾಕಿ ,ಒಲೆಯ ಮೇಲೆ ಇಡಿ.

ಸಾಸಿವೆ ಸಿದಿಯುತ್ತಿದ್ದಂತೆ ಒಲೆಯಿಂದ ಇಳಿಸಿ,ಕುದಿಸಿದ ನೀರುಳ್ಳಿ ಹಾಗೂ ಸಾಂಬ್ರಾಣಿ ಎಲೆಗಳ ಮಿಶ್ರಣಕ್ಕೆ ಹಾಕಿ.

ಈ ಸಾರು ಬಹಳ ರುಚಿ.ಅನ್ನಕ್ಕೆ ಬಹಳ ಒಳ್ಳೆಯ ಜತೆ!! :)

ಈ ಅಡುಗೆ ವಿಧಾನ ತಿಳಿಸಿದ ಶಶಾಂಕನಿಗೆ ಥ್ಯಾಂಕ್ಸ್.

Sunday, March 16, 2008

ನನ್ನ ಊರಿನ ಮಳೆ...

ನನ್ನ ಊರಿನ ಮಳೆಯನ್ನು ನನ್ನ ಕ್ಯಾಮರಾ ದಲ್ಲಿ ಈ ಪರಿಯಾಗಿ ಸೆರೆ ಹಿಡಿದಿದ್ದೇನೆ. ನೋಡಿ ನಿಮಗೆ ಹೇಗೆ ಅನ್ನಿಸಿತು ಅಂತ ತಿಳಿಸಿ.
click here

Friday, January 18, 2008

ಫುಲ್ಕಾ ...



ಬ್ಲಾಗ್ ಗೆ ಅಕ್ಷರ ಸೇರಿಸದೆ ಬಹಳ ದಿನಗಳಾದವು.ಕಾರಣಗಳು ಹಲವಾರು ಇದ್ದರೂ ಮುಖ್ಯ ಕಾರಣ "ಉದಾಸೀನ "..ಇವತ್ತು ಅದನ್ನು ಹೇಗಾದರೂ ಮೆಟ್ಟಿ ನಿಂತು, ಫುಲ್ಕಾ ಮಾಡುವ ವಿಧಾನ ವನ್ನು ಇಲ್ಲಿ ಬರೆಯುತ್ತಿದ್ದೇನೆ.

ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು : ೨ ಲೋಟ
ಉಪ್ಪು : ರುಚಿಗೆ ತಕ್ಕಷ್ಟು
ನೀರು :ಒಂದು ಲೋಟ

ಮಾಡುವ ವಿಧಾನ
ಗೋಧಿ ಹಿಟ್ಟು , ಉಪ್ಪು, ನೀರು ಇವುಗಳನ್ನು ಚೆನ್ನಾಗಿ ಕಲಸಿ.ಹತ್ತು ನಿಮಿಷ ಹಾಗೇ ಬಿಡಿ.
ಆಮೇಲೆ ಗೋಧಿ ಹಿಟ್ಟಿನ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ, ಚಪಾತಿ ಲಟ್ಟಿಸುವಂತೆ ಲಟ್ಟಿಸಿ.

ಕಾವಲಿಯನ್ನು ಬಿಸಿಮಾಡಿ, ಆ ಬಳಿಕ ಲಟ್ಟಿಸಿದ ಸಣ್ಣ ಚಪಾತಿಗಳನ್ನು ಕಾವಲಿಗೆ ಹಾಕಿ.ಸ್ವಲ್ಪ ಬೆಂದ ಕೂಡಲೇ,ಅವುಗಳನ್ನು ಚಿಮಟಿಯ ಸಹಾಯದಿಂದ ಕಾವಲಿಯಿಂದ ತೆಗೆದು,ನೇರವಾಗಿ ಬೆಂಕಿ ಮೇಲೆ ಸುಡಬೇಕು.ಎರಡೂ ಒಲೆಗಳನ್ನು ಉರಿಸಿದರೆ ಒಳ್ಳೆಯದು.ಒಂದರಲ್ಲಿ ಕಾವಲಿಯಲ್ಲಿ ಬೇಯಿಸುವುದು, ಇನ್ನೊಂದರಲ್ಲಿ ಚಪಾತಿಯನ್ನು ನೇರವಾಗಿ ಸುಡುವುದು ಒಟ್ಟಿಗೆ ಮಾಡಬಹುದು.

ಫುಲ್ಕಾ ತಯಾರು!!
ಪಲ್ಯ/ಸಾಂಬಾರಿನ ಜತೆ ಫುಲ್ಕಾವನ್ನು ಸವಿಯಬಹುದು!!

ಇನ್ನೇಕೆ ತಡ, ಫುಲ್ಕಾ ಮಾಡಿ, ಹೇಗಾಯಿತು ಹೇಳಿ!!
thatskannada

Sunday, November 11, 2007

ಬಾದಾಮಿ ಹಲ್ವಾ:


ಬಾದಾಮಿ ಹಲ್ವಾ:

ಬೇಕಾಗುವ ಸಾಮಗ್ರಿಗಳು
ಬಾದಾಮಿ ೧೦೦ ಗ್ರಾಮ್
ಸಕ್ಕರೆ : ಒಂದುವರೆ ಲೋಟ
ಹಾಲು : ಅರ್ಧ ಲೋಟ
ತುಪ್ಪ : ೨-೩ ಚಮಚ


ಮಾಡುವ ವಿಧಾನ

ಮೊದಲು ಬಾದಾಮಿಯನ್ನು ಬಿಸಿನೀರಿನಲ್ಲಿ ಒಂದು ಘಂಟೆ ಕಾಲ ನೆನೆ ಹಾಕಿ.
ಆ ಬಳಿಕ ಬಾದಮಿ ಸಿಪ್ಪೆ ಸುಲಿಯಿರಿ.ಕೈಯಲ್ಲಿ ಒಂದಿಷ್ಟು ಬಾದಾಮಿ ತೆಗೆದುಕೊಂಡು ಜೋರಾಗಿ ಉಜ್ಜಿದರೆ ಸಿಪ್ಪೆ ಸುಲಭವಾಗಿ ಬೇರ್ಪಡುತ್ತದೆ. ಸಿಪ್ಪೆ ಸುಲಿದಾದ ಮೇಲೆ ಬಾದಾಮಿಯನ್ನು ಹಾಲಿನ ಜತೆ ನುಣ್ಣನೆ ರುಬ್ಬಿ.

ರುಬ್ಬಿದ ಬಾದಾಮಿ,ಸಕ್ಕರೆ ಇವುಗಳನ್ನು ಒಂದು ಕಡಾಯಿಯಲ್ಲಿ ಹಾಕಿ,ಒಲೆಯ ಮೇಲೆ ಇಟ್ಟು,
ಸುಮಾರು ೩೦ -೪೦ ನಿಮಿಷ ಮಂದ ಉರಿಯಲ್ಲಿ ಕಲಕುತ್ತಾ ಇರಿ.

ಬಾದಾಮ್ ಸಕ್ಕರೆ ಮಿಶ್ರಣವು ಪಾತ್ರೆಯ ಬದಿಯನ್ನು ಬಿಡುತ್ತಿದ್ದಂತೆ, ೨-೩ ಚಮಚ ತುಪ್ಪ ಹಾಕಿ.
ಮಿಶ್ರ್‍ಅಣವು ಗಟ್ಟಿಯಾಗುತ್ತಾ ಬಂದಂತೆ,ಅದನ್ನು ಒಲೆಯಿಂದ ಕೆಳಗಿರಿಸಿ.

ಇದೀಗ ರುಚಿಯಾದ ಬಾದಾಮ್ ಹಲ್ವಾ ತಯಾರು!!

Sunday, September 16, 2007

ಗಣೇಶ ಚತುರ್ಥಿ....


ಸರ್ವರಿಗೂ ಗಣೇಶ ಚತುರ್ಥಿಯ ಶುಭಾಶಯಗಳು..

ಚಿಕ್ಕಂದಿನಿಂದಲೂ ಗಣಪ ನನ್ನ ನಿತ್ಯ ಜೀವನದಲ್ಲಿ ಹಾಸುಹೊಕ್ಕಿಬಿಟ್ಟಿದ್ದಾನೆ.ಆತನ ಬಗ್ಗೆ ನಾನು ಕೇಳಿದ ಕಥೆಗಳು ನೂರಾರು..
ಮೊಡುತ್ತಿದ್ದ ಕಲ್ಪನೆಗಳು ಹಲವಾರು.
ತಲೆ ಕಡಿದ ಮೇಲೆ ಆನೆಯ ತಲೆಯನ್ನು ಹೇಗೆ ಜೋಡಿಸಿರಬಹುದು?ಪಾರ್ವತಿಯ ಮೈಯ ನೊರೆಯಿಂದ ಗಣಪ ಜೀವ ತಳೆದದ್ದು ಹೇಗೆ?
ಅಷ್ಟೆಲ್ಲಾ ತಿಂಡಿ ಒಟ್ಟಿಗೆ ತಿಂದರೆ ಅವನಿಗೆ ಭೇದಿಯಾಗುವುದಿಲ್ಲವೆ?ಹಾವನ್ನು ಹೊಟ್ಟೆಗೆ ಕಟ್ಟಿಕೊಂಡರೆ ಹೆದರಿಕೆಯಾಗುವುದಿಲ್ಲವೆ?
ಅವನ ಅಪ್ಪ ಅಮ್ಮ ಅಷ್ಟು ದೊಡ್ಡ ಪ್ರಾಣಿಗಳನ್ನು ವಾಹನವಾಗಿಸಿರುವಾಗ ಈತನೇಕೆ ಇಲಿಯಂತಹ ಸಣ್ಣ ಪ್ರಾಣಿಯನ್ನು ವಾಹನವಾಗಿಸಿದ?
ಹೀಗೆ ನನ್ನಲ್ಲಿ ಗರಿಗೆದರುತ್ತಿದ್ದ ಪ್ರಶ್ನೆಗಳಿಗೆಲ್ಲಾ ಅಪ್ಪ ಅಮ್ಮ ಹೇಳುತ್ತಿದ್ದ ಉತ್ತರ ಒಂದೇ"
ಗಣಪತಿ ದೇವರು..ದೇವರಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ’..ಆಗೆಲ್ಲಾ ನನಗೆ ನಾನು ದೇವರಾಗಬೇಕು ಅನ್ನುವ ಆಸೆ ಮೂಡುತ್ತಿತ್ತು.
.ನಾನೇ ದೇವರಾದರೆ home work ಯೆಲ್ಲಾ ಕೂಡಲೇ ಮಾಡಿ ಮುಗಿಸಬಹುದು.
ಶಾಲೆಗೆ ಅಷ್ಟೆಲ್ಲಾ ಪುಸ್ತಕ ಹೊತ್ತು ಹೋಗುವ ಅಗತ್ಯವಿಲ್ಲಾ..
ಹೆಚ್ಚೇಕೆ ಶಾಲೆಗೆ ಹೋಗಬೇಕಂತಲೇ ಇಲ್ಲ..ದೇವರಿಗೆ ವಿದ್ಯೆ ಎಲ್ಲಾ ಬರುತ್ತದೆ ಅಲ್ಲವೆ ?ಹಕ್ಕಿಯಂತೆ ಹಾರಬಹುದು ಇತ್ಯಾದಿ
ನನ್ನ ಕಲ್ಪನೆಗಳಿಗೆ ಮಿತಿಯೇ ಇರಲಿಲ್ಲ..
ಈಗೆಲ್ಲಾ ಅವುಗಳನ್ನು ನೆನೆದರೆ ನಗು ಬರುತ್ತದೆ!!




’ಗಣೇಶ ಬಂದ
ಕಾಯಿ ಕಡುಬು ತಿಂದ..
ಹೊಟ್ಟೆ ಬಿರಿಯೆ ತಿಂದ.

ಹೊಟ್ಟೆ ಭಾರ ಆಗ್ ಹೋಯ್ತು
ನಡೆಯಕ್ಕಾಗ್ದೆ ಹೋಯ್ತು
ಅಲ್ಲೇ ಒಂದು ಇಲಿ ಮರಿ ಸಂತೆಗೆ ಹೋಗ್ತಾ ಇತ್ತು..


ಡೊಳ್ಳು ಹೊಟ್ಟೆ ಗಣಪ
ಇಲಿಯ ಮೇಲೆ ಕೂತ
ಸುಮೆನ್ ಇರದೆ ಇಲಿಗೆ
ಕೊಟ್ಟ ಎರಡು ಲಾತ

ಇಲಿಗೆ ಕೋಪ ಬಂತು
ಕೆಳಕ್ಕೆಡವಿ ಹೋಯ್ತು
ಗಣಪನ ಹೊಟ್ಟೆ ಒಡೆದು ಕಡುಬು ಚೆಲ್ಲಿ ಹೋಯ್ತು

ಚೆಲ್ಲಿದ ಕಡುಬನು ಎತ್ತಿ ಹೊಟ್ಟೆಯೊಳಗೆ ಹಾಕ್ದ
ಅಲ್ಲೇ ಮಲಗಿದ ಹಾವನ್ನ ಹೊಟ್ಚೆ ಸುತ್ತ ಬಿಗಿದ

ಭಲೇ ಭಲೇ ಗಣಪ
ತಿಂಡಿ ಪೋತ ಠೊಣಪ
ತಿಂಡಿ ಕೊಡ್ತೀನಿ ನಿಂಗೆ
ಮನೆ ಹತ್ರ ಬಾಪ್ಪಾ"

ಇದು ನಾವು ಚಿಕ್ಕದಿರುವಾಗ ಶಾಲೆಯಲ್ಲಿ ಸುಮಧುರವಾಗಿ ( ? ) ಹಾಡುತ್ತಿದ್ದ ಹಾಡು.

ಅದಕ್ಕೆ ತಕ್ಕಂತೆ ನೃತ್ಯ್ವವಾಡುತ್ತಿದ್ದೆವು ಕೂಡಾ.
ಭಜನೆ ಕಾರ್ಯಕ್ರಮವಂತೂ ’ಗಜಮುಖನೆ ಗಣಪತಿಯೆ ನಿನಗೆ ವಂದನೆ ’ ಹಾಡಿನಿಂದಲೇ ಶುರುವಾಗುತ್ತಿತ್ತು.
ಅದನ್ನೇ ’ಗಜಮುಖನೆ ಗಣಪತಿಯೆ ನಿನಗೆ ಒಂದಾಣೆ ..ಬಾಕಿ ಉಳಿದ ನಾಕಾಣೆ ನಾಳೆ ಕೊಡ್ತೆನೆ’ ಅಂತ ಅಣಕವಾಡುತ್ತಿದ್ದದ್ದೂ ಉಂಟು.
ನಾನಿದ್ದ ಹಾಸ್ಟೆಲ್ ಒಂದರಲ್ಲಿ ’ಶರಣು ಶರಣಯ್ಯ ಶರಣು ಬೆನಕಾ.." ಅಂತ ಬೆಳಬೆಳಗ್ಗೆ ನಿದ್ದೆ ಗಣ್ಣಿನಲ್ಲಿರುವಾಗಲೇ ’
ಸಾಮೂಹಿಕ ಪ್ರಾರ್ಥನೆಯಲ್ಲಿ ಹಾಡುತ್ತಿದ್ದದ್ದು ಒಂದು ನೆನಪು..


ನನ್ನ ಕಲ್ಪನೆಗಳಿಗೆ ಬಣ್ಣ ಹಚ್ಚುತ್ತಿದ್ದ ಗಣಪನ ಹಬ್ಬ ಚೌತಿಯಂತೂ ನನಗೆ ಬಲು ಪ್ರಿಯವಾದ ಹಬ್ಬ.
ಮನದಾಳದಲ್ಲಿ ಹುದುಗಿರುವ ಗಣಪ ಮೂರ್ತ ರೂಪ ಪಡೆದು ಬರುತ್ತಾನಲ್ಲವೆ ?
ಅದೂ ವರ್ಷಕ್ಕೆ ಒಂದು ಬಾರಿ ಮಾತ್ರ.ಇಂತಹ ಅವಕಾಶವನ್ನು ತಪ್ಪಿಸಿಕೊಳ್ಳುವುದುಂಟೇ?
ಗಣಪನ ಹಬ್ಬದ ಆಚರಣೆಯಂತೂ ಸುಮಾರು ಒಂದು ತಿಂಗಳಿನಿಂದಲೇ ಆರಂಭವಾಗುತ್ತಿತ್ತು.
ಕುಂಬಾರನ ಮನೆಯಿಂದ ಜೇಡಿ ಮಣ್ಣನ್ನು ತರಲಾಗುತ್ತಿತ್ತು.ಅಪ್ಪ ಗಣಪನ ಮೂರ್ತಿ ರಚನೆಯನ್ನು ಶುರು ಮಾಡುತ್ತಿದ್ದರು.
ಚಿಕ್ಕಪ್ಪ ಅದನ್ನು ಮುಂದುವರಿಸುತ್ತಿದ್ದರು.
ನಾನಂತೂ ತದೇಕ ಚಿತ್ತಳಾಗಿ ದೇವರನ್ನು ಮಾಡುವ ಈ ಕಾರ್ಯವನ್ನು ವೀಕ್ಷಿಸುತ್ತಿದ್ದೆ.
ಮಣ್ಣಿನ ಮುದ್ದೆ ದೇವರಾಗುವುದೇನು ಸಣ್ಣ ವಿಷಯವೆ?
ದೇವರ ಕಿರೀಟ ತಯಾರಿಯಂತೂ ಅಬ್ಬಾ ಎಂಥಹ ಸೊಬಗು..
ಬಣ್ಣ ಬಣ್ಣದ ಟಿಕಳಿಗಳೆಲ್ಲವೂ ಮೇಣದ ಸಹಾಯದಿಂದ ದೇವರ ಕಿರೀಟದಲ್ಲಿ ಸ್ಠಾನ ಪಡೆಯುತ್ತಿದ್ದವು.
ಗಣಪನಷ್ಟೇ ಅವನ ಇಲಿಯ ಬಗ್ಗೆಯೂ ನನಗೆ ಅತೀವ ಕೌತುಕ.
ಗಣಪನ ಹಾವಿನ ಬಗ್ಗೆ ಒಂಥರಾ ಭಯ ಕೂಡ. ಆದರೆ ಗಣಪ ಅದನ್ನು ಗಟ್ಟಿ ಕಟ್ಟಿಕೊಂಡಿದ್ದಾನಲ್ಲವೆ ?
ಹಾಗಾಗಿ ಹಾವು ಏನೂ ಮಾಡದು ಎಂಬ ನಂಬಿಕೆ !!

ಗಣಪನ್ನು ಪೈಂಟು,ಟಿಕಳಿಗಳನ್ನೆಲ್ಲಾ ಅಂಟಿಸಿ, ಅಲಂಕರಿಸಿದ ಮೇಲೆ, ಅವನನ್ನು ಇಡುವ ಮಂಟಪವನ್ನು ಅಲಂಕರಿಸಬೇಡವೆ?
ಚೌತಿ ಮಂಟಪವನ್ನು ಅಟ್ಟದಿಂದ ಇಳಿಸಿ,ಅದಕ್ಕೆ ಬಣ್ಣಬಣ್ಣದ ಕಾಗದವನು ಅಂಟಿಸಿ,
ಬಗೆಬಗೆಯ ಹೂಮಾಲೆಗಳನ್ನು ಹಾಕಿದರೂ ಇನ್ನಷ್ಟು ಚಂದ ಮಾಡಬೇಕೆಂಬ ಹೆಬ್ಬಯಕೆ.
ವರ್ಷಕ್ಕೊಮ್ಮೆ ಭುವಿಗೆ ಬರುವ ಗಣಪನಿಗೆಂದೇ ಮೋದಕ, ಪಂಚಕಚ್ಚಾಯ, ಉಂಡೆಗಳು,ಹೋಳಿಗೆ,ಜಿಲೇಬಿ..
ಎಷ್ಟೊಂದು ಬಗೆಯ ಭಕ್ಷ್ಯ ಭೋಜ್ಯಗಳು!!
ನೈವೇದ್ಯವಾಗುವ ತನಕ ಅವುಗಳನ್ನು ಮುಟ್ಟಬಾರದೆಂದು ಹಿರಿಯರ ಕಟ್ಟಪ್ಪಣೆಯಿರುತ್ತಿದ್ದರಿಂದ ,
ಅಲ್ಲಿಯ ತನಕ ಆಸೆಯನ್ನು ಹಿಡಿದಿಟ್ಟುಕೊಳ್ಳುತ್ತಿದ್ದೆವು.

ಮನೆಯಲ್ಲ್ಲಿ ಪೂಜೆ ಬಳಿಕ ಊಟವಾದ ಮೇಲೆ , ಬೇರೆಯವರ ಮನೆಗಳಿಗೂ ತೆರಳಿ ಅಲ್ಲಿ ಕೂರಿಸಿರುವ
ಗಣಪನನ್ನು ನೋಡುವ ತವಕ.ಅಲ್ಲೂ ಪುನ: ಪ್ರಸಾದ ಭಕ್ಷಿಸುವ ಕಾರ್ಯಕ್ರಮವಿರುತ್ತ್ತಿದ್ದದ್ದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ!!

ಎರಡು ದಿನ ಗಣಪನಿಗೆ ಭರ್ಜರಿ ಪೂಜೆ ನಡೆದ ಬಳಿಕ,
ಆತನನ್ನು ಪುನಹ ಆತನ ಮನೆಗೆ ಕಳುಹಿಸುವಾಗಲಂತೂ ನನ್ನ ಕಣ್ಣಾಲಿಗಳು ತುಂಬಿ ಬರುತ್ತಿದ್ದವ್ವು.
ಮನೆಯಿಂದ ನದಿಯ ತನಕ ಆತನನ್ನು ಕರೆದೊಯ್ಯುವಾಗ ಶಂಖ ,ಜಾಗಟೆಗಳ ಸದ್ದಿನೊಂದಿಗೆ ಎಲ್ಲರೂ ಬೀಳ್ಕೊಡಲು ಹೋಗುತ್ತಿದ್ದೆವು.
’ಗಣಪತಿ ಬಪ್ಪಾ ಮೋರಯಾ, ಪುಡ್ಚಾ ವರ್ಶಾ ಲೊಕರಿ ಯಾ ’
ಎಂದು ಹೇಳುತ್ತಾ ಆತನನ್ನು ನದಿಯಲ್ಲಿ ವಿಸರ್ಜಿಸಲಾಗುತ್ತಿತ್ತು.ನದಿಯ ನೀರನ್ನೆಲ್ಲಾ ತಲೆಯ ಮೇಲೆ ಪ್ರೋಕ್ಷಿಸಿ,
ಭಾರವಾದ ಹೃದಯಿಂದ ಮನೆಗೆ ವಾಪಸಾಗುತ್ತಿದ್ದೆವು.

ಸಾರ್ವಜನಿಕ ಗಣಪನ ಹಬ್ಬಕ್ಕೂ ಈ ನಡುವೆ ಹೋಗಿ ಬರುತ್ತಿದ್ದೆ.
ಅಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಬಹುಮಾನ ಗೆದ್ದಾಗಲಂತೂ ಹಬ್ಬದ ಸಂಭ್ರಮದ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಿಸಿದಂತೆ!!

ಆಹಾ ಎಂತಹ ಸಂಭ್ರಮದ ದಿನಗಳವು..ಈ ಸಲವೂ ಚೌತಿ ಬಂದಿದೆ.
ಆಫೀಸಿಗೆ ರಜೆಯೂ ಇದೆ...ಆದರೆ project deadline ಮುಗಿಸಲು
ನಾನು ಅಫೀಸಿನ ಕೆಲಸದಲ್ಲಿ ತಲ್ಲೀನವಾಗಬೇಕಾದದ್ದು ಅನಿವಾರ್ಯವಾಗಿದೆ.
ಹಾಗಾಗಿ ಪ್ರಥಮ ಪೂಜಿತನಿಗೆ ಮನದಲ್ಲೇ ವಂದಿಸಿ,ಅಂಗಡಿಯಿಂದ ತಂದ ಬೇಸನ್ ಲಾಡು ಮೆಲ್ಲಬೇಕಾದದ್ದು ಮಾತ್ರ ವಿಪರ್ಯಾಸ!!

Wednesday, August 15, 2007

ಸ್ವಾತಂತ್ರ್ಯ ದಿನಾಚರಣೆ .....


ಅಗೋಸ್ತು ಹದಿನೈದು ಯಾವ ವಾರ ಬಂದಿದೆ ಅಂತ ಕಣ್ಣಾಡಿಸಿದೆ..ವಾವ್ಹ್!!ಬುಧವಾರ..ಈ ಸಲ ರಜೆ ನಷ್ಟವಾಗಲಿಲ್ಲ ಅಂತ ಮನದಾಳದಲ್ಲಿ ಹರ್ಷದ ಬುಗ್ಗೆಗಳೆದ್ದವು. ಜತೆಗೆ ನಾನು ಬಾಲ್ಯದಲ್ಲಿ ಆಚರಿಸುತ್ತಿದ್ದ ಸ್ವಾತಂತ್ರ್ಯ ದಿನ ಕಣ್ಣೆದುರು ಬಂತು.

ಸ್ವಾತಂತ್ರ್ಯ ದಿನಾಚರಣೆ ಶಾಲೆಯಲ್ಲಿ ಆಚರಿಸುತ್ತಿದ್ದ ಬಲು ದೊಡ್ಡ ಹಬ್ಬ. ಸುಮರು ಹದಿನೈದು ದಿನಗಳ ಮುಂಚೆಯೇ ಅದಕ್ಕೆ ತಯಾರಿ ಆರಂಭವಾಗುತಿತ್ತು.
ಧ್ವಜ ಗೀತೆ,ರಾಷ್ಟ್ರ ಭಕ್ತಿಗೀತೆಗಳ ತಾಲೀಮಿನ ಜತೆಗೆ,ಭಾಷಣ,ನೃತ್ಯ,ರಸಪ್ರಶ್ನೆ ಇತ್ಯಾದಿ ಸ್ಪರ್ಧೆಗಳಲ್ಲಿ ಭಾಗವಹಿಸುವ ತರಾತುರಿ.ನಾಟಕದ ಪಾತ್ರದ ಮಾತುಗಳಂತೂ ಮನೆಯವರಿಗೆಲ್ಲ ಬಾಯಿಪಾಠವಾಗುತ್ತಿದ್ದವು.ಅಮ್ಮನ ಸೀರೆ,ಅಪ್ಪನ ಮುಂಡು ಇವಕ್ಕೆಲ್ಲ ಎಲ್ಲಿಲ್ಲದ ಬೇಡಿಕೆ.ಕೋಲಾಟ,ಲೇಜಿಮು,ಗೀ ಗೀ ಪದ,ಸುಗ್ಗಿ ಕುಣಿತ ಒಂದೇ ಎರಡೇ ಎಷ್ಟೊಂದು ಬಗೆಯ ಕಾರ್ಯಕ್ರಮಗಳು!!

ಶಾಲೆಯನ್ನು ತಳಿರು ತೋರಣಗಳಿಂದ ಶೃಂಗರಿಸಲಾಗುತ್ತಿತ್ತು.ಸ್ವಾತಂತ್ರ್ಯೋತ್ಸವದ ದಿನವಂತೂ ನಮ್ಮ ಸಂಭ್ರಮವನ್ನು ಕೇಳುವುದೇ ಬೇಡ. ಬೇಗನೆ ಎದ್ದು,ಸಮವಸ್ತ್ರ ಧರಿಸಿ ತಯಾರಾಗುತ್ತಿದ್ದೆವು, ಮನೆಯ ಹೂದೋಟದಲ್ಲಿ ಎಷ್ಟು ಹೂವುಗಳು ಸಿಗುತ್ತವೋ ಅವುಗಳನ್ನೆಲ್ಲ ಕೊಯ್ದು,ಶಾಲೆಗೆ ಕೊಂಡೊಯ್ಯುತ್ತಿದ್ದೆವು.ದ್ವಜದ ಒಳಗೆ ಬಣ್ಣ ಬಣ್ಣದ ಹೂವುಗಳನ್ನು ತುಂಬಿಸಿ,ಧ್ವಜಾರೋಹಣಕ್ಕೆ ಅಣಿ ಮಾಡುತ್ತಿದ್ದೆವು.ಧ್ವಜಸ್ಥಂಭದ ಸುತ್ತ ಹೂವಿನ ರಂಗೋಲಿಯ ಸೊಬಗು. ಧ್ವಜಾರೋಹಣ ಆದಾಗ , ಎಲ್ಲರೂ ಒಕ್ಕೊರಲಿನಿಂದ ’ಝಂಡಾ ಊಂಚಾ ರಹೇ ಹಮಾರಾ ’ ಎಂದು ಹಾಡುತ್ತಿದ್ದೆವು ಅದರ ಅರ್ಥವೇನೆಂದು ಗೊತ್ತಿಲ್ಲದಿದ್ದರೂ..

ನಮ್ಮೆಲ್ಲರ ಕಣ್ಣಲ್ಲಿ ಸಂಭ್ರಮದ ನಗು.ಮಕ್ಕಳ ನೃತ್ಯ,ನಾಟಕ ಇವನ್ನೆಲ್ಲಾ ನೋಡಲು ಬಂದ ಹೆತ್ತವರ ಮೊಗದಲ್ಲಂತೂ ಹೆಮ್ಮೆಯ ಸೊಬಗು!! ಮೇಷ್ಟ್ರೋ ಅಥವಾ ಹಿರಿಯರೋ ಬರೆದುಕೊಟ್ಟ ಭಾಷಣವನ್ನು ಉರು ಹೊಡೆದು ಹೇಳುವುದಂತೂ ಸಣ್ಣ ಕೆಲಸವೇನಲ್ಲ!!
ಬಹುಮಾನ ಗೆದ್ದರಂತೂ ಜಗವನ್ನೇ ಗೆದ್ದ ಹರ್ಷ!! ಬಹುಮಾನ ಒಂದು ಸಣ್ಣ ಪೆನ್ಸಿಲ್ ಇರಲಿ ಅಥವಾ ಪುಟ್ಟ ಲೋಟವೇ ಇರಲಿ,ಖುಷಿಯೇನೂ ಪುಟ್ಟದಾಗಿರುತ್ತಿರಲಿಲ್ಲ!!

ಸಭಾಕಾರ್ಯಕ್ರಮ ಮುಗಿದ ಮೇಲೆ ಎಲ್ಲರಿಗೂ ಬೆಲ್ಲ,ತೆಂಗಿನಕಾಯಿ ಜತೆ ಕಲಸಿದ ಅವಲಕ್ಕಿ ನೀಡಲಾಗುತ್ತಿತ್ತು.ಎಲ್ಲ ಕಾರ್ಯಕ್ರಮಗಳು ಮುಗಿದು ಮನೆಗೆ ಬಂದ ಮೇಲೂ ಸ್ವಲ್ಪ ದಿನ ಆ ಸಂಭ್ರಮದ ದಿನದ್ದೇ ಗುಂಗು!!

ಶಾಲಾದಿನಗಳಲ್ಲಿದ್ದ ಆ ಸಂಭ್ರಮದ ದಿನವನ್ನು ಈಗ ನಾನು ಕೇವಲ ರಜಾದಿನದ ದೃಷ್ಟಿಯಲ್ಲಿ ಕಾಣುತ್ತಿರುವುದನ್ನು ಯೋಚಿಸಿ ಒಮ್ಮೆ ವಿಷಾದವಾಯಿತು.ಯಾಕೆ ನನ್ನ ಮನಸ್ಠಿತಿ ಈ ರೀತಿಯಾಗಿ ಬದಲಾಗಿದೆ ಎಂದು ಯೋಚಿಸಲಾರಂಭಿಸಿದೆ.

Wednesday, July 25, 2007

ಅನಿಸುತಿದೆ ಯಾಕೋ ಇಂದು...

(ಕವಿ ಜಯಂತ ಕಾಯ್ಕಿಣಿಯವರ ಕ್ಷಮೆ ಕೋರಿ..)

ಅನಿಸುತಿದೆ ಯಾಕೊ ಇಂದು
ರೈಲದು ಓಡಲೇಬೇಕು ಎಂದು
ಬೆಂಗಳೂರ ಲೋಕದಿಂದ
ಮಂಗಳೂರಿಗೆ ಬರಬೇಕೆಂದು
ಆಹಾ ಎಂಥ ಮಧುರ ಯೋಚನೆ
ರೈಲು ಸೀಟಿ ಕೂಗೆ ಒಮ್ಮೆ ಹಾಗೆ ಸುಮ್ಮನೆ ||

ಕಡಿಮೆಯಾದೀತು ತುಸು ಅಫಘಾತದ ತಳಮಳ
ಘಾಟಿಯ ಟ್ರಾಫಿಕ್ ಜಾಮ್ ರಜಾ ಹಾಕಲಿದೆ
ರೈಲಿನ ಮೊಗವನು ಕಂಡ ಕ್ಷಣ
ಹಸಿರು ಬಾವುಟ ತೋರಲಿ ಒಮ್ಮೆ
ಹಾಗೆ ಸುಮ್ಮನೆ||

ಓಡದ ರೈಲಲಿ ಕಾಣದ
ಕೈಗಳ ಕಹಿ ಇದೆ
ಹಳಿಯಲಿ ಬರೆಯದ ನಿನ್ನ
ಹೆಸರು ಕಡತದಲಿ ಉಳಿದಿದೆ||
ರೈಲಿಗುಂಟೆ ಇದರ ಕಲ್ಪನೆ?

ಓಡಬಾರದೆ ರೈಲು ಒಮ್ಮೆ
ಹಾಗೆ ಝುಮ್ಮನೆ!! || ಅನಿಸುತಿದೆ|
(ತರಂಗ ಆಗಸ್ಟ್ ೨,೨೦೦೭ ,ಪುಟ ಸಂಖ್ಯೆ ೨೨ ರಲ್ಲಿ ಪ್ರಕಟವಾಗಿದೆ )

Saturday, June 2, 2007

ಮಳೆಯಲ್ಲಿ ನೆನೆದದ್ದು...

ಕಳೆದ ಸಲ ಊರಿಗೆ ಹೋಗಿದ್ದಾಗ,ನನ್ನನ್ನು ಕಂಡು ತಂಗಿ 'ಡ್ರಮ್ಮು' ಥರ ಆಗಿದ್ದಿ ಅಂತ ಹೇಳಿದ್ದು , ನಾನು ವಾಕಿಂಗ್ ಮಾಡುವ ನಿರ್ಧಾರವನ್ನು ಕೈಗೊಳ್ಳುವಂತೆ ಪ್ರೇರೆಪಿಸಿತು.ಆಫೀಸಿನಿಂದ ನನ್ನ ಮನೆಗೆ ಇರುವ ಸುಮಾರು ಎರಡುವರೆ ಕಿ.ಮೀ. ದೂರ ನಡೆಯುತ್ತಾ ಬಂದರೆ ,ಆಟೊವಾಲಾರ ನಖರಾಗಳನ್ನು ಕೇಳಿಸಿಕೊಳ್ಳುವುದೂ ಬೇಡಾ,ಆರೋಗ್ಯಕ್ಕೂ ಒಳ್ಳೆಯದು, ಮೇಲಾಗಿ ಡ್ರಮ್ಮಿನಿಂದ ಸ್ಲಿಮ್ಮಿಗೆ ಇಳಿಯಬಹುದೇನೂ ಎಂಬ ದೂರಾಲೋಚನೆ..
ಒಂದು ಕಲ್ಲಿಗೆ ಮೂರು ಹಕ್ಕಿ!!

ಸರಿ, ಇವತ್ತು ನಡೆಯುತ್ತಾ ಬರುತ್ತಿದ್ದೆ.ಅಷ್ಟರಲ್ಲಿ ತುಂತುರು ಮಳೆ ಬೀಳಲಾರಂಭಿಸಿತು..ಬಿಸಿಲಿನ ಬೇಗೆಗೆ ಬಳಲಿ ಬೆಂಡಾದ ಬೆಂಗಳೂರಿಗೆ ಅಮೃತ ಸಿಂಚನ ನೀಡುತಿದೆಯೋ ಎನಿಸತೊಡಗಿತು.ಮಳೆದೇವರು ಒಬ್ಬರೇ ಬರಲಿಲ್ಲ..ಸಿಡಿಲು, ಗುಡುಗುಗಳೆಂಬ ಫೊಟೊಗ್ರಾಫರ್,ವಾದ್ಯಗಾರರ ಜತೆಯೇ ಬಂದಿಳಿದರು.ನನ್ನ ಹತ್ತಿರ ಕೊಡೆ ಇರಲಿಲ್ಲ. ಹಾಗಾಗಿ ಹತ್ತಿರದಲ್ಲೇ ಇದ್ದ ಅಂಗಡಿಯ ಬಳಿ ಹೋಗಿ ,ಮಳೆ ನೋಡುತ್ತಾ ನಿಂತೆ..

ಅಚಾನಕ್ಕಾಗಿ ಸುರಿದ ಮಳೆ ನನ್ನಲ್ಲಿ ಬಾಲ್ಯದ ನೆನಪುಗಳನ್ನು ಹಸಿರಾಗಿಸಿತು..ನಾನು ಹುಟ್ಟಿ ಬೆಳೆದದ್ದು ಮಳೆಗಾಲದ ಸಮಯದಲ್ಲಿ ದಿನದ ಹೆಚ್ಚಿನ ಭಾಗ ಮಳೆ ಸುರಿಯುವ ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ.ಮೇ ತಿಂಗಳು ಕೊನೆಯಾಗುತ್ತಿದ್ದಂತೆ ,ಧುತ್ತನೆ ಪ್ರತ್ಯಕ್ಷವಾಗುತ್ತಿದ್ದ ಮಳೆರಾಯನ ವೇಳಾಪಟ್ಟಿ ನನ್ನಲ್ಲಿ ಅಚ್ಚರಿಯನ್ನು ಉಂಟು ಮಾಡುತ್ತಿತ್ತು.ಮೊದಲ ಮಳೆ ಬೀಳುವಾಗ ಉಂಟಾಗುವ ಮಣ್ಣಿನ ವಾಸನೆ ...ವ್ಹಾವ್ಹ್!! ಎಷ್ಟೊಂದು ಮಧುರ!ಆಲಿಕಲ್ಲು ಬಿದ್ದರಂತೂ ಅದನ್ನು ಹೆಕ್ಕಿ ತಿನ್ನುವ ತನಕ ಸಮಾಧಾನವಿಲ್ಲ..

ಜೂನ್ ತಿಂಗಳು ಶಾಲಾರಂಭ..ಹೊಸ ಪುಸ್ತಕ, ಹೊಸ ಬ್ಯಾಗಿನ ಪರಿಮಳ.ಬ್ಯಾಗ್, ಬುತ್ತಿ,ಛತ್ರಿ ಹಿಡಿದು ಶಾಲೆಗೆ ಹೊರಡುವುದೆಂದರೆ ಎಂಥಹಾ ಸಂಭ್ರಮ. ಛತ್ರಿ ಮೇಲೆ ಕಸೂತಿಯಲ್ಲಿ ಹೆಸರು ಬರೆಯುವ ತವಕ. ದಾರಿಯಲ್ಲಿ ಸಿಗುವ ಒರತೆಯಲ್ಲಿ ಕಾಲಾಡಿಸುತ್ತ,ಓರಗೆಯವರೊಂದಿಗೆ ಪಟ್ಟಾಂಗ ಹೊಡೆಯುತ್ತಾ ಸಾಗುತ್ತಿದ್ದೆವು.ಪುಸ್ತಕಗಳು ಒದ್ದೆಯಾಗಬಾರದೆಂದು ಅವುಗಳನ್ನು ಪ್ಲಾಸ್ಟಿಕ್ ಕವರ್ ನೊಳಗೆ ಇಳಿಬಿಟ್ಟು, ಮತ್ತೆ ಬ್ಯಾಗಿನೊಳಗಿರಿಸಿಕೊಳ್ಳುತ್ತಿದ್ದೆವು.ದಾರಿಯಲ್ಲಿ ಸಿಗುವ ಪುಟ್ಟ ಕಾಲುವೆಯಲ್ಲಿ ಕೆಲವೊಮ್ಮೆ ಕಾಗದದ ದೋಣಿ ತೇಲಿಸಿ, 'ದೋಣೆ ಸಾಗಲಿ' ಹಾಡಿಗೆ ದನಿಯಾಗುತ್ತಿದ್ದೆವು.

ನಮ್ಮೂರಿನ ಗುಂಡ್ಯ ಹೊಳೆ ಮಳೆಗಾಲದಲ್ಲಿ ಭಾರೀ ಸುದ್ದಿ ಮಾಡುತ್ತಿತ್ತು.ಉಳಿದೆಲ್ಲಾ ಸಮಯದಲ್ಲಿ ಕೃಷಿ ಭೂಮಿಗೆ ನೀರೊದಗಿಸುತ್ತಾ ತೆಪ್ಪಗೆ ಹರಿಯುತ್ತಿದ್ದ ನದಿ, ಮಳೆಗಾಲದಲ್ಲಿ ರೌದ್ರಾವತಾರ ತಾಳಿ ಹರಿಯುತ್ತಿತ್ತು. ಅದಕ್ಕೆ ಕಟ್ಟಿರುವ ಸೇತುವೆಯ ಮೇಲೆಲ್ಲಾ ನೀರು ಉಕ್ಕಿ ಸಂಚಾರಕ್ಕೆ ಅಡಚಣೆಯನ್ನುಂಟು ಮಾಡುತ್ತಿತ್ತು.ಸೇತುವೆ ಮೇಲೆ ನೀರು ಉಕ್ಕಿದಾಗಲೂ ವಾಹನ ಚಲಾಯಿಸಹೊರಟ ಮೊಂಡು ಧೈರ್ಯದವರನ್ನು ಬಲಿ ತೆಗೆದುಕೊಳ್ಳುತ್ತಿತ್ತು.ಸೇತುವೆ ಮೇಲೆ ನೀರುಕ್ಕಿದಾಗ 'ಸಂಕ block ಅಂತೆ' ಅಂತ ಜನ ಮಾತಾಡಿಕೊಳ್ಳುತ್ತಿದ್ದರು.ಅದನ್ನು ನೋಡಲು ನಮಗೆ ಭಾರೀ ಕುತೂಹಲ.ಹೇಗಾದರೂ ಮಾಡಿ ಹಿರಿಯರ ಅನುಮತಿ ಪಡೆದು ನೋಡಿ ಬರುತ್ತಿದ್ದೆವು.ಅದರ ಎರಡೂ ಬದಿಯಲ್ಲಿ ಕಾವಲು ಕಾಯುತ್ತಿದ್ದ ಪೋಲೀಸರನ್ನು ಕಂಡಾಗ ಒಂಥರಾ ಭಯ ನಮಗೆಲ್ಲ!!

ಮಳೆಗಾಲದಲ್ಲಿ ಬಸ್ಸು ಹತ್ತುವುದೆಂದರೆ ಒಂದು ಸಾಹಸ.ಎಲ್ಲರ ಅರೆತೆರೆದ ಕೊಡೆಗಳು..ಬಸ್ಸು ಹತ್ತಬೇಕು, ನಾವೂ ಒದ್ದೆಯಾಗಬಾರದು..ಹಾವೂ ಸಾಯಬಾರದು ಕೋಲೂ ಮುರಿಯಬಾರದು.ಆಗಲೇ ತುಂಬಿ ತುಳುಕುತ್ತಿರುವ ಬಸ್ಸಿಗೆ ಕಂಡಕ್ಟರು ರೈಟ್ ಹೇಳುವ ಮುನ್ನ ಹತ್ತಬೇಕು.ಮೂರೇ ಬಸ್ಸುಗಳಿದ್ದ ಆ ಕಾಲದಲ್ಲಿ ,ಸಿಕ್ಕಿದ ಬಸ್ಸಿಗೆ ಹತ್ತಿ, ಗುರಿ ಸೇರುವ ಆತುರ.

ಅಂತೂ ಇಂತೂ ಬಸ್ಸು ಹತ್ತಿದ್ದಾಯ್ತು.ತೊಯ್ದ ಡ್ರೆಸ್ಸು,ಮೈ,ಮಣಭಾರದ ಚೀಲ,ನೀರು ತೊಟ್ಟಿಕ್ಕುವ ಕೊಡೆ,ಅತ್ತಿತ್ತ ಅಲ್ಲಾಡಲೂ ಜಾಗವಿಲ್ಲ ಬಸ್ಸಿನೊಳಗೆ.
ಕಂಡಕ್ಟರನಂತೂ ದೂರದಿಂದಲೇ ಪಾಸನ್ನು ಕೇಳುತ್ತಿದ್ದ.ಎಷ್ಟೋ ಕೈಗಳನ್ನು ದಾಟಿ ಪಾಸ್ ಆತನ ದರ್ಶನ ಪಡೆಯುತ್ತಿತ್ತು.

ಇವೆಲ್ಲದರ ಮಧ್ಯೆ ಯಾವುದಾದರೂ ಸೀಟ್ ಖಾಲಿಯಾಗುತ್ತದೆ ಎಂದಾದರೆ ,ಅದನ್ನು ಗಬಕ್ಕನೆ ಆವರಿಸುವ ಪರಿಯನ್ನು ನೀವು ನೋಡಿದರೆ,ಓಹ್! ಸೀಟಿಗಾಗಿ ಜನ ಎಷ್ಟೊಂದು ಪರದಾಡುತ್ತಾರೆ ಎಂದು ಅನಿಸದಿರದು!!

ಇಷ್ಟೆಲ್ಲಾ ಕಷ್ಟಪಟ್ಟು ಶಾಲೆಗೆ ಹೋದಾಗ ಕೆಲವೊಮ್ಮೆ ವಿಪರೀತ ಮಳೆಯೆಂದು ಶಾಲೆಗೆ ರಜೆ ಘೋಷಣೆ ಆಗುತ್ತಿದ್ದದ್ದೂ ಉಂಟು.ಆಗೆಲ್ಲ್ಲಾ ನನಗೆ ತೀರಾ ನಿರಾಶೆಯಾಗುತ್ತಿತ್ತು
ಮಳೆಗಾಲದಲ್ಲಿ ತೋಟಕ್ಕೆ ಮದ್ದು ಬಿಡುವ ಸಮಯ.ಮೈಲುತುತ್ತು, ಸುಣ್ಣದ ಮಿಶ್ರಣದ ನೀಲಿ ಬಣ್ಣದ ದ್ರಾವಣ ನೋಡಲು ಭಾರೀ ಚಂದ.ಮಳೆಯ ಕಾರಣದಿಂದ ಎರಡು ಮೂರು ದಿನಗಳಲ್ಲಿ ಮುಗಿಯಬೇಕಾದ ಕೆಲಸ ಹದಿನೈದು-ಇಪ್ಪತ್ತು ದಿನಗಳನ್ನು ತೆಗೆದುಕೊಳ್ಳುತ್ತಿದ್ದದ್ದೂ ಉಂಟು.

ಹಪ್ಪಳ ,ಸಾಂತಾಣಿ(ಹಲಸಿನ ಬೀಜ),ಹುಣಿಸೇಬೀಜ,ಸುಟ್ಟ ಕೊಬ್ಬರಿ ಇವು ನಮ್ಮ ಬಾಯಿಚಪಲಕ್ಕೆ ಗುರಿಯಾಗುತ್ತಿದ್ದವು.ಹಲಸಿನ ಹಪ್ಪಳ,ಹೊರಗಡೆ ಮಳೆಯ ಸಪ್ಪಳ,ಕವಿದ ಕಾರ್ಗತ್ತಲು--ಸ್ವರ್ಗಕ್ಕೆ ಮೂರೇ ಗೇಣು!!

ಮಳೆಗಾಲದಲ್ಲಿ ಬಟ್ಟೆ ಒಣಗಿಸಲು ಅಮ್ಮ ಪಡುತ್ತಿದ್ದ ಪಾಡು ಹೇಳತೀರದು.ಒಲೆಯ ಹತ್ತಿರದ ತಂತಿಯಲ್ಲಿ ಬಟ್ಟೆ ಹಾಕಿ, ಆಗಾಗ್ಗೆ ಅದನ್ನು ತಿರುವಿ,ಶಾಲೆಗೆ ಹೋಗುವಶ್ಟರಲ್ಲಿ ಒಣಗಿದ ಬಟ್ಟೆ ಸಿದ್ಧವಾಗಿರುತ್ತಿತ್ತು.ಸಂಜೆ ಶಾಲೆಯಿಂದ ಬಂದೊಡನೆ ಅಮ್ಮ ಬೆಚ್ಚಗಿನ ಹಾಲು ಕುಡಿಯಲು ಕೊಡುತ್ತಿದ್ದಳು.ಮಳೆಯಿಂದಾಗಿ ಬಸ್ಸು ತಡವಾದರೆ ಅಪ್ಪ,ಅಮ್ಮ ಇಬ್ಬರಲ್ಲೂ ಮೂಡುತ್ತಿದ್ದ ಆತಂಕ ನನ್ನನ್ನು ಕಂಡೊಡನೆ ದೂರವಾಗುತ್ತಿತ್ತು.

ಈಗಲೂ ಅಷ್ಟೆ..ಮಳೆ ಎಂದರೆ ನನಗೆ ನೆನಪಾಗುವುದು ,ಸುತ್ತಲೂ ಕತ್ತಲು ಆವರಿಸಿ,ಧೊ ಧೋ ಎಂದು ಸುರಿಯುವ ನಮ್ಮೂರಿನ ಮಳೆ.ಮಳೆಯ ಸದ್ದಿಗೆ,ಅದರ ಪರಿಮಳಕ್ಕೆ, ಅದು ಇಳೆಯ ಮೇಲೆ ಮೊಡಿಸುವ ನವ ಚೈತನ್ಯಕ್ಕೆ,ಅದರ ಸೌಂದರ್ಯಕ್ಕೆ ,ಅದರ ಗಾಂಭೀರ್ಯಕ್ಕೆ ನಾನು ತಲೆ ಬಾಗುತ್ತೇನೆ.
ಮಳೆ ಮನೆಯಂಗಳದಲ್ಲಿ ಸೃಷ್ಟಿಸುತ್ತಿದ್ದ ಪುಟ್ಟ ಒರತೆ, ಅದರಲ್ಲಿ ಹುಟ್ಟಿಕೊಳ್ಳುವ ಪುಟ್ಟ ಜಲತರಗಳು,ಮಳೆಗಾಲದ ನೀರವ ರಾತ್ರಿಯಲ್ಲಿ ( ಕರೆಂಟೂ ಇಲ್ಲ ) ಆಗೊಮ್ಮೆ ಈಗೊಮ್ಮೆ ಕೇಳುವ ಕಪ್ಪೆಗಳ ವಟಗುಟ್ಟುವಿಕೆ,ಮಳೆ ಬಿದ್ದೊಡನೆ ಪಲ್ಲವಿಸುವ ಕೆಲವು ಹೂವುಗಳು,ಕಾಡಿನ ದಾರಿಯಲ್ಲಿ ಝರಿಯ ಝುಳು ಝುಳು ನಿನಾದ..ಎಷ್ಟು ಚಂದ !!

ವಿಪರೀತ ಮಳೆಯಿಂದ ಬೆಳೆಗೆ ಹಾನಿಯಾದಾಗಲೂ, ಟಿ.ವಿ., ಪೋನ್ ಹಾಳಾದಾಗಲೂ , ಜನರನ್ನು ಬಲಿ ತೆಗೆದುಕೊಂಡಾಗಲೂ ನಾನು ಅದರ ರೌದ್ರ ಶಕ್ತಿಗೆ ಬೆಚ್ಚಿದ್ದೂ ಇದೆ.

ನನ್ನ ಮನಸ್ಸಿಡೀ ನಾನು ಬಾಲ್ಯದಲ್ಲಿ ಕಂಡ ಮಳೆಯನ್ನು ಮೆಲುಕು ಹಾಕುತ್ತಿತ್ತು.ಜೋರಾಗಿ ಒಮ್ಮೆ ಗುಡುಗಿನ ಸದ್ದು ಕೇಳಿಸಿತು.ಒಹ್!! ನಾನು ಬೆಂಗಳೂರಿನಲ್ಲಿದ್ದೇನೆ..ಮಳೆನೀರು ರಸ್ತೆಯಲ್ಲಿ ಶೇಖರವಾಗಿ, ಕೊಚ್ಚೆಯ ನೀರೂ ಸೇರಿಕೊಂಡು ಹರಿಯುತ್ತಿದೆ.ವಾಹನಗಳು ಸಾಲು ಸಾಲಾಗಿ ಮುಂದೆ ಸಾಗಲು ಹವಣಿಸುತ್ತಿವೆ.

ಮಳೆ ಸ್ವಲ್ಪ ನಿಧಾನವಾಗತೊಡಗಿತ್ತು.ಮತ್ತೆ ನಡೆಯತೊಡಗಿದೆ.ಯಾರದ್ದೊ ವಾಹನ ಕೊಚ್ಚೆ ನೀರನ್ನು ನನ್ನ ಮೇಲೆ ಸಿಡಿಸಿತು..ಮನೆಗೆ ಹೋಗಿ, ಸ್ನಾನ ಮಾಡಿ, ಅಡಿಗೆಯಾಗಬೇಕು..ತರಕಾರಿ ಏನೂ ತಂದಿಲ್ಲ..ಇವತ್ತಿಗೆ ಸಾರು ಸಾಕು..ಜತೆಗೆ ಅಮ್ಮ ಕೊಟ್ಟ ಹಪ್ಪಳ ಇದೆ..ಅಂತ ಯೋಚಿಸುತ್ತಾ ಮನೆಗೆ ಬಂದೆ..

ಈ ಲೇಖನ ದಾಟ್ಸ್ ಕನ್ನಡಲ್ಲ್ಲಿ ಪ್ರಕಟವಾಗಿದೆ..

Wednesday, May 23, 2007

ನಾಳೆಗಳ ನಿರೀಕ್ಷೆಯಲ್ಲಿ...


ಈ ಚಿತ್ರ ಕಿಶೋರ್ ಅವರು ಬರೆದದ್ದು.

ಅಕ್ಕ ತಮ್ಮನ ಜೋಡಿ ನಿಂತಿಹುದು
ಮೆಟ್ಟಿಲಿನ ಬಳಿಯಲ್ಲಿ
ಹುಸಿಮುನಿಸು -ತಮ್ಮನ ಜತೆಗೆ
ಮುಗುಳುನಗೆ -ಅಕ್ಕನ ಮೊಗದಲ್ಲಿ||

ನೋಡು ತಮ್ಮಾ ಏರಬೇಕಾದ ದಾರಿಯೆಡೆಗೆ
ಒಮ್ಮೆ ತಿರುಗಿ ನೋಡು..
ಮುಖತಿರುಗಿಸಿದರೆ ಹೇಗೆ ? ನಮ್ಮ ನಾಳೆಗಳು
ಇರುವುದಲ್ಲಿ! ಅತ್ತ ಓಡು..||

ಒಂದರ ನಂತರ ಇನ್ನೊಂದು
ಹತ್ತಬೇಕು ಮೆಟ್ಟಲು
ಸತತ ಪ್ರಯತ್ನ , ಛಲ ಬೇಕೇ
ಬೇಕು ಗುರಿ ಮುಟ್ಟಲು||

ನೋವೊ ನಲಿವೋ ಪಯಣಿಸುತಿರಬೇಕು
ಪಯಣಕೆ ಹೆದರಬೇಡ,ನೀ ಮುಂದೆ ಸಾಗು
ನ್ಯಾಯ ಮಾರ್ಗದಲಿಮುನ್ನಡೆದರೆ ಸಾಕು
ಧೈರ್ಯದಿಂದಲೆ ನೀ ಮುನ್ನಗ್ಗು||

ಬೇರೆಬೇರೆಯಾದರೂ ನಮ್ಮ ಪಯಣದ ಹಾದಿ
ಜತೆಗಿರುವೆ ನಾ , ನೆನಪಾದಾಗಲೆಲ್ಲ
ನಮ್ಮ ಒಡನಾಟ,ಪ್ರೀತಿ ಮರೆಯಾಗದು
ಮಮತೆ ಇಹುದು ಹೃದಯದದೊಳಗೆಲ್ಲ||

Thursday, May 3, 2007

ಪನೀರ್ ಮಟರ್


ಪನೀರ್: ೨೦೦ಗ್ರಾಂ
ಬಟಾಣಿ :೨೦೦ ಗ್ರಾಂ
ಈರುಳ್ಳಿ :೨
ಟೊಮಾಟೊ:೨
ಶುಂಠಿ:ಒಂದು ಸಣ್ಣ ತುಂಡು
ಹಾಲು: ೧/೨ ಲೋಟ
ಬೆಳ್ಳುಳ್ಳಿ ಎಸಳು:೬
ಉಪ್ಪು:ರುಚಿಗೆ ತಕ್ಕಷ್ಟು
ಮೆಣಸಿನ ಹುಡಿ: ೨ ಚಮಚ
ಸಕ್ಕರೆ :೧ ಚಮಚ
ಬೆಣ್ಣೆ :ಸ್ವಲ್ಪ



೧.ಪನೀರನ್ನು ಸಣ್ಣ ಘನಾಕೃತಿಯ ಹೋಳುಗಳಾಗಿ ಕತ್ತರಿಸಿ.ಒಂದು ಬಾಣಲೆಯಲ್ಲಿ ಸ್ವಲ್ಪ ಬೆಣ್ಣೆ ಹಾಕಿ, ಬಿಸಿ ಮಾಡಿ,ಅದರಲ್ಲಿ ಪನೀರ್ ತುಂಡುಗಳನ್ನು ಹಾಕಿ, ಹೊಂಬಣ್ಣ ಬರುವವರೆಗೆ ಹುರಿಯಿರಿ.ಪನೀರನ್ನು ಹೊರತೆಗೆದು ಒಂದು ಪಾತ್ರೆಯಲ್ಲಿ ಹಾಕಿಡಿ.
೨.ಟೊಮಾಟೊ,ಬೆಳ್ಳುಳ್ಳಿ ಎಸಳು,ಶುಂಠಿ ಇವನ್ನು ಒಟ್ಟಿಗೆ ಮಿಕ್ಸಿಯಲ್ಲಿ ನೀರು ಹಾಕದೆ ರುಬ್ಬಿ .
೩.ಬಟಾಣಿಯನ್ನು ಕುಕ್ಕರ್ ನಲ್ಲಿ ಬೇಯಿಸಿ ತೆಗೆದಿಡಿ.
೪.ಬಾಣಲೆಯಲ್ಲಿ ಬೆಣ್ಣೆ ಹಾಕಿ,ನೀರುಳ್ಳಿಯನ್ನು ಕಂದು ಬಣ್ಣ ಬರುವವರೆಗೆ ಹುರಿಯಿರಿ.
೫.ಈಗ ಟೊಮಾಟೊ, ಬೆಳ್ಳುಳ್ಳಿ ಎಸಳು,ಶುಂಠಿ ಇವುಗಳ ಮಿಶ್ರಣವನ್ನು ಬಾಣಲೆಗೆ ಸುರಿಯಿರಿ.
೬.ಟೊಮೆಟೊ ಹಸಿವಾಸನೆ ಹೋಗುವ ತನಕ ಮಂದ ಉರಿಯಲ್ಲಿ ಬೇಯಿಸಿ.
೭.ಈ ಮಿಶ್ರಣಕ್ಕೆ ಪನೀರ್ ತುಂಡುಗಳು ಹಾಗೂ ಬೇಯಿಸಿದ ಬಟಾಣಿ ಸೇರಿಸಿ.
೮.ಇದಕ್ಕೆ ಸ್ವಲ್ಪ ಹಾಲು,೧ ಚಮಚ ಸಕ್ಕರೆ ಹಾಕಿ.
೯.ಈಗ ಉಪ್ಪು,ಮೆಣಸಿನ ಪುಡಿಯನ್ನು ಹಾಕಿ.ಸ್ವಲ್ಪ ಹೊತ್ತು ಕಲಕುತ್ತಿರಿ.
೧೦.ಈಗ ಪನೀರ್ ಮಟರ್ ತಯಾರಾಯ್ತು.
೧೧.ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.ಚಪಾತಿ ಜತೆ ತಿನ್ನಲು ಬಹಳ ರುಚಿ!!

Tuesday, March 27, 2007

ಹೋಳಿಯ ರಂಗು ...

ಮುಸುಕು ಕವಿದ ಬಾಳಿನಲಿ
ಬಣ್ಣ ಬಣ್ಣದ ಓಕುಳಿ
ರಂಗು ರಂಗಿನ ಹೊಸ ಲೋಕ
ಸೃಷ್ಟಿಸುತಿದೆ ಈ ಹೋಳಿ||

ಹೋಲಿಕಾಳ ದಹನವಾಯ್ತು
ಪಾರಾದ ಪ್ರಹ್ಲಾದ ಮೃತ್ಯುವಿನಿಂದ
ದುಷ್ಟ ಶಿಕ್ಷೆ ಶಿಷ್ಟ ರಕ್ಷೆಯ ನೆನಪಿನ
ಜತೆ ಹೋಳಿ ತರುತಿದೆ ಆನಂದ||

ಕೆಲವೆಡೆ ಸಂಭ್ರಮದ ಹೋಳಿ
ಕಾಮದಹನದ ಸಂಕೇತ
ಮನದೊಳಗಾಗಲಿ ದುರಾಸೆಯ ಭಸ್ಮ
ಇರಲಿ ಆಸೆ ಪರಿಮಿತ||

ಒಂದೆಡೆ ಉಗ್ರರ ದಾಳಿ
ಮತ್ತೊಂದೆಡೆ ಗಲಭೆ ಗೊಂದಲ
ಏತಕೆ ಇವೆಲ್ಲ? ಕೊಂಚ ತಾಳಿ..
ವಿಶ್ವ ಮೈತ್ರಿಯೆ ಹೊಳಿಯ ಹಂಬಲ||

ದ್ವೇಷ ಅಸೂಯೆಯ ಬಣ್ಣಗಳು
ಬೇಕೆ ನಮ್ಮ ಬಾಳಿಗೆ?
ಪ್ರೀತಿ, ಮಮತೆಯ ರಂಗು ಇದ್ದರೆ
ಸಾಕು, ಪ್ರತಿ ಗಳಿಗೆ||

Monday, March 26, 2007

ಬಾಹುಬಲಿಗೆ ಪ್ರಶ್ನೆ


ಮಹಾ ಮಸ್ತಕಾಭಿಷೇಕದ ಸಂದರ್ಭದಲ್ಲಿ ಬರೆದ ಕವನ..


ಗೊಮ್ಮಟ ದೇವಾ
ಗೊಮ್ಮಟ ದೇವಾ
ಏತಕೆ ನಿಂತಿದ್ದಿ?
ಅಷ್ಟು ಹೊತ್ತಿಂದ ನಿಂತಿದ್ರೂನೂ
ಮೌನ ವಹಿಸಿದ್ದಿ


ಅಲ್ಲಿ ಇಲ್ಲಿ ಗಲಭೆ ಗೊಂದಲ
ನೋಡ್ತಾ ಇದ್ದೀಯಲ್ವಾ?
ಮನಸ್ಸಿಗೆ ತುಂಬಾ ಬೇಜಾರಾಗಿ
ಮಾತಾಡ್ತಾ ಇಲ್ವಾ?


ಉರಿಬಿಸಿಲಿಗೆ ನಿಂಗೆ
ಸೆಕೆ ಆಗಲ್ವಾ?
ಥಂಡಿ ಹವೆಗೆ ನೀ
ನಡುಗಿ ಹೋಗಲ್ವಾ?

ಅಂಜದೆ ಅಳುಕದೆ ಬದುಕ್ಬೇಕಂತ
ಸಾರ್‍ತಾ ಇದ್ದೀಯಾ?
ತ್ಯಾಗದ ಮಹಿಮೆಯ ಜಗಕೆ
ನೀನು ತೋರಿಸ್ತಿದ್ದೀಯ?


ಇಲ್ಲಿ ಎಲ್ಲಾ ಕಡೆನೂ ಇದೆ
ಭಾರೀ ಕಾಂಪಿಟಿಶನ್ನು
ನಾನೇ ಗೆದ್ದೇ ಗೆಲ್ಬೇಕಂತ
ಕಾಡ್ತಾ ಇರತ್ತೆ ಮನವನ್ನು||

ರಾಜ್ಯ ಸಿಕ್ರೂ ಬೇಡ ಅಂತ
ನೀನೇ ಅಂದ್ಯಂತೆ
ಗೆದ್ರೂ ಕೂಡ ನಿಂಗೆ
ಏನೂ ಬೇಡ್ವಂತೆ||

ಮಾಡ್ತಿದ್ದಾರಂತೆ ನಿಂಗೆ
ಮಸ್ತಕಾಭಿಷೇಕ
ಬರ್ತೀನಿ ನಿನ್ನ ನೋಡಕೆ
ನಂಗಿದೆ ಭಾರೀ ತವಕ||

ನೀ ಎಲ್ಲಾದ್ರೂ ಮೌನ ಬಿಟ್ರೆ
ಕೇಳ್ಬೇಕು ನಿಂಗೆ ಕ್ವೊಶ್ಚನ್ನು
ನಗ್ ನಗ್ತಾ ನೀ ಇರ್ತಿ ಹೇಗೆ
ಎಲ್ಲೆಡೆ ತುಂಬಿದ್ರೂ ಟೆನ್ಶಶನ್ನು||

Sunday, March 11, 2007

ಸುಧಾಳ ಸುಧೆ

ಬಗೆ ಬಗೆ ಲೇಖನಗಳ
ಸರಮಾಲೆ ಧರಿಸುತ್ತ
ವರ್ಣಮಯ ಚಿತ್ರಗಳ
ವಸ್ತ್ರ ಹೊದೆಯುತ್ತ
ಈ ಚೆಲುವೆ 'ಜ್ಞಾನಸುಧೆ' ಹರಿಸುವಳು||

ಟೀಕೆ ಟಿಪ್ಪಣಿಗಳಿಗಾಗಿ
'ಸಮುದ್ರಮಥನ'ಗೈಯ್ಯುತ್ತ
ನಕ್ಕು ಹಗುರಾಗಲು
'ನಗೆ ಹೊನಲು'ಸೂಸುತ್ತ
ಈ ಚೆಲುವೆ ಮಿನುಗುತಿಹಳು||

ಪುಟಾಣಿಗಳ ಕುಣಿದಾಟಕ್ಕೆ
'ಎಳೆಯರ ಅಂಗಳ' ತೋರಿಸುತ್ತ
ಮುಂದೇನಾದೀತೆಂಬ ಕಾತರಕೆ
'ಭವಿಷ್ಯವಾಣಿ' ನುಡಿಯುತ್ತ
ಈ ಚೆಲುವೆ ನಲಿಯುತಿಹಳು||

ಸರ್ವರ ಸುಖವನು ಬಯಸಿ
'ಸುಖೀಭವ' ಎಂದು ಪಿಸುಗುಟ್ಟುತ್ತ
ಕೊಂಚ ವಯ್ಯಾರದ ಮಾತುಗಳ
'ಲಘುಬಿಗು'ವಿನಲಿ ಉಲಿಯುತ್ತ
ಈ ಚೆಲುವೆ ಬೆಳಗುತಿಹಳು||

ನೊಂದ ಮನದ ಸಾಂತ್ವನಕೆ
'ಆಪ್ತ ಸಲಹೆ'ನೀಡುತ್ತ
ತರ್ಲೆ ಪ್ರಶ್ನೆಗಳಿಗೆ ಉತ್ತರಿಸುವಳು
'ನೀವು ಕೇಳಿದಿರಿ'ಅನ್ನುತ್ತ
ಈ ಚೆಲುವೆ ನಗುತಿಹಳು||


ಟಿ ವಿ ಧಾರಾವಾಹಿಗಳ ವಿಮರ್ಶೆ
'ಜಾಣ ಪೆಟ್ಟಿಗೆ'ಯಿಂದ ನೀಡುತ್ತ
ಹತ್ತು ಹಲವು ಸಮಾಚಾರ
'ಸುದ್ದಿ ಸ್ವಾರಸ್ಯ' ಹೇಳುತ್ತ
ಈ ಚೆಲುವೆ ಓಡಾಡುತಿಹಳು||

ಇದೆಯೆ ನಿಮಗೆ 'ಪುಸ್ತಕ ಪ್ರೀತಿ'
ಎಂದು ಪ್ರಶ್ನಿಸುತ್ತ
ಬಣ್ಣಬಣ್ಣದ 'ಚಿತ್ರಲೋಕ'ದ
ರಂಗು ಚೆಲ್ಲುತ್ತ
ಈ ಚೆಲುವೆ ಬಣ್ಣದ ಓಕುಳಿಯಾಡುತಿಹಳು||


ಪುಟ ಸಂಖ್ಯೆ ೨೪, ಸುಧಾ ವಾರ ಪತ್ರಿಕೆ ,೧೩,ಎಪ್ರಿಲ್ ,೨೦೦೬
'ನಿಮ್ಮ ಪುಟ' ದಲ್ಲಿ ಪ್ರಕಟವಾಗಿದೆ.

Saturday, March 10, 2007

ಆವರಣ


ಸುಳ್ಳು ಕಂತೆಗಳ ಮಟ್ಟ ಹಾಕುತಿದೆ
ಈ ಹೊತ್ತಗೆಯ ಪ್ರತಿ ಕಣ
ದೂರ ಸರಿಸಿದೆ ನಮ್ಮ ಚಿತ್ತಭಿತ್ತಿಗೆ
ಕವಿದಂತಹ ಗ್ರಹಣ ||

ಇತಿಹಾಸದ ನೈಜ ಚಿತ್ರಣ
ನೀಡಿಹುದು ಆವರಣ
ಧರ್ಮಾಂಧತೆಯ ಪರಿಮಾಣ
ತಿಳಿಸಲಿಲ್ಲ ಶಾಲಾ ಶಿಕ್ಷಣ||

ಒಂದೇ ತಿಂಗಳಲಿ ಕಂಡಿಹುದು
ನಾಲ್ಕನೇ ಮುದ್ರಣ
ಸಾಹಿತ್ಯ ಲೋಕದ ಭೀಮಕಾಯನ
ಪರಿಶ್ರಮ ಇದಕೆ ಕಾರಣ||

ಒಳಗಡೆ ತುಂಬಿಹುದು
ಸತ್ವಭರಿತ ಹೂರಣ
ಓದುಗರಿಗೆ ನೀಡುತಿಹುದು
ಭರ್ಜರಿ ರಸದೌತಣ||

ಕೃತಿಯ ಅಂಚು ಅಂಚಿಗೂ ಇಹುದು
ಸತ್ಯ ಮತ್ತು ಸೌಂದರ್ಯದ ತೋರಣ
ಅದಕಾಗಿಯೇ ಕರ್ತೃ ಗೈದಿಹರು
ಸತತ ಅನ್ವೇಶಣ||

Friday, March 9, 2007

ಕೇಪ್ ಟೌನ್..ಪ್ರವಾಸಾನುಭವ




ಚಿಕ್ಕಂದಿನಿಂದಲೂ ನನಗೆ ಆಫ್ರಿಕಾದ ಬಗೆಗೆ ಅವ್ಯಕ್ತ ಕುತೂಹಲ. 'ಕಗ್ಗತ್ತಲೆಯ ಖಂಡ'ವೆಂದು ಸಮಾಜ ಅಧ್ಯಾಪಕರು ವಿವರಿಸುವಾಗ "ಅಯ್ಯೋ ಪಾಪ, ಅಲ್ಲಿ ಕರೆಂಟು ಇಲ್ಲವೇನೋ!! " ಎಂದು ಅನಿಸುತ್ತಿತ್ತು. ಭಾರತವನ್ನು ಹುಡುಕ ಹೊರಟ ಸಾಹಸ ಯಾತ್ರಿಗಳು ಅದಕ್ಕೆ ಮುನ್ನ ತಲುಪಿದ 'ಕೇಪ್ ಆಫ್ ಗುಡ್ ಹೋಪ್'ಬಗ್ಗೆ ಓದುವಾಗ ರೋಮಾಂಚನಗೊಳ್ಳುತ್ತಿದ್ದೆ.ಆಫ್ರಿಕಾ ನನ್ನ ಪಾಲಿಗೆ ಒಂದು ರೀತಿಯ























ನಿಗೂಢ ವಿಸ್ಮಯವಾಗಿತ್ತು.

ಕಂಪೆನಿ ಕೆಲಸದ ನಿಮಿತ್ತ ನನಗೆ ದಕ್ಷಿಣ ಆಫ್ರಿಕಾವನ್ನು ಸಂದರ್ಶಿಸುವ ಅವಕಾಶ ಒದಗಿ ಬಂದಿತು."ಅಲ್ಲಿ ಹೋದರೆ ಅಲ್ಲಿಯವರಂತೆ ಕರ್ರಗಾಗಿ ಹೋಗುತ್ತೀಯಾ" ಎಂದ ಮಿತ್ರರ ಮಾತುಗಳಿಗೆ ನಕ್ಕು ತಲೆಯಾಡಿಸಿದೆ. "ಹೋದೆಡೆಯಲ್ಲೆಲ್ಲಾ ಜಾಗ್ರತೆ "ಎಂದು ಎಚ್ಚರಿಸಿದವರು ಹಲವರು.ಅಂತೂ ಕಡೆಗೆ ವಿಮಾನವೇರಿದೆ.ಬೆಂಗಳೂರು-ಮುಂಬೈ, ಮುಂಬೈ-ಜೊಹಾನ್ಸ್ ಬರ್ಗ್, ಜೊಹಾನ್ಸ್ ಬರ್ಗ್ - ಕೇಪ್ ಟೌನ್- ಹೀಗೆ ಮೂರು ವಿಮಾನಗಳ ಮೂಲಕ ಸುಮಾರು ಹದಿಮೂರು ಗಂಟೆಗಳ ಕಾಲ ಪಯಣಿಸಿ, ಕೇಪ್ ಟೌನ್ ತಲುಪಿದೆ.ಕಟ್ಟಾ ಸಸ್ಯಾಹಾರಿಯಾದ ನನ್ನ ಬ್ಯಾಗಿನಲ್ಲಿ ಅಕ್ಕಿ, ಬೇಳೆ,ಜೀರಿಗೆ, ಎಂ.ಟಿ. ಆರ್. ಪುಡಿಗಳು ತುಂಬಿದ್ದವು.

ದಕ್ಷಿಣ ಆಫ್ರಿಕಾ, ಆಫ್ರಿಕಾ ಖಂಡದ ದಕ್ಷಿಣ ತುದಿಯಲ್ಲಿ ಇರುವ ದೇಶ.ಭಾರತಕ್ಕೂ ಅಲ್ಲಿಗೂ ಮೂ ರುವರೆ ಗಂಟೆಗಳ ಕಾಲ ವ್ಯತ್ಯಾಸ.ಅಲ್ಲಿಗೆ ತೆರಳಿದ ಮೊದಲ ವಾರದಲ್ಲಿ ಬೆಳಗ್ಗೆ ಐದು ಗಂಟೆಗೇ ವಿಪರೀತ ಹಸಿವಾಗುತ್ತಿತ್ತು.ನನ್ನ ಶರೀರದ ಗಡಿಯಾರ ದಕ್ಷಿಣ ಆಫ್ರಿಕಾದ ಕಾಲಮಾನಕ್ಕೆ ಹೊಂದಿಕೊಳ್ಳಲು ಕೊಂಚ ಸಮಯ ಬೇಕಾಯಿತು.

ಭಾರತಕ್ಕೆ ಜಲಮಾರ್ಗ ಕಂಡುಹಿಡಿಯುವ ಪ್ರಯತ್ನದಲ್ಲಿ ಬಾರ್ತಾಲೋಮ್ಯು ಡಯಾಸನು ೧೪೮೮ರಲ್ಲಿ ದಕ್ಷಿಣ ಆಫ್ರಿಕಾದ ತುದಿಯನ್ನು ತಲುಪಿದನು.ಅಲ್ಲಿಯ ಸಮುದ್ರ ಕಿನಾರೆಯಲ್ಲಿ ಬಡಿಯುವ ಅಬ್ಬರದ ಅಲೆಗಳನ್ನು ಕಂಡು, ಅದನ್ನು 'ಕೇಪ್ ಆಫ್ ಸ್ಟೊರ್ಮ್ಸ್' ಎಂದು ಕರೆದನು. ಮುಂದೆ ೧೬೫೨ ರಲ್ಲಿ ಡಚ್ಚರು ಇಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಿದರು. ಎರಡನೇ ಜಾನ್ ಇದನ್ನು ಕೇಪ್ ಆಫ್ ಗುಡ್ ಹೋಪ್ ಎಂದು ಕರೆದನು.ಇಲ್ಲಿ ವ್ಯಾಪಾರ ವ್ಯವಹಾರಗಳಿಗೆ ಸರಬರಾಜು ಕೇಂದ್ರವೂ ಸ್ಥಾಪಿತವಾಯಿತು.ಇಲ್ಲಿ ಬೆಳೆದ ಪಟ್ಟಣವೇ ಕ್ರಮೇಣ 'ಕೇಪ್ ಟೌನ್' ಎಂಬ ಹೆಸರನ್ನು ಪಡೆಯಿತು.


ಅಟ್ಲಾಂಟಿಕ್ ಸಾಗರದ ಅಬ್ಬರ, ಹಿಂದೂ ಮಹಾಸಾಗರದ ಶಾಂತ ಸ್ವಭಾವ ,ಪರ್ವತ ಶ್ರೇಣಿಯ ದಿಟ್ಟತನ, ಗಿಡಮರ ಬಳ್ಳಿಗಳ ತುಂಟತನ ಇವುಗಳೆಡೆಯಲ್ಲಿ ತಲೆಯೆತ್ತಿ ನಿಂತಿರುವ ಪಟ್ಟಣವೇ ಕೇಪ್ ಟೌನ್. ಇದು ಪ್ರವಾಸಿ ಆಕರ್ಷಣೆಯ ಕೇಂದ್ರವಾಗಿದ್ದು, ವಿಶ್ವದ ಹತ್ತು ಪ್ರಮುಖ ಪ್ರೇಕ್ಷಣೀಯ ಸ್ಠಳಗಳಲ್ಲಿ ಒಂದೆಂದು ಖ್ಯಾತವಾಗಿದೆ. ಇಲ್ಲಿ ಚಳಿಗಾಲದಲ್ಲಿ ಮಳೆಯಾಗುತ್ತದೆ(ಇದು ಮೆಡಿಟರೇನಿಯನ್ ವಾಯುಗುಣದ ಲಕ್ಷಣ), ಗಿಡಮರಗಳು ಬೋಳಾಗುತ್ತವೆ. ವಸಂತನ ಆಗಮನವಾಗುತ್ತಿದ್ದಂತೆ ಅವುಗಳಿಗೆ ನವಚೈತನ್ಯ ಬಂದು ಚಿಗುರತೊಡಗುತ್ತವೆ.


ಕೇಪ್ ಟೌನ್ ನ ಪ್ರತಿಯೊಂದು ಪ್ರದೇಶವೂ ಸೌಂದರ್ಯದಲ್ಲಿ ಒಂದಕ್ಕಿಂತ ಇನ್ನೊಂದು ಮಿಗಿಲು.ಸಮುದ್ರ ಕಿನಾರೆಗಳು ,ವೈವಿಧ್ಯಮಯ ಸಸ್ಯ ಹಾಗೂ ಪ್ರಾಣಿ ಸಂಕುಲ, ಗಿರಿ ಶಿಖರಗಳ ಸಾಲು ,ಮುಗಿಲಿನ ಸರಮಾಲೆ , ಶಿಸ್ತುಬದ್ಧ ಜನ ಜೀವನ ಇವೆಲ್ಲವೂ ನಮ್ಮ ಕಣ್ಣ ಮುಂದೆ ಹೊಸದೊಂದು ಲೋಕವನ್ನು ಸೃಷ್ಟಿಸುತ್ತವೆ.























ಟೇಬಲ್ ಮೌಂಟೇನ್
: ಇದು ಕೇಪ್ ಟೌನ್ ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.ಇದು ಸುಮಾರು ೪೪೩ ಮಿಲಿಯನ್ ವರ್ಷಗಳ ಹಿಂದೆ ರಚಿತವಾದ ಶಿಲೆಯೆಂದು ಪರಿಗಣಿಸಲಾಗಿದೆ.ಇದು ೧೦೮೬ ಮೀಟರ್ ಎತ್ತರವಾಗಿದ್ದು, ಚಪ್ಪಟೆಯಾದ ತುದಿಯನ್ನು ಹೊಂದಿದೆ. ಆದ ಕಾರಣವೇ ಇದರ ಹೆಸರು ಟೇಬಲ್ ಮೌಂಟೇನ್ ಎಂದಾಗಿದೆ. ಮೋಡಗಳ ಸಾಲು ಇದನ್ನು ಸುತ್ತುವರಿದಾಗ ಮೇಜಿನ ಮೇಲೆ ಶ್ವೇತವರ್ಣದ ವಸ್ತ್ರವನ್ನು ಹಾಸಿದಂತೆ ಭಾಸವಾಗುತ್ತದೆ.ಇಲ್ಲಿ ೧೪೭೦ ಕ್ಕೂ ಹೆಚ್ಚಿನ ಸಸ್ಯಪ್ರಭೇದಗಳನ್ನು ಗುರುತಿಸಲಾಗಿದ್ದು,ಇವುಗಳಲ್ಲಿ ಹೆಚ್ಚಿನವು ಪ್ರಪಂಚದ ಇನ್ನಿತರ ಭಾಗಗಳಲ್ಲಿ ಕಂಡು ಬರುವುದಿಲ್ಲ.























ಇದನ್ನು ಏರಲು 'ಕೇಬಲ್ ಕಾರು'ಗಳ ವ್ಯವಸ್ಥೆ ಮಾಡಿದ್ದಾರೆ.ಹಗ್ಗದ ಹಾದಿಯಲ್ಲಿ ನಿಧಾನವಾಗಿ ಏರುವ ಕೇಬಲ್ ಕಾರಿನೊಳಗೆ ಕುಳಿತು ,ಸುತ್ತಮುತ್ತಲಿನ ಗಿರಿ, ಕಾನನ, ಸಾಗರಗಳ ಸೌಂದರ್ಯವನ್ನು ಆಸ್ವಾದಿಸುತ್ತಾ ಸಾಗುವುದು ಒಂದು ರಮ್ಯ ಅನುಭವ. ಸುತ್ತಮುತ್ತಲಿನ ಪ್ರಕೃತಿಮಾತೆಯ ಸಿರಿಯನ್ನು ನೋಡಲು ಕಂಗಳೆರಡು ಸಾಲವು. ಪರ್ವತದ ತುದಿಯಲ್ಲಿ ಹೋಟೆಲ್ ಮತ್ತು ಅಂಗಡಿಗಳಿವೆ . ಅಲ್ಲಿ ಕುಳಿತು,ಸುತ್ತಲಿನ ಪ್ರಕೃತಿಯನ್ನು ಸವಿಯುವುದು ಒಂದು ಅವಿಸ್ಮರಣೀಯ ಅನುಭವ.





















ಕೇಪ್ ಪಾಯಿಂಟ್:
ಇದು ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರಗಳ ಸಂಗಮ ತಾಣ.ಭೂಮಿ ತಾಯಿಯ ರುದ್ರ ರಮಣೀಯ ದೃಶ್ಯವನ್ನು ಇಲ್ಲಿ ಕಾಣಬಹುದು. ಎತ್ತರದ ಶಿಖರದ ಮೇಲಿಂದ ಕೆಳಗೆ ಬಗ್ಗಿ ನೋಡಿದಾಗ ಸಾಗರಗಳ ಸಂಗಮ ಅತ್ಯದ್ಭುತವಾಗಿ ಗೋಚರವಾಗುತ್ತದೆ.ನಾನು ಇದನ್ನು ಸಂದರ್ಶಿದ ದಿನ ಒಂದೆಡೆ ಸಂಪೂರ್ಣವಾಗಿ ಮೋಡ ಆವರಿಸಿತ್ತು. ಅದು ನನಗೆ ಪೌರಾಣಿಕ ಚಲನಚಿತ್ರಗಳ ಸ್ವರ್ಗದ ಸೆಟ್ಟಿಂಗ್ ನಂತೆ ಅನಿಸಿತು. ಚಲಿಸುವ ಮೋಡಗಳು ತಮ್ಮ ಸೌಂದರ್ಯದಿಂದ ನನ್ನನ್ನು ಮೂಕ ವಿಸ್ಮಿತಳನ್ನಾಗಿ ಮಾಡಿದ್ದವು.


ರೋಬಿನ್ ಐಲಾಂಡ್ : ಕೇಪ್ ಟೌನ್ ನಿಂದ ೧೨ ಕಿ.ಮೀ. ಇರುವ ದ್ವೀಪ 'ರೊಬಿನ್ ಐಲಾಂಡ್'.೧೮೩೬ ರಿಂದ ೧೯೩೧ ರವರೆಗೆ ಇದನ್ನು ಕುಷ್ಟ ರೋಗಿಗಳ ನೆಲೆಯಾಗಿ ಬಳಸಲಾಯಿತು. ಇಪ್ಪತ್ತನೇ ಶತಮಾನದಲ್ಲಿ ಇಲ್ಲಿ ವರ್ಣಭೇದ ವಿರೋಧಿ ಚಳುವಳಿಯ ನಾಯಕರನ್ನು ಸೆರೆಯಲ್ಲಿಟ್ಟಿದ್ದರು.


ನೆಲ್ಸನ್ ಮಂಡೇಲಾ ತಮ್ಮ ಸುದೀರ್ಘ ೨೭ ವರ್ಷಗಳ ಜೈಲುವಾಸವನ್ನು ಅನುಭವಿಸಿದ್ದು ಇಲ್ಲಿಯೇ. ಮೂಲಭೂತ ಸೌಕರ್ಯಗಳೂ ಇಲ್ಲದ ಆ ಸೆರೆಮನೆಯಲ್ಲಿ ಅವರು ಹೇಗೆ ಕಾಲ ಕಳೆದಿರಬಹುದೆಂಬ ಪ್ರಶ್ನೆ ಮನವನ್ನು ಕಾಡಿತು.ನಮ್ಮನ್ನು ಅಲ್ಲಿಗೆ ಕರೆದೊಯ್ದ ದೋಣಿ ವಾಪಾಸು ಬರುವಾಗ ,ಎಲ್ಲರ ಮನದಾಳದಲ್ಲಿ ವಿಷಾದದ ಅಲೆಗಳು ಅಪ್ಪಳಿಸುತ್ತಿದ್ದವು.ಶರೀರದ ಬಾಹ್ಯವರ್ಣ ಮನುಕುಲದಲ್ಲಿ ಎಂತೆಂತಹ ಸಮಸ್ಯೆಗಳನ್ನು ಹುಟ್ಟು ಹಾಕಿತು ಎಂದು ಯೋಚಿಸಿದೆ.






















ಕಾನ್ಸ್ಟನ್ಶಿಯಾ :
ಕೇಪ್ ಟೌನ್ ಉತ್ಕೃಷ್ಟ ಗುಣಮಟ್ಟದ ವೈನ್ ತಯಾರಿಕೆಗೆ ಬಹಳ ಖ್ಯಾತಿ ಪಡೆದಿದೆ.ಎಕರೆಗಟ್ಟಲೆ ಹರಡಿರುವ ದ್ರಾಕ್ಷಿ ತೋಟಗಳು ಪ್ರವಾಸೋದ್ಯಮದಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿವೆ. 'ವೈನ್ ಟೂರ್' ವೈನ್ ತಯಾರಿಸುವ ,ಶೇಖರಿಸುವ ಮತ್ತು ಅದನ್ನು ಸವಿಯುವ ವಿಧಾನಗಳ ಪ್ರಾತ್ಯಕ್ಷಿಕೆಯನ್ನು ನೀಡುತ್ತದೆ.ಬಗೆಬಗೆಯ ವೈನ್ ಗಳು ಖರೀದಿಗೆ ಲಭ್ಯವಿವೆ.ಕಾನ್ಸ್ಟನ್ಶಿಯಾ ಇಂತಹ ಒಂದು ವೈನ್ ಉದ್ಯಮದ ಹೆಸರು.






















ಕ್ರಿಶ್ಟನ್ ಬೊಷ್:
ಇದು ದಕ್ಷಿಣ ಆಫ್ರಿಕಾದ ಒಂದು ಪ್ರಮುಖ ಸಸ್ಯೋದ್ಯಾನ(ಬೊಟಾನಿಕಲ್ ಗಾರ್ಡನ್). ದಕ್ಷಿಣ ಆಫ್ರಿಕಾದ ವಿವಿಧ ಸಸ್ಯರಾಶಿಯನ್ನು ಇಲ್ಲಿ ಕಲೆ ಹಾಕಿದ್ದಾರೆ.ಸುಮಾರು ೫೨೮ ಎಕರೆ ಪ್ರದೇಶದಲ್ಲಿ ಹರಡಿರುವ ಅಪೂರ್ವ ಸಸ್ಯ ಸಂಪತ್ತು ಕಣ್ಣಿಗೆ ಹಬ್ಬ.


ಕೇಪ್ ಟೌನ್ ನಲ್ಲಿ ಪ್ರವಾಸೋದ್ಯಮವನ್ನು ಎಷ್ಟು ವ್ಯವಸ್ಥಿತವಾಗಿ ಇರಿಸಿದ್ದಾರೆಂದರೆ ಅದನ್ನು ನೋಡಿ ನಾವು ಕಲಿಯುವುದು ಬಹಳಷ್ಟಿದೆ.ಸಹಸ್ರಾರು ಪ್ರವಾಸಿಗಳು ಸೇರುವ ಪ್ರದೇಶ ಕೂಡ ಅತ್ಯಂತ ಸ್ವಚ್ಛವಾಗಿರುತ್ತದೆ.ಯಾವುದೇ ಸಮುದ್ರ ಕಿನಾರೆಯಲ್ಲಾಗಲೀ ರಸ್ತೆಯಲ್ಲಾಗಲೀ ಒಂದಿನಿತೂ ಕಸ,ಪ್ಲಾಸ್ಟಿಕ್ ಬಿದ್ದಿರುವುದಿಲ್ಲ. ಅವೆಲ್ಲವನ್ನೂ ಕಸದ ಬುಟ್ಟಿಯಲ್ಲೇ ಹಾಕುತ್ತಾರೆ.ಹೆಚ್ಚೇಕೆ ತಮ್ಮ ಜತೆ ನಾಯಿಯನ್ನು ಕರೆದೊಯ್ದರೆ ಅದರ ತ್ಯಾಜ್ಯವನ್ನು ಕೂಡ ಸಂಗ್ರಹಿಸಿ,ಕಸದ ಬುಟ್ಟಿಯಲ್ಲಿ ಹಾಕುತ್ತಾರೆ.ಎಲ್ಲೇ ಹೊದರೂ ಪ್ರವಾಸೀ ಸ್ಥಳದ ನಕ್ಷೆ ಲಭ್ಯವಿರುತ್ತದೆ. ಉಚಿತ ಮಾರ್ಗದರ್ಶಿ ಪುಸ್ತಿಕೆಗಳು ಹೇರಳವಾಗಿ ದೊರಕುತ್ತವೆ.ರಸ್ತೆಗಳಂತೂ ತೀರಾ ಅಚ್ಚುಕಟ್ಟು. ಟ್ರಾಫಿಕ್ ನಿಯಮಗಳೆಲ್ಲವನ್ನೂ ಎಲ್ಲರೂ ಸರಿಯಾಗಿ ಪಾಲಿಸುತ್ತಾರೆ.


ಒಟ್ಟಿನಲ್ಲಿ ಕೇಪ್ ಟೌನ್ ಪ್ರವಾಸ ನನ್ನ ಜೀವನದ ಅತ್ಯಂತ ಸವಿಯಾದ ಸಮಯ.ಬಲು ಸುಂದರ ಪ್ರದೇಶವೊಂದನ್ನು ಭೇಟಿ ಮಾಡಿದ ತೃಪ್ತಿ ನನ್ನದಾಗಿತ್ತು.ಪ್ರಕೃತಿ ದೇವಿಯ ಸಿರಿ ಸೊಬಗು ನನ್ನ ಮನವನ್ನು ಸೂರೆಗೊಂಡಿತ್ತು.

* ಜನರು ಸ್ನೇಹಪರರು. ಇಂಗ್ಲಿಷ್ ಮತ್ತು ಆಫ್ರಿಕನ್ ಮುಖ್ಯ ಭಾಷೆಗಳು. ಇಲ್ಲಿ ಯುರೋಪಿಯನ್ನರೇ ಬಹಳ ಸಂಖ್ಯೆಯಲ್ಲಿದ್ದಾರೆ.
























* ರಸ್ತೆಯ ಬದಿಯಲ್ಲಿ ಆಸ್ಟ್ರಿಚ್ ,ಬಬೂನ್ ಮುಂತಾದ ಪ್ರಾಣಿಗಳನ್ನು ಕಾಣಬಹುದು.























* ಆಫ್ರಿಕನ್ ಮಹಿಳೆಯರ ಕೇಶ ಶೃಂಗಾರ: ಅವರ ನೈಜ ತಲೆಕೂದಲಿಗೆ ಕೃತಕ ಕೇಶವನ್ನು ಸೇರಿಸಿ ಸಣ್ಣ ಸಣ್ಣ ಜಡೆಯಾಗಿ ಹೆಣೆಯುತ್ತಾರೆ.


*ಟ್ರಾಫಿಕ್ ಸಿಗ್ನಲ್ ಗೆ ಅಲ್ಲಿ 'ರೊಬೊಟ್' ಎಂದು ಕರೆಯುತ್ತಾರೆ.




*ಶಿಸ್ತು, ಸ್ವಚ್ಛತೆಗೆ ಬಹಳ ಆದ್ಯತೆ.



























*ಹಿಂದಿ ಚಲನಚಿತ್ರ 'ಐತ್ ರಾಜ್' ಇಲ್ಲಿ ಚಿತ್ರೀಕೃತವಾಗಿದೆ.




*ಅಲ್ಲಿಯ ಕರೆನ್ಸಿ ರಾಂಡ್. ಒಂದು ರಾಂಡ್ ಎಂದರೆ ಸುಮಾರು ಏಳು ರೂಪಾಯಿ.
* ಸೌತ್ ಆಫ್ರಿಕಾಕ್ಕೆ ಮೂರು ರಾಜಧಾನಿಗಳು.ಕೇಪ್ ಟೌನ್ ಶಾಸನ ಸಭೆಯ ಕಾರ್ಯಾಲಯ , ಪ್ರಿಟೋರಿಯಾ ಆಡಳಿತಾತ್ಮಕ ಕಾರ್ಯಾಲಯ ಹಾಗೂ ಬ್ಲೊಮ್ ಫ್ಲೊಂಟೈನ್ ನಾಯಾಲಯ ಸಂಬಂಧಿ ಕಾರ್ಯಾಲಯವನ್ನು ಹೊಂದಿದೆ.






ಮಾತಿನ ಬಗ್ಗೆ ಒಂದಿಷ್ಟು ಮಾತು...

`ನುಡಿದರೆ ಮುತ್ತಿನ ಹಾರದಂತಿರಬೇಕು' ಎಂಬುವುದು ಬಸವಣ್ಣನವರ ವಚನ. ನಮ್ಮ ಮಾತು ಹೇಗಿರಬೇಕು ಎಂದು ಅದೆಷ್ಟು ಸರಳವಾಗಿ ಈ ವಚನದಲ್ಲಿ ಬಸವಣ್ಣನವರು ಹೇಳಿದ್ದಾರೆ! ಹಾಗೆಯೇ `ಮಾತಿನಿಂ ನಗೆನುಡಿಯು ಮಾತಿನಿಂ ಹಗೆಕಿಡಿಯು ಮಾತೇ ಮಾಣಿಕ್ಯ...' - ಇದು ಸರ್ವಜ್ಞನ ಉವಾಚ.

ಮಾತು ನಮಗೆ ಭಗವಂತ ನೀಡಿರುವ ಒಂದು ವರದಾನ. ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಒಂದು ಅತ್ಯುತ್ತಮ ಸಾಧನ. ಮಾತನಾಡುವಾಗ ಇದ್ದರೆ ಕೊಂಚ ಇದ್ದರೆ ವ್ಯವಧಾನ, ಮುದಗೊಂಡೀತು ಕೇಳುಗರ ಮನ; ಇಲ್ಲವಾದರೆ ಕಳೆದುಹೋದೀತು ಮಾನ!

ನೊಂದ ಮನಸ್ಸಿನ ಮಾತನ್ನು ಕೇಳಲು ಒಂದು ಜತೆ ಕಿವಿ ದೊರೆತರೆ ಸಾಕು, ಅವರಿಗಾಗುವ ಸಮಾಧಾನ ಅಪಾರ. ಬೇಸರಗೊಂಡ ಮನಸ್ಸಿಗೆ ಭರವಸೆಯ ನುಡಿಗಳು ಆಸರೆಯಾಗುತ್ತವೆ.


ಯಾರಾದರೂ ಚಿಕ್ಕ ಮಗು ನಡೆಯಲು ಪ್ರಯತ್ನಿಸುತ್ತಿರುವಾಗ `ಭೇಷ್!' ಅನ್ನಿ, ಅದನ್ನು ಪ್ರೋತ್ಸಾಹಿಸಿ... ಅದು ಬಹಳ ಖುಷಿಯಿಂದ ಮುನ್ನಡೆಯಲು ಪ್ರಯತ್ನಿಸುತ್ತದೆ! ಹೊಗಳಿಕೆ, ಉತ್ತೇಜನಕ್ಕೆ ಮಾರುಹೋಗದವರುಂಟೇ ಸ್ವಾಮಿ!?

ಬಹಳಷ್ಟು ಕಂಪೆನಿಗಳು ನಡೆಸುವ ಸಂದರ್ಶನದಲ್ಲಿ ಅಭ್ಯರ್ಥಿ ಯಾವ ರೀತಿಯಲ್ಲಿ ವಿಷಯ ಮಂಡನೆ ಮಾಡುತ್ತಾನೆ ಎಂಬುವುದು ಆತನ ಆಯ್ಕೆಗೆ ಬಲು ಮುಖ್ಯವಾದ ಅಂಶ. ನಮಗೆ ತಿಳಿದಿರುವುದನ್ನು, ಇತರರಿಗೆ ತಿಳಿಯಪಡಿಸುವಂತೆ ಮಾಡುವುದೂ ಒಂದು ಕಲೆಯೇ! ಎಷ್ಟೋ ಅಧ್ಯಾಪಕರು ವಿಷಯಗಳನ್ನು ತಿಳಿದಿದ್ದರೂ ಅದನ್ನು ವ್ಯಕ್ತಪಡಿಸಲು ಬಾರದೆ, `ಅವರಿಗೇನೂ ಗೊತ್ತಿಲ್ಲ' ಎಂಬ ತೆಗಳಿಕೆಗೆ ತುತ್ತಾಗಬೇಕಾಗುತ್ತದೆ!

ಮಾತಿನ ವಿಷಯ ಬರೆಯುವಾಗ ರಾಜಕಾರಣಿಗಳ ಬಗ್ಗೆ ಬರೆಯದಿದ್ದರೆ ಹೇಗೆ? ಅವರಿಗೆಲ್ಲ ಮಾತೇ ಬಂಡವಾಳ. ಜನತೆಗೆ ಆಶ್ವಾಸನೆಗಳ ಮೂಟೆ ಹೊರಿಸಿ, ಅವರನ್ನು ನಂಬಿಸಿ, ಕುರ್ಚಿ ಏರಿ ಕುಳಿತರೆ ಸಾಕು, ಅವರ ಕೆಲಸ ಮುಗಿದಂತೆ!

ಕೆಲವರಿರುತ್ತಾರೆ, ವಾಚಾಳಿಗಳು, ಕಲ್ಲು ಬಂಡೆಯನ್ನೂ ಮಾತನಾಡಿಸುವ ಚತುರರು. ಮತ್ತೆ ಕೆಲವರು `ಮಾತಾಡಿದರೆ ಮುತ್ತು ಉದುರುತ್ತದೆಯೋ' ಅನ್ನುವಂತೆ ಮೌನಪ್ರಿಯರು. `ಮೌನಿನ: ಕಲಹೋ ನಾಸ್ತಿ' ಎಂಬುದನ್ನು ದೃಢವಾಗಿ ನಂಬಿದವರು!

ಕೆಲವರ ಮಾತು ಬೆಣ್ಣೆಯಲ್ಲಿ ಕೂದಲು ತೆಗೆದಂತೆ. ಕೆಲವರ ಮಾತಿಗೆ ನಯವಿನಯದ ಮುಖವಾಡ. ಮನದಲ್ಲೊಂದು, ಆಡುವುದು ಮತ್ತೊಂದು. ಮತ್ತೆ ಕೆಲವರದು `ಪುರಾಣ ಹೇಳಿ ಬದನೆಕಾಯಿ ತಿನ್ನುವ' ಸ್ವಭಾವ. ಇನ್ನು ಕೆಲವರದ್ದು, ಕಂಡದ್ದು ಕಂಡ ಹಾಗೆ ಹೇಳಿ ಕೆಂಡದಂಥಾ ಕೋಪ ತರಿಸುವ ಪರಿ. ಇನ್ನು ಕೆಲವರಿಗೆ ತಾವಂದಂತೆ ನಡೆಯದಿದ್ದರೆ ನಖಶಿಖಾಂತ ಸಿಟ್ಟು.

ಕೆಲವರಿಗೆ ಸಿಟ್ಟಿನ ಭರದಲ್ಲಿ ಏನೇನು ಮಾತನಾಡುತ್ತಿದ್ದಾರೆ ಅನ್ನುವ ವಿವೇಚನೆಯೇ ಇರದು! ಕಡಿಮೆ ಅಂಕ ಬಂತೆಂದು ಮಕ್ಕಳನ್ನು ಕೆಂಡಾಮಂಡಲವಾಗಿ ಬಯ್ಯುವ ಹೆತ್ತವರಿಗೇನೂ ಕೊರತೆಯಿಲ್ಲ. ಮಗನೇನಾದರೂ ಕೊಂಚ ಸೊಸೆಯ ಪರವಾಗಿದ್ದಾಗ ಶುರುವಾಗುವ ಅತ್ತೆಯ ತೂಕ ತಪ್ಪುವ ಮಾತು, ಸಂಬಂಧಗಳಲ್ಲಿ ಬಿರುಕು ಮೂಡಿಸಿದರೆ ಆಶ್ಚರ್ಯವೇನೂ ಇಲ್ಲ!

`ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ದೊಣ್ಣೆಯ ಪೆಟ್ಟು' - ಇದು ಮಾತು ಅರ್ಥೈಸಿಕೊಳ್ಳಲು ಸಾಧ್ಯವಾದರನ್ನು ಮಾತಿನ ಮೂಲಕ ತಿಳಿಹೇಳಬಹುದು ಎನ್ನುವುದಕ್ಕೊಂದು ಪಡೆನುಡಿ.

ಕೆಲವರಿಗೆ ಮಾತಿನಿಂದಲೇ ಜೀವನ. ಬದುಕುವ ಸಾಧನ. ಸಂವಹನದ ಪ್ರಮುಖ ಸಾಧನ ಮಾತು. ಪ್ರಭಾವೀ ವ್ಯಕ್ತಿಗಳು ಆಡುವ ಮಾತು ಹಲವಾರು ಚರ್ಚೆಗಳಿಗೆ ಕಾರಣವಾಗುತ್ತದೆ!

ಇದೆಲ್ಲ ಮಾತು ಬಲ್ಲವರ ಪ್ರಪಂಚವಾದರೆ, ಮಾತಾಡುವ ಸಮಸ್ಯೆ ಇರುವವರ ಕಥೆಯೇ ಬೇರೆ. ಕೆಲವರಿಗೆ ಉಗ್ಗು, ಕೆಲವರಿಗೆ ಅಸ್ಪಷ್ಟ ಮಾತು, ಕೆಲವರಿಗೆ ಮಾತೇ ಬರದು... (ಇಂಥವರ ಮಾತನ್ನು `ಸರಿಪಡಿಸಲು' ಈಗೀಗ ವಾಕ್ಚಿಕಿತ್ಸಾ ಕೇಂದ್ರಗಳು ತಲೆಯೆತ್ತಿವೆಯೆನ್ನಿ).

ರವಿಶಂಕರ ಅವರ `ಆರ್‍ಟ್ ಆಫ್ ಲಿವಿಂಗ್ ' ಕೊರ್ಸ್‌ನಲ್ಲಿ ಪಾಲ್ಗೊಂಡ ನನ್ನ ಸ್ನೇಹಿತೆ ಹೇಳಿದ ಒಂದು ಅನುಭವವಿದು: `ಒಂದು ದಿನವಿಡೀ ಮೌನವಾಗಿ ಇರಬೇಕಿತ್ತು. ಆ ಒಂದು ದಿನ ಕಳೆದಾಗ ಮತ್ತೆ ಮಾತನಾಡುವ ಅನಿಸಲೇ ಇಲ್ಲ... ಮೌನದ ಆನಂದ ಆಗಲೇ ನನಗೆ ಗೊತ್ತಾದದ್ದು!'

ಮುಗಿಸುವ ಮುನ್ನ,

ಪ್ರಿಯವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜಂತವ:
ತಸ್ಮಾತ್ ತದೇವ ವಕ್ತವ್ಯಮ್ ವಚನೇ ಕಾ ದರಿದ್ರತಾ

(ಪ್ರಿಯವಾದ ಮಾತು ಎಂಥವರಿಗೂ ಇಷ್ಟವೇ ಆಗುತ್ತದೆ; ಆದ್ದರಿಂದ ಅದನ್ನೇ, ಅಂದರೆ ಒಳ್ಳೆಯ ಮಾತನ್ನೇ, ಆಡಬೇಕು. ಮಾತಿನಲ್ಲೂ ಯಾಕೆ ಬಡತನ?)